ದೇವನಹಳ್ಳಿ ರೈತರ ಭೂಸ್ವಾಧೀನ ಸಂಬಂಧ ನಾಳೆ ಮುಖ್ಯಮಂತ್ರಿ ಕರೆದಿರುವ ಸಭೆಯಲ್ಲಿ ಭೂ ಸ್ವಾಧೀನ ಕೈ ಬಿಡುವ ಬಗ್ಗೆ ಮಾತ್ರ ಚರ್ಚೆ ನಡೆಯಬೇಕೇ ಹೊರತು, ಭೂಮಿ ಕೊಟ್ಟರೆ ಪರಿಹಾರ ಕೊಡುತ್ತೇವೆ ಎಂಬುವುದು ಅಲ್ಲ ಎಂದು ನಟ ಪ್ರಕಾಶ್ ರಾಜ್ ಹೇಳಿದರು.
ಬೆಂಗಳೂರಿನ ಪ್ರೆಸ್ಕ್ಲಬ್ನಲ್ಲಿ ಎದ್ದೇಳು ಕರ್ನಾಟಕ ಸೋಮವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ರೈತರಿಂದ 10 ದಿನಗಳ ಸಮಯ ಕೇಳಿ ಸಿಎಂ ಸಿದ್ದರಾಮಯ್ಯ, ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ದೆಹಲಿಗೆ ಹೋಗಿದ್ದಾರೆ. ಅಲ್ಲಿ ರಕ್ಷಣಾ ಸಚಿವ ರಾಜ್ನಾಥ್ ಸಿಂಗ್ ಅವರನ್ನು ಭೇಟಿ ಮಾಡಿ ಡಿಫೆನ್ಸ್ ಕಾರಿಡಾರ್ ಮತ್ತು ಏರೋ ಸ್ಪೇಸ್ಗೆ ಮನವಿ ಮಾಡಿದ್ದಾರೆ. ದೇವನಹಳ್ಳಿ ರೈತರ ಭೂಸ್ವಾಧೀನ ಕೈ ಬಿಡಲು ಕಾನೂನು ತೊಡಕಿದೆ ಎಂದು ನಮಗೆ ಹೇಳಿ, ನೀವು ದೆಹಲಿಗೆ ಹೋಗಿದ್ದು ಏಕೆ? ಎಂದು ಪ್ರಶ್ನಿಸಿದರು.
ದೇವನಹಳ್ಳಿಯ ರೈತರು ನಾವು ಭೂಮಿ ಕೊಡುವುದಿಲ್ಲ ಎಂದು ಮೂರುವರೆ ವರ್ಷಗಳಿಂದ ಹೋರಾಟ ಮಾಡುತ್ತಿದ್ದಾರೆ. ಆ ಬಗ್ಗೆ ಗಮನ ಹರಿಸಲು ಸರ್ಕಾರಕ್ಕೆ ಇಷ್ಟು ಸಮಯ ಬೇಕಾಯಿತು. ಈಗ ಕಾನೂನಿನ ತೊಡಕಿದೆ ಎಂದು 15ನೇ ತಾರೀಖಿನವರೆಗೆ ಸಮಯ ಕೇಳಿದ್ದಾರೆ. ಈ ನಡುವೆ ನಾವು ಭೂಮಿ ಕೊಡುತ್ತೀವಿ ಎಂದು ದೀಢೀರ್ ಕಾಣಿಸಿಕೊಂಡ ಗುಂಪಿಗೆ ಭೇಟಿ ಮಾಡಲು ಅವಕಾಶ ಕೊಟ್ಟಿದ್ದೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಭೂಮಿ ಕೊಡುತ್ತೇವೆ ಎಂದು ದಿಢೀರ್ ಕಾಣಿಸಿಕೊಂಡ ಗುಂಪು ಎಕರೆಗೆ 3.5 ಕೋಟಿ ಕೇಳಿದೆ. ಸುತ್ತಮುತ್ತಲ ಉಳಿದ ಪ್ರದೇಶವನ್ನು ಹಳದಿ ವಲಯ ಮಾಡುವಂತೆ ಕೋರಿದೆ. ರೈತರು ಮೂರುವರೆ ಕೋಟಿ ಕೇಳಿದ್ದಾರೆ ಎಂದು ಎಂ.ಬಿ ಪಾಟೀಲರು ಮಾಧ್ಯಮಗಳ ಮುಂದೆ ಹೇಳಿದ್ದಾರೆ. ಪಾಟೀಲರೇ ನೀವು ಮಾತನಾಡುತ್ತಿರುವುದು ನ್ಯಾಯನಾ? ಎಕರೆಗೆ ಮೂರುವರೆ ಕೋಟಿ ಕೊಡಲು ನೀವು ಯಾರು? ಅಷ್ಟೊಂದು ಹಣ ಎಲ್ಲಿಂದ ಕೊಡುತ್ತೀರಿ? ಎಂದು ಪ್ರಕಾಶ್ ರಾಜ್ ಪ್ರಶ್ನಿಸಿದರು.
ಎಂ.ಬಿ ಪಾಟೀಲರೇ ನಿಮ್ಮ ಸುಸ್ಥಿರ ಅಭಿವೃದ್ಧಿ ಏನು? ಪಕ್ಕದ ರಾಜ್ಯದಲ್ಲಿ 95 ಪೈಸೆಗೆ ಕಂಪನಿಗಳಿಗೆ ಜಮೀನು ಕೊಟ್ಟರು ಅಂತ ನೀವು ರೈತರಿಂದ ಮೂರುವರೆ ಕೋಟಿಗೆ ಜಮೀನು ತಗೊಂಡು ಅದನ್ನು ಕಂಪನಿಗಳಿಗೆ 75 ಪೈಸೆಗೆ ಕೊಡುತ್ತೀರಾ? ಮೂರುವರೆ ಕೋಟಿ ಯಾರಪ್ಪನ ದುಡ್ಡು? ನಿಮ್ಮ ಮನೆಯಿಂದ ತಂದಿದ್ದೀರಾ? ಅದು ನಮ್ಮಂತ ನಾಗರಿಕರ ತೆರಿಗೆ ಹಣ. ನೀವು ಗ್ಯಾರಂಟಿಗಳನ್ನು ಕೊಟ್ಟು ಅದಕ್ಕೆ ದುಡ್ಡಿಲ್ಲ ಎನ್ನುತ್ತೀರಿ, ಇಲ್ಲಿ ಸಾವಿರಾರು ಎಕರೆಗೆ ತಲಾ ಮೂರುವರೆ ಕೋಟಿ ಕೊಡುತ್ತೀವಿ ಎನ್ನುತ್ತೀರಿ. ಎಲ್ಲಿಂದ ದುಡ್ಡು ತರುತ್ತೀರಿ? ಎಂದು ಕೇಳಿದರು.
ರೈತರ ನಡುವೆ ನಾವು ಒಡಕು ಹುಟ್ಟಿಸಿಲ್ಲ ಎಂದು ಎಂ.ಬಿ ಪಾಟೀಲ್ ಹೇಳುತ್ತಿದ್ದಾರೆ. ಹಾಗಾದರೆ ಒಡಕು ಹುಟ್ಟಿಸಿದವರು ಯಾರು? ನೀವು ಒಡಕು ಮೂಡಿಸಲು 10 ದಿನಗಳ ಕಾಲವಕಾಶ ತೆಗೆದುಕೊಂಡಿದ್ದಾ? ಸಿಎಂ 10 ದಿನಗಳ ಸಮಯ ಕೇಳಿದ ಮೇಲೆ ಸಚಿವರೊಂದಿಗೆ ದೆಹಲಿಗೆ ಭೇಟಿ ನೀಡಿದ್ದಾರೆ. ದಲ್ಲಾಲಿಗಳ ಭೇಟಿಗೆ ಅವಕಾಶ ಕೊಟ್ಟಿದ್ದಾರೆ. ಎಂ.ಬಿ ಪಾಟೀಲ್ ಕುಹದ ಮಾತುಗಳನ್ನು ಆಡುತ್ತಿದ್ದಾರೆ. ಹೋರಾಟಗಾರರ ಹಿಂದೆ ಯಾರಿದ್ದಾರೆ ಎಂಬುವುದು ನಮಗೆ ಗೊತ್ತಿದೆ ಎಂದಿದ್ದಾರೆ. ನಮ್ಮ ಹಿಂದೆ ಇರುವವರ ಪಟ್ಟಿಯನ್ನು ನಾವು ಕೊಡುತ್ತೇವೆ ಎಂದರು.
ದೇವನಹಳ್ಳಿ ರೈತರ ಹೋರಾಟಕ್ಕೆ ದೇಶದ ವಿವಿಧ ಭಾಗಗಳ 50 ರಷ್ಟು ಜನಪರ ಸಂಘಟನೆಗಳು, ಪ್ರಖ್ಯಾತ ಚಿಂತಕರು ಹಾಗೂ ಹೋರಾಟಗಾರರು ಬೆಂಬಲ ನೀಡಿದ್ದಾರೆ. ನಮ್ಮ ಹಿಂದೆ ಯಾರಿದ್ದಾರೆ ಎಂದು ನಾವು ಹೇಳಿದ್ದೇವೆ. ನಿಮ್ಮ ಹಿಂದೆ ಯಾರಿದ್ದಾರೆ ಅಂತ ನೀವು ಹೇಳಿ ಎಂದು ಹೇಳಿದರು.
ಎಂ.ಬಿ ಪಾಟೀಲರೆ ನೀವು ಕಥೆಗಳನ್ನು ಹೇಳುವುದನ್ನು ನಿಲ್ಲಿಸಿ. ನಾಳೆಯ ಸಭೆಯಲ್ಲಿ ಮುಖ್ಯಮಂತ್ರಿಗಳು ಭೂ ಸ್ವಾಧೀನ ಕೈ ಬಿಡಲು ಇರುವ ಕಾನೂನು ತೊಡಕುಗಳು ಏನು? ಅದಕ್ಕೆ ಪರಿಹಾರಗಳೇನು ಎಂದು ಹೇಳಬೇಕು. ಅದನ್ನು ಹೊರತು ಎಕರೆಗೆ ಇಷ್ಟು ಪರಿಹಾರ ಕೊಡುತ್ತೇವೆ ಎಂಬ ಮಾತುಗಳು ನಮಗೆ ಬೇಡ. ಮಣ್ಣು ಮಾರಲ್ಲ ಎಂದು ರೈತರು ಸ್ಪಷ್ಟಪಡಿಸಿದ್ದಾರೆ ಎಂದರು.
ನಮಗೆ ಗೊತ್ತಿರುವ ಕಾನೂನಿನ ಪ್ರಕಾರ, ನಮ್ಮ ಸಂವಿಧಾನದ ಪ್ರಕಾರ ಭೂ ಸ್ವಾಧೀನ ಸಂಬಂಧ ಹೊರಡಿಸಿರುವ ಸರ್ಕಾರದ ಮೊದಲ ಅಧಿಸೂಚನೆಯೇ ತಪ್ಪು. ಹಸಿರು ವಲಯವನ್ನು ಕೈಗಾರಿಕಾ ಪ್ರದೇಶ ಮಾಡಲು ಕೈಗಾರಿಕಾ ನೀತಿಯಲ್ಲಿ ಅವಕಾಶ ಇಲ್ಲ. ಸಂವಿಧಾನದ ಪ್ರಕಾರ ಭೂಮಿಯನ್ನು ಕೈಗಾರಿಕಾ ಪ್ರದೇಶ ಎಂದು ಗುರುತಿಸದೆ ನೀವು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ, ನಿಮ್ಮ ಅಧಿಸೂಚನೆಯೇ ಸರಿ ಇಲ್ಲ. ಅದನ್ನು ಮೊದಲು ಸರಿಪಡಿಸಿಕೊಳ್ಳಿ ಎಂದು ತಿಳಿಸಿದರು.
ಸಂವಿಧಾನದ ಪ್ರಕಾರ ಒಂದು ಪ್ರದೇಶವನ್ನು ಹಳದಿ ವಲಯ ಎಂದು ಘೋಷಿಸಬೇಕಾದರೆ ಸ್ಥಳೀಯ ಸಂಸ್ಥೆಯ ನಾಲ್ಕನೇ ಒಂದು ಭಾಗದಷ್ಟು ಜನರು ನಮ್ಮ ಪ್ರದೇಶದಲ್ಲಿ ಕೃಷಿ ಮಾಡಲು ಸಾಧ್ಯವಿಲ್ಲ ಎಂದು ಹೇಳಬೇಕು. ಆ ಬಳಿಕ ಪರಿಸರ ಸಮೀಕ್ಷೆ ಮಾಡಬೇಕು. ಆ ಬಳಿಕ ನಿರ್ಧರಿಸಬೇಕು. ದೇವನಹಳ್ಳಿಯಲ್ಲಿ ಇದೆಲ್ಲಾ ಆಗಿದೆಯಾ? ನೀವು ಕಾನೂನಿನ ಕಥೆಗಳನ್ನು ಹೇಳುತ್ತಿರುವುದು ಯಾರಿಗೆ? ಹಸಿರು ವಲಯವನ್ನು ತೆಗೆದು ಹಾಕುತ್ತೀವಿ ಎನ್ನುತ್ತೀರಿ. ನೀವೇನು ರೈತರನ್ನು ಹೆದರಿಸುತ್ತಿದ್ದೀರಾ? ಎಂದು ಕಿಡಿಕಾರಿದರು.
ಎಂ.ಬಿ ಪಾಟೀಲರು ನಾವು ಬಿಜಾಪುರವನ್ನು ಸಂಪತ್ಬರಿತ ನಾಡು ಮಾಡಿದ್ದೇನೆ ಎನ್ನುತ್ತಿದ್ದಾರೆ. ಬಿಜಾಪುರದಲ್ಲೂ ರೈತರ ಹೋರಾಟ ನಡೆಯುತ್ತಿದೆ. ಹಾಗಾಗಿ, ಯಾವುದೋ ಊರಿನ ಕಥೆ ಹೇಳಿ ರೈತರನ್ನು ದಾರಿ ತಪ್ಪಿಸುವ ಕೆಲಸ ಮಾಡಬೇಡಿ. ಕುತಂತ್ರಗಳನ್ನು ನಿಲ್ಲಿಸಿ. ನೀವು ನಿಮ್ಮ ಸರ್ಕಾರ ಹೋರಾಟಗಾರರಿಗೆ ಕಾನೂನು ತೊಡಕಿದೆ ಎಂದು ಹೇಳಿದ್ದೀರಿ. ನಾಳೆ ಅದರ ಮಾತುಕತೆ ಮಾತ್ರ ನಡೆಯಬೇಕು, ಹೊರತು ಪರಿಹಾರದ ಮಾತುಕಥೆಯಲ್ಲ ಎಂದರು.
ರಾಜ್ಯ ಸರ್ಕಾರ ಮನಸ್ಸು ಮಾಡಿದರೆ ಈ ಕ್ಷಣವೇ ಭೂ ಸ್ವಾಧೀನ ಕೈ ಬಿಡಬಹುದು. ಆದರೆ, ಸಿದ್ದರಾಮಯ್ಯ ಸರ್ಕಾರಕ್ಕೆ ರೈತ ಹಿತ ಕಾಯುವ ಇಚ್ಚಾಶಕ್ತಿ ಇದೆಯಾ? ಅಥವಾ ಕಾರ್ಪೋರೇಟ್ ಹಿತಾಸಕ್ತಿ ಇದೆಯಾ? ಇದು ಗೊತ್ತಾಗಬೇಕಿದೆ. ರೈತ ಹಿತ ಕಾಯುವ ಇಚ್ಚಾಶಕ್ತಿ ಇದ್ದರೆ ಕಾನೂನಿನಡಿ ಸರ್ಕಾರಕ್ಕೆ ಎಲ್ಲಾ ಅಧಿಕಾರವೂ ಇದೆ. ಹಾಗಾಗಿ, ಸರ್ಕಾರದ ನಿಲುವು ನಾಳೆ ಗೊತ್ತಾಗಲಿದೆ ಎಂದರು.
ಕಳೆದ ಮೂರು ವರ್ಷಗಳಿಂದ ರೈತರು ಹೋರಾಟ ಮಾಡುತ್ತಿದ್ದರೂ, ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಯಾವುದೇ ಪಕ್ಷಗಳ ಒಬ್ಬನೇ ಒಬ್ಬ ಜನಪ್ರತಿನಿಧಿ ರೈತರನ್ನು ಬೆಂಬಲಿಸಿಲ್ಲ. ಇದು ಈ ರಾಜ್ಯದ ದೌರ್ಭಾಗ್ಯ. ನಮ್ಮ ಹೋರಾಟ ನಿಲ್ಲಲ್ಲ, ಕಾನೂನು ಹೋರಾಟವೂ ನಡೆಯಲಿದೆ. ರೈತರ ಭೂ ಕಬಳಿಸುವ ಸರ್ಕಾರಗಳ ಕ್ರಮ ದೇವನಹಳ್ಳಿಯಲ್ಲೇ ಕೊನೆಯಾಗಬೇಕು ಎಂದು ಪ್ರಕಾಶ್ ರಾಜ್ ಹೇಳಿದರು.
ಎದ್ದೇಳು ಕರ್ನಾಟಕದ ಕೆ.ಎಲ್ ಅಶೋಕ್ ಅವರು ಮಾತನಾಡಿ, ” ದೇವನಹಳ್ಳಿಯ ರೈತರು ಕಳೆದ ಮೂರುವರೆ ವರ್ಷಗಳಿಂದ ಹೋರಾಟ ಮಾಡಿಕೊಂಡು ಬರುತ್ತಿದ್ದಾರೆ. ನಾಳೆಯ ಮುಖ್ಯಮಂತ್ರಿಗಳ ನಿರ್ಣಾಯಕ ಸಭೆಯಲ್ಲಿ ರೈತಪರ ನಿಲುವು ಪ್ರಕಟಿಸಲಿದ್ದಾರೆ ಎಂಬ ವಿಶ್ವಾಸ ನಮಗಿದೆ. ದೇವನಹಳ್ಳಿಯ ಹೋರಾಟ ಇಡೀ ದೇಶದ ರೈತ ಹೋರಾಟಕ್ಕೆ ಹೊಸತೊಂದು ದಿಕ್ಕನ್ನು ತೋರಿಸಿದೆ ಎಂದರು.
ಮಾನವ ಹಕ್ಕುಗಳ ಕಾರ್ಯಕರ್ತೆ ಹಾಗೂ ಎದ್ದೇಳು ಕರ್ನಾಟಕದ ಪ್ರಮುಖರಾದ ತಾರಾರಾವ್, ಬೋರಯ್ಯ ಚಿತ್ರದುರ್ಗ, ರೈತ ನಾಯಕ ವೀರಸಂಗಯ್ಯ, ದಲಿತ ಮುಖಂಡರಾದ ವೆಂಕಟೇಶ್ ಪತ್ರಿಕಾಗೋಷ್ಠಿಯಲ್ಲಿ ಇದ್ದರು.
ದೇವನಹಳ್ಳಿ: “ರೈತರಿಗೆ ಭೂಮಿ ಕೇವಲ ಆಸ್ತಿಯಲ್ಲ, ಗುರುತು!” – ರೈತ ಹೋರಾಟಕ್ಕೆ ದೇಶದ 30 ಸಂಘಟನೆಗಳ ಬೆಂಬಲ ಘೋಷಣೆ