‘ಭಾನುವಾರ ರಾತ್ರಿ ನಡೆದ T20 ವರ್ಲ್ಡ್ ಕಪ್ ಪಂದ್ಯದಲ್ಲಿ ಭಾರತ ತಂಡವು ಪಾಕಿಸ್ತಾನ ವಿರುದ್ಧ ಸೋತ ನಂತರ ಗುಂಪೊಂದು ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ’ ಎಂದು ಪಂಜಾಬ್ನ ಸರ್ಗೂರಿನಲ್ಲಿರುವ ಎಂಜಿನಿಯರಿಂಗ್ ಕಾಲೇಜಿನಲ್ಲಿ ಅಧ್ಯಯನ ಮಾಡುತ್ತಿರುವ ಕೆಲವು ಕಾಶ್ಮೀರಿ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಈ ಘಟನೆ ನಡೆದ ನಡೆದ ಕೆಲವೇ ಗಂಟೆಗಳಲ್ಲಿ ಪಂಜಾಬಿನ ಪೊಲೀಸ್ ಅಧಿಕಾರಿಗಳು ಕಾಲೇಜು ಕ್ಯಾಂಪಸ್ಗೆ ಧಾವಿಸಿದ್ದು, ಭಾಯಿ ಗುರುದಾಸ್ ಆಫ್ ಎಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಕಾಲೇಜಿನಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ತರಲಾಗಿದೆ ಎಂದು ತಿಳಿಸಿದ್ದಾರೆ.
ಹಾನಿಯಾಗಿದ್ದ ಕೊಠಡಿಯನ್ನು ತೋರಿಸಿದ ಕಾಶ್ಮೀರಿ ವಿದ್ಯಾರ್ಥಿಯೊಬ್ಬರು, ‘ನಾವು ಇಲ್ಲಿ ಪಂದ್ಯವನ್ನು ನೋಡುತ್ತಿದ್ದೆವು. ಉತ್ತರ ಪ್ರದೇಶದ ಕೆಲವು ಬಂದು ಹಲ್ಲೆ ನಡೆಸಿದರು. ನಾವು ಇಲ್ಲಿಗೆ ಅಧ್ಯಯನ ನಡೆಸಲು ಬಂದಿದ್ದೇವೆ. ನಾವು ಭಾರತೀಯರೇ. ನಮಗೇನಾಗಿದೆ ಎಂಬುದನ್ನು ನೀವು ನೋಡಬಹುದು. ನಾವು ಭಾರತೀಯರಲ್ಲವೇ? ಮೋದಿ ಏನು ಹೇಳುತ್ತಾರೆ? ’ ಎಂದು ವಿವರಿಸಿದ್ದಾರೆ ಎದು ಎನ್ಡಿಟಿವಿ ವರದಿ ಮಾಡಿದೆ.
ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು, ಪಂಜಾಬಿನ ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ಚನ್ನಿ ಅವರಿಗೆ ಈ ವಿಷಯವನ್ನು ಪರಿಶೀಲಿಸುವಂತೆ ಮತ್ತು ಕಾಶ್ಮೀರಿ ವಿದ್ಯಾರ್ಥಿಗಳಿಗೆ ಧೈರ್ಯ ತುಂಬುವಂತೆ ಮನವಿ ಮಾಡಿದ್ದಾರೆ.
‘ಕಳೆದ ರಾತ್ರಿ ಪಂಜಾಬಿನ ಕಾಲೇಜೊಂದರಲ್ಲಿ ಕೆಲವು ಕಾಶ್ಮೀರಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿ ನಿಂದಿಸಿರುವ ಘಟನೆ ಬಗ್ಗೆ ಕೇಳಲು ತುಂಬ ದುಖಃವಾಗಿದೆ. ಈ ಘಟನೆ ಕುರಿತಂತೆ ಪೊಲೀಸರಿಗೆ ಸರಿಯಾಗಿ ತನಿಖೆ ನಡೆಸುವಂತೆ ನಿದೇಶಿಸಲು ಮತ್ತು ಪಂಜಾಬಿನಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಧೈರ್ಯ ತುಂಬುವಂತೆ ನಾನು ಚರಣ್ಜಿತ್ ಸಿಂಗ್ ಚೆನ್ನಿ ಅವರನ್ನು ಮನವಿ ಮಾಡುತ್ತೇನೆ’ ಎಂದು ಅಬ್ದುಲ್ಲಾ ಅವರು ಟ್ವಿಟ್ ಮಾಡಿದ್ದಾರೆ.
It is distressing to hear about the incidents of physical & verbal assault against some Kashmiri students in a college in Punjab last night. I request @CHARANJITCHANNI ji to direct @PunjabPoliceInd to look in to this & also to reassure the students studying in Punjab.
— Omar Abdullah (@OmarAbdullah) October 25, 2021
ಇದುವರೆಗೂ ಯಾವುದೇ ಪೊಲೀಸ್ ದೂರು ದಾಖಲಾಗಿಲ್ಲ. ಇಂದು ಬೆಳಗ್ಗೆ ಎರಡೂ ಕಡೆಯವರು ಪೊಲೀಸ್ ಹಾಗೂ ಕಾಲೇಜು ಆಡಳಿತಾಧಿಕಾರಿಗಳ ಮುಂದೆ ಪರಸ್ಪರ ಕ್ಷಮೆ ಕೇಳಿರುವುದಾಗಿ ಎನ್ಡಿಟಿವಿ ವರದಿ ಮಾಡಿದೆ.
ಈ ಘಟನೆಗೆ ಸಂಬಂಧಿಸಿದಂತೆ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಒಡೆದ ಕುರ್ಚಿಗಳು, ಹರಿದು ಬಿದ್ದಿರುವ ಹಾಸಿಗೆಗಳು ಹಾಗೂ ಅವರ ದೇಹದ ಮೇಲೆ ಆಗಿರುವ ಗಾಯಗಳ ಗುರುತುಗಳು ಈ ವೀಡಿಯೋದಲ್ಲಿವೆ.
ಐಸಿಸಿ ಟಿಟ್ವೆಂಟಿ ವಿಶ್ವಕಪ್ನ ತನ್ನ ಆರಂಭಿಕ ಪಂದ್ಯದಲ್ಲಿ ಭಾರತವು ಪಾಕಿಸ್ತಾನದ ಎದರು 10 ವಿಕೆಟ್ಗಳ ಸೋಲು ಕಂಡಿತು. ಆದರೆ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಪಂದ್ಯ ಮುಗಿದ ವೇಳೆ ಪಾಕಿಸ್ತಾನದ ಆಟಗಾರ ಮೊಹಮ್ಮದ್ ರಿಜ್ವಾನ್ರನ್ನು ಅಪ್ಪಿಕೊಂಡು ಅಭಿನಂದಿಸಿದರು. ಮತ್ತೊಬ್ಬ ಆಟಗಾರ ಪಾಕ್ ನಾಯಕ ಬಾಬರ್ ಅಜಂರಿಗೆ ಅಭಿನಂದನೆ ತಿಳಿಸಿದರು. ಈ ಫೋಟೊ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ “ನಿಜವಾದ ಕ್ರೀಡಾಸ್ಪೂರ್ತಿ” ಎಂಬ ಹೆಗ್ಗಳಿಕೆಗೆ ಪಾತ್ರವಾಗಿವೆ. ಅದೇ ರೀತಿ ಪಂದ್ಯದ ನಂತರ ಭಾರತದ ತಂಡದ ಮೆಂಟರ್ ಮಹೇಂದ್ರ ಸಿಂಗ್ ಧೋನಿ ಪಾಕಿಸ್ತಾನದ ಆಟಗಾರರ ಜೊತೆ ಮಾತುಕತೆ ನಡೆಸಿ ಕ್ರೀಡಾಭಿಮಾನಿಗಳ ಮನಗೆದ್ದಿದ್ದಾರೆ.
ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ಫೀಲ್ಡಿಂಗ್ ಆಯ್ದುಕೊಂಡಿತು. ಪಾಕಿಸ್ತಾನದ ಬೌಲರ್ಗಳ ಶಿಸ್ತುಬದ್ಧ ದಾಳಿಗೆ ಭಾರತದ ಆರಂಭಿಕ ಬ್ಯಾಟ್ಸ್ಮನ್ಗಳು ತತ್ತರಿಸಿದರು. 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡ ಭಾರತ 151 ರನ್ ಪೇರಿಸಲಷ್ಟೇ ಸಾಧ್ಯವಾಯಿತು. ಅದಕ್ಕೆ ಪ್ರತಿಯಾಗಿ ಪಾಕಿಸ್ತಾನ ಯಾವುದೇ ವಿಕೆಟ್ ನಷ್ಟವಿಲ್ಲದೆ 152 ರನ್ ಗಳಿಸಿ ಗೆಲುವಿನ ಸಿಹಿ ಉಂಡಿತು. ಆ ಮೂಲಕ ಪಾಕಿಸ್ತಾನ ತಂಡವು ವಿಶ್ವಕಪ್ ಪಂದ್ಯಾವಳಿಗಳಲ್ಲಿ ಮೊದಲ ಬಾರಿಗೆ ಭಾರತದ ಎದುರು ಜಯ ದಾಖಲಿಸಿತು. ಬಾಬರ್ ಅಜಂ ಮತ್ತು ಮೊಹಮ್ಮದ್ ರಿಜ್ವಾನ್ ಅದ್ಭುತ ಜೊತೆಯಾಟವಾಡಿದರು.
ಇದನ್ನೂ ಓದಿ: ಪಂದ್ಯ ಸೋತರೂ ಕೋಟ್ಯಾಂತರ ಅಭಿಮಾನಿಗಳ ಮನಗೆದ್ದ ಕೊಹ್ಲಿ, ಧೋನಿ!