ಬಿಜೆಪಿ ಸಂಸದ ಜಿ. ಎಸ್. ಬಸವರಾಜ್ ತಮ್ಮ ಪಕ್ಷದ ಸಚಿವ ಜೆ.ಸಿ. ಮಾಧುಸ್ವಾಮಿ ವಿರುದ್ಧ ಬಿಜೆಪಿ ಸಚಿವ ಬೈರತಿ ಬಸವರಾಜ್ ಎದುರು ಅಸಮಾಧಾನ ಹೊರಹಾಕಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.
ತುಮಕೂರಿನಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗೆ ಚಾಲನೆ ನೀಡಲು ನಗರಾಭಿವೃದ್ಧಿ ಸಚಿವ ಬೈರತಿ ನಗರಕ್ಕೆ ಬಂದಿದ್ದರು. ಈ ವೇಳೆ ಕರೆದಿದ್ದ ಸುದ್ದಿಗೋಷ್ಠಿ ಆರಂಭದಲ್ಲಿ ಸಂಸದ ಜಿ. ಎಸ್. ಬಸವರಾಜ್, ಬೈರತಿ ಬಸವರಾಜ್ ಕಿವಿಯಲ್ಲಿ ಪಿಸುಗುಟ್ಟಿದ್ದಾರೆ. ಹೆಸರು ಹೇಳದೆ ಪರೋಕ್ಷವಾಗಿ ಸಚಿವ ಮಾಧುಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಈ ನನ್ಮಗ ನಮ್ಮ ಮಂತ್ರಿ ಹೆಂಗೆ ಗೊತ್ತಾ… ದಕ್ಷಿಣ ಕೊರಿಯಾದ ಕಿಂಗ್ಪಿನ್ ಇದ್ದಾನಲ್ಲ ಅವನಂತೆ. ಹಾಳು ಮಾಡಿಬಿಟ್ಟ ನಮ್ಮ ಜಿಲ್ಲೆಯನ್ನ… ಒಂದು ಸೀಟೂ ಬರಲ್ಲ’… ಮಾತು ಎತ್ತಿದ್ದರೆ ಹೊಡಿ, ಬಡಿ, ಕಡಿ ಅಂತಾನೆ” ಎಂದು ಕಿಡಿ ಕಾರಿದ್ದಾರೆ.
ಇದನ್ನೂ ಓದಿ: ಶೀಘ್ರದಲ್ಲೇ ರಾಜ್ಯಕ್ಕೆ ಅಮಿತ್ ಶಾ ಭೇಟಿ: BJP ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕುತ್ತು, ಸಿಎಂ ಬದಲಾವಣೆ ಸಾಧ್ಯತೆ?
’ಸುಮ್ಮನಿರಿ ಆಮೇಲೆ ಮಾತಾಡೋಣ’ ಎಂದು ಸಚಿವ ಬೈರತಿ ಬಸವರಾಜ್ ಹೇಳುತ್ತಿದ್ದರೂ ಕೂಡ ಸಂಸದರು ಮಾತು ಮುಂದುವರೆಸುತ್ತಾರೆ. “ಅವನ್ಯಾರೋ ಎಕ್ಸಿಕ್ಯುಟಿವ್ ಎಂಜಿನಿಯರ್ಗೆ ಹೇಳುತ್ತಾನೆ. ಲೇ ನೀನು ನಿನ್ನ ಹೆಂಡತಿ ಸೀರೆ ಒಗೆಯುವುದಕ್ಕೆ ಲಾಯಕ್ ಅಂತಾನೆ. ಒಂದು ಹ್ಯಾಂಡ್ ಬಿಲ್ ಪ್ರಿಂಟ್ ಮಾಡಿಸಲ್ಲ. ಮೊನ್ನೆ ಸಾವಿರ ಕೋಟಿ ಡಿಕ್ಲೈರ್ ಮಾಡಿಕೊಂಡು ಬಂದಿದ್ದಾನೆ. ನಮಗೆ ಯಾರಿಗೂ ಇನ್ವಿಟೇಶನ್ ಇಲ್ಲ, ಕರೆಯೋದು ಇಲ್ಲ” ಎಂದು ಸಂಸದ ಜಿ.ಎಸ್ ಬಸವರಾಜ್ ವಾಗ್ದಾಳಿ ನಡೆಸಿದ್ದಾರೆ.
ಮಾತು ಕೇಳಿಸಿಕೊಂಡ ನಂತರ ಸಚಿವ ಭೈರತಿ ಬಸವರಾಜ್ ಸಾಕು ಎಂದು ಸುದ್ದಿಗೋಷ್ಠಿ ಆತಂಭಿಸುತ್ತಾರೆ. ಈ ಮಾತಿನ ತುಣುಕು ಸಾಕಷ್ಟು ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ರಾಜ್ಯ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎಂದು ಚರ್ಚೆ ಆರಂಭವಾಗಿದೆ.