2018 ರ ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರು ಪ್ರವೇಶಿಸುವುದರ ವಿರುದ್ಧ ಬಿಜೆಪಿ ಹಾಗೂ ಕಾಂಗ್ರೆಸ್ ನಡೆಸಿದ್ದ ರಾಜ್ಯವ್ಯಾಪಿ ಪ್ರತಿಭಟನೆಯ ಸಂದರ್ಭದಲ್ಲಿ ದಾಖಲಾದ ನೂರಾರು ಪ್ರಕರಣಗಳನ್ನು ರದ್ದುಗೊಳಿಸಲು ಕೇರಳ ಕ್ಯಾಬಿನೆಟ್ ನಿರ್ಧರಿಸಿದೆ ಎಂದು ಆನ್ಮನೋರಮ ವರದಿ ಮಾಡಿದೆ.
ಇದರ ಜೊತೆಗೆ ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ನಡೆದ ಆಂದೋಲನದ ಸಮಯದಲ್ಲಿ ದಾಖಲಾದ ಕೇಸುಗಳನ್ನು ಕೂಡಾ ರದ್ದು ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ. ಅದಾಗ್ಯೂ, ಪ್ರತಿಭಟನೆಯ ಸಮಯದಲ್ಲಿ ಗಂಭೀರ ಅಪರಾಧಗಳು ಮತ್ತು ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಕೈ ಬಿಡಲಾಗುವುದಿಲ್ಲ ಎನ್ನಲಾಗಿದೆ.
ಇದನ್ನೂ ಓದಿ: ಕೇರಳ ಗಡಿ ಬಂದ್: ಕರ್ನಾಟಕದ ತೀರ್ಮಾನದ ವಿರುದ್ದ ಮೋದಿಗೆ ಪತ್ರ ಬರೆದ ಪಿಣರಾಯಿ ವಿಜಯನ್
ಪತ್ತನಂತಿಟ್ಟದಲ್ಲಿರುವ ಪ್ರಸಿದ್ಧ ಶಬರಿಮಲೆ ದೇವಸ್ಥಾನಕ್ಕೆ ಸುಪ್ರೀಂಕೋರ್ಟ್ನ ಆದೇಶದಂತೆ ಇಬ್ಬರು ಮಹಿಳೆಯರನ್ನು ಪ್ರವೇಶಿಸಿದ ನಂತರ 2019 ರ ಜನವರಿಯಲ್ಲಿ ರಾಜ್ಯದ ಅನೇಕ ಕಡೆ ಹಿಂಸಾತ್ಮಕ ಘಟನೆಗಳು ನಡೆದಿದ್ದು, 1,000 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿ, 3,000 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿತ್ತು.
ಅದೇ ರೀತಿ ದೇಶದ ಸಂಸತ್ತು 2019 ರಲ್ಲಿ ವಿವಾದಾತ್ಮಕ ಸಿಎಎ ಅಂಗೀಕರಿಸಿದ ನಂತರ ದೇಶಾದ್ಯಂತ ರಾಷ್ಟ್ರವ್ಯಾಪಿ ಪ್ರತಿಭಟನೆಗಳು ದಾಖಲಾಗಿದ್ದವು. ಈ ಸಂದರ್ಭ ಕೇರಳದ ವಿವಿಧ ಭಾಗಗಳಲ್ಲಿ ತೀವ್ರ ಪ್ರತಿಭಟನೆಗಳು ನಡೆದ್ದಿದ್ದವು.
ಕೇರಳ ಸಚಿವ ಸಂಪುಟದ ನಿರ್ಧಾರವನ್ನು ಕಾಂಗ್ರೆಸ್ ವಿರೋಧ ಪಕ್ಷದ ನಾಯಕ ರಮೇಶ್ ಚೆನ್ನಿಥಲ ಸ್ವಾಗತಿಸಿದ್ದು, “ಸರ್ಕಾರ ಈಗ ಪ್ರತಿಪಕ್ಷಗಳ ದೀರ್ಘಕಾಲದ ಬೇಡಿಕೆಗಳನ್ನು ಒಪ್ಪಿಕೊಳ್ಳುತ್ತಿದೆ” ಎಂದು ಹೇಳಿದ್ದಾರೆ.
ಬಿಜೆಪಿಯ ರಾಜ್ಯ ಘಟಕವು ಶಬರಿಮಲೆ ಪ್ರತಿಭಟನಾಕಾರರ ವಿರುದ್ಧದ ಪ್ರಕರಣಗಳನ್ನು ಹಿಂತೆಗೆದುಕೊಳ್ಳುತ್ತಿರುವುದನ್ನು ಸ್ವಾಗತಿಸಿತಾದರೂ, ಸಿಎಎ ವಿರೋಧಿ ಆಂದೋಲನಕಾರರ ವಿರುದ್ಧದ ಪ್ರಕರಣಗಳ ರದ್ದುಪಡಿಸುತ್ತಿರುವುದನ್ನು ವಿರೋಧಿಸಿದೆ. ಎರಡೂ ಪ್ರಕರಣಗಳನ್ನು ಒಂದೇ ರೀತಿಯಲ್ಲಿ ನಡೆಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕೇರಳ – ಈಗ ಚುನಾವಣೆ ನಡೆದರೂ ಕಮ್ಯುನಿಷ್ಟ್ ಸರ್ಕಾರ ಮತ್ತೆ ಅಧಿಕಾರಕ್ಕೆ!