ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾನೂನುಗಳನ್ನು ವಿರೋಧಿಸಿ ಕಳೆದ 42 ದಿನಗಳಿಂದ ದೆಹಲಿಯ ಗಡಿಗಳಲ್ಲಿ ರೈತರು ಹೋರಾಟ ನಡೆಸುತ್ತಿದ್ದಾರೆ. ದೆಹಲಿಯ ಗಡಿಯಾದ ಟಿಕ್ರಿ ಗಡಿಯಲ್ಲಿ ಕೂಡಾ ಕಳೆದ ಎರಡು ದಿನಗಳಿಂದ ಬಿಡದೇ ಸುರಿಯುತ್ತಿರುವ ಮಳೆಯಲ್ಲಿಯೂ ರೈತರು ಒಂದಿಷ್ಟು ಕದಲದೇ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ. ಕೊರೆಯುವ ಚಳಿ ಮತ್ತು ಮಳೆಯಿಂದಾಗಿ ಪ್ರತಿಭಟನಾ ನಿರತ ರೈತರಿಗೆ ವಿವಿಧ ರೀತಿಯ ಸಮಸ್ಯೆಗಳು ಎದುರಾಗುತ್ತಿದ್ದು, ಖಾಲ್ಸಾ ಏಡ್ ಸಂಸ್ಥೆ ಎಲ್ಲ ರೀತಿಯ ನೆರವು ನೀಡುವ ಮೂಲಕ ಹೋರಾಟಕ್ಕೆ ಬಲ ತುಂಬಿದೆ.
ಇದನ್ನೂ ಓದಿ: ರೈತ ಹೋರಾಟ: 7 ನೇ ಸುತ್ತಿನ ಮಾತುಕತೆ ವಿಫಲ – ಜನವರಿ 8 ಕ್ಕೆ ಮತ್ತೊಂದು ಸಭೆ
ದೆಹಲಿಯ ಸಿಂಘು ಮತ್ತು ಟಿಕ್ರಿ ಗಡಿಯಲ್ಲಿ ಈ ಸಂಸ್ಥೆಯು 2 ಮಾಲ್ಗಳನ್ನು ನಿರ್ಮಿಸಿದ್ದು, ದೈನಂದಿನ ಬಳಕೆಗೆ ಬೇಕಾದ ಎಲ್ಲಾ ವಸ್ತುಗಳನ್ನು ಉಚಿತವಾಗಿ ಪಡೆದುಕೊಳ್ಳಲು ಅವಕಾಶ ಮಾಡಿಕೊಟ್ಟಿದೆ. ದೆಹಲಿಯಲ್ಲಿ ರೈತರ ಹೋರಾಟ ಶುರುವಿನಿಂದ ಇಂದಿನವರೆಗೂ ಊಟ, ಬಟ್ಟೆ, ಆಶ್ರಯ, ಆರೋಗ್ಯ ಚಿಕಿತ್ಸೆ ಸೇರಿದಂತೆ ಎಲ್ಲಾ ರೀತಿಯಲ್ಲಿ ಹೋರಾಟವನ್ನು ಪೂರೈಸುತ್ತಿದೆ. ಖಾಲ್ಸಾದ ಸೇವಾ ಚಟುವಟಿಕೆಗಳಿಗೆ ವಿವಿಧ ದೇಶಗಳಿಂದ ಬೆಂಬಲ ಲಭ್ಯವಾಗಿದೆ.
ಖಾಲ್ಸಾ ಏಡ್ ಅಂತರಾಷ್ಟ್ರೀಯ ಸರ್ಕಾರೇತರ ಸಂಸ್ಥೆಯಾಗಿದ್ದು, 1999 ರಲ್ಲಿ ರವೀಂದರ್ ಸಿಂಗ್ ಎಂಬುವವರು ಈ ಸಂಸ್ಥೆಯನ್ನು ಸ್ಥಾಪಿಸಿದರು. ರಾಷ್ಟ್ರೀಯ ವಿಪತ್ತು ಸಂದರ್ಭಗಳಲ್ಲಿ ಪರಿಹಾರ ಕಾರ್ಯಗಳನ್ನು ನಡೆಸುತ್ತಾ ಬಂದಿದೆ.
ಮಯನ್ಮಾರ್, ಯಮೆನ್, ಗ್ರೀಸ್, ಗಲ್ಫ್ ರಾಷ್ಟ್ರಗಳು ಸೇರಿದಂತೆ ಹಲವಾರು ರಾಷ್ಟ್ರಗಳಲ್ಲಿ ಸೇವಾ ಕಾರ್ಯಗಳನ್ನು ನಡೆಸಿದೆ. ಬಾಂಗ್ಲಾದೇಶದಲ್ಲಿ ಆಶ್ರಯ ಪಡೆದಿದ್ದ ರೊಹಿಂಗ್ಯಾ ನಿರಾಶ್ರಿತರ ಪರವಾಗಿ ಕೆಲಸ ಮಾಡಿದೆ.
2018 ರ ಕೇರಳ ಪ್ರವಾಹ ಸಂದರ್ಭದಲ್ಲಿ ಈ ಸಂಸ್ಥೆಯು ಪ್ರತಿದಿನ 15 ಸಾವಿರ ಜನರಿಗೆ ಊಟದ ವ್ಯವಸ್ಥೆಯನ್ನು ಒದಗಿಸಿತ್ತು.
ಈ ವರದಿ ‘ಮಾಸ್ ಮೀಡಿಯಾ ಫೌಂಡೇಷನ್’ ನಿಯೋಜಿಸಿರುವ ವಿಶೇಷ ದೆಹಲಿ ತಂಡದಿಂದ ಪಡೆದ ಮಾಹಿತಿ ಆಧರಿಸಿ, ಸಿದ್ಧಪಡಿಸಿದೆ
ಇದನ್ನೂ ಓದಿ: ರೈತ ಹೋರಾಟ ಅಪ್ಡೇಟ್ಸ್: 7ನೇ ಸುತ್ತಿನ ಮಾತುಕತೆ ವಿಫಲ – ಹೋರಾಟದ ಮುಂದೇನು ದಾರಿ?