ಮಧುರೈನ ತಿರುಪರನ್ಕುಂದ್ರಂ ಬೆಟ್ಟದ ಮೇಲಿರುವ ಕಲ್ಲಿನ ಕಂಬದಲ್ಲಿ ದೀಪ ಬೆಳಗಿಸಲು ಅನುಮತಿ ನೀಡಿ ಮದ್ರಾಸ್ ಹೈಕೋರ್ಟ್ನ ಮಧುರೈ ಪೀಠದ ಏಕ ಸದಸ್ಯ ನ್ಯಾಯಾಧೀಶರು ನೀಡಿದ ಆದೇಶವನ್ನು ವಿಭಾಗೀಯ ಪೀಠ ಎತ್ತಿಹಿಡಿದಿದೆ.
ನ್ಯಾಯಮೂರ್ತಿ ಜಿ. ಜಯಚಂದ್ರನ್ ಮತ್ತು ನ್ಯಾಯಮೂರ್ತಿ ಕೆ. ಕೆ ರಾಮಕೃಷ್ಣನ್ ಅವರಿದ್ದ ವಿಭಾಗೀಯ ಪೀಠವು ಆದೇಶವನ್ನು ಪ್ರಕಟಿಸುತ್ತಾ, ಹಿಂದಿನ ಮೊಕದ್ದಮೆಗಳಲ್ಲಿ ಈ ವಿಷಯವು ಇತ್ಯರ್ಥವಾಗದ ಕಾರಣ ಏಕ ನ್ಯಾಯಾಧೀಶರ ಆದೇಶವು ರೆಸ್ ಜುಡಿಕಾಟಾದಿಂದ ಪ್ರಭಾವಿತವಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದೆ
ರೆಸ್ ಜುಡಿಕಾಟಾ ಎಂದರೆ ಒಂದೇ ವಿಷಯದಲ್ಲಿ ಒಮ್ಮೆ ತೀರ್ಪು ಬಂದ ನಂತರ ಮತ್ತೆ ಅದೇ ಪಕ್ಷಗಳ ನಡುವೆ ಅದೇ ವಿಷಯವನ್ನು ಮರುವಿಚಾರಣೆಗೆ ತೆಗೆದುಕೊಳ್ಳುವಂತಿಲ್ಲ ಎಂಬ ನ್ಯಾಯ ಸಿದ್ಧಾಂತ. ಆದರೆ, ಇಲ್ಲಿ ಏಕಸದಸ್ಯ ಪೀಠದ ಆದೇಶದಲ್ಲಿರುವ ವಿಷಯವು ಹಿಂದಿನ ದಾವೆಗಳಲ್ಲಿ ನಿರ್ಧಾರಕ್ಕೆ ಬಂದಿರಲಿಲ್ಲ, ಆದ್ದರಿಂದ ರೆಸ್ ಜುಡಿಕಾಟಾ ಅನ್ವಯಿಸುವುದಿಲ್ಲ ಎಂದು ವಿಭಾಗೀಯ ಪೀಠ ಹೇಳಿದೆ.
ರಾಜ್ಯ ಸರ್ಕಾರದ ಅಧಿಕಾರಿಗಳು, ಹಜರತ್ ಸುಲ್ತಾನ್ ಸಿಕಂರ್ ಬಾದುಷಾ ಅವುಲಿಯಾ ದರ್ಗಾ ಸೇರಿದಂತೆ ಮೇಲ್ಮನವಿದಾರರು, ಆಗಮ ಶಾಸ್ತ್ರವು ಸ್ಥಳದಲ್ಲಿ ದೀಪ ಬೆಳಗುವುದನ್ನು ತಡೆಯುತ್ತದೆ ಎಂದು ತೋರಿಸಲು ಪ್ರಬಲ ಪುರಾವೆಗಳನ್ನು ಒದಗಿಸುವಲ್ಲಿ ವಿಫಲರಾಗಿದ್ದಾರೆ ಎಂದು ಪೀಠ ತಿಳಿಸಿದೆ.
ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆ ‘ಕಾಲ್ಪನಿಕ ಭೂತ’
“ದೇವಸ್ಥಾನದ ಪ್ರತಿನಿಧಿಗಳು ವರ್ಷದಲ್ಲಿ ಒಂದು ನಿರ್ದಿಷ್ಟ ದಿನದಂದು ಕಲ್ಲಿನ ಕಂಬದ ಬಳಿ ದೀಪ ಹಚ್ಚಲು ಅವಕಾಶ ನೀಡುವುದರಿಂದ ಸಾರ್ವಜನಿಕ ಶಾಂತಿಗೆ ಭಂಗ ಉಂಟಾಗುತ್ತದೆ ಎಂಬ ರಾಜ್ಯ ಸರ್ಕಾರದ ಆತಂಕವು ಹಾಸ್ಯಾಸ್ಪದ ಮತ್ತು ನಂಬಲು ಕಷ್ಟ. ಅಂತಹ ಅಡಚಣೆಯನ್ನು ರಾಜ್ಯವೇ ಪ್ರಾಯೋಜಿಸಿದರೆ ಮಾತ್ರ ಅದು ಸಂಭವಿಸಬಹುದು. ಯಾವುದೇ ರಾಜ್ಯವು ತಮ್ಮ ರಾಜಕೀಯ ಕಾರ್ಯಸೂಚಿಯನ್ನು ಸಾಧಿಸಲು ಈ ಮಟ್ಟಕ್ಕೆ ಇಳಿಯಬಾರದು ಎಂದು ನಾವು ಪ್ರಾರ್ಥಿಸುತ್ತೇವೆ ಎಂಬುವುದಾಗಿ ನ್ಯಾಯಾಲಯ ಹೇಳಿದೆ. ಹಾಗೆಯೇ, ದರ್ಗಾ ಪಕ್ಷವು ದೀಪ ಸ್ತಂಭವು ತಮಗೆ ಸೇರಿದೆ ಎಂದು ವಾದಿಸಿದ್ದನ್ನು ‘ದುಷ್ಟತನದ ವಾದ’ ಎಂದು ಕರೆದು, ಅದು ಸಮುದಾಯಗಳ ನಡುವೆ ಅನುಮಾನವನ್ನು ಹೆಚ್ಚಿಸುತ್ತದೆ ಎಂದು ಟೀಕಿಸಿದೆ.
“ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಇರುವ ಗ್ರಹಿಕೆಯು, ಒಂದು ಸಮುದಾಯವನ್ನು ಇನ್ನೊಂದು ಸಮುದಾಯದ ಮುಂದೆ ಅನುಮಾನಕ್ಕೆ ಒಳಪಡಿಸಲು ರಾಜ್ಯ ಅಧಿಕಾರಿಗಳು ಸೃಷ್ಟಿಸಿದ ಕಾಲ್ಪನಿಕ ಭೂತವಾಗಿದೆ” ಎಂದು ಪೀಠ ಹೇಳಿದೆ.
ಜಿಲ್ಲಾಡಳಿತವು ಈ ಸಮಸ್ಯೆಯನ್ನು ಮಧ್ಯಸ್ಥಿಕೆಯ ಮೂಲಕ ಸಮುದಾಯಗಳ ನಡುವಿನ ಅಂತರವನ್ನು ಕಡಿಮೆ ಮಾಡಲು ಒಂದು ಅವಕಾಶವಾಗಿ ತೆಗೆದುಕೊಳ್ಳಬೇಕಾಗಿತ್ತು ಎಂದಿದೆ.
ತಿರುಪರನ್ಕುಂದ್ರಂ ಬೆಟ್ಟವು ಸಂರಕ್ಷಿತ ತಾಣವಾಗಿರುವುದರಿಂದ ಯಾವುದೇ ಚಟುವಟಿಕೆಯು ಎಎಸ್ಐ ಕಾಯ್ದೆಯ ಪ್ರಕಾರ ಇರಬೇಕು ಎಂದು ಪೀಠ ಹೇಳಿದೆ. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯೊಂದಿಗೆ ಸಮಾಲೋಚಿಸಿದ ನಂತರ ದೀಪವನ್ನು ಬೆಳಗಿಸಬಹುದು ಮತ್ತು ವ್ಯಕ್ತಿಗಳ ಸಂಖ್ಯೆಯನ್ನು ನಿಗದಿಪಡಿಸಬಹುದು ಎಂದು ತಿಳಿಸಿದೆ.
ಮಧುರೈನ ತಿರುಪರನ್ಕುಂದ್ರಂನಲ್ಲಿರುವ ಅರುಲ್ಮಿಗು ಸುಬ್ರಮಣಿಯ ಸ್ವಾಮಿ ದೇವಾಲಯದ ಆಡಳಿತ ಮಂಡಳಿಯು ತಿರುಪರನ್ಕುಂದ್ರಂ ಬೆಟ್ಟಗಳ ಮೇಲಿರುವ ದೀಪಥೂನ್ (ಪ್ರಾಚೀನ ಕಲ್ಲಿನ ದೀಪ ಸ್ತಂಭ) ನಲ್ಲಿ ಕಾರ್ತಿಗೈ ದೀಪವನ್ನು ಬೆಳಗಿಸಬೇಕೆಂದು ಡಿಸೆಂಬರ್ 1ರಂದು ಏಕ ಸದಸ್ಯ ನ್ಯಾಯಾಧೀಶರು ನೀಡಿದ ತೀರ್ಪಿನಿಂದ ಉದ್ಭವಿಸಿದ ಮೇಲ್ಮನವಿಗಳ ಗುಂಪಿನ ಮೇಲೆ ಈ ಆದೇಶಗಳನ್ನು ನೀಡಲಾಗಿದೆ.


