ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾರತ ತಂಡವು ವಿಜಯಗಳಿಸಿದ ನಂತರ ದುಷ್ಕರ್ಮಿಗಳ ತಂಡವೊಂದು ಮಸೀದಿಯ ಮುಂದೆ ತೆರಳಿ ರಂಝಾನ್ನ ವಿಶೇಷ ಪ್ರಾರ್ಥನೆ (ತರಾವೀಹ್) ನಡೆಸುತ್ತಿದ್ದ ಮುಸ್ಲಿಮರ ವಿರುದ್ಧ ಅವಹೇಳನಕಾರಿ ಘೋಷಣೆ ಕೂಗಿ ಪಟಾಕಿ ಸಿಡಿಸಿದ ಘಟನೆ ಮಧ್ಯಪ್ರದೇಶದ ಇಂದೋರ್ ಜಿಲ್ಲೆಯ ಅಂಬೇಡ್ಕರ್ ನಗರ – ಮೋವ್ ಪಟ್ಟಣದಲ್ಲಿ ನಡೆದಿದೆ. ಇತರ ನಂತರ ಪ್ರದೇಶದಲ್ಲಿ ಕೋಮು ಘರ್ಷಣೆ ಸಂಭವಿಸಿದೆ ಎಂದು ವರದಿಯಾಗಿದೆ. ಮುಸ್ಲಿಂ ವಿರೋಧಿ ಘೋಷಣೆ
ಘರ್ಷಣೆಯಲ್ಲಿ ಕನಿಷ್ಠ ನಾಲ್ವರು ಜನರು ಗಾಯಗೊಂಡಿದ್ದು, ಕೆಲವರಿಗೆ ಮೂಳೆ ಮುರಿತಗಳು ಉಂಟಾಗಿದೆ ಎಂದು ವರದಿ ಹೇಳಿದೆ. ಗಲಭೆಕೋರರನ್ನು ನಿಭಾಯಿಸುವಾಗ ಕೆಲವು ಪೊಲೀಸ್ ಸಿಬ್ಬಂದಿಗೆ ಕೂಡಾ ಸಣ್ಣಪುಟ್ಟ ಗಾಯಗಳಾಗಿವೆ ಎಂದು ವರದಿಯಾಗಿದೆ.
ರಾತ್ರಿ 10.45 ರ ಸುಮಾರಿಗೆ ದುಷ್ಕರ್ಮಿಗಳ ತಂಡವು ಜಾಮಿಯಾ ಮಸೀದಿ ಬಳಿ ತಲುಪಿದ್ದು, ಈ ವೇಳೆ ಪಟಾಕಿಗಳನ್ನು ಸಿಡಿಸಿದ್ದಾರೆ. ದುಷ್ಕರ್ಮಿಗಳ ಈ ಕೃತ್ಯದ ವೇಳೆ ಮಸೀದಿಯಲ್ಲಿ ಮುಸ್ಲಿಮರು ರಂಝಾನಿನ ವಿಶೇಷ ಪ್ರಾರ್ಥನೆ ನಡೆಸುತ್ತಿದ್ದರು. ಈ ವೇಳೆ ಎರಡು ಗುಂಪುಗಳ ನಡುವಿನ ಮಾತಿನ ಚಕಮಕಿ ಉಂಟಾಗಿದ್ದು, ನಂತರ ಅದು ಹಿಂಸಾತ್ಮಕ ತಿರುವು ಪಡೆದುಕೊಂಡಿದೆ. ಎರಡೂ ಕಡೆಯಿಂದ ಕಲ್ಲು ತೂರಾಟ ನಡೆದಿದೆ ಎಂದು ವರದಿಯಾಗಿದೆ. ಮುಸ್ಲಿಂ ವಿರೋಧಿ ಘೋಷಣೆ
ದುಷ್ಕರ್ಮಿಗಳ ಗುಂಪೊಂದು ಕಲ್ಲು ತೂರಾಟ ನಡೆಸಿದ್ದು ಮಾತ್ರವಲ್ಲದೆ ಆ ಪ್ರದೇಶ ಮತ್ತು ನೆರೆಯ ಸ್ಥಳಗಳಲ್ಲಿ ಹಲವಾರು ವಾಹನಗಳನ್ನು ಸುಟ್ಟುಹಾಕಿದೆ. ಇದರ ನಂತರ ಪಟ್ಟಿ ಬಜಾರ್, ಮಾರ್ಕೆಟ್ ಚೌಕ್, ಮನಕ್ ಚೌಕ್, ಸಬ್ಜಿ ಮಾರ್ಕೆಟ್, ಗಫರ್ ಹೋಟೆಲ್ ಮತ್ತು ಕನ್ನಾಟ್ ರಸ್ತೆ ಸೇರಿದಂತೆ ಜಾಮಿಯ ಮಸೀದಿ ಪ್ರದೇಶದ ಪಕ್ಕದ ಪ್ರದೇಶಗಳಿಂದ ಕಲ್ಲು ತೂರಾಟ ಮತ್ತು ವಾಹನಗಳಿಗೆ ಹಾನಿ ಮಾಡಿದ ಘಟನೆ ನಡೆದಿವೆ ಎಂದು ವರದಿಯಾದೆ.
ಕನಿಷ್ಠ ನಾಲ್ಕು ಪೊಲೀಸ್ ಠಾಣೆ ಪ್ರದೇಶಗಳ ಪೊಲೀಸ್ ಸಿಬ್ಬಂದಿ ಪರಿಸ್ಥಿತಿಯನ್ನು ನಿಯಂತ್ರಿಸಲು ಕಾರ್ಯಾಚರಣೆಗೆ ಇಳಿದಿದ್ದು, ಅದಾಗ್ಯೂ, ಗಲಭೆಕೋರರು ವಾಹನಗಳಿಗೆ ಹಾನಿ ಅಥವಾ ಬೆಂಕಿ ಹಚ್ಚಿದ್ದಾರೆ. ಜೊತೆಗೆ ಗಲಭೆಕೋರರು ಕೆಲವು ಅಂಗಡಿಗಳಿಗೆ ಬೆಂಕಿ ಹಚ್ಚಲು ಪ್ರಯತ್ನಿಸಿದ್ದಾರೆ ಎಂದು ವರದಿಯಾಗಿದೆ.
After India's victory in the #ChampionsTrophy2025, reports of violence and arson in Indore's Mhow.
As per local reporters, victory rally passing Jama Masjid allegedly provoked Taraweeh worshippers with derogatory slogans & firecrackers that led to confrontation.
No official… pic.twitter.com/TRPLNLgmhB
— काश/if Kakvi (@KashifKakvi) March 9, 2025
“ಸುಮಾರು 7-8 ವಾಹನಗಳನ್ನು ಗಲಭೆಕೋರರು ಸುಟ್ಟುಹಾಕಿದರು ಮತ್ತು ಕಲ್ಲು ತೂರಾಟ ಕೂಡ ಹಲವಾರು ಸ್ಥಳಗಳಿಂದ ವರದಿಯಾಗಿದೆ. ಆದರೆ ಪ್ರಮುಖ ಹಿಂಸಾಚಾರ ಹೆಚ್ಚಾಗಿ ಪಟ್ಟಿ ಬಜಾರ್ ಮತ್ತು ಪಕ್ಕದ ಪ್ರದೇಶಗಳಲ್ಲಿ ಸಂಭವಿಸಿದೆ” ಎಂದು ಮೂಲಗಳನ್ನು ಉಲ್ಲೇಖಿಸಿ TNIE ವರದಿ ಮಾಡಿದೆ.
“ವಿವಿಧ ಪ್ರದೇಶಗಳಲ್ಲಿ, ವಿಶೇಷವಾಗಿ ಹಿಂಸಾಚಾರ ಪ್ರಾರಂಭವಾದ ಪ್ರದೇಶದಲ್ಲಿ ಬಲಪ್ರಯೋಗ ಮತ್ತು ಅಶ್ರುವಾಯು ಶೆಲ್ಗಳ ಮೂಲಕ ಹಿಂಸಾತ್ಮಕ ಗುಂಪನ್ನು ಚದುರಿಸಲಾಯಿತು. ಪರಿಸ್ಥಿತಿಯನ್ನು ಈಗ ನಿಯಂತ್ರಣಕ್ಕೆ ತರಲಾಗಿದೆ” ಎಂದು ಮೋವ್ ಹೆಚ್ಚುವರಿ ಎಸ್ಪಿ ರೂಪೇಶ್ ದ್ವಿವೇದಿ ಹೇಳಿದ್ದಾರೆ.
ಒಂದು ಪ್ರದೇಶದಲ್ಲಿ ಗುಂಪೊಂದು ಕಲ್ಲು ತೂರಾಟ ಮತ್ತು ದ್ವಿಚಕ್ರ ವಾಹನಕ್ಕೆ ಹಾನಿ ಮಾಡುತ್ತಿರುವ ದೃಶ್ಯಗಳು ತಡರಾತ್ರಿ ವೈರಲ್ ಆಗಿವೆ.
ಭಾನುವಾರ-ಸೋಮವಾರ ರಾತ್ರಿ ಮೋವ್ ಪಟ್ಟಣವನ್ನು ತಲುಪಿದ ಇಂದೋರ್ ಜಿಲ್ಲಾಧಿಕಾರಿ ಆಶಿಶ್ ಸಿಂಗ್, “ಮೋವ್ ಸಂಪೂರ್ಣ ಶಾಂತಿಯುತವಾಗಿದ್ದು, ಸಹಜ ಸ್ಥಿತಿ ಮರಳಿದೆ. ಸರಣಿ ಹಿಂಸಾಚಾರದಲ್ಲಿ ಭಾಗಿಯಾಗಿರುವವರನ್ನು ನಾವು ವೀಡಿಯೊಗಳ ಮೂಲಕ ಗುರುತಿಸುತ್ತಿದ್ದೇವೆ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಆದರೆ ಇದೀಗ, ಶಾಂತಿ ಮತ್ತು ನೆಮ್ಮದಿ ನೆಲೆಸುವಂತೆ ನೋಡಿಕೊಳ್ಳುವುದು ನಮ್ಮ ಆದ್ಯತೆಯಾಗಿದೆ” ಎಂದು ಅವರು ಹೇಳಿದ್ದಾರೆ.
ಸ್ಥಳೀಯ ಬಿಜೆಪಿ ಶಾಸಕಿ ಮತ್ತು ಮಾಜಿ ಸಂಸದ ಸಚಿವೆ ಉಷಾ ಠಾಕೂರ್, “ಬಂದಾ ಬಸ್ತಿ ಆಗಿರಲಿ, ಹೈದರಾಬಾದ್ ಬಸ್ತಿ ಆಗಿರಲಿ ಅಥವಾ ಜಾಮಿಯಾ ಮಸೀದಿ ಪ್ರದೇಶವಾಗಲಿ, ದೇಶದ್ರೋಹಿಗಳನ್ನು ಮೋವ್ನಲ್ಲಿ ತಮ್ಮ ಕೊಳಕು ತಲೆ ಎತ್ತಲು ಬಿಡುವುದಿಲ್ಲ. ಹಿಂಸಾಚಾರದಲ್ಲಿ ತೊಡಗಿದವರನ್ನು ವಿಡಿಯೊದಲ್ಲಿ ಗುರುತಿಸಿ ಅವರ ವಿರುದ್ಧ ತೀವ್ರ ಕ್ರಮ ಕೈಗೊಳ್ಳುವಂತೆ ನಾವು ರಾಜ್ಯದ ಮುಖ್ಯಮಂತ್ರಿಯನ್ನು ವಿನಂತಿಸುತ್ತೇವೆ” ಎಂದು ಹೇಳಿದ್ದಾರೆ. ಸಂಸದೆ ಉಷಾ ಅವರು ಬಿಜೆಪಿಯ ಕಟ್ಟರ್ ಹಿಂದುತ್ವ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದಾರೆ.
ಪಶ್ಚಿಮ ಮಧ್ಯಪ್ರದೇಶದ ಇಂದೋರ್ ಜಿಲ್ಲೆಯ ಮೋವ್ ಉಪವಿಭಾಗವು ಪ್ರಮುಖ ಮಿಲಿಟರಿ ಕಂಟೋನ್ಮೆಂಟ್ ನೆಲೆಯನ್ನು ಹೊಂದಿರುವುದರಿಂದ, ಸೇನಾ ಸಿಬ್ಬಂದಿ ಕೂಡ ತಡರಾತ್ರಿ ಟ್ರಕ್ನಲ್ಲಿ ಕೆಲವು ಪ್ರದೇಶಗಳನ್ನು ಭದ್ರತೆಗೆ ಒಳಪಡಿಸುತ್ತಿರುವುದು ಕಂಡುಬಂದಿದೆ.
ಇಂದೋರ್ ಗ್ರಾಮೀಣ ಶ್ರೇಣಿಯ (ಐಜಿ-ಇಂದೋರ್ ಗ್ರಾಮೀಣ) ಇನ್ಸ್ಪೆಕ್ಟರ್ ಜನರಲ್ ಅನುರಾಗ್ ಪ್ರಕಾರ, “17 ಹೆಸರಿಸಲಾದ ವ್ಯಕ್ತಿಗಳು ಮತ್ತು ಅನೇಕ ಗುರುತಿಸಲಾಗದ ವ್ಯಕ್ತಿಗಳ ವಿರುದ್ಧ ಗಲಭೆಗೆ ಸಂಬಂಧಿಸಿದಂತೆ ಬಿಎನ್ಎಸ್ ವಿಭಾಗಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ” ಎಂದು ವರದಿಯಾಗಿದೆ.
ಡಾ. ಅಂಬೇಡ್ಕರ್ ನಗರ-ಮೋವ್ ಪಟ್ಟಣವು ಮುಖ್ಯವಾಗಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮಸ್ಥಳ ಮತ್ತು ದೇಶದ ರಕ್ಷಣಾ ಸ್ಥಾಪನೆಯ ಪ್ರಮುಖ ಸ್ಥಳವಾಗಿದೆ. ಇಲ್ಲಿ ಮೂರು ಪ್ರಮುಖ ರಕ್ಷಣಾ ತರಬೇತಿ ಸಂಸ್ಥೆಗಳಾದ ಆರ್ಮಿ ವಾರ್ ಕಾಲೇಜು, ಇನ್ಫಂಟ್ರಿ ಶಾಲೆ ಮತ್ತು ಮಿಲಿಟರಿ ಕಾಲೇಜ್ ಆಫ್ ಟೆಲಿಕಮ್ಯುನಿಕೇಶನ್ ಎಂಜಿನಿಯರಿಂಗ್ ಸಂಸ್ಥೆಗಳನ್ನು ಹೊಂದಿದೆ.
ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಶೀಘ್ರದಲ್ಲೇ ಮೋವ್ಗೆ ಆಗಮಿಸಲಿದ್ದು, ಇದರಿಂದಾಗಿ ಮೋವ್ನಲ್ಲಿರುವ ಸಂಪೂರ್ಣ ಸೇನಾ ಸಂಸ್ಥೆಗಳು ಕೂಡಾ ಹೆಚ್ಚಿನ ಜಾಗರೂಕತೆಯಲ್ಲಿದೆ ಎಂದು ಮೂಲಗಳು ಹೇಳಿವೆ.
ಆಡಳಿತಾರೂಢ ಬಿಜೆಪಿ ಮತ್ತು ಆರೆಸ್ಸೆಸ್ ಸಂಘಟನೆಗಳ ಭದ್ರಕೋಟೆಗಳಲ್ಲಿ ಪಶ್ಚಿಮ ಮಧ್ಯಪ್ರದೇಶದ ಮೋವ್ ನಗರ ಕೂಡಾ ಒಂದಾಗಿದೆ. ಡಾ. ಅಂಬೇಡ್ಕರ್ ನಗರ-ಮೋವ್ ವಿಧಾನಸಭಾ ಕ್ಷೇತ್ರವನ್ನು 2008 ರಿಂದ ಬಿಜೆಪಿ ಪಕ್ಷ ಗೆಲ್ಲುತ್ತಿದೆ. 2014 ರಿಂದ ಧಾರ್-ಎಸ್ಟಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಸತತ ಮೂರು ಗೆಲುವು ಸಾಧಿಸುವಲ್ಲಿ ಈ ವಿಧಾನಸಭಾ ಸ್ಥಾನವು ಪ್ರಮುಖ ಪಾತ್ರ ವಹಿಸಿದೆ.
ಸುಮಾರು ಒಂದು ವರ್ಷದ ಹಿಂದೆಯೆ ಧಾರ್ಮಿಕ ಮೆರವಣಿಗೆಗಳು ಪೂಜಾ ಸ್ಥಳಗಳ ಮೂಲಕ ಸಂಚರಿಸದಂತೆ ನೋಡಿಕೊಳ್ಳಲು ಎರಡೂ ಸಮುದಾಯಗಳ (ಹಿಂದೂಗಳು ಮತ್ತು ಮುಸ್ಲಿಮರು) ನಾಯಕರ ನಡುವೆ ಒಮ್ಮತದ ಒಪ್ಪಂದವಾಗಿತ್ತು ಎಂದು ಮೂಲಗಳು ಹೇಳಿವೆ.
ಈ ಮಧ್ಯೆ, ಪಶ್ಚಿಮ ಮಧ್ಯಪ್ರದೇಶದ ದೇವಾಸ್ ಜಿಲ್ಲೆಯ ಮೋವ್ ಪಟ್ಟಣದಿಂದ ಸುಮಾರು 65 ಕಿ.ಮೀ ದೂರದ ಸಯಾಜಿ ಗೇಟ್ ಬಳಿ ಕೂಡಾ, ಭಾನುವಾರ ತಡರಾತ್ರಿ ಚಾಂಪಿಯನ್ಸ್ ಟ್ರೋಫಿ ವಿಜಯೋತ್ಸವ ಮೆರವಣಿಯ ಕೆಟ್ಟ ತಿರುವು ಪಡೆದುಕೊಂಡಿದೆ. ವಿಜಯೋತ್ಸವದಲ್ಲಿ ಭಾಗವಹಿಸಿದ್ದ ಕೆಲವು ದುಷ್ಕರ್ಮಿಗಳು ಸ್ಥಳೀಯ ಪೊಲೀಸ್ ಠಾಣೆಯ ಅಧಿಕಾರಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ವರದಿಯಾಗಿದೆ. ಆದಾಗ್ಯೂ, ಈ ಘಟನೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ವರದಿ ತಿಳಿಸಿದೆ.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಸಂಸತ್ ಕಲಾಪ | ಲೋಕಸಭೆಯಲ್ಲಿ ಡಿಎಂಕೆ ಪ್ರತಿಭಟನೆ, ರಾಜ್ಯಸಭೆಯಿಂದ ಹೊರನಡೆದ ಪ್ರತಿಪಕ್ಷ ಸದಸ್ಯರು
ಸಂಸತ್ ಕಲಾಪ | ಲೋಕಸಭೆಯಲ್ಲಿ ಡಿಎಂಕೆ ಪ್ರತಿಭಟನೆ, ರಾಜ್ಯಸಭೆಯಿಂದ ಹೊರನಡೆದ ಪ್ರತಿಪಕ್ಷ ಸದಸ್ಯರು

