Homeಮುಖಪುಟರಕ್ತದಾಹಿ ಟಿವಿ ಮಾಧ್ಯಮ: ಗಲಭೆ ಎಬ್ಬಿಸಿ ಲಾಭಕ್ಕೆ ಯತ್ನಿಸುತ್ತಿವೆಯೇ..!?

ರಕ್ತದಾಹಿ ಟಿವಿ ಮಾಧ್ಯಮ: ಗಲಭೆ ಎಬ್ಬಿಸಿ ಲಾಭಕ್ಕೆ ಯತ್ನಿಸುತ್ತಿವೆಯೇ..!?

ಈಗಾಗಲೇ ಹದಗೆಟ್ಟಿರುವ ಕೋಮು ಸೌಹಾರ್ದದ ಕೊಳದಲ್ಲಿ ಇನ್ನಷ್ಟು ರಾಡಿಯೆಬ್ಬಿಸಿ ಕದಡಿದ ನೀರಿನಲ್ಲಿ ಮೀನು ಹಿಡಿದು, ಲಾಭ ಮಾಡುವ ಯತ್ನದಲ್ಲಿರುವಂತಿದೆ. ಪ್ರೈಂ ಟೈಮ್ ಚರ್ಚೆಗಳು ಇದಕ್ಕೆ ಸಾಕ್ಷಿಯಾಗಿವೆ. 

- Advertisement -
ಅನುವಾದ: ನಿಖಿಲ್ ಕೋಲ್ಪೆ
ಮರು ನಿರೂಪಣೆ: ನಿಖಿಲ್ ಕೋಲ್ಪೆ
ಅಯೋಧ್ಯೆಯ ತೀರ್ಪು ಇನ್ನೇನು ಬರಲಿದೆ ಎನ್ನುವಾಗ ಟಿವಿ ಮಾಧ್ಯಮಗಳು ರಕ್ತದಾಹಿಗಳಂತೆ ವರ್ತಿಸುತ್ತಿವೆ. ಟಿವಿ ನಿರೂಪಕರು ಮತ್ತು ಅವರ ಪ್ರಾಯೋಜಕರು ಏಕಪಕ್ಷೀಯವಾಗಿ ವಿಷಯವನ್ನು ಅತಿಯಾಗಿ ರಂಜಿಸುತ್ತಾ, ಧಾರ್ಮಿಕ ಭಾವನೆಗಳನ್ನು ಪ್ರಚೋದಿಸಲು ಯತ್ನಿಸುತ್ತಿದ್ದಾರೆ. ಈಗಾಗಲೇ ಹದಗೆಟ್ಟಿರುವ ಕೋಮು ಸೌಹಾರ್ದದ ಕೊಳದಲ್ಲಿ ಇನ್ನಷ್ಟು ರಾಡಿಯೆಬ್ಬಿಸಿ ಕದಡಿದ ನೀರಿನಲ್ಲಿ ಮೀನು ಹಿಡಿದು, ಲಾಭ ಮಾಡುವ ಯತ್ನದಲ್ಲಿರುವಂತಿದೆ. ಪ್ರೈಂ ಟೈಮ್ ಚರ್ಚೆಗಳು ಇದಕ್ಕೆ ಸಾಕ್ಷಿಯಾಗಿವೆ.
ಅಯೋಧ್ಯೆಯ ವಿಷಯದಲ್ಲಿ ದಿನ ಬೆಳಗಾದರೆ ಒಂದು ಕೋಮಿನ ವ್ಯಕ್ತಿಯನ್ನು ಮತ್ತೊಂದು ಕೋಮಿನ ವ್ಯಕ್ತಿಯ ಎದುರು ಕೂರಿಸಿ, ಪರಸ್ಪರ ಕಚ್ಚಾಡುವಂತೆ ಪ್ರೇರೇಪಿಸುತ್ತಿವೆ. ರಾಜಕೀಯ ಸಂಘರ್ಷದ ಸೋಗಿನಲ್ಲಿ ಧಾರ್ಮಿಕ ಸಂಘರ್ಷವನ್ನು ಹುಟ್ಟು ಹಾಕಲಾಗುತ್ತಿದೆ. ಈ ಮೂಲಕ ಗಲಭೆಯೆಬ್ಬಿಸುವ ಪ್ರಯತ್ನ ನಡೆಯುತ್ತಿದೆ.
ಮಾಧ್ಯಮ, ಸಮಾಜದಲ್ಲಿ ಆಳವಾದ ಕಂದರಗಳನ್ನು ಹೇಗೆ ಉಂಟು ಮಾಡುತ್ತದೆ, ಹತ್ಯಾಕಾಂಡಗಳನ್ನು ಹೇಗೆ ಪ್ರಚೋದಿಸುತ್ತದೆ ಎಂಬುದಕ್ಕೆ ಜರ್ಮನಿಯಿಂದ ಹಿಡಿದು ರುವಾಂಡ ತನಕ ಇತಿಹಾಸದಲ್ಲಿ ಸಾಕಷ್ಟು ಉದಾಹರಣೆಗಳಿವೆ. ಹೀಗಾಗಿ ವೀಕ್ಷಕರು ಇಂತಹ ಪ್ರಯತ್ನಗಳನ್ನು ಗುರುತಿಸಿ, ಎಚ್ಚರ-ಸಂಯಮ-ವಿವೇಚನೆಗೆ ಒತ್ತು ನೀಡಬೇಕಾದುದು ಅತ್ಯಗತ್ಯ.
ಇಲ್ಲಿ ರಕ್ತದಾಹಿ ಟಿವಿಗಳ ಇಂತಹ ಕೆಲವು ಕೃತ್ಯಗಳನ್ನು ಗುರುತಿಸಿ, ಸುದ್ದಿ ಪ್ರಸಾರ ಮಾನದಂಡ ಪ್ರಾಧಿಕಾರ (News Broadcasting Standards Authority)ವು ಅಯೋಧ್ಯೆಯ ತೀರ್ಪಿಗೆ ಸಂಬಂಧಿಸಿದಂತೆ ಹೊರಡಿಸಿರುವ ಸಲಹೆಗಳನ್ನು ಉಲ್ಲಂಘಿಸಿದವರನ್ನು ಹೆಸರಿಸಲಾಗಿದೆ. ಅಯೋಧ್ಯೆಯ ತೀರ್ಪಿನಿಂದಾಚೆಗೆ, ಮುಂದೆಯೂ ಮಾಧ್ಯಮ ನೀತಿಸಂಹಿತೆಯನ್ನು ಉಲ್ಲಂಘಿಸುವ, ಕೋಮುಭಾವನೆಯನ್ನು ಪ್ರಚೋದಿಸುವ, ಅಲ್ಪಸಂಖ್ಯಾತರನ್ನು ಗುರಿ ಮಾಡುವ ಮತ್ತು ದ್ವೇಷ ಕಾರುವ ಭಾಷಣಗಳನ್ನು ಪ್ರಸಾರ ಮಾಡುವವರನ್ನು ಹೆಸರಿಸುವ ಯೋಚನೆಯಿದೆ.
ಸುದ್ದಿ ಪ್ರಸಾರ ಮಾನದಂಡ ಪ್ರಾಧಿಕಾರದ ಸಲಹಾ ಸಂಹಿತೆಯ ಮೂಲ ಉದ್ದೇಶವೆಂದರೆ, ಬಾಬ್ರಿ ಮಸೀದಿ-ರಾಮ ಜನ್ಮಭೂಮಿ ವಿವಾದದ ಸುದ್ದಿಗಳನ್ನು ದೇಶದ ಜಾತ್ಯತೀತ ಸ್ವರೂಪವನ್ನು ಎತ್ತಿ ಹಿಡಿಯುವ ರೀತಿಯಲ್ಲಿ ಪ್ರಸಾರ ಮಾಡುವುದು ಮತ್ತು ಕೋಮುಭಾವನೆಯನ್ನು ಪ್ರಚೋದಿಸದಿರುವುದು.
ಸಲಹಾಸಂಹಿತೆಯಲ್ಲಿರುವ ಎರಡು ಪ್ರಮುಖ ಅಂಶಗಳನ್ನು ಪರಿಗಣಿಸಿ:
* ಪ್ರಚೋದನಕಾರಿ ಮತ್ತು ಬೆಂಕಿ ಹೊತ್ತಿಸುವ ಹಾಗೂ ಸಾರ್ವಜನಿಕರಲ್ಲಿ, ಸಮಾಜದಲ್ಲಿ ಉದ್ವಿಗ್ನತೆಯನ್ನು ಉಂಟು ಮಾಡಬಹುದಾದ ಸುದ್ದಿ, ಚರ್ಚೆಗಳನ್ನು ದೂರವಿಡಬೇಕು.
* ಯಾವುದೇ ಕಾರ್ಯಕ್ರಮ/ ಸುದ್ದಿಯ ಪ್ರಸಾರವು ಯಾವುದೇ ಸಮುದಾಯದ ಪರ ಅಥವಾ ವಿರೋಧದ ಪೂರ್ವಾಗ್ರಹದ ಭಾವನೆ ಮೂಡಿಸಬಾರದು. ಇದಲ್ಲದೇ ಸುದ್ದಿ ಚಾನೆಲ್‌ಗಳು ಅಯೋಧ್ಯೆ ತೀರ್ಪನ್ನು ಊಹಿಸಬಾರದು ಮತ್ತು ಯಾವುದೇ ಪಕ್ಷವನ್ನು ವಹಿಸಬಾರದು.
ಹೀಗಿದ್ದರೂ, ಸುದ್ದಿ ಪ್ರಸಾರಕರ ಸಂಘ (News Broadcasters Association)ದ ಸದಸ್ಯರಾಗಿರುವ ಹೊರತಾಗಿಯೂ, ಈ ಸಲಹೆಗಳನ್ನು ಬಿಡುಗಡೆ ಮಾಡಿದ ದಿನವೇ ಹೆಚ್ಚಿನ ಎಲ್ಲಾ ಚಾನೆಲ್‌ಗಳು ರಾಜಾರೋಷವಾಗಿ ಅವುಗಳನ್ನು ಕಡೆಗಣಿಸಿದವು. ಬಹುತೇಕ ಎಲ್ಲಾ ಚಾನಲ್‌ಗಳು ತೀರ್ಪಿನ ಕುರಿತು ಊಹಾಪೋಹಗಳ ಬಗ್ಗೆ ಚರ್ಚೆ ನಡೆಸಿದವು.
ಉದಾಹರಣೆಗೆ ಝೀ ನ್ಯೂಸ್ ಸಂಪಾದಕ ಎನ್‌ಬಿಎಸ್‌ಎಯ ಸಲಹಾ ಸಂಹಿತೆಗಳನ್ನು ಓದಿ ಹೇಳುತ್ತಲೇ, ಅಯೋಧ್ಯೆಯ ಸಮಸ್ಯೆಗೆ ಉತ್ತಮ ಪರಿಹಾರ ಎಂದರೆ, ವಿವಾದಿತ ಸ್ಥಳದಲ್ಲಿ ಮಂದಿರ ಕಟ್ಟುವುದು ಎಂದೂ, ಮುಸ್ಲಿಮರು ಇಂತಹಾ ಒಂದು ಪ್ರಸ್ತಾಪವನ್ನು ಒಪ್ಪಬೇಕು ಎಂದು ಸಲಹೆ ನೀಡಿದರು.
ರಿಪಬ್ಲಿಕ್ ಟಿವಿಯ ಅರ್ನಬ್ ಗೋಸ್ವಾಮಿ ಶಾಂತಿಗಾಗಿ ಕರೆ ಕೊಡುತ್ತಲೇ ’ಮುಸ್ಲಿಮರ ಪಕ್ಷ’ವನ್ನು ಪ್ರತಿನಿಧಿಸುವ ವಕೀಲರನ್ನು ಮತ್ತೆ ಮತ್ತೆ ಟೀಕಿಸಿ, ಅವರ ಕಾನೂನು ಮನವಿಗಳನ್ನು ’ವಿಚಲಿತಗೊಳಿಸುವ ಕಲೆ’ ಎಂದು ಕರೆದರು. ’ಮುಸ್ಲಿಮರ ಪಕ್ಷ’ದ ವಾದವು ’ವಿಳಂಬ ತಂತ್ರ’ ಎಂದು ಮಾತುಮಾತಿಗೆ ಹೇಳಿದರು.
‘ಇಂಡಿಯಾ ಟುಡೇ’ ವಿಚಾರಣೆಯ ಕೊನೆಯ ದಿನ ಅಯೋಧ್ಯೆಯಿಂದ ಅಲ್ಲಿನ ಪ್ರಸ್ತುತ ಸ್ಥಿತಿಯ ಬಗ್ಗೆ ವರದಿ ಮಾಡಿದಾಗ, ಅದರ ವರದಿಗಾರರು ತೀರ್ಪು ಏನಾಗಬಹುದೆಂದು ಊಹಿಸುವಂತೆ ಮತ್ತೆ ಮತ್ತೆ ಪ್ಯಾನಲಿಸ್ಟ್‌ಗಳನ್ನು ಕೇಳಿದರು. ಈ ಪ್ಯಾನಲಿಸ್ಟ್‌ಗಳಲ್ಲಿ ನಾಲ್ವರು ಸ್ವಯಂಘೋಷಿತ ಸಾಧುಗಳು, ಮುಸ್ಲಿಂ ಪೊಲಿಟಿಕಲ್ ಕೌನ್ಸಿಲ್ ಅಧ್ಯಕ್ಷ ತಸ್ಲೀಮ್ ರೆಹಮಾನಿ, ಕಾಂಗ್ರೆಸ್ ಬೆಂಬಲಿಗ ದೀಪಕ್ ಕುಮಾರ್ ಝಾ, ಇಸ್ಲಾಮಿಕ್ ಪಂಡಿತ ಎಂದು ಕರೆಯಲ್ಪಡುವ ಶೊಯೈಬ್ ಜಮಾಯ್ ಇದ್ದರು. ಪ್ಯಾನಲಿಸ್ಟ್‌ಗಳು ಮತ್ತೆ ಮತ್ತೆ ಪ್ರಚೋದನಕಾರಿ ಮಾತುಗಳನ್ನು ಆಡಿದರು. ಅವರಲ್ಲೊಬ್ಬ ಕಾಲ್‌ಪಟ್ಟಿ ಮಹಾರಾಜ್ ಹೇಳಿದ್ದು: ’ಬಾಬರ್ ಲೂಟಿಕೋರ… ಭಯೋತ್ಪಾದಕ… ಅವನ ಸಮರ್ಥನೆ ಮಾಡುವವರು ಭಯೋತ್ಪಾದಕರಾಗಿರಬಹುದು…’
ಎಲ್ಲಾ ಚಾನೆಲ್‌ಗಳ ಪೈಕಿ ‘ಟೈಮ್ಸ್ ನೌ’ ಸಾರಾಸಗಟು ಪ್ರಚೋದನಕಾರಿಯಾಗಿತ್ತು. ಅದು ವಿಚಾರಣೆಯ ಕೊನೆಯ ದಿನ ಎರಡು ಪ್ರೈಮ್ ಟೈಂ ಶೋಗಳನ್ನು ನಡೆಸಿತು. ರಾಹುಲ್ ಶಿವಶಂಕರ್ ನಡೆಸಿದ ಒಂದು ಕಾರ್ಯಕ್ರಮದ ಶೀರ್ಷಿಕೆಯೇ “ಪುಂಡತನ ತೋರಿದ ಮಸೀದಿ ವಕೀಲ; ಇದುವೇ ಲ್ಯುಟಿಯೆನ್ನರ ಉದಾರವಾದ?” (ಸರ್ ಎಡ್ವಿನ್ ಲ್ಯುಟಿಯೆನ್ ಹೊಸದಿಲ್ಲಿಯನ್ನು ವಿನ್ಯಾಸಗೊಳಿಸಿದ ವಾಸ್ತುಶಿಲ್ಪಿ. ಹೊಸದಿಲ್ಲಿಯ ಪ್ರತಿಷ್ಠಿತರನ್ನು ವ್ಯಂಗ್ಯವಾಗಿ ಲ್ಯುಟಿಯೆನ್ನರು ಎಂದು ಕರೆಯಲಾಗುತ್ತದೆ).
ಈ ಸಂದರ್ಭದಲ್ಲಿ ‘ಲೈವ್ ಲಾ’ ಕಾರ್ಯಕ್ರಮದಲ್ಲಿ ವಿಚಾರಣೆಯ ಕೊನೆಯ ದಿನದ ವರದಿಯ ಒಂದು ಭಾಗ ಇಲ್ಲಿದೆ: “ಕೊನೆಯ ದಿನದ ವಿಚಾರಣೆ ಕೆಲವು ನಾಟಕೀಯ ಕ್ಷಣಗಳಿಗೆ ಸಾಕ್ಷಿಯಾಯಿತು. ರಾಮನ ಜನ್ಮಸ್ಥಾನವೆಂದು ಹಿಂದೂಗಳು ನಂಬಿರುವ ಅಂಶವನ್ನು ತೋರಿಸಲು ಹಿರಿಯ ವಕೀಲ ವಿಕಾಸ್ ಸಿಂಗ್ ಅವರು ಅವಲಂಬಿಸಿದ್ದ ನಿರ್ದಿಷ್ಟ ನಕ್ಷೆಯೊಂದನ್ನು ವಕೀಲ ಡಾ. ಧವನ್ ನ್ಯಾಯಾಲಯದಲ್ಲಿಯೇ ಹರಿದು ಹಾಕಿದರು. “ನೀವು ಅದನ್ನು ಇನ್ನಷ್ಟು ಹರಿಯಬಹುದು” ಎಂದು ಮುಖ್ಯ ನ್ಯಾಯಾಧೀಶ ರಂಜನ್ ಗೊಗೊಯ್ ಟಿಪ್ಪಣಿ ಮಾಡಿದರು.”
 
ವಾಸ್ತವಾಂಶ ಹೀಗಿದೆ: ಈ ವಿಷಯ ವ್ಯಾಪಕವಾಗಿ ವರದಿಯಾಗಿ, ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಆದ ಮೇಲೆ ಡಾ. ಧವನ್, ‘ತನಗೆ ಆ ಕಾಗದಗಳನ್ನು (ನಕ್ಷೆ) ಎಸೆಯುವ ಉದ್ದೇಶವಿತ್ತು. ಆದರೆ, ಮುಖ್ಯ ನ್ಯಾಯಾಧೀಶರು ಅದನ್ನು ಹರಿಯಲು ಹೇಳಿದ ಮೇಲೆ ಹರಿದು ಹಾಕಿದೆ. ಅದು ನ್ಯಾಯಾಲಯದ ಅನುಮತಿಯಿಂದಲೇ ನಡೆದದ್ದು’ ಎಂದು ವಿವರಣೆ ನೀಡಿದರು. ಹಿರಿಯ ವಕೀಲರು ಆ ಕಾಗದಗಳನ್ನು ಹರಿಯಬಹುದು ಎಂದು ತಾನು ಹೇಳಿದ್ದು ನಿಜ ಎಂದು ಮುಖ್ಯ ನ್ಯಾಯಾಧೀಶರು ಒಪ್ಪಿಕೊಡಿದ್ದಾರೆ.
ವಿಚಾರಣೆಯನ್ನು ಆ ದಿನವೇ ಕೊನೆಗೊಳಿಸಲು ನ್ಯಾಯಾಲಯ ನಿರ್ಧರಿಸಿತ್ತು. ಆದುದರಿಂದ ಧವನ್ ಅವರು ಈ ನಕ್ಷೆಗಳನ್ನು ಮಂಡಿಸಲು ಬಯಸಿದಾಗ ಅನುಮತಿ ನಿರಾಕರಿಸಿದ ಮುಖ್ಯ ನ್ಯಾಯಾಧೀಶರು, ಅದು ಪ್ರಯೋಜನವಿಲ್ಲವೆಂಬ ಅರ್ಥದಲ್ಲಿ ನೀವದನ್ನು ಹರಿದು ಹಾಕಬಹುದು ಎಂದು ಕಿರಿಕಿರಿಯಿಂದ ಹೇಳಿದ್ದರು. ಅದಕ್ಕಿಂತಲೂ ಹೆಚ್ಚು ಕಿರಿಕಿರಿಗೆ ಒಳಗಾದ ಧವನ್ ನಿಜವಾಗಿಯೂ ಆ ಕಾಗದಗಳನ್ನು ಹರಿದೇ ಬಿಟ್ಟಿದ್ದರು.
ಈ ವಿದ್ಯಮಾನವನ್ನು ಸಂಪೂರ್ಣವಾಗಿ ತಿರುಚಿದ ಶಿವಶಂಕರ್, ಹಿಂದೂ ನಂಬಿಕೆಗೆ ನ್ಯಾಯಾಲಯದಲ್ಲಿ ಅಪಮಾನ ಮಾಡಲಾಗಿದೆ ಎಂದು ಬಣ್ಣಿಸಿದರು. “ನ್ಯಾಯಾಲಯ ಇಂದು ರಣಭೂಮಿಯಾಯಿತು. ಮಸೀದಿ ಕಡೆಯ ವಕೀಲರು, ಹೌದು! ದೈಹಿಕವಾಗಿ ರಾಮಜನ್ಮಭೂಮಿಯ 1810ರ ನಕ್ಷೆಯನ್ನು ಚಿಂದಿ ಮಾಡಿದರು. ಇದರೊಂದಿಗೆ ಮಸೀದಿ ಕಡೆಯ ವಕೀಲರು, ನಿಜವಾಗಿಯೂ ಹಿಂದೂ ಆಸ್ಥೆಯನ್ನು ಹರಿದು ಹಾಕಿದರು!”. ಯಾರೋ ತಯಾರಿಸಿದ ಒಂದು ಹಳೆಯ ನಕ್ಷೆ ಪವಿತ್ರ ಆಗುವುದು ಹೇಗೆ ಎಂದು ಆ ‘ಶಿವಶಂಕರ’ನೇ ಬಲ್ಲ!
ಆತ ಮುಂದುವರಿದು ಹೇಳಿದ್ದೇನೆಂದರೆ: ” ಬಹಳಷ್ಟು ಜನ ಇಂದು ಲ್ಯುಟಿಯೆನ್ ಲಾಬಿಯ ಮುಂಚೂಣಿ ವಕೀಲ ರಾಜೀವ್ ಧವನ್ ಅವರಲ್ಲಿ, ಕುರಾನನ್ನು ಹರಿಯುವ ಧೈರ್ಯವಿದೆಯೇ ಎಂದು ಕೇಳುತ್ತಿದ್ದಾರೆ” (ಎಲ್ಲಿಯ ಒಂದು ನಕ್ಷೆ? ಎಲ್ಲಿಯ ಕುರಾನ್? ಎಂತಹಾ ಅಸಂಬದ್ಧ ಹೋಲಿಕೆ!)
ಚರ್ಚೆಗೆ ಈ ಶಿವಶಂಕರ್ ಮೊದಲೇ ರೂಪುರೇಷೆ ಹಾಕಿದ್ದರು: “ಈ ಪ್ರಶ್ನೆಗೆ ತ್ವರಿತ ಪರಿಹಾರ ತಮ್ಮ ಆಸ್ಥೆ, ತಮ್ಮ ನಂಬಿಕೆ…ತಮ್ಮ ಭಾವನೆಗಳಿಗೆ (ಮತ್ತೆ ಮತ್ತೆ ಒತ್ತುನೀಡಲಾಗಿದೆ) ಅತ್ಯಂತ ಮುಖ್ಯ ಎಂದು ಹಿಂದೂಗಳು ಹೇಳುತ್ತಿರುವಾಗ, ನ್ಯಾಯವು ಇಷ್ಟು ವಿಳಂಬವಾಗುತ್ತಿರುವುದಕ್ಕೆ ಹಿಂದೂ ನಂಬಿಕೆಗಳ ಮೇಲಿನ ಇಂತಹಾ ಬಹಿರಂಗ ದ್ವೇಷವೇ ಕಾರಣವೆ?” (ಸ್ವತಃ ಧವನ್, ಅಥವಾ ನ್ಯಾಯಾಧೀಶರೂ ನಂಬಿಕೆಯಲ್ಲಿ ಹಿಂದೂಗಳಾಗಿರುವಾಗ ಈತ ಯಾವ ಹಿಂದೂಗಳ ಬಗ್ಗೆ ಮಾತನಾಡುತ್ತಿರುವುದು ಎಂಬುದರ ಬಗ್ಗೆ ಸ್ಪಷ್ಟತೆಯಿಲ್ಲ!). ಒಟ್ಟಿನಲ್ಲಿ “ಮಸೀದಿ ಪಕ್ಷ” ಒಂದು “ಹಿಂಸಾತ್ಮಕ ಕೃತ್ಯ”ದಲ್ಲಿ ತೊಡಗಿತ್ತು ಎಂದು ಹೇಳುವ ಮೂಲಕ ಈ ಶಿವಶಂಕರ್ ತಿರುಚಿದ ವರದಿಯನ್ನು ನೀಡಿದರು.
ಅವರು ನ್ಯಾಯಾಲಯದಲ್ಲಿ ಒಂದು ಕಾಗದ ಹರಿಯುವುದಕ್ಕೂ, ಕುರಾನ್ ಹರಿಯುವುದಕ್ಕೂ ಒಂದು ಅಸಂಬದ್ಧ ಸಂಬಂಧ ಕಲ್ಪಿಸಿದರು. ನ್ಯಾಯಾಲಯದಲ್ಲಿ ಹರಿಯಲಾದ ನಕ್ಷೆಯು 2016ರ “ಅಯೋಧ್ಯಾ ರಿವಿಸಿಟೆಡ್” ಎಂಬ ಪುಸ್ತಕದಲ್ಲಿ ಪ್ರಕಟವಾದ ನಕ್ಷೆಯ ನಕಲಾಗಿತ್ತು. ಅದೇನೂ ಭಗವದ್ಗೀತೆಯಂತಹಾ ಯಾವುದೇ ಗ್ರಂಥವಾಗಿರಲಿಲ್ಲ. ಆದರೆ, ಧವನ್‌ರ ಕೃತ್ಯವನ್ನು ಕುರಾನ್ ಹರಿಯುವುದಕ್ಕೆ ಹೋಲಿಸುವುದರ ಮೂಲಕ ಶಿವಶಂಕರ್ ಉದ್ದೇಶಪೂರ್ವಕವಾಗಿ ಕೋಮುಭಾವನೆಯನ್ನು ಪ್ರಚೋದಿಸಿದ್ದಾರೆ ಮಾತ್ರವಲ್ಲ, ಧವನ್ ಅವರನ್ನೂ ಅಪಾಯಕ್ಕೆ ತಳ್ಳಿದ್ದಾರೆ.
‘ಟೈಮ್ಸ್ ನೌ’ನ ಎರಡನೇ ಕಾರ್ಯಕ್ರಮ ಇದಕ್ಕಿಂತ ಉತ್ತಮವಾಗಿರಲಿಲ್ಲ. ಕಾರ್ಯಕ್ರಮ ನಿರ್ವಹಿಸಿದ ನವಿಕಾ ಕುಮಾರ್, ಹೆಚ್ಚು ಕಡಿಮೆ ಘಾಟ್‌ಗಳಿಂದ ಕೂಡಿದ ಸರಯೂ ನದಿಯ ದಂಡೆಯಲ್ಲೇ ಕುಳಿತಿದ್ದರು. (ಅಂತಹಾ ಹಿನ್ನೆಲೆ ಹಾಕಲಾಗಿತ್ತು). ಶೀರ್ಷಿಕೆ: ರಾಮಮಂದಿರ ಕ್ಷಣಗಣನೆ. ಇದು ತೀರ್ಪು ರಾಮಮಂದಿರದ ಪರ ಬರುವುದು ಖಂಡಿತ ಎಂದು ಸೂಚಿಸುವಂತಿದೆ. ಕೆಳಗಿನ ಟಿಕ್ಕರ್‌ಗಳಲ್ಲಿ ಕೆಲವು ಈ ರೀತಿ ಪ್ರಚೋದನಕಾರಿಯಾಗಿದ್ದವು: “ನ್ಯಾಯ ವಿಳಂಬಿಸಿ, ಹಿಂದೂವನ್ನು ಅವಗಣಿಸಿ”, “ರೇಖೆ ದಾಟಿದ ಮಸೀದಿ ವಕೀಲ, ಸರ್ವೋಚ್ಛ ನ್ಯಾಯಾಲಯದಲ್ಲಿ ಪುಂಡುವರ್ತನೆ”.
ಒಂದು ಹಂತದಲ್ಲಿ ನವಿಕಾ, ವಿಶ್ವ ಹಿಂದೂ ಪರಿಷತ್‌ನ ವಿನೋದ್ ಬನ್ಸಾಲ್ ಮತ್ತು ಆಕೆ ಇಸ್ಲಾಮಿಕ್ ಪಂಡಿತ ಎಂದು ಪರಿಚಯಿಸಿದ ಮೌಲಾನಾ ರಶೀದಿ ಅವರ ವಾಗ್ವಾದದಲ್ಲಿ ಮಧ್ಯಪ್ರವೇಶ ಮಾಡಿದರು. ಹಿಂದೂ ಸಮಾಜವು ಯಾವುದೇ ಅಗೌರವವನ್ನು ಸಹಿಸದು ಎಂದು ಬನ್ಸಾಲ್, ರಶೀದಿಗೆ ಹೇಳಿದರು. ಅದಕ್ಕೆ ರಶೀದಿ ವಿಹಿಂಪ ತನ್ನ ಸುಳ್ಳುಗಳ ಕಾರಣದಿಂದ ಮುಗಿದುಹೋಗಿದೆ ಎಂದರು.
ವಾಗ್ವಾದದ ಸ್ಯಾಂಪಲ್:
ರಶೀದಿ: ಎಲ್ಲಿದೆ ವಿಶ್ವ ಹಿಂದೂ ಪರಿಷತ್? ವಿಶ್ವ ಹಿಂದೂ ಪರಿಷತ್ ಮುಗಿದು ಹೋಗಿದೆ. ನಿಮ್ಮ ಸುಳ್ಳುಗಳ ಕಾರಣದಿಂದ ಮುಳುಗಿ ಹೋಗಿದೆ.
ಬನ್ಸಾಲ್: ನಾನೊಂದು ಶಬ್ದ ಹೇಳಿದರೆ, ಬೆಂಕಿ ಹೊತ್ತಿಕೊಳ್ಳುತ್ತದೆ ಮೌಲಾನಾ.
 
ಇದು ಸ್ವಲ್ಪ ಸಮಯ ಮುಂದುವರಿದ ಬಳಿಕ ಮಧ್ಯಪ್ರವೇಶ ಮಾಡಿದ ನವಿಕಾ ಹೇಳಿದ್ದು: ಈ ಇಡೀ ಪ್ರಕರಣ ಸುಪ್ರೀಂಕೋರ್ಟಿನಲ್ಲಿದೆ. ನಾವದಕ್ಕೆ ಕಾನೂನು ಪರಿಹಾರ ಹುಡುಕುತ್ತಿದ್ದೇವೆ. ನಮಗೆ ಬೆಂಕಿ ಹಚ್ಚಬೇಕೆಂದಿದ್ದರೆ, ಈ ವಿಷಯದಲ್ಲಿ 100-150 ವರ್ಷಗಳ ಹಿಂದೆಯೇ ಬೆಂಕಿ ಹೊತ್ತಿಕೊಂಡಿರುತ್ತಿತ್ತು. (ಇಲ್ಲಿ ನಮಗೆ ಎಂದರೆ ಯಾರಿಗೆ? 100-150 ವರ್ಷಗಳ ಹಿಂದೆ ಈಕೆ ಇದ್ದರೇ? ಈ ಮೂಲಕ ತಾನು ಮಾನಸಿಕವಾಗಿ ಬೆಂಕಿ ಹಚ್ಚುವವರ ಪರ ಮತ್ತು ಈ ಚರ್ಚೆ ಪಕ್ಷಪಾತದ್ದು ಎಂದು ತೋರಿಸಿಕೊಟ್ಟರು.)
 
ನವಿಕಾ ಮತ್ತೆ ಮತ್ತೆ, ನ್ಯಾಯಾಲಯದಲ್ಲಿ ಕಾಗದ ಹರಿದದ್ದು ‘ಪ್ರಚೋದನೆ’ ಅಲ್ಲವೇ ಎಂದು ಕೇಳುತ್ತಿದ್ದರು. ಆದರೆ, ಯಾರಿಗೆ ಮತ್ತು ಯಾವುದಕ್ಕೆ ಪ್ರಚೋದನೆ ಎಂದು ಹೇಳಲೇ ಇಲ್ಲ.
ಇವರಿಬ್ಬರ ಕಾರ್ಯಕ್ರಮಗಳು ಪ್ರಚೋದನಕಾರಿಯಾಗಿದ್ದರೆ, ‘ಆಜ್‌ ತಕ್’ ತನ್ನ ಶೀರ್ಷಿಕೆಗಳು ಮತ್ತು ಕಾರ್ಯಕ್ರಮಗಳ ಪ್ರಚಾರದಲ್ಲಿ ಅವರಿಗೆ ಸ್ಪರ್ಧೆ ನೀಡಿತು. ಆಗಸ್ಟ್ 15ರಂದು ಅದೊಂದು ಹಿಂದಿ ಟ್ವೀಟ್ ಮಾಡಿತು. ಅದರ ಅನುವಾದ ಹೀಗಿದೆ: “ನಮ್ಮ ಮಾತೃಭೂಮಿ, ನಮ್ಮ ರಾಮ. ಮಸೀದಿಯ ಜನರು ಬಂದಿರುವುದು ಎಲ್ಲಿಂದ?” ಇದೇ ರೀತಿ ಬಿಲ್ಲು ಹಿಡಿದ ರಾಮನ ಚಿತ್ರ ಬಳಸಿ ಇನ್ನೂ ಕೆಲವು ಪ್ರಚೋದನಕಾರಿ ಹೇಳಿಕೆಗಳನ್ನು ಪ್ರಸಾರ ಮಾಡಿತು. ಇವೆರಡು ಚಾನೆಲ್‌ಗಳು ಸುದ್ದಿ ಪ್ರಸಾರಕರ ಸಂಘದ ಸದಸ್ಯರಾಗಿದ್ದರೂ ಎನ್‌ಬಿಎಸ್‌ಎಯ ಸಲಹೆಗಳನ್ನು ಗಾಳಿಗೆ ತೂರಲು ಯಾವ ಹಿಂಜರಿಕೆಯನ್ನೂ ತೋರಲಿಲ್ಲ. ಓದುಗರೂ, ಮಾಧ್ಯಮದ ಇಂತಹ ಕಿಡಿಗೇಡಿ ವರ್ತನೆಯ ಮೇಲೆ ಕಣ್ಣಿಡಬೇಕಾದ ಅಗತ್ಯವಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...