ಜೆಇಇ ಮತ್ತು ನೀಟ್ ಪ್ರವೇಶ ಪರೀಕ್ಷೆ -2020ರ ಪರೀಕ್ಷೆಗಳನ್ನು ಮುಂದೂಡಬೇಕೆಂದು ಕೋರಿ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ತಿರಸ್ಕರಿಸಿದೆ.
ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ಮೂರು ನ್ಯಾಯಾಧೀಶರ ಪೀಠವು ಕೊರೊನಾ ಹೊರತಾಗಿಯೂ ಜೀವನ ಮುಂದುವರಿಯಬೇಕಿದೆ, ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ ನಿರ್ಧಾರಕ್ಕೆ ಹಸ್ತಕ್ಷೇಪ ಮಾಡಲು ಸಾದ್ಯವಿಲ್ಲ ಎಂದು ಹೇಳಿದೆ.
“ವಿದ್ಯಾರ್ಥಿಗಳ ವೃತ್ತಿಜೀವನವನ್ನು ಅಪಾಯಕ್ಕೆ ಸಿಲುಕಿಸಲಾಗುವುದಿಲ್ಲ. ಏಜೆನ್ಸಿಯ ನಿರ್ಧಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಅರ್ಜಿಯನ್ನು ವಜಾಗೊಳಿಸಲಾಗಿದೆ ”ಎಂದು ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಕೃಷ್ಣ ಮುರಾರಿ ಅವರನ್ನೂ ಒಳಗೊಂಡ ನ್ಯಾಯಪೀಠ ಹೇಳಿದೆ.
“ನ್ಯಾಯಾಲಯಗಳನ್ನು ತೆರೆಯುವಂತೆ ಒತ್ತಾಯಿಸುವ ನೀವು (ವಕೀಲರು), ಪರೀಕ್ಷೆಗಳನ್ನು ಮುಂದೂಡಬೇಕೆಂದು ಬಯಸುತ್ತೀರಿ. ಪರೀಕ್ಷೆಗಳನ್ನು ಮುಂದೂಡುವುದು ದೇಶಕ್ಕೆ ನಷ್ಟವಾಗುತ್ತದೆ” ಎಂದು ನ್ಯಾಯಪೀಠ ಹೇಳಿದೆ.
ಪರೀಕ್ಷೆಗಳನ್ನು ಮುಂದೂಡಬೇಕೆಂದು ಕೋರಿ ಸಲ್ಲಿಸಿದ್ದ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದ ನಂತರ ಅರ್ಜಿದಾರರು ನೀಟ್ ಮತ್ತು ಜೆಇಇ ಅನ್ನು ವೇಳಾಪಟ್ಟಿಯಂತೆ ನಡೆಸಬೇಕು ಎಂದು ಸಲ್ಲಿಸಿರುವ ಮತ್ತೊಂದು ಮನವಿಯನ್ನು ಹಿಂತೆಗೆದುಕೊಂಡಿದ್ದಾರೆ.
ಈ ತಿಂಗಳ ಆರಂಭದಲ್ಲಿ, 11 ರಾಜ್ಯಗಳಿಗೆ ಸೇರಿದ 11 ವಿದ್ಯಾರ್ಥಿಗಳು ಜೆಇಇ ಮತ್ತು ನೀಟ್ 2020 ಪರೀಕ್ಷೆಗಳನ್ನು ಮುಂದೂಡಬೇಕೆಂದು ಕೋರಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಸೆಪ್ಟೆಂಬರ್ನಲ್ಲಿ ಜೆಇಇ ಮತ್ತು ನೀಟ್ ಪ್ರವೇಶ ಪರೀಕ್ಷೆಯನ್ನು ನಡೆಸಲು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯ (ಎನ್ಟಿಎ) ಜುಲೈ 3 ರ ನೋಟಿಸ್ ಅನ್ನು ರದ್ದುಗೊಳಿಸುವಂತೆ ಮನವಿ ಕೋರಿತ್ತು.
ಎನ್ಟಿಎ ಸೂಚಿಸಿರುವ ಸಾರ್ವಜನಿಕ ಪ್ರಕಟಣೆಗಳ ಪ್ರಕಾರ, ಜೆಇಇ (ಮುಖ್ಯ) 2020 ಪರೀಕ್ಷೆಯನ್ನು ಸೆಪ್ಟೆಂಬರ್ 1-6 ರವರೆಗೆ ನಡೆಸಲು ನಿರ್ಧರಿಸಲಾಗಿದ್ದು, ನೀಟ್-ಯುಜಿ 2020 ಪರೀಕ್ಷೆಯನ್ನು ಸೆಪ್ಟೆಂಬರ್ 13 ಕ್ಕೆ ನಿಗದಿಪಡಿಸಲಾಗಿದೆ.
ಈ ಕೊರೊನಾ ಸಮಯದಲ್ಲಿ ಜೆಇಇ ಮತ್ತು ನೀಟ್ ನಡೆಸುವುದು ಲಕ್ಷಾಂತರ ಯುವ ವಿದ್ಯಾರ್ಥಿಗಳ ಜೀವಕ್ಕೆ ಅಪಾಯವನ್ನುಂಟು ಮಾಡುತ್ತದೆ ಎಂದು 11 ಜೆಇಇ/ನೀಟ್ ಆಕಾಂಕ್ಷಿಗಳು ಸಲ್ಲಿಸಿರುವ ಅರ್ಜಿಯಲ್ಲಿ ವಾದಿಸಲಾಗಿತ್ತು.
ಈ ಮೊದಲು, ಜೆಇಇ ಪರೀಕ್ಷೆಗಳನ್ನು ಕ್ರಮವಾಗಿ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ನಂತರ ಇದನ್ನು ಕೊರೊನಾ ಕಾರಣದಿಂದ ಮುಂದೂಡಲಾಗಿತ್ತು.
ಇದನ್ನೂ ಓದಿ: ‘ನೀಟ್’ ನಿಜಕ್ಕೂ ನೀಟಾಗಿದೆಯೇ?