ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರದ ಸುಮಾರು ಎರಡು ಡಜನ್ ನಷ್ಟು ಬಡ ಶಾಲು ಮಾರಾಟಗಾರರಿಗೆ ಹಿಮಾಚಲ ಪ್ರದೇಶದ ಬಿಲಾಸ್ಪುರದಲ್ಲಿ ಸ್ಥಳೀಯ ಹಿಂದುತ್ವ ಗುಂಪುಗಳು ವ್ಯಾಪಾರ ಮಾಡದಂತೆ ಮತ್ತು ಈ ಪ್ರದೇಶವನ್ನು ಬಿಟ್ಟು ಕಾಶ್ಮೀರಕ್ಕೆ ಹಿಂತಿರುಗುವಂತೆ ಕಿರುಕುಳ ನೀಡುತ್ತಿರುವ ಘಟನೆ ವರದಿಯಾಗಿದೆ.
ಈ ಅಸಹಾಯಕ ಶಾಲು ಮಾರಾಟಗಾರರು ಸಂಭಾವ್ಯ ಗ್ರಾಹಕರನ್ನು ತಲುಪಲು ಹೋದರೆ ತಮ್ಮ ಸರಕುಗಳನ್ನು ಸ್ಥಳೀಯ ಹಿಂದುತ್ವ ಗುಂಪುಗಳಿಂದ ವಶಪಡಿಸಿಕೊಳ್ಳಲಾಗುತ್ತದೆ ಎಂಬ ಭಯದಿಂದ ಒಂದೇ ಸ್ಥಳದಲ್ಲಿ ಕುಳಿತಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರು ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಅವರು ಈ ವಿಷಯದಲ್ಲಿ ಮಧ್ಯಪ್ರವೇಶಿಸುವಂತೆ ಮತ್ತು ಕಾಶ್ಮೀರದ ಶಾಲು ಮಾರಾಟಗಾರರ ರಕ್ಷಣೆಯನ್ನು ಖಚಿತಪಡಿಸಿಕೊಳ್ಳುವಂತೆ ಕೇಳಿಕೊಂಡಿದ್ದಾರೆ.
ಬಿಲಾಸ್ಪುರದಲ್ಲಿ ಸ್ಥಳೀಯ ಹಿಂದುತ್ವ ಗುಂಪುಗಳಿಂದ ಕಾಶ್ಮೀರಿ ಮಾರಾಟಗಾರರು ಎದುರಿಸುತ್ತಿರುವ ದೌರ್ಜನ್ಯದ ಬಗ್ಗೆ ಸುಖ್ವಿಂದರ್ ಸಿಂಗ್ ಮತ್ತು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರ ಗಮನವನ್ನು ಸೆಳೆಯಲು ಮುಫ್ತಿ ಅವರು ಸಾಮಾಜಿಕ ಮಾಧ್ಯಮದಲ್ಲಿ ಮನವಿ ಮಾಡಿದ್ದಾರೆ. ಈ ವ್ಯಾಪಾರಿಗಳಿಗೆ ಸುರಕ್ಷಿತ ವಾತಾವರಣವನ್ನು ಖಚಿತಪಡಿಸುವಂತೆ ಸುಖ್ವಿಂದರ್ ಸಿಂಗ್ ಅವರನ್ನು ಕೇಳಿದ್ದಾರೆ.
ಹಿಮಾಚಲ ಪ್ರದೇಶದ ಬಿಲಾಸ್ಪುರ ಜಿಲ್ಲೆಯಲ್ಲಿ ಕಾಶ್ಮೀರಿ ಶಾಲು ಮಾರಾಟಗಾರರು ಹಿಂದುತ್ವ ಗುಂಪುಗಳಿಂದ ಕಿರುಕುಳ, ಹಲ್ಲೆ ಮತ್ತು ಬೆದರಿಕೆಗಳನ್ನು ಎದುರಿಸುತ್ತಿದ್ದಾರೆ. ಈ ವ್ಯಾಪಾರಿಗಳು ಸರಿಯಾದ ದಾಖಲೆಗಳನ್ನು ಹೊಂದಿರುವ ಹೊರತಾಗಿಯೂ, ಅವರನ್ನು ವ್ಯಾಪಾರ ಮಾಡದಂತೆ ನಿರ್ಬಂಧಿಸಲಾಗಿದೆ ಮತ್ತು ಹೊರಹಾಕಲಾಗುತ್ತಿದೆ. ಇದು ಈ ರಾಜ್ಯದಲ್ಲಿ ನಡೆದ ಮೂರನೇ ಘಟನೆಯಾಗಿದ್ದು, ಉದ್ದೇಶಪೂರ್ವಕ ಕಿರುಕುಳವು ಆತಂಕಕಾರಿಯಾಗಿದೆ ಎಂದು ಮುಫ್ತಿ ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ ಕಾಶ್ಮೀರಿ ಮಾರಾಟಗಾರರೊಬ್ಬರು, ನಾವು 3-4 ದಿನಗಳ ಕಾಲ ಇಲ್ಲಿ ಒಂದೇ ಕಡೆ ಕುಳಿತಿದ್ದೇವೆ. ನಮಗೆ ಕಿರುಕುಳ ನೀಡಲಾಗುತ್ತಿದೆ. ನಾವು ನಮ್ಮ ಸರಕುಗಳನ್ನು ಮಾರಾಟ ಮಾಡಲು ಬಸ್ ನಿಲ್ದಾಣಕ್ಕೆ ಹೋದಾಗ, ಅವಗಳನ್ನು ವಶಪಡಿಸಿಕೊಳ್ಳಲಾಗುತ್ತಿದೆ. ನಮಗೆ ವ್ಯಾಪಾರ ಮಾಡಲು ಬಿಡುತ್ತಿಲ್ಲ. ನಾವು ಆ ಪ್ರದೇಶದಿಂದ ದೂರ ಹೋಗಲು ಮತ್ತು ಕಾಶ್ಮೀರಕ್ಕೆ ಹಿಂತಿರುಗುವಂತೆ ಒತ್ತಾಯಿಸಲಾಗುತ್ತಿದೆ ಎಂದು ಆಳಲು ತೊಡಿಕೊಂಡಿದ್ದಾನೆ.
ನಾವು ಹಿಮಾಚಲ ಪ್ರದೇಶದ ಸ್ಥಳೀಯ ಜನರಿಗೆ ತಾವೂ ಸಹ ಭಾರತೀಯರು ಮತ್ತು ನಮ್ಮ ಸರಕುಗಳನ್ನು ಇಲ್ಲಿ ಮಾರಾಟ ಮಾಡಬಹುದು ಎಂದು ಹೇಳಿದರೆ ಪ್ರಯೋಜನವಿಲ್ಲವಾಗಿದೆ. ಸ್ಥಳೀಯ ಅಧಿಕಾರಿಗಳಿಂದ ದಾಖಲೆಗಳ ಪರಿಶೀಲನೆ ಮತ್ತು ಇತರ ಅಗತ್ಯ ದಾಖಲೆಗಳನ್ನು ಹೊಂದಿದ್ದರೂ ನಮಗೆ ವ್ಯಾಪಾರಕ್ಕೆ ಅನುಮತಿಸಲು ಸ್ಥಳೀಯರು ಸಿದ್ಧರಿಲ್ಲ ಎಂದು ಕಾಶ್ಮೀರಿ ವ್ಯಾಪಾರಿ ಹೇಳಿದ್ದಾನೆ.
ಅವರು ನಮಗೆ ಬೆದರಿಕೆ ಹಾಕುತ್ತಿದ್ದಾರೆ. ನಾವು ವ್ಯಾಪಾರ ಮಾಡುತ್ತಿರುವ ಸ್ಥಳದ ಮಾಲಿಕರಿಗೆ ಅಲ್ಲಿಂದ ಹೊರಹಾಕುವಂತೆ ಈ ಹಿಂದುತ್ವ ಗುಂಪುಗಳು ಕರೆ ನೀಡುತ್ತಿದ್ದಾರೆ. ನಾವು ಕಳೆದ 25 ,30 ಮತ್ತು 40 ವರ್ಷಗಳಿಂದ ತಮ್ಮ ಸರಕುಗಳನ್ನು ಇಲ್ಲಿ ಮಾರಾಟ ಮಾಡುತ್ತಿದ್ದೇವೆ ಎಂದು ಕಾಶ್ಮೀರಿ ಮಾರಾಟಗಾರರು ಮಾಹಿತಿ ನೀಡಿದ್ದಾರೆ.
ಸ್ಥಳೀಯ ಅಂಗಡಿಯವರೊಂದಿಗೆ ನಮಗೆ ಯಾವುದೇ ಸಮಸ್ಯೆ ಇಲ್ಲ. ಕೆಲವರು ಮಾತ್ರ ನಮ್ಮನ್ನು ಹೊರಹಾಕಲು ಒತ್ತಾಯಿಸುತ್ತಿದ್ದಾರೆ ಎಂದು ಮತ್ತೊಬ್ಬ ಕಾಶ್ಮೀರಿ ಮಾರಾಟಗಾರ ಹೇಳುತ್ತಾನೆ.
ಘಟನೆಯು ಹಿಮಾಚಲ ಪ್ರದೇಶದ ಬಿಲಾಸ್ಪುರದ ಘುಮರ್ವಿನ್ ಪಟ್ಟಣದಲ್ಲಿ ಸಂಭವಿಸಿದೆ. ಈ ನತದೃಷ್ಟ ಕಾಶ್ಮೀರಿ ಮಾರಾಟಗಾರರು ಘುಮರ್ವಿನ್ನ ಎಸ್ಡಿಎಂಗೆ ದೂರು ನೀಡಲು ಹೋಗಿದ್ದರು. ಎಸ್ ಡಿಎಂ ಅವರು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡುವಂತೆ ಅವರನ್ನು ಕಳುಹಿಸಿದ್ದರು ಎಂದು ವರದಿಗಳು ಹೇಳಿವೆ.
ಸ್ಥಳೀಯ ವ್ಯಾಪಾರಿಗಳು ಮತ್ತು ಕಾಶ್ಮೀರಿ ಮಾರಾಟಗಾರರ ನಡುವಿನ ಈ ವಿವಾದವಾಗಿದೆ ಮತ್ತು ಈ ಬಗ್ಗೆ ದೂರು ಸ್ವೀಕರಿಸಲಾಗಿದೆ. ಕಳೆದ ವರ್ಷವೂ ಇಂತಹ ಘಟನೆಗಳು ವರದಿಯಾಗಿದ್ದವು. ಕೆಲ ವ್ಯಾಪಾರಿಗಳು ಮಾರಾಟಗಾರರಿಂದ ನಷ್ಟ ಅನುಭವಿಸುತ್ತಿದ್ದಾರೆ. ಇದುವರೆಗೆ ಹಲ್ಲೆ ನಡೆದಿರುವ ಬಗ್ಗೆ ವರದಿಯಾಗಿಲ್ಲ ಎಂದು ಬಿಲಾಸ್ಪುರ್ ಎಸ್ಪಿ ಸಂದೀಪ್ ಧವಾಲ್ ತಿಳಿಸಿದ್ದಾರೆ.
ಎರಡು ಗುಂಪುಗಳ ನಡುವಿನ ಜಗಳಕ್ಕೆ ಮಧ್ಯಸ್ಥಿಕೆ ವಹಿಸುವಂತೆ ಎಸ್ಪಿಯವರು ಡಿಸಿ ಕಚೇರಿಗೆ ಸೂಚಿಸಿದ್ದಾರೆ. ಮುಂದಿನ 2 ಅಥವಾ 3 ದಿನಗಳಲ್ಲಿ ಎರಡೂ ಗುಂಪುಗಳ ನಡುವೆ ಸಭೆ ನಡೆಯುವ ನಿರೀಕ್ಷೆಯಿದೆ. ಏತನ್ಮಧ್ಯೆ, ಜಮ್ಮು ಮತ್ತು ಕಾಶ್ಮೀರ ವಿದ್ಯಾರ್ಥಿಗಳ ಸಂಘದ ರಾಷ್ಟ್ರೀಯ ಸಂಚಾಲಕ ನಾಸಿರ್ ಖುಹಾಮಿ ಕಾಶ್ಮೀರಿಗಳ ವಿರುದ್ಧ ಇಂತಹ ಘಟನೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಅವರಿಗೆ ಕಾಶ್ಮೀರ ಬೇಕು, ಆದರೆ ಕಾಶ್ಮೀರಿಗಳು ಬೇಕಾಗಿಲ್ಲ. ಭಾರತದ ಕಲ್ಪನೆಗೆ ಇಂತಹ ಘಟನೆಗಳಿಂದ ಕಾಶ್ಮೀರದಲ್ಲಿ ಹೆಚ್ಚು ಹಾನಿಯಾಗುವುದಿಲ್ಲ. ಕಾಶ್ಮೀರಿಗಳಿಗೆ ಪ್ರತಿದಿನವೂ ಕಿರುಕುಳ ನೀಡುವುದು ಮತ್ತು ಬೆದರಿಕೆ ಹಾಕುವುದು ಸರಿಯಲ್ಲ. ಎರಡು ರಾಜ್ಯಗಳ ನಡುವೆ ನಿಜವಾದ ಏಕೀಕರಣವು ಗೌರವ, ಘನತೆ ಮತ್ತು ಸಹಾನುಭೂತಿಯಿಂದ ಬರುತ್ತದೆ ಎಂದು ಅವರು ಹೇಳಿದ್ದಾರೆ.
ಹಿಮಾಚಲ ಪ್ರದೇಶದ ಸ್ಥಳೀಯ ಆರ್ಥಿಕತೆಗೆ ಕಾಶ್ಮೀರವು ಅಪಾರ ಕೊಡುಗೆ ನೀಡಿದೆ ಮತ್ತು ಅಲ್ಲಿನ ಸಾಮಾಜಿಕ ರಚನೆಯ ಭಾಗವಾಗಿರುವ ಈ ಶಾಲು ಮಾರಾಟಗಾರರು ಈಗ ಬೆದರಿಕೆ ಮತ್ತು ಅಭದ್ರತೆಯನ್ನು ಎದುರಿಸುತ್ತಿದ್ದಾರೆ. ಇದು ಕಾಶ್ಮೀರಿ ಶಾಲು ಮಾರಾಟಗಾರರನ್ನು ಪ್ರತಿದಿನವೂ ಗುರಿಯಾಗಿಸುವ ಅಪಾಯಕಾರಿ ಮಾದರಿಯನ್ನು ಪ್ರತಿಬಿಂಬಿಸುತ್ತದೆ. ಏಕೆಂದರೆ ಇದು ಆ ರಾಜ್ಯದಲ್ಲಿ ನಡೆದ ಇಂತಹ ಮೂರನೇ ಘಟನೆಯಾಗಿದೆ. ಕಾಶ್ಮೀರಿಗಳ ವಿರುದ್ಧದ ಉದ್ದೇಶಿತ ಹಿಂಸಾಚಾರ ಕೊನೆಗೊಳ್ಳುವ ಲಕ್ಷಣಗಳಿಲ್ಲ ಕಾಣುತ್ತಿಲ್ಲ ಎಂದು ಖುಹಮಿ ಗಮನಸೆಳೆದಿದ್ದಾರೆ.
ಕೇರಳ | ಕಾಂಗ್ರೆಸ್ ಕಾರ್ಯಕರ್ತರ ಕೊಲೆ ಪ್ರಕರಣ : ಸಿಪಿಐ(ಎಂ) ಮಾಜಿ ಶಾಸಕ ಸೇರಿ 14 ಮಂದಿ ದೋಷಿಗಳೆಂದು ತೀರ್ಪು ಪ್ರಕಟ


