Homeಚಳವಳಿಪರಿಷ್ಕೃತ ಪಠ್ಯದಲ್ಲಿ ಆದಿವಾಸಿಗಳ ಅವಹೇಳನ: ರೋಹಿತ್ ಚಕ್ರತೀರ್ಥ ವಿರುದ್ಧ ದೂರು ದಾಖಲು

ಪರಿಷ್ಕೃತ ಪಠ್ಯದಲ್ಲಿ ಆದಿವಾಸಿಗಳ ಅವಹೇಳನ: ರೋಹಿತ್ ಚಕ್ರತೀರ್ಥ ವಿರುದ್ಧ ದೂರು ದಾಖಲು

ಎಸ್‌ಸಿ, ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಲು ಆಗ್ರಹಿಸಲಾಗಿದೆ.

- Advertisement -
- Advertisement -

ಪಠ್ಯ ಪರಿಷ್ಕರಣೆ ವಿವಾದ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಹೊಸ ಸಮಿತಿ ಮಾಡಿರುವ ಅವಾಂತರಗಳು ಕ್ಷಣ ಕ್ಷಣಕ್ಕೂ ಬಹಿರಂಗವಾಗುತ್ತಿದ್ದು ಸರ್ಕಾರಕ್ಕೆ ಇಕ್ಕಟ್ಟು ತಂದಿವೆ. ಈ ನಡುವೆ ಪರಿಷ್ಕೃತ ಪಠ್ಯದಲ್ಲಿ ಆದಿವಾಸಿ ಕಾಡು ಜನಾಂಗದ ಬಗ್ಗೆ ಅವಹೇಳನ ಮಾಡಲಾಗಿದೆ ಎಂದು ಆರೋಪಿಸಿ ರೋಹಿತ್ ಚಕ್ರತೀರ್ಥ ವಿರುದ್ಧ ರಾಮನಗರ ಪೊಲೀಸ್ ಅಧೀಕ್ಷಕರಿಗೆ ದೂರು ಸಲ್ಲಿಸಲಾಗಿದೆ. ಎಸ್‌ಸಿ, ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ.

ದೂರು ಸ್ವೀಕರಿಸಿರುವ ರಾಮನಗರ ಪೊಲೀಸ್ ಅಧೀಕ್ಷಕರು ಸದರಿ ವಿಚಾರದ ಬಗ್ಗೆ ಪರಿಶೀಲಿಸಿ ಸಂಬಂಧಪಟ್ಟ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ಅಧ್ಯಕ್ಷರಾದ ರೋಹಿತ್ ಚಕ್ರತೀರ್ಥ ಹಾಗೂ ಇತರ ಸದಸ್ಯರ ಮೇಲೆ ಕ್ರಮ ತೆಗೆದುಕೊಳ್ಳಬೇಕೆಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಾದ ಡಾ.ಎಸ್ ಸೆಲ್ವಕುಮಾರ್‌ರವರಿಗೆ ಪತ್ರ ಬರೆದಿದ್ದಾರೆ. ಪತ್ರದ ಪ್ರತಿ ನಾನುಗೌರಿ.ಕಾಂಗೆ ಲಭ್ಯವಾಗಿದೆ.

10 ನೇ ತರಗತಿಯ ಕನ್ನಡ ಪಠ್ಯ ಪುಸ್ತಕದಲ್ಲಿ ನಮ್ಮ ಆದಿವಾಸಿ ಕಾಡು ಜನಾಂಗದ ಬಗ್ಗೆ ಅವಹೇಳನಕಾರಿಯಾಗಿ ಪಠ್ಯ ಮುದ್ರಿಸಿರುವ ರೋಹಿತ್ ಚಕ್ರತೀರ್ಥ ಮತ್ತು ಇತರೆ ಸದಸ್ಯರನ್ನು ಬಂಧಿಸಿ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿ ಇರುಳಿಗ (ಅರಣ್ಯವಾಸಿ) ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷರಾದ ಕೃಷ್ಣಮೂರ್ತಿಯವರು ದೂರು ಸಲ್ಲಿಸಿದ್ದಾರೆ.

10ನೇ ತರಗತಿಯ ಕನ್ನಡ ಪಠ್ಯಪುಸ್ತಕದಲ್ಲಿ ಸ್ವಾಮಿ ವಿವೇಕಾನಂದರ ಚಿಂತನೆಗಳು ಎಂಬ ಶೀರ್ಷಿಕೆಯಲ್ಲಿ “ಸಂಸ್ಕೃತಿಯು ರಕ್ತದಲ್ಲಿ ಹರಿಯಬೇಕು. ಆಧುನಿಕ ಕಾಲದಲ್ಲಿ ಬೇಕಾದಷ್ಟು ಜ್ಞಾನಸಂಪತ್ತನ್ನು ಪಡೆದ ದೇಶಗಳನ್ನು ನೋಡಿರುವೆವು. ಆದರೆ ಆದರಿಂದ ಏನು ಪ್ರಯೋಜನ? ಅವರು ಕಾಡುಜನರಂತೆ ಇರುವರು. ಅವರಲ್ಲಿ ಸಂಸ್ಕೃತಿ ಇಲ್ಲ” ಎಂಬುವುದಾಗಿ ಅವಹೇಳನಕಾರಿಯಾಗಿ ಮುದ್ರಿಸಿ ಆದಿವಾಸಿಗಳನ್ನು (ಕಾಡುವಾಸಿ) ಉದ್ದೇಶಪೂರ್ವಕವಾಗಿ ಅನಾಗರಿಕರೆಂದು ನಿಂದಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಆದಿವಾಸಿಗಳ ಘನತೆ, ಸಂಸ್ಕೃತಿಯನ್ನು ಅಲ್ಲಗೆಳೆದು ನಮ್ಮನ್ನು ಮನುಷ್ಯರಂತೆ ಕಾಣದ ವಿಕೃತ ಮನೋದೋರಣೆಯ ರೋಹಿತ್ ಚಕ್ರತೀರ್ಥ ಮತ್ತು ಇತರ ಸದಸ್ಯರನ್ನು ಎಸ್‌ಸಿ, ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ 1989ರ ಅಡಿಯಲ್ಲಿ ಬಂಧಿಸಿ, ಕಾನೂನ ರೀತ್ಯಾ ಕ್ರಮ ಜರುಗಿಸಬೇಕೆಂದು ಮನವಿ ಮಾಡಲಾಗಿದೆ.

ಪಠ್ಯದಲ್ಲಿ ಇರುವುದೆನು?

ಈ ಹಿಂದಿನ ಬರಗೂರು ರಾಮಚಂದ್ರಪ್ಪನವರ ನೇತೃತ್ವದ ಸಮಿತಿಯು ಪಠ್ಯಪೂರಕ ಅಧ್ಯಯನದ ಭಾಗವಾಗಿ ಸ್ವಾಮಿ ವಿವೇಕಾನಂದರ ಚಿಂತನೆಗಳು ಎಂಬ ಪಠ್ಯವನ್ನು ಸೇರಿಸಿತ್ತು. ಅದರಲ್ಲಿ ವಿವೇಕಾನಂದರಿಗೆ ಬಡಜನರ ಬಗ್ಗೆ ಇದ್ದ ಪ್ರೀತಿ, ಹಸಿವು ಹೋಗಲಾಡಿಸಲು ಅವರು ಕರೆ ನೀಡಿದ್ದು, ಸರ್ವಧರ್ಮ ಸಹಿಷ್ಣುತೆಯ ವಿಚಾರಗಳನ್ನು ಸೇರಿಸಿ ಸರಳವಾಗಿ ಹೇಳಲಾಗಿತ್ತು. “ಸ್ವಮತಾಭಿಮಾನ, ಅನ್ಯ ಮತದ್ವೇಷ ಮತ್ತು ಇವುಗಳಿಂದ ಉತ್ಪನ್ನವಾದ ಘೋರ ಧಾರ್ಮಿಕ ದುರಭಿಮಾನಗಳು ಈ ಸುಂದರ ಜಗತ್ತನ್ನು ಆವರಿಸಿಕೊಂಡಿವೆ… ಇಂತಹ ಉಗ್ರ ಧರ್ಮಾಂಧತೆಯ ದೈತ್ಯರಿಲ್ಲದೆ ಇದ್ದರೆ ಮಾನವ ಜನಾಂಗ ಇಂದಿಗಿಂತ ಎಷ್ಟೋ ಮುಂದುವರೆಯುತ್ತಿತ್ತು” ಎಂಬ ಚಿಕಾಗೋ ಸಮ್ಮೇಳನದ ಅವರ ಭಾಷಣವನ್ನು ಸೇರಿಸಲಾಗಿತ್ತು.

ಆದರೆ ರೋಹಿತ್ ಚಕ್ರತೀರ್ಥ ನೇತೃತ್ವದ ನೂತನ ಸಮಿತಿಯು ಆ ಪಠ್ಯವನ್ನು ಸಂಪೂರ್ಣ ಕೈಬಿಟ್ಟು ಅದೇ ಶೀರ್ಷಿಕೆಯಲ್ಲಿ ಹೊಸ ಪಠ್ಯ ಸೇರಿಸಿದೆ. ಅದರಲ್ಲಿ ಕಾಡುಜನರಂತೆ ಇರುವರು ಎಂಬ ಹೋಲಿಕೆ ಮಾಡುವ ಮೂಲಕ ಈ ನಾಡಿನ ಮೂಲನಿವಾಸಿಗಳಾದ ಆದಿವಾಸಿಗಳನ್ನು ಅವಹೇಳನ ಮಾಡಿ, ಸಂಸ್ಕೃತಿಯ ವ್ಯಸನ ಹೇರಲಾಗಿದೆ. ‘ಕಾಡುಜನರಂತೆ ಇರುವರು’ ಎಂದು ಸ್ವಾಮಿ ವಿವೇಕಾನಂದರು ಎಲ್ಲಿಯೂ ಹೇಳಿರದಿದ್ದರೂ ಅವರ ಹೆಸರಿನಲ್ಲಿ ಆ ಪದಗಳನ್ನು ಹಾಕಿ ಅವಮಾನಿಸಲಾಗಿದೆ ಎಂದು ವಿವೇಕಾನಂದರ ಕುರಿತು ಅಧ್ಯಯನ ನಡೆಸಿರುವ ತಜ್ಞರು ತಿಳಿಸಿದ್ದಾರೆ.

ಈ ಕೆಳಗೆ ಎರಡೂ ಸಮಿತಿ ನೀಡಿರುವ ಪೂರ್ಣ ಪಠ್ಯವನ್ನು ಪ್ರಕಟಿಸಲಾಗಿದೆ. ಆಸಕ್ತರು ಓದಬಹುದು.

ಹಿಂದಿನ ಸಮಿತಿಯ ಪಠ್ಯ (ಕೈಬಿಟ್ಟ ಪಠ್ಯ)

ವಿವೇಕಾನಂದರೆಂದರೆ ಸಾಮಾಜಿಕ ಸಂಕಟ, ಸಿಟ್ಟು, ಸ್ಫೋಟ, ಸ್ಪಷ್ಟತೆಗಳ ರೂಪಕ. ಅವರು ಶಿಖರ ಚಿಂತಕ, ಅವರ ಆಲೋಚನೆಯಲ್ಲಿ ಗೊಂದಲಗಳಿಲ್ಲ. ಕೆಲವೊಮ್ಮೆ ವೈರುದ್ಧದಂತೆ ಕಂಡರೂ ಅದು ಸಾಂದರ್ಭಿಕ ಪ್ರತಿಕ್ರಿಯೆಗಳ ಫಲ. ಅವರ ಎಲ್ಲ ವಿಚಾರಗಳನ್ನು ಒಟ್ಟಿಗೇ ನೋಡಿದಾಗ ಸ್ಪಷ್ಟ ನೋಟ ಕಾಣಿಸುತ್ತದೆ.

ದೈಹಿಕ ಹಸಿವನ್ನು ಹಿಂಗಿಸುವುದು ಮೊದಲ ಆದ್ಯತೆ; ಅನಂತರ ಆತ್ಮದ ಅವರ ಹಸಿವು, ವೇದಾಂತದ ಹಸಿವು, ಸಾಂಸ್ಥಿಕವಾದ ಧರ್ಮದ ಹಸಿವು. ಈ ಕಾರಣದಿಂದಾಗಿಯೇ ವಿವೇಕಾನಂದರು ಯಾವತ್ತೂ ಧಾರ್ಮಿಕ ಮೂಲಭೂತವಾದಿಯಾಗಿರಲಿಲ್ಲ. ಬದಲಾಗಿ ಧಾರ್ಮಿಕ ಮೂಲಭೂತವಾದಕ್ಕೆ ಉಗ್ರ ವಿರೋಧಿಯಾಗಿದ್ದರು. ಜಾತಿವಾದ ಮತ್ತು ಕೋಮುವಾದಕ್ಕೆ ಪ್ರತಿರೋಧವೊಡ್ಡಿದರು. ಹಿಂದೂಧರ್ಮದೊಳಗಿದ್ದೂ ಅದನ್ನು ಮೀರಿದ ಸಾಮಾಜಿಕ ಶಕ್ತಿಯಾದರು. ಆದ್ದರಿಂದ ಇಂದಿನ ಸನ್ನಿವೇಶದಲ್ಲಿ ಅವರು ಹೆಚ್ಚು ಪ್ರಸ್ತುತರು. ಈ ಅಂಶವನ್ನು ಮುಂದಿನಂತೆ ಮತ್ತಷ್ಟು ವಿವರಿಸಬಹುದು: ಜಾತಿವಾದ ಮತ್ತು ಕೋಮುವಾದಗಳು ಮುನ್ನೆಲೆಗೆ ಬಂದು ಮಾನವೀಯ ಮೌಲ್ಯವನ್ನು ನುಂಗಿ ನೊಣೆಯುತ್ತಿವೆ. ಸಮಾನತೆಯ ಆಶಯಗಳನ್ನು ತಪ್ಪಿತಸ್ಥ ಶಾಲಾ ಬಾಲಕರಂತೆ ಹಿಂದಿನ ಸಾಲಿನಲ್ಲಿ ಕೈಕಟ್ಟಿ ನಿಲ್ಲಿಸಲಾಗಿದೆ. ಬಡಜನರ ಪರವಾದ ಆದ್ಯತೆಗಳು ಪಲ್ಲಟಗೊಳ್ಳುತ್ತಿವೆ. ವಿವೇಕಾನಂದರಿಗೆ ಬಡಜನರ ಹೊಟ್ಟೆಹಸಿವನ್ನು ಹಿಂಗಿಸುವುದು ಮೊದಲ ಆದ್ಯತೆಯಾಗಿತ್ತು. ಆನಂತರ ಧರ್ಮ, ಜಾತಿವಾದದ ವಿಷಯಕ್ಕೆ ಬಂದರೆ ಹಿಂದುಳಿದ ಹಾಗೂ ದಲಿತ ಜಾತಿಗಳ ಬಗ್ಗೆ ಅವರಿಗೆ ಸಹಜವಾದ ಸಾಮಾಜಿಕ ಕಳಕಳಿಯಿತ್ತು. ಹೀಗಾಗಿಯೇ ಅವರು ಸಂಶಯಕ್ಕೆಡೆಯಿಲ್ಲದಂತೆ ಜಾತಿ ಮತ್ತು ವರ್ಗ ವ್ಯವಸ್ಥೆಯನ್ನು ವಿರೋಧಿಸಿದರು. ಅವರು “ಜಾತಿ ಎಂಬುದು ಸಮಾಜದ ಒಂದು ಆಂತರಿಕ ಭಾಗವಾಗಿದೆ. ಹಿಂದೆ ಅದು ವಿಕಾಸವಾಗುತ್ತಿತ್ತು. ಈಗ ಅದು ಘನೀಭೂತವಾಗಿದೆ. ಅದರ ದುರ್ಗಂಧದಿಂದ ಭಾರತದ ವಾತಾವರಣವೆಲ್ಲ ತುಂಬಿದೆ” ಎಂದು ಹೇಳಿದರು. ಜಾತಿ ವ್ಯವಸ್ಥೆಯ ಕ್ರೌರ್ಯಕ್ಕೆ ತುತ್ತಾಗಿ ಶೂದ್ರರು, ಅಸ್ಪಶ್ಯರು ಸ್ವಾತಂತ್ರ್ಯಹೀನರಾಗಿ ಗುಲಾಮತನ ಅನುಭವಿಸುವುದನ್ನು ಟೀಕಿಸುವ ವಿವೇಕಾನಂದರು ಶೂದ್ರವರ್ಗ ತನ್ನ ಊಳಿಗ ಸ್ವಭಾವ’ವನ್ನು ಬಿಟ್ಟು ಹೊರಬರಬೇಕೆಂದು ಕರೆಕೊಡುತ್ತಾರೆ. ಮುಂದೊಮ್ಮೆ ಶೂದ್ರರು ತಮ್ಮ ಶೂದ್ರತ್ವದ ಶಕ್ತಿಯಿಂದಲೇ ಮೇಲೇಳುವ ಕಾಲಬರುತ್ತದೆ ಎಂದು ಭಾವಿಸುತ್ತಾರೆ ಮತ್ತು ವಿಶೇಷವೆಂದರೆ, ಮುಂದೆ ಬರುವುದು ಸಮತಾವಾದ, ಅರಾಜವಾದ, ಶೂನ್ಯವಾದಗಳು ಮುಂದಾಗಲಿರುವ ಸಮಾಜ ಕ್ರಾಂತಿಯ ಅರುಣೋದಯ” ಎಂದು ಘೋಷಿಸಿದ್ದಾರೆ.

ಕೋಮುವಾದದ ವಿಷಯಕ್ಕೆ ಬಂದರೆ ವಿವೇಕಾನಂದರೆಂದೂ ಏಕಸಂಸ್ಕೃತಿ ಮತ್ತು ಏಕ ಧರ್ಮ ವಿಸ್ತರಣೆಗಳ ಪರವಾಗಿರಲಿಲ್ಲ. ಅದು ಹಿಂದೂ ಧರ್ಮವಿರಲಿ, ಕ್ರೈಸ್ತ ಧರ್ಮವಿರಲಿ, ಇಸ್ಲಾಂ ಧರ್ಮವಿರಲಿ, ಏಕಧರ್ಮ ಶ್ರೇಷ್ಠತೆ ಮತ್ತು ವಿಸ್ತರಣೆಯು ಜೀವವಿರೋಧವೆಂದು ಅವರು ಭಾವಿಸಿದ್ದರು; ೧೧-೦೯-೧೮೯೩ ರಂದು ಚಿಕಾಗೊದ ಸರ್ವಧರ್ಮ ಸಮ್ಮೇಳನದಲ್ಲಿ ಮಾತನಾಡುತ್ತ ಅವರು “ಸ್ವಮತಾಭಿಮಾನ, ಅನ್ಯ ಮತದ್ವೇಷ ಮತ್ತು ಇವುಗಳಿಂದ ಉತ್ಪನ್ನವಾದ ಘೋರ ಧಾರ್ಮಿಕ ದುರಭಿಮಾನಗಳು ಈ ಸುಂದರ ಜಗತ್ತನ್ನು ಆವರಿಸಿಕೊಂಡಿವೆ… ಇಂತಹ ಉಗ್ರ ಧರ್ಮಾಂಧತೆಯ ದೈತ್ಯರಿಲ್ಲದೆ ಇದ್ದರೆ ಮಾನವ ಜನಾಂಗ ಇಂದಿಗಿಂತ ಎಷ್ಟೋ ಮುಂದುವರೆಯುತ್ತಿತ್ತು” ಎಂದರು. ಇನ್ನೊಮ್ಮೆ ಅವರು ಹೀಗೆ ಹೇಳಿದರು : ಪ್ರತಿಯೊಬ್ಬರೂ ಒಂದೇ ಮಾರ್ಗವನ್ನು ಅನುಸರಿಸುವ ದುರ್ದಿನ ಪ್ರಪಂಚಕ್ಕೆ ಬಾರದಿರಲಿ. ಈಗ ಧರ್ಮ ಮತ್ತು ಆಧ್ಯಾತ್ಮಿಕ ಭಾವನೆ ನಾಶವಾಗುವುದು. ವೈವಿಧ್ಯವೇ ಜೀವನದ ರಹಸ್ಯ….. ನಾವು ಎಲ್ಲ ಧರ್ಮಗಳಿಗೂ ಗೌರವವನ್ನು ತೋರಬೇಕು.”

ವಿವೇಕಾನಂದರ ಧಾರ್ಮಿಕ ಚಿಂತನೆಗಳನ್ನು ಅವಲೋಕಿಸಿದಾಗ ಅವರು ಸ್ಪಷ್ಟವಾಗಿ ಕೋಮುವಾದ ವಿರೋಧಿಯಾಗಿದ್ದರೆಂದು ತಿಳಿದುಬರುತ್ತದೆ. ಕೋಮುವಾದವು ಏಕಧರ್ಮ ಮತ್ತು ಏಕಸಂಸ್ಕೃತಿಯೇ ಶ್ರೇಷ್ಠವೆಂದೂ ಅದೇ ಅಂತಿಮವೆಂದೂ ನಂಬುತ್ತ ನಂಬಿಸುತ್ತ, ಪರಮಧರ್ಮ ದ್ವೇಷವನ್ನು ಬಿತ್ತಿ ಬೆಳೆಸುತ್ತದೆ. ಇಂತಹ ಪ್ರವೃತ್ತಿಗೆ ವಿವೇಕಾನಂದರು ಕಟ್ಟಾ ವಿರೋಧಿಯಾಗಿದ್ದರು. ಕುವೆಂಪು ಅವರು ಹೇಳುವಂತೆ ಅವರು ‘ಮಾನವತಾಮಿತ್ರ’ರಾಗಿದ್ದರು. “ಮನುಷ್ಯತ್ವದ ಮಹಿಮೆಯನ್ನು ಎಂದಿಗೂ ಮರೆಯಬೇಡಿ. ನಮಗಿಂತಲೂ ಬೇರೆಯಾದ ದೇವರು ಹಿಂದೆ ಇರಲಿಲ್ಲ. ಮುಂದೆ ಬರುವುದಿಲ್ಲ. ಕ್ರೈಸ್ತ, ಬುದ್ಧ, ಕೃಷ್ಣ, ರಾಮರೆಲ್ಲ ಅಹಮಸ್ಮಿ ಎಂಬ ಮಹಾವಾರಿಧಿಯ ತರಂಗಗಳು ಮಾತ್ರ” ಎಂದು ಘೋಷಿಸಿದರು.

ವಿವೇಕಾನಂದರ ‘ಧೀರೋದಾತ್ತ’ ನಿಲುವುಗಳು ವೈಯಕ್ತಿಕ ಮಾತ್ರವಾಗದೆ ಸಾಮಾಜಿಕವಾಗಿ ರೂಪಾಂತರಗೊಂಡು ಗಟ್ಟಿಯಾದದ್ದೇ ಅವರ ವ್ಯಕ್ತಿತ್ವದ ವಿಶೇಷ; ಅವರದು ಪ್ರಖರ ಸಾಮಾಜಿಕ ವ್ಯಕ್ತಿತ್ವ, ದೀನ ದಲಿತರ ಉದ್ಧಾರವೇ ಅವರ ಧರ್ಮದ ಮೊದಲ ತತ್ವ: ಅದೇ ಅವರ ವೈಚಾರಿಕ ಸತ್ವ. ಆದ್ದರಿಂದ ವಿವೇಕಾನಂದರು ಇಂದಿಗೂ ಸತ್ಯ.

ನೂತನ ಸಮಿತಿಯ ಪಠ್ಯ (ಸೇರಿಸಿದ ಪಠ್ಯ)

ದೇಶದ ಭಾಷೆಯಲ್ಲಿ ಜನರಿಗೆ ಭಾವನೆಗಳನ್ನು ನೀಡಿ. ಅವರು ವಿಷಯಗ್ರಹಣ ಮಾಡಿಕೊಳ್ಳುವರು, ಆದರೆ ಅವರಿಗೆ ಮತ್ತೊಂದು ಅವಶ್ಯಕತೆ ಇದೆ. ಅದು ಸಂಸ್ಕೃತಿ. ನೀವು ಅವರಿಗೆ ಇದನ್ನು ಕೊಡುವ ತನಕ ಅವರ ಪ್ರಗತಿ ಸ್ಥಿರವಾಗಲಾರದು. ಸಂಸ್ಕೃತಿ ಮಾತ್ರ ಆಘಾತವನ್ನು ಸಹಿಸಬಲ್ಲದು, ಕೇವಲ ಜ್ಞಾನರಾಶಿಗೆ ಅದನ್ನು ಎದುರಿಸುವ ಶಕ್ತಿ ಇಲ್ಲ. ಜಗತ್ತಿಗೆ ಜ್ಞಾನರಾಶಿಯನ್ನೇ ಕೊಡಬಹುದು. ಆದರೆ ಅದರಿಂದ ಹೆಚ್ಚು ಪ್ರಯೋಜನವಿಲ್ಲ. ಸಂಸ್ಕೃತಿಯು ರಕ್ತದಲ್ಲಿ ಹರಿಯಬೇಕು. ಆಧುನಿಕ ಕಾಲದಲ್ಲಿ ಬೇಕಾದಷ್ಟು ಜ್ಞಾನಸಂಪತ್ತನ್ನು ಪಡೆದ ದೇಶಗಳನ್ನು ನೋಡಿರುವೆವು. ಆದರೆ ಆದರಿಂದ ಏನು ಪ್ರಯೋಜನ? ಅವರು ಕಾಡುಜನರಂತೆ ಇರುವರು. ಅವರಲ್ಲಿ ಸಂಸ್ಕೃತಿ ಇಲ್ಲ.

ನಮ್ಮ ಶಾಸ್ತ್ರಗಳಲ್ಲಿ ಹುದುಗಿರುವ, ಮಠ ಮತ್ತು ಆರಣ್ಯಗಳಲ್ಲಿ ಅಡಗಿರುವ ಕೆಲವೇ ವ್ಯಕ್ತಿಗಳ ಸ್ವತ್ತಾಗಿರುವ ಆಧ್ಯಾತ್ಮಿಕ ರತ್ನಗಳನ್ನು ದೇಶ ಭಾಷೆಗಳ ಮೂಲಕ ಜನರಿಗೆ ಪ್ರಚಾರ ಮಾಡಬೇಕು. ವೇದವೇದಾಂತಗಳ ಮುಖ್ಯ ಪಲ್ಲವಿಯೇ ಶ್ರದ್ದೆ. ಯಾವ ಶದ್ಧೆಯ ಮೂಲಕ ನಚಿಕೇತನು ಯಮರಾಜನನ್ನು ಕೂಡ ಸಂದರ್ಶಿಸಿ ಪ್ರಶ್ನೆ ಮಾಡುವುದಕ್ಕೆ ಧೈರ್ಯ ಹೊಂದಿದನೋ, ಯಾವ ಶ್ರದ್ಧೆಯ ಮೂಲಕ ಪ್ರಪಂಚ ಚಲಿಸುತ್ತಿರುವುದೋ- ಅಂತಹ ಶ್ರದ್ಧೆಯು ನಾಶವಾಗುತ್ತಿದೆ. ಇದರ ಪರಿಹಾರಕ್ಕಾಗಿ ಮೊದಲು ಆತ್ಮಜ್ಞಾನ ಪ್ರಚಾರವಾಗಬೇಕು.

ಯಾರೂ ದುರ್ಬಲರಲ್ಲ, ಆತ್ಮ ಸರ್ವಶಕ್ತಿ, ಸರ್ವಜ್ಞ, ಏಳಿ, ಯಾರಿಗೂ ಮಣಿಯಬೇಡಿ, ನಿಮ್ಮಲ್ಲಿರುವ ಭಗವಂತನನ್ನು ವ್ಯಕ್ತಗೊಳಿಸಿ. ಅದನ್ನು ಅಲ್ಲಗಳೆಯಬೇಡಿ, ಏಳಿ, ದುರ್ಬಲತೆಯ ಪರವಶತೆಯಿಂದ ಪಾರಾಗಿ, ಪಾರಾಗುವುದಕ್ಕೆ ಮಾರ್ಗ ನಿಮ್ಮ ಶಾಸ್ತ್ರಗಳಲ್ಲಿಯೇ ಇದೆ. ನಿಜವಾದ ಆತ್ಮನ ವಿಷಯವನ್ನು ನೀವು ಕೇಳಿ, ಇತರರಿಗೆ ಬೋಧಿಸಿ, ನಿದ್ರಿಸುವವರನ್ನು ಎಬ್ಬಿಸಿ, ಅವರು ಹೇಗೆ ಜಾಗೃತರಾಗುತ್ತಾರೆ ಎಂಬುದನ್ನು ನೋಡಿ. ಆಗ ಶಕ್ತಿ ಬರುವುದು, ಮಹಿಮೆ ಬರುವುದು, ಶ್ರೇಯಸ್ಸು ಬರುವುದು, ಪಾವಿತ್ರ್ಯ ಬರುವುದು. ಈಗ ನಿದ್ರಿಸುತ್ತಿರುವ ಜೀವ ಜಾಗೃತವಾಗಿ ಕಾರ್ಯೋನ್ಮುಖನಾಗುವಾಗ ಅವನಲ್ಲಿ ಎಲ್ಲ ಕಲ್ಯಾಣ ಗುಣಗಳೂ ಬರುವುವು.

ನಿಮ್ಮ ದೇಶದ ಮತ್ತು ಇಡಿಯ ಜಗತ್ತಿನ ಕಲ್ಯಾಣ ನಿಮ್ಮ ಮೇಲೆ ನಿಂತಿದೆ ಎಂದು ಭಾವಿಸಿ ಕಾರ್ಯೋನ್ಮುಖರಾಗಿ, ವೇದಾಂತದ ಸಂದೇಶವನ್ನು ಪ್ರತಿ ಮನೆಗೂ ಸಾರಿ, ಪ್ರತಿಯೊಂದು ಆತ್ಮದಲ್ಲಿರುವ ಸುಪ್ತ ಪಾವಿತ್ರ್ಯವನ್ನು ಜಾಗೃತಗೊಳಿಸಿ, ಅನಂತರ ನೀವು ಎಷ್ಟೇ ಅಲ್ಪವನ್ನು ಸಾಧಿಸಿದ್ದರೂ ನೀವು ಒಂದು ಮಹಾ ಆದರ್ಶಕ್ಕಾಗಿ ಬಾಳಿ ದುಡಿದು ಮಡಿದಿರಿ ಎಂಬ ತೃಪ್ತಿಯಾದರೂ ಇರುತ್ತದೆ.

ಈ ಆತ್ಮದ ಅನಂತ ಶಕ್ತಿಯನ್ನು ಭೌತಿಕ ಪ್ರಪಂಚದ ಮೇಲೆ ಬೀರಿದರೆ ಹಲವು ಭೌತಿಕ ಬೆಳವಣಿಗೆಗಳಾಗುವುವು. ಆಲೋಚನಾ ಪ್ರಪಂಚದ ಮೇಲೆ ಬೀರಿದರೆ ಬುದ್ಧಿ ತನ್ನ ಪರಾಕಾಷ್ಠೆಯನ್ನು ಮುಟ್ಟುವುದು, ತನ್ನ ಮೇಲೆಯೇ ಅದನ್ನು ಬೀರಿಕೊಂಡರೆ ಮಾನವನನ್ನು ದೇವನನ್ನಾಗಿ ಮಾಡುವುದು. ಮೊದಲು ನಾವು ದೇವರಾಗೋಣ, ಆನಂತರ ಇತರರು ದೇವರಾಗಲು ಅವರಿಗೆ ಸಹಾಯ ಮಾಡೋಣ. ಆದ್ದರಿಂದ ಆರ್ಯಮಾತೆಯ ಪುತ್ರರಿರಾ ಎಚ್ಚರಗೊಳ್ಳಿ, ಎದ್ದೇಳಿ: ಸೋಮಾರಿಗಳಾಗಬೇಡಿ: ಗುರಿಯು ದೊರಕುವವರೆಗೂ ನಿಲ್ಲಬೇಡಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ತಪ್ಪಿದ್ದರೆ ಖಂಡಿತ ಬಂದಿಸಿ ಆದರೆ ಸುಮ್ಮಸುಮ್ಮನೆ ತೊಂದರೆ ಕೊಡಬೇಕು ಅದನ್ನು ಭಾರತೀಯನೇ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...