ಕಾಮಗಾರಿಗಳ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಶೇಕಡ 4ರಷ್ಟು ಮೀಸಲಾತಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ರೂಪಿಸಿರುವ ‘ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ (ಕೆಟಿಪಿಪಿ) ತಿದ್ದುಪಡಿ’ ಮಸೂದೆಯನ್ನು ರಾಷ್ಟ್ರಪತಿ ಅಂಕಿತಕ್ಕೆ ಕಾಯ್ದಿರಿಸಿ ಎರಡನೇ ಬಾರಿಗೆ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರು ರಾಜ್ಯ ಸರ್ಕಾರಕ್ಕೆ ಹಿಂದಿರುಗಿಸಿದ್ದಾರೆ ಎಂದು ವರದಿಯಾಗಿದೆ.
ವಿಧಾನಮಂಡಲದ ಉಭಯ ಸದನಗಳಲ್ಲಿ ಅಂಗೀಕಾರಗೊಂಡಿದ್ದ ಮಸೂದೆಯನ್ನು ಏಪ್ರಿಲ್ 1ರಂದು ಮೊದಲ ಬಾರಿಗೆ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಲಾಗಿತ್ತು. ಏಪ್ರಿಲ್ 15ರಂದು ಆರು ಪುಟಗಳ ಪತ್ರದೊಂದಿಗೆ ರಾಜ್ಯಪಾಲರು ಮಸೂದೆಯನ್ನು ಸರ್ಕಾರಕ್ಕೆ ಹಿಂದಿರುಗಿಸಿದ್ದರು.
“ಧರ್ಮಾಧಾರಿತ ಮೀಸಲಾತಿಗೆ ದೇಶದ ಸಂವಿಧಾನದಲ್ಲಿ ಅವಕಾಶ ಇಲ್ಲ” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅಲ್ಲದೆ, ಮಸೂದೆಯನ್ನು ರಾಷ್ಟ್ರಪತಿಯ ಪರಿಶೀಲನೆಗೆ ಬಿಡುವುದು ಸೂಕ್ತವೆಂದು ಭಾವಿಸಿದ್ದೇನೆ ಎಂದು ಹೇಳಿದ್ದರು.
ರಾಜ್ಯ ಸರ್ಕಾರ ಕಳೆದವಾರ ಮಸೂದೆಯನ್ನು ಮತ್ತೆ ರಾಜ್ಯಪಾಲರಿಗೆ ಕಳುಹಿಸಿತ್ತು. ರಾಷ್ಟ್ರಪತಿ ಪರಿಶೀಲನೆಗೆ ಕಾಯ್ದಿರಿಸುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ರಾಜ್ಯಪಾಲರನ್ನು ಕೋರಿತ್ತು.
ಎರಡನೇ ಬಾರಿಯೂ ಮಸೂದೆಯನ್ನು ರಾಜ್ಯ ಸರ್ಕಾರಕ್ಕೆ ವಾಪಸ್ ಕಳುಹಿಸಿರುವ ರಾಜ್ಯಪಾಲರು, ಮೊದಲ ಬಾರಿ ಕಳುಹಿಸಿದ್ದ ಸಂದರ್ಭದಲ್ಲಿ ವ್ಯಕ್ತಪಡಿಸಿದ್ದ ಅಭಿಪ್ರಾಯವನ್ನೇ ತಿಳಿಸಿದ್ದಾರೆ. ಅಲ್ಲದೆ, ತಮಿಳುನಾಡು ಸರ್ಕಾರ ಮತ್ತು ಅಲ್ಲಿನ ರಾಜ್ಯಪಾಲರ ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಅಂಶಗಳನ್ನು ಉಲ್ಲೇಖಿಸಿದ್ದಾರೆ ಎಂದು ವರದಿಗಳು ಹೇಳಿವೆ.
“ಸಾಂವಿಧಾನಿಕ ಬಿಕ್ಕಟ್ಟು ಎದುರಾಗುವ ಸಂದರ್ಭದಲ್ಲಿ ರಾಷ್ಟ್ರಪತಿ ಮಾತ್ರ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ. ರಾಜ್ಯಪಾಲರಿಗೆ ಸಾಂವಿಧಾನಿಕ ನ್ಯಾಯಾಲಯಗಳಿಂದ ಅಭಿಪ್ರಾಯ ಪಡೆಯಲು ಅಧಿಕಾರವಿಲ್ಲ. ಮಸೂದೆಯು ಸಾಂವಿಧಾನಿಕ ಅಂಶಗಳನ್ನು ಹೊಂದಿರುವುದರಿಂದ ಮರು ಪರಿಶೀಲಿಸಲು ಕಷ್ಟವಾಗುತ್ತಿದೆ. ಹಾಗಾಗಿ, ರಾಷ್ಟ್ರಪತಿಯ ಪರಿಶೀಲನೆಗೆ ಕಾಯ್ದಿರಿಸಿದ್ದೇನೆ” ಎಂದು ರಾಜ್ಯಪಾಲರು ಉಲ್ಲೇಖಿಸಿದ್ದಾರೆ.
ಅಲ್ಲದೆ, “ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ ನೀಡುವ ವಿಚಾರ ಪ್ರಸ್ತುತ ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆಯ ಹಂತದಲ್ಲಿ ಇರುವುದರಿಂದ, ಈ ವಿಷಯದಲ್ಲಿ ಮಧ್ಯ ಪ್ರವೇಶಿಸುವುದು ಸೂಕ್ತವಲ್ಲ ಎಂದು ಭಾವಿಸಿದ್ದೇನೆ. ಈ ಕಾರಣಕ್ಕೆ ಮಸೂದೆಗೆ ಅಂಕಿತ ಹಾಕದೆ ರಾಷ್ಟ್ರಪತಿಯ ಪರಿಶೀಲನೆಗೆ ಬಿಡಲು ನಿರ್ಧರಿಸಿದ್ದೇನೆ” ಎಂದು ರಾಜ್ಯಪಾಲರು ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್ ತೀರ್ಪು ಉಲ್ಲೇಖಿಸಿ ತಿರುಗೇಟು ಕೊಟ್ಟ ರಾಜ್ಯಪಾಲರು
ಮಸೂದೆಗಳ ಕುರಿತು ನಿರ್ಧಾರ ತೆಗೆದುಕೊಳ್ಳುವ ವಿಚಾರಕ್ಕೆ ಸಂಬಂಧಪಟ್ಟಂತೆ ತಮಿಳುನಾಡು ರಾಜ್ಯ ಸರ್ಕಾರ ಮತ್ತು ಅಲ್ಲಿನ ರಾಜ್ಯಪಾಲರ ನಡುವಿನ ಬಿಕ್ಕಟ್ಟು ಸಂಬಂಧ ಸುಪ್ರೀಂ ಕೋರ್ಟ್ ಇತ್ತೀಚೆಗೆ ಮಹತ್ವದ ತೀರ್ಪು ನೀಡಿತ್ತು.
ರಾಜ್ಯ ಸರ್ಕಾದೊಂದಿಗೆ ದ್ವೇಷ ಸಾಧಿಸಿದಂತೆ ಮಸೂದೆಗಳ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳದೆ ತನ್ನಲ್ಲೇ ಬಾಕಿ ಉಳಿಸಿಕೊಂಡಿದ್ದ ತಮಿಳುನಾಡು ರಾಜ್ಯಪಾಲ ಆರ್.ಎನ್ ರವಿ ಅವರನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು. ನ್ಯಾಯಾಲಯವೇ ನೇರವಾಗಿ ಸುಮಾರು 10 ಮಸೂದೆಗಳನ್ನು ಅಂಗೀಕರಿಸಿತ್ತು.
ಕಾರ್ಯಾಂಗ ಮತ್ತು ನ್ಯಾಯಾಂಗಕ್ಕೆ ಸಂಬಂಧಪಟ್ಟಂತೆ ಅತಿ ಮಹತ್ವದ ಈ ತೀರ್ಪನ್ನು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಬಿಜೆಪಿಯೇತರ ರಾಜ್ಯಗಳ ಸಿಎಂಗಳು ಸ್ವಾಗತಿಸಿದ್ದರು. ಈಗ ಅದೇ ತೀರ್ಪಿನ ಅಂಶಗಳನ್ನು ಮುಂದಿಟ್ಟು ರಾಜ್ಯಪಾಲರು ಸರ್ಕಾರಕ್ಕೆ ತಿರುಗೇಟು ಕೊಟ್ಟಿದ್ದಾರೆ.
ಸುಪ್ರೀಂ ಕೋರ್ಟ್ ತೀರ್ಪಿನ ಪ್ಯಾರಾಗ್ರಾಫ್ 412 ಅನ್ನು ಉಲ್ಲೇಖಿಸಿರುವ ರಾಜ್ಯಪಾಲರು,”ರಾಜ್ಯಪಾಲರಿಗೆ ಸಾಂವಿಧಾನಿಕ ನ್ಯಾಯಾಲಯಗಳಿಂದ ಅಭಿಪ್ರಾಯ ಪಡೆಯಲು ಅಧಿಕಾರವಿಲ್ಲ. ಮಸೂದೆಯು ಸಾಂವಿಧಾನಿಕ ಅಂಶಗಳನ್ನು ಹೊಂದಿರುವುದರಿಂದ ಮರು ಪರಿಶೀಲಿಸಲು ಕಷ್ಟವಾಗುತ್ತಿದೆ. ಹಾಗಾಗಿ, ರಾಷ್ಟ್ರಪತಿಯ ಪರಿಶೀಲನೆಗೆ ಕಾಯ್ದಿರಿಸಿದ್ದೇನೆ” ಎಂದಿದ್ದಾರೆ.
ಮುಂದುವರಿದು, “ಮುಸ್ಲಿಮರ ಮೀಸಲಾತಿಗೆ ಸಂಬಂಧಿಸಿದ ವಿಷಯವು ಸುಪ್ರೀಂ ಕೋರ್ಟ್ನಲ್ಲಿ ಬಾಕಿ ಇರುವುದರಿಂದ, ಈ ಹಂತದಲ್ಲಿ ಮಧ್ಯಪ್ರವೇಶಿಸದಿರುವುದು ಸೂಕ್ತವೆಂದು ನಾನು ಭಾವಿಸುತ್ತೇನೆ. ಏಕೆಂದರೆ ಈ ವಿಷಯವು ಸಂವಿಧಾನದ 14 ಮತ್ತು 15 ನೇ ವಿಧಿಗಳು ಹಾಗೂ ವಿವಿಧ ಹೈಕೋರ್ಟ್ಗಳು ಮತ್ತು ಸುಪ್ರೀಂ ಕೋರ್ಟ್ನ ತೀರ್ಪುಗಳಿಂದ ವಿಧಿಸಲಾದ ನಿರ್ಬಂಧಗಳನ್ನು ಒಳಗೊಂಡಿದೆ” ಎಂದು ಹೇಳಿದ್ದಾರೆ.
ಏನಿದು ಮುಸ್ಲಿಂ ಮೀಸಲು ಮಸೂದೆ?
ನಿಜವಾಗಿಯೂ ಇದು ಮುಸ್ಲಿಂ ಮೀಸಲು ಮಸೂದೆಯಲ್ಲ. ಮಸೂದೆಗೆ ತಿದ್ದುಪಡಿ ತಂದು ಮುಸ್ಲಿಮರಿಗೆ ಕಾಮಗಾರಿಗಳ ಗುತ್ತಿಗೆಯಲ್ಲಿ ಮೀಸಲಾತಿ ಕಲ್ಪಿಸಲು ಅವಕಾಶ ಮಾಡಿಕೊಟ್ಟಿರುವುದರಿಂದ ಮುಸ್ಲಿಂ ಮೀಸಲು ಮಸೂದೆ ಎನ್ನಲಾಗುತ್ತಿದೆ.
1999ರ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಕಾಯ್ದೆಗೆ ತಿದ್ದುಪಡಿ ತಂದು, ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ (ತಿದ್ದುಪಡಿ) ಮಸೂದೆ, 2025ಕ್ಕೆ ವಿಧಾನಮಂಡಲದ ಅನುಮೋದನೆ ಪಡೆಯಲಾಗಿದೆ. ಇದು ರಾಜ್ಯಪಾಲರ ಅಂಕಿತಕ್ಕೆ ಅಥವಾ ರಾಷ್ಟ್ರಪತಿಯ ಪರಿಶೀಲನೆಗೆ ಬಾಕಿಯಿದೆ.
ತಿದ್ದುಪಡಿ ಮಸೂದೆಯಲ್ಲಿ ರೂ. 2 ಕೋಟಿವರೆಗಿನ ಸಿವಿಲ್ ಕೆಲಸಗಳ ಸರ್ಕಾರಿ ಟೆಂಡರ್ಗಳಲ್ಲಿ ಮತ್ತು ರೂ. 1 ಕೋಟಿವರೆಗಿನ ಸರಕು/ಸೇವೆಗಳ ಸಂಗ್ರಹಣೆಯಲ್ಲಿ ಮುಸ್ಲಿಂ ಗುತ್ತಿಗೆದಾರರಿಗೆ 4 ಶೇಕಡ ಮೀಸಲಾತಿ ಪರಿಚಯಿಸಲಾಗಿದೆ. ನಿರುದ್ಯೋಗವನ್ನು ಪರಿಹರಿಸುವ ಮತ್ತು ಹಿಂದುಳಿದ ವರ್ಗಗಳ ವರ್ಗ 2ಬಿಯ (ಮುಸ್ಲಿಮರು) ಒಳಗೊಳ್ಳುವಿಕೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ ಎಂದು ಸರ್ಕಾರ ಹೇಳಿಕೊಂಡಿದೆ.
ಬಿಜೆಪಿಯವರು Sorry ಸಾವರ್ಕರ್ರನ್ನು ಅಕ್ಷರಶಃ ಪಾಲನೆ ಮಾಡುತ್ತಿದ್ದಾರೆ: ಸಚಿವ ಪ್ರಿಯಾಂಕ್ ಖರ್ಗೆ