| ಅನಿಲ್ ಕುಮಾರ್ ಚಿಕ್ಕದಾಳವಟ್ಟ |
ಹಿಂದೆ ಹೇರಿಕೆಯ ವಿರುದ್ಧ ಇದೇ ಜೂನ್ 6ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆಯೊಂದು ನಡೆಯುತ್ತದೆ ಎಂದು ಘೋಷಿಸಲಾಗಿತ್ತು. ಆದರೆ, ಅದು ನಡೆಯಲಿಲ್ಲ. ತಮಿಳುನಾಡು ಇಂತಹ ವಿಚಾರ ಬಂದಾಗ, ಅಪೂರ್ವವಾದ ಒಗ್ಗಟ್ಟನ್ನು ಕಾಪಾಡಿಕೊಂಡು ಕೇಂದ್ರಕ್ಕೆ ಮುಟ್ಟಿಸಬೇಕಾದ ಸಂದೇಶ ಮುಟ್ಟಿಸಿಯೇ ತೀರುತ್ತದೆ. ಕರ್ನಾಟಕದಲ್ಲಿ ಹೀಗಾಗದ್ದಕ್ಕೆ ಕಾರಣವೇನು ಎಂಬುದರ ಅವಲೋಕನದ ಅಗತ್ಯವಿದೆ. ಅದೇನೇ ಇರಲಿ, ಜೂನ್ 6ರ ಪ್ರತಿಭಟನೆ ಏಕೆ ನಡೆಯಲಿಲ್ಲ ಎಂಬುದನ್ನು ನೋಡೋಣ. ಸ್ವತಃ ಈ ವರದಿಗಾರ ಹಾಜರಿದ್ದ ಪೂರ್ವಭಾವಿ ಸಭೆಯ ವಿವರಗಳನ್ನು ಇಲ್ಲಿ ನೀಡಲಾಗಿದೆ.
ಜೂನ್ 4, ಮಂಗಳವಾರ ಸಂಜೆ ಕನ್ನಡ ಸಾಹಿತ್ಯ ಪರಿಷತ್ನ ಸಭಾಂಗಣದಲ್ಲಿ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು, ಸಾಹಿತಿಗಳೂ ಮತ್ತು ಕನ್ನಡ ಅಭಿಮಾನಿಗಳ ಸಭೆ ಕರೆದಿದ್ದರು. ಕರ್ನಾಟಕ ಕೈಗಾರಿಕ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟವು ಹಿಂದಿ ಹೇರಿಕೆಯ ವಿರುದ್ಧ 6ರಂದು ಪ್ರತಿಭಟನೆ ಮಾಡಬೇಕೆಂಬ ಕಾರಣಕ್ಕೇ ಕರೆದಿದ್ದ ಪೂರ್ವಭಾವಿ ಸಭೆ ಅದಾಗಿತ್ತು. ಈ ಸಭೆಯು ಹಿರಿಯರಾದ ತಿಮ್ಮಯ್ಯನವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಭೆಯಲ್ಲಿ ಕನ್ನಡ ಅಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷರಾದ ಎಸ್.ಜಿ.ಸಿದ್ಧರಾಮಯ್ಯ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ವಸುಂಧರ ಭೂಪತಿ, ಹಿರಿಯ ಸಾಹಿತಿ ಸಿದ್ದಲಿಂಗಯ್ಯ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನುಬಳಿಗಾರ್, ಕರ್ನಾಟಕ ಕೈಗಾರಿಕೋದ್ಯಮ ಸಂಘಟನೆಗಳ ಮುಖಂಡರಾದ ಶ್ರೀಧರ್, ಕನ್ನಡ ಸಂಘದ ಭೀಮಶಂಕರ್ ಪಾಟೀಲ್ ಭಾಗವಹಿಸಿದ್ದರು.
ದಲಿತ ಕವಿ ಸಿದ್ದಲಿಂಗಯ್ಯನವರು ಮಾತನಾಡಿ ಹಿಂದಿ ಹೇರಿಕೆಯ ಕುರಿತ ಭಾಗವನ್ನು ಕೇಂದ್ರ ಸರ್ಕಾರವು ಮೊನ್ನೆ ವಾಪಸ್ಸು ತೆಗೆದುಕೊಂಡಿದ್ದೆವೆ ಎಂದಿದ್ದಾರೆ. ಆದರೆ ಅವರನ್ನು ನಾವು ನಂಬುವ ಹಾಗಿಲ್ಲ. ದಕ್ಷಿಣದಲ್ಲಿ ಕಪ್ಪು ಜನರಿದ್ದಾರೆ ನಾವು ಸಹಿಸಿಕೊಂಡಿಲ್ಲವೇ ಎಂದು ಕೇಳುವ ಉತ್ತರ ಭಾರತದ ರಾಜಕಾರಣಿಗಳಿದ್ದಾರೆ. ಒಂದು ಭಾಷೆಯನ್ನು ಇನ್ನೊಬ್ಬರ ಮೇಲೆ ಹೇರಿಕೆ ಮಾಡಲು ಹೋಗಿ ದೇಶಗಳೇ ಒಡೆದಿರುವ ಉದಾಹರಣೆಗಳಿವೆ. ನಮ್ಮಲ್ಲಿ ಹಾಗಾಗಬಾರದು. ಹಾಗಾಗಿ 6ನೇ ತಾರೀಖು ನಡೆಯುವ ಪ್ರತಿಭಟನೆ ದೊಡ್ಡ ಮಟ್ಟದಲ್ಲಿ ನಡೆಯಲಿ ಎಂದು ಹೇಳಿದರು.

ಎಸ್.ಜಿ.ಸಿದ್ದರಾಮಯ್ಯನವರು ಮಾತನಾಡಿ ದಕ್ಷಿಣ ರಾಜ್ಯದ ಭಾಷೆಗಳ ಮೇಲೆ ಹಿಡಿತ ಸಾಧಿಸಲು ಪದೇ ಪದೇ ಈ ರೀತಿ ನಡೆಯುತ್ತಿದೆ. ಇದಕ್ಕೆ ಸರಿಯಾದ ಬುದ್ಧಿ ಕಲಿಸಬೇಕಾದರೆ ಪ್ರತಿಭಟನೆ ಮಾಡಲೇಬೇಕು ಮತ್ತು ಒಕ್ಕೂಟಕ್ಕೆ ಗೌರವ ಬರಬೇಕು. ದೇಶ ಛಿದ್ರವಾಗಬಾರದು ಎಂದರೆ ಎಲ್ಲಾ ಭಾಷೆಗಳನ್ನು ಗೌರವಿಸುವುದು ಕಲಿಯಬೇಕು ಎಂದು ಹೇಳಿ ಕೇಂದ್ರದ ನೀತಿಗಳನ್ನು ಖಂಡಿಸಿದರು. 6ರ ಪ್ರತಿಭಟನೆಗೆ ಮಾಡಬೇಕಾದ ತಯಾರಿಯನ್ನು ಮಾಡಿಕೊಂಡು ಮುನ್ನುಗ್ಗೋಣ ಎಂದರು.

ಭೀಮಶಂಕರ್ ಪಾಟೀಲ್, ಅರುಣ್ ಜಾವಗಲ್, ಕ.ಸಾ.ಪ ಮಾಯಣ್ಣ ಮತ್ತು ಅಲ್ಲಿ ಬಂದಿದ್ದ ಸಾಕಷ್ಟು ಜನ ಪ್ರತಿಭಟನೆ ಮಾಡಬೇಕೆಂದರು. ಮತ್ತು ಇದರ ವಿರುದ್ಧ ಹಿಂದಿ ವಿರೋಧಿ ಕನ್ನಡ ಒಕ್ಕೂಟ ಮಾಡಿಕೊಂಡು ದೀರ್ಘಕಾಲದ ಹೋರಾಟ ಮಾಡಬೇಕೆಂಬುದೂ ಅಲ್ಲಿನ ಬಹುತೇಕರ ಅಭಿಪ್ರಾಯವಾಗಿತ್ತು. ಪುಸ್ತಕ ಪ್ರಾಧಿಕಾರದ ಅಧಕ್ಷತೆ ವಸುಂಧರ ಭೂಪತಿಯವರು ಮಾತ್ರ ‘ಹಿಂದಿ ಹೇರಿಕೆಯ ವಿರುದ್ಧ ಎಲ್ಲಾ ಕಡೆ ಧ್ವನಿ ಬಂದಿದ್ದಕ್ಕಾಗಿ ವಾಪಸ್ಸು ತೆಗೆದುಕೊಂಡಿದ್ದಾರೆ ಹಾಗಾಗಿ ಪ್ರತಿಭಟನೆ ನಂತರ ಮಾಡೋಣ’ ಎಂದರು.

ಕಸಾಪ ಅಧ್ಯಕ್ಷ ಮನು ಬಳಿಗಾರ್ ಅವರು ಮಾತನಾಡಿದರು. ಅವರ ಮಾತಿನಲ್ಲಿ ಹಿಂದಿ ಹೇರಿಕೆಯ ಕುರಿತ ಯಾವ ಸಿಟ್ಟೂ ಇರಲಿಲ್ಲ. ಸದ್ಯಕ್ಕೆ ರಾಷ್ಟ್ರೀಯ ಶಿಕ್ಷಣ ನೀತಿಯ ವೆಬ್ ಸೈಟ್ನಿಂದ ಇದನ್ನ ತೆಗೆದಿರುವುದರಿಂದ ಪ್ರತಿಭಟನೆಯ ಅವಶ್ಯಕತೆ ಇಲ್ಲ ಎಂದು ಹೇಳಿದರು. ಇದರ ಬಗ್ಗೆ ಹಲವರು ಅಸಮಾಧಾನಗೊಂಡು ಪ್ರಶ್ನಿಸಿದಾಗ, ಕಾರಣ ಇಲ್ಲದೇ ಪ್ರತಿಭಟನೆ ಬೇಡ ಎಂದು ಹೇಳಿ ಮುಗಿಸಿದರು. ಕೆಲವರು ಅವರ ಬೆಂಬಲಕ್ಕೆ ನಿಂತರು. ಕೊನೆಯಲ್ಲಿ ಅಧ್ಯಕ್ಷೀಯ ಭಾಷಣ ಮಾಡಿದ ತಿಮ್ಮಯ್ಯನವರು ಕೂಡ ಮನು ಬಳಿಗಾರ್ ಅಭಿಪ್ರಾಯವನ್ನೇ ಮುಂದಿಟ್ಟರು.
ಕನ್ನಡ ಸಾಹಿತ್ಯ ಪರಿಷತ್ನಲ್ಲಿ ನಡೆದ ಸಭೆಯಾಗಿದ್ದು, ಜೊತೆಗೆ ಕಸಾಪ ರಾಜ್ಯಾಧ್ಯಕ್ಷರ ಮಾತಿಗೆ ಹೆಚ್ಚಿನ ಮಹತ್ವವಿರುತ್ತದೆ. ಕನ್ನಡದ ಪ್ರಾತಿನಿಧಿಕ ಸಂಸ್ಥೆಯಾಗಿರುವ ಇದರ ಅಧ್ಯಕ್ಷರಾಗಿರುವವರು ಇನ್ನೂ ಹೆಚ್ಚಿನ ಜವಾಬ್ದಾರಿಯಿಂದ ವರ್ತಿಸಬೇಕೆಂಬುದು ಸಭೆಯಿಂದ ಹೊರಗೆ ಬಂದ ನಂತರ ಹೆಚ್ಚಿನವರ ಅನಿಸಿಕೆಯಾಗಿತ್ತು. ಏಕೆಂದರೆ, ಇದು ಕೇವಲ ಹಿಂದಿ ಹೇರಿಕೆಯ ಪ್ರಶ್ನೆಯಾಗಿರದೇ, ಈಗಾಗಲೇ ಕರ್ನಾಟಕದ ನೆಲದ ಎರಡು ಬ್ಯಾಂಕುಗಳು (ಮೈಸೂರು ಬ್ಯಾಂಕ್ ಮತ್ತು ವಿಜಯಾ ಬ್ಯಾಂಕ್) ನಷ್ಟದಲ್ಲಿರುವ ಬೇರೆ ರಾಜ್ಯಗಳ ಬ್ಯಾಂಕುಗಳಲ್ಲಿ ವಿಲೀನವಾಗಬೇಕಾಗಿ ಬಂದಿದೆ. ಜಿಎಸ್ಟಿಯ ನಂತರ ರಾಜ್ಯಗಳು ಆರ್ಥಿಕವಾಗಿಯೂ ಕೇಂದ್ರದ ಮರ್ಜಿಯಲ್ಲಿರಬೇಕಾಗುತ್ತದೆ. ಹಾಗಾಗಿ ಹಿಂದಿ ಹೇರಿಕೆಯ ವಿಚಾರದಲ್ಲಿ ನಡೆಯಬಹುದಾಗಿದ್ದ ಪ್ರತಿಭಟನೆಯು ಸರಿಯಾದ ಸಂದೇಶವನ್ನೇ ನೀಡುತ್ತಿತ್ತು.
ಆದರೆ, ಅದಾಗದಂತೆ ಪೂರ್ವಭಾವಿ ಸಭೆಯಲ್ಲಿ ಪ್ರಮುಖ ಪಾತ್ರ ವಹಿಸಿದವರು ಮನು ಬಳಿಗಾರ್. ಉಳಿದ ಕನ್ನಡಪರ ಸಂಘಟನೆಗಳು ಮುಂದಿನ ದಿನಗಳಲ್ಲಿ ಯಾವ ರೀತಿ ಹೋರಾಟ ಮುಂದುವರೆಸುತ್ತಾರೆಂಬುದನ್ನು ಕಾದು ನೋಡಬೇಕಿದೆ.



ಅನಿಲ್ ಕುಮಾರ್ ಚಿಕ್ಕ ದಾಳವಟ್ಟ ಅವರ ಸುದ್ದಿಗೆ ಕುತೂಹಲ ಕೆರಳಿಸುವ ಶೀರ್ಷಿಕೆ ಕೊಟ್ಟು ಅದಕ್ಕೆ ಉತ್ತರ ಕೊಟ್ಟಿಲ್ಲ.
ಹಿಂದಿ ಹೇರಿಕೆ ವಿರುದ್ಧ ಕನ್ನಡ ಜನ ಒಗ್ಗಟ್ಟಿನಿಂದ ಪ್ರತಿಭಟಿಸುವ ಅನಿವಾರ್ಯತೆ ಉಂಟಾಗಿದೆ. ಆ ವಿಷಯಗಳನ್ನು ಚೆನ್ನಾಗಿ ತಿಳಿಸಿದ್ದಾರೆ.
ಧನ್ಯವಾದಗಳು ಸರ್.