Homeಮುಖಪುಟಲಸಿಕೆ ನೀಡುವಲ್ಲಿ ಅಮೆರಿಕ ಹಿಂದಿಕ್ಕಿದ ಭಾರತ: ಪಿಳ್ಳಂಗೋವಿ ಪ್ರಚಾರವೆಂದು ನೆಟ್ಟಿಗರ ಟ್ರೋಲ್

ಲಸಿಕೆ ನೀಡುವಲ್ಲಿ ಅಮೆರಿಕ ಹಿಂದಿಕ್ಕಿದ ಭಾರತ: ಪಿಳ್ಳಂಗೋವಿ ಪ್ರಚಾರವೆಂದು ನೆಟ್ಟಿಗರ ಟ್ರೋಲ್

- Advertisement -
- Advertisement -

ಒಂದೇ ದಿನ 86 ಲಕ್ಷ ಡೋಸ್‍ ಲಸಿಕೆ ಹಾಕಿದ್ದೇವೆ ಎಂದು ಮನ್‍ ಕಿ ಬಾತ್‍ನಲ್ಲಿ ಪ್ರಧಾನಿ ಸಂಭ್ರಮಿಸಿದರು. ಇಲ್ಲಿಯವರೆಗೆ ನೀಡಿರುವ ಒಟ್ಟು ಕೋವಿಡ್ ಲಸಿಕೆ ಪ್ರಮಾಣದಲ್ಲಿ ಭಾರತವು ಅಮೆರಿಕವನ್ನು ಹಿಂದಿಕ್ಕಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ ತಿಳಿಸಿದೆ. ಅದರ ಪ್ರಕಾರ, ಭಾರತವು ಇಲ್ಲಿಯವರೆಗೆ ಒಟ್ಟು 32,36,63,292 (32 ಕೋಟಿ 36 ಲಕ್ಷ 63 ಸಾವಿರದ 292) ಡೋಸ್‌ಗಳನ್ನು ನೀಡಿದ್ದರೆ, ಅಮೆರಿಕವು 32,33,27,328 ಡೋಸ್‌ಗಳನ್ನು ನೀಡಿದೆ. ಹೀಗಾಗಿ ನಾವು ಲಸಿಕೆ ನೀಡಿಕೆಯಲ್ಲಿ ಅಮೆರಿಕವನ್ನು ಹಿಂದಿಕ್ಕಿದ್ದೇವೆ ಎಂದು ಕೇಂದ್ರ ಸರ್ಕಾರದ ಆರೋಗ್ಯ ಸಚಿವ ಹರ್ಷವರ್ಧನ್‍ ಮತ್ತು ಅವರ ಸಚಿವಾಲಯ ಇಂದು ಟ್ವೀಟ್‍ ಮಾಡಿದ್ದಾರೆ.

ಆದರೆ ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆ ಕೇಳಿಬಂದಿದೆ. ಅಮೆರಿಕದಲ್ಲಿ ಶೇಕಡಾ 46.5 ರಷ್ಟು ವಯಸ್ಕರಿಗೆ ಸಂಪೂರ್ಣವಾಗಿ (ಎರಡೂ ಡೋಸ್) ಲಸಿಕೆ ನೀಡಲಾಗಿದೆ. ಭಾರತವು ಈವರೆಗೆ ತನ್ನ ಜನಸಂಖ್ಯೆಯ ಶೇಕಡಾ 4ರಷ್ಟು ಜನರಿಗೆ ಮಾತ್ರ ಪೂರ್ಣ ಲಸಿಕೆ ನೀಡಿದೆ. ಇಲ್ಲಿ ಒಂದು ಲಸಿಕೆ ಪಡೆದವರ ಪ್ರಮಾಣ ತುಸು ಹೆಚ್ಚಿರಬಹುದು. ಆದರೆ ಎರಡೂ ಲಸಿಕೆ ಪಡೆದವರ ಪ್ರಮಾಣ ತುಂಬ ಕಡಿಮೆಯಿದೆ ಎಂದು ನೆಟ್ಟಿಗರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

“ಈ ಪಿಳ್ಳಂಗೋವಿ ಪ್ರಚಾರಕ್ಕೇನು ಕೊರತೆಯಿಲ್ಲ. ಅಲ್ರಯ್ಯಾ, ಬೇರೆ ದೇಶಗಳ ಜನಸಂಖ್ಯೆ ಇಟ್ಟುಕೊಂಡು ತುಲನೆ ಮಾಡ್ರಯ್ಯಾ. ನೀವು ಎಷ್ಟು ಡೋಸ್ ವ್ಯಾಕ್ಸಿನ್ ಕೊಟ್ರಿ ಅನ್ನೋದಲ್ಲ ಮುಖ್ಯ, ಎಷ್ಟು ಪರ್ಸಂಟೇಜ್ ಜನರಿಗೆ ಕೊಟ್ರಿ ಅನ್ನೋದು ಮುಖ್ಯ. ಅದೂ ಕೂಡ ಎರಡೂ ಡೋಸ್ ಕೊಟ್ಟರೆ ಮಾತ್ರ Fully vaccinated ಎಂದು ಗ್ರಹಿಸುತ್ತೆ ಇಡಿಯ ಜಗತ್ತು. ನಿಮ್ಮದೇ ಕೋವಿನ್ ಆಪ್ ಪ್ರಕಾರ ದೇಶದ ಐದೂವರೆ ಕೋಟಿ ಜನರು ಮಾತ್ರ ಈ ಕ್ಷಣದವರೆಗೆ ಎರಡೂ ಡೋಸ್ ವ್ಯಾಕ್ಸಿನ್ ಪಡೆದಿದ್ದಾರೆ. ಪರ್ಸಂಟೇಜ್ ಎಷ್ಟು ಗೊತ್ತಾ? ಕೇವಲ 4% ಮಾತ್ರ. ಇದೇ ಸಮಯದಲ್ಲಿ ಅಮೆರಿಕದಲ್ಲಿ ಶೇ. 47 ರಷ್ಟು ಮಂದಿ, ಇಸ್ರೇಲ್ ನಲ್ಲಿ ಶೇ. 57 ರಷ್ಟು ಮಂದಿ fully vaccinate ಆಗಿದ್ದಾರೆ” ಎಂದು ಪತ್ರಕರ್ತ ದಿನೇಶ್ ಕುಮಾರ್ ದಿನೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಡಿಮೆ ಜನಸಂಖ್ಯೆ ಇರೋ ದೇಶಗಳ ಜತೆ ಹೋಲಿಸಿಕೊಳ್ತೀರಲ್ಲ, ನಮಗಿಂತ ಹೆಚ್ಚು ಜನಸಂಖ್ಯೆ ಇರೋ ದೇಶದ ಜತೆ ಹೋಲಿಸಿಕೊಳ್ರಯ್ಯಾ? ಚೀನಾದಲ್ಲಿ 22.3 ಕೋಟಿ ಜನರಿಗೆ ಎರಡೂ ಡೋಸ್ ವ್ಯಾಕ್ಸಿನ್ ಕೊಡಲಾಗಿದೆ. ಭಾರತಕ್ಕಿಂತ ನಾಲ್ಕು ಪಟ್ಟು ಹೆಚ್ಚು. 119 ಕೋಟಿ ಜನರಿಗೆ ಮೊದಲ ಡೋಸ್ ಕೊಟ್ಟಾಗಿದೆ. ಅದೂ ಕೂಡ ಭಾರತದ ನಾಲ್ಕು ಪಟ್ಟು ಹೆಚ್ಚು. ನಿಮ್ಮ‌ ಈ ಡಿಜೈನಿನಲ್ಲಿ ಚೀನಾ ಯಾಕೆ ಇಲ್ಲ? ಹೇಳ್ಕೊಳ್ಳೋಕೆ ನಾಚಿಕೆನಾ? ಎಂದು ಅವರು ಪ್ರಶ್ನಿಸಿದ್ದಾರೆ.

ನರೇಂದ್ರ ಮೋದಿಯವರೇ, ಭಾರತದ ಜನರಿಗೆ ಪ್ರಚಾರ ಮಾಡಬೇಕಿದ್ದ ಕರೆಕ್ಟ ಗ್ರಾಫ್ ಇದು ಎಂದು ನಾಗೇಗೌಡ ಶಿವಲಿಂಗಯ್ಯ ಕೀಲಾರ ಮತ್ತೊಂದು ಫೋಟೊವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಎರಡೂ ಡೋಸ್ ಲಸಿಕೆ ಪಡೆದ ರಾಷ್ಟ್ರಗಳ ವಿವರ ಇದ್ದು ಅದರಲ್ಲಿ ಭಾರತವು 5ನೇ ಸ್ಥಾನದಲ್ಲಿದೆ.

ಅಫಿಡವಿಟ್‍ ಲೆಕ್ಕ ಏನು?

ಭಾರತೀಯ ಔಷಧೀಯ ಕಂಪನಿ ಝೈಡಸ್ ಕ್ಯಾಡಿಲಾ ಅಭಿವೃದ್ಧಿಪಡಿಸಿದ ಕೊರೊನಾ ವೈರಸ್ ಲಸಿಕೆ ಶೀಘ್ರದಲ್ಲೇ 12-18 ರ ವಯೋಮಾನದವರಿಗೆ ಲಭ್ಯವಾಗಲಿದೆ ಎಂದು ಕೇಂದ್ರವು ಶನಿವಾರ ಸುಪ್ರೀಂ ಕೋರ್ಟಿಗೆ ಸಲ್ಲಿಸಿದ ಅಫಿಡವಿಟ್‍ನಲ್ಲಿ ತಿಳಿಸಿದೆ.

ಉನ್ನತ ನ್ಯಾಯಾಲಯಕ್ಕೆ ನೀಡಿದ ಅಫಿಡವಿಟ್‌ನಲ್ಲಿ, 18 ವರ್ಷಕ್ಕಿಂತ ಮೇಲ್ಪಟ್ಟ ನಿವಾಸಿಗಳಿಗೆ ಚುಚ್ಚುಮದ್ದು ನೀಡಲು 186.6 ಕೋಟಿ ಡೋಸ್‍ ಬೇಕಾಗುತ್ತವೆ ಎಂದು ಕೇಂದ್ರ ಸರ್ಕಾರ ಹೇಳಿದೆ. 2021 ರ ಡಿಸೆಂಬರ್ ವೇಳೆಗೆ ಎಲ್ಲರಿಗೂ ಲಸಿಕೆ ಲಭ್ಯವಾಗಲಿದೆ ಎಂದು ಅದು ಹೇಳಿದೆ.

ಈಗ ಅಫೀಡವಿಯೆಟ್‍ನಲ್ಲಿ ನೀಡಿದ ಪ್ರೊಜೆಕ್ಷನ್‍ ತಿಳಿಸುವ ಡೋಸ್‍ಗಳ ಪ್ರಮಾಣಕ್ಕೂ, ಈ ಹಿಂದೆ ಸರ್ಕಾರವೇ ಹೇಳಿದಂತೆ ಎಲ್ಲಾ ವಯಸ್ಕರಿಗೆ ಲಸಿಕೆ ನೀಡಲು ಆಗಸ್ಟ್ ಮತ್ತು ಡಿಸೆಂಬರ್ ನಡುವೆ ಭಾರತವು 216 ಕೋಟಿ ಡೋಸ್ ಕೋವಿಡ್ ಡೋಸ್‍ಗಳನ್ನು ಹೊಂದಿರುತ್ತದೆ ಎಂದು ಹೇಳಿದ್ದಕ್ಕೂ ಅಗಾಧ ವ್ಯತ್ಯಾಸವಿದೆ. ಆ ವ್ಯತ್ಯಾಸ 81 ಕೋಟಿ ಡೋಸ್‍ ಆಗಿದೆ.

ಡಿಸೆಂಬರ್ 31ರೊಳಗೆ ಎಲ್ಲಾ ವಯಸ್ಕರಿಗೆ ಸಂಪೂರ್ಣವಾಗಿ ಲಸಿಕೆ ಹಾಕುವ ಪ್ರಯತ್ನಗಳು ನಡೆಯುತ್ತಿವೆ ಎಂದು ಕೇಂದ್ರವು ನ್ಯಾಯಾಲಯಕ್ಕೆ ತಿಳಿಸಿದೆ. “ಈ ಅವಶ್ಯಕತೆಯಿಂದ, ಜುಲೈ 31 2021 ರ ವೇಳೆಗೆ 51.6 ಕೋಟಿ ಡೋಸ್‌ಗಳು ಸರ್ಕಾರಕ್ಕೆ ಲಭ್ಯವಾಗಲಿದೆ’ ಎಂದು ಹೇಳಿದೆ.

135 ಕೋಟಿಯಲ್ಲಿ 50 ಕೋಟಿ ಲಸಿಕೆಗಳನ್ನು ಕೋವಿಶೀಲ್ಡ್ ಮತ್ತು 40ಕೋಟಿ ಕೋವಾಕ್ಸಿನ್ ನಿಂದ ನೀಡಲಾಗುವುದು. ರಷ್ಯಾದ ಸ್ಪುಟ್ನಿಕ್ ವಿ ಲಸಿಕೆ 10 ಕೋಟಿ ಎಂದು ಅಂದಾಜಿಸಲಾಗಿದೆ. ಜೈವಿಕ್‍ ಇ ಸಬ್ 30 ಕೋಟಿ ಡೋಸ್ ಮತ್ತು ಝೈಡನ್‍ ಕ್ಯಾಡಿಲಾ 5 ಕೋಟಿ ಡೋಸ್‍ಗಳನ್ನು ಸಹ ನೀಡಲಿದೆ ಎಂದು ಕೇಂದ್ರ ಸುಪ್ರೀಂಕೋರ್ಟಿಗೆ ಹೇಳಿದೆ.

ಆದರೆ, ಝೈಡಸ್ ಕ್ಯಾಡಿಲಾ ಮತ್ತು ಜೈವಿಕ್‍ ಇ ಸಬ್ ಲಸಿಕೆಗಳನ್ನು ತುರ್ತು ಬಳಕೆಗಾಗಿ ಇನ್ನೂ ಅನುಮೋದಿಸಲಾಗಿಲ್ಲ. ಆದರೆ, ಸದ್ಯದಲ್ಲಿಯೇ ಅವರಿಗೆ ಅನುಮೋದನೆ ನೀಡಲಾಗುವುದು ಎಂದು ಸರ್ಕಾರ ಹೇಳಿದೆ ಎಂದು ಬಾರ್ ಮತ್ತು ಬೆಂಚ್ ವರದಿ ಮಾಡಿದೆ.


ಇದನ್ನೂ ಓದಿ: ಎಂಆರ್‌ಎನ್‌ಎ ಲಸಿಕೆಗಳು; ಸಂಶೋಧನೆ ಮತ್ತು ವಿಜ್ಞಾನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಯಾವ ಸರ್ಕಾರಿ ಆಸ್ಪತ್ರೆಗಳಲ್ಲೂ ನೆಟ್ಟುಗೆ ವ್ಯಾಕ್ಸಿನ್ ಸ್ಟಾಕ್ ಇಲ್ಲ. ಅಂತಹದರಲ್ಲಿ ಸುಳ್ಳು ಪ್ರಚಾರ ಮಾಡಿಕೊಳ್ಳುವ ಈ ಸರ್ಕಾರಕ್ಕೆ ಮಾನ ಮರ್ಯಾದೆ ಇಲ್ಲ..

LEAVE A REPLY

Please enter your comment!
Please enter your name here

- Advertisment -

Must Read

FACT CHECK: ಕರ್ನಾಟಕದಲ್ಲಿ ಎಸ್‌ಸಿ, ಎಸ್‌ಟಿಗಳಿಂದ ಕಿತ್ತುಕೊಂಡು ಮುಸ್ಲಿಮರಿಗೆ ನೀಡಿದ್ದ ಮೀಸಲಾತಿ ರದ್ದುಪಡಿಸಿದ್ದೇವೆ ಎಂಬ...

0
"ಕಾಂಗ್ರೆಸ್ ಸಂವಿಧಾನವನ್ನು ಗೌರವಿಸಲಿಲ್ಲ. ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಗೌರವಿಸಲಿಲ್ಲ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರದ ಮೂಲಕ ನಮಗೆ ಅವಕಾಶ ಸಿಕ್ಕಾಗ ನಾವು ಮಾಡಿದ ಮೊದಲ ಕೆಲಸವೆಂದರೆ, ಎಸ್‌ಸಿ, ಎಸ್‌ಟಿಗಳಿಂದ ಕಿತ್ತುಕೊಂಡು ನೀಡಿದ್ದ ಮುಸ್ಲಿಂ...