ದೇಶದಲ್ಲಿ ಎಲ್ಲವನ್ನೂ ಖಾಸಗೀಕರಣಕ್ಕೆ ಒಳಪಡಿಸುತ್ತಿರುವ ಇಂದಿನ ಸಂದರ್ಭದಲ್ಲಿ ಸರ್ಕಾರಿ ಆಸ್ಪತ್ರೆ ಮತ್ತು ಸರ್ಕಾರೀ ವೈದ್ಯಕೀಯ ಕಾಲೇಜುಗಳೂ ಸಹ ಖಾಸಗೀಕರಣದ ಬಿರುಗಾಳಿಗೆ ಸಿಲುಕಿ ನಿರ್ಣಾಮವಾಗುತ್ತಿವೆ. ಇದನ್ನು ಆಳುವ ಸರ್ಕಾರಗಳು ಉದ್ದೇಶಪೂರ್ವಕವಾಗಿಯೇ ಮಾಡುತ್ತಿವೆ. ಪ್ರಭುತ್ವಕ್ಕೆ ಎಂದಿಗೂ ಜನಸಾಮಾನ್ಯರ ಚಿಂತೆಯಿಲ್ಲ ಎಂಬುದನ್ನು ಇಂತಹ ಪ್ರಕ್ರಿಯೆಗಳ ಮೂಲಕ ಆಗಾಗ ಸಾಬೀತುಪಡಿಸುತ್ತಲೇ ಇರುತ್ತವೆ.
ಇದರ ವಿರುದ್ಧ ಇಂದಿನ ನಾಗರೀಕ ಸಮಾಜ ಪ್ರತಿಭಟಿಸದಿದ್ದರೆ ಮಧ್ಯಮ ಮತ್ತು ಕೆಳವರ್ಗಗಳು ಸಹಜ ಬದುಕು ನಡೆಸಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಇಂದು ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರ ಕಚೇರಿ ಎದುರು ‘ಸರ್ಕಾರಿ ಆಸ್ಪತ್ರೆ ಉಳಿಸಿ ಹೋರಾಟ ಸಮಿತಿ’ಯಿಂದ ಸಾಮೂಹಿಕ ಧರಣಿಯನ್ನು ಹಮ್ಮಿಕೊಳ್ಳಲಾಗಿತ್ತು.
ಮೊದಲ ಹಂತದಲ್ಲಿ ಜಿಲ್ಲೆಯ ಎಲ್ಲಾ ಶಾಸಕರ ಕಚೇರಿಯ ಮುಂಭಾಗ ಸಾಮೂಹಿಕ ಧರಣಿ ನಡೆಸಲು ನಿರ್ಧರಿಸಲಾಗಿದೆ. ಅದರಂತೆ ಮಂಗಳೂರು ವಿಧಾನ ಸಭಾ ಕ್ಷೇತ್ರದ ಶಾಸಕರ ಕಚೇರಿ ಮುಂಭಾಗ (ತೊಕ್ಕೊಟ್ಟು ಬಸ್ನಿಲ್ದಾಣ) ಸಾಮೂಹಿಕ ಧರಣಿ ಸತ್ಯಾಗ್ರಹವನ್ನು ಜನಪರ ಸಂಘಟನೆಗಳು, ಸಾಮಾಜಿಕ ಕಾರ್ಯಕರ್ತರ ವೇದಿಕೆಯಾಗಿರುವ ಸರಕಾರಿ ಆಸ್ಪತ್ರೆ ಉಳಿಸಿ ಹೋರಾಟ ಸಮಿತಿ, ದಕ್ಷಿಣ ಕನ್ನಡ ಇದರ ವತಿಯಿಂದ ಆಯೋಜಿಸಲಾಗಿದೆ.
“ಆರೋಗ್ಯ ಇಲ್ಲದಿದ್ದರೆ ಬದುಕಿಲ್ಲ. ಇಂದಿನ ದಿನಮಾನದಲ್ಲಿ ಪ್ರತಿಯೊಬ್ಬ ನಾಗರಿಕನೂ ಆರೋಗ್ಯದ ಚಿಕಿತ್ಸೆಯ ಕುರಿತು ಚಿಂತಿತನಾಗಿದ್ದಾನೆ. ಅನಾರೋಗ್ಯ ಕಾಡಿದರೆ ಚಿಕಿತ್ಸೆ ಪಡೆಯುವುದು ಹೇಗೆ? ಎಂದು ಪ್ರತಿಯೊಬ್ಬರೂ ಆತಂಕಗೊಳ್ಳುವಂತಾಗಿದೆ. ಈ ರೀತಿಯ ಆತಂಕಕ್ಕೆ ಕಾರಣ ನಮ್ಮ ಸರಕಾರಗಳು ಆರೋಗ್ಯ ಕ್ಷೇತ್ರವನ್ನು ವ್ಯಾಪಾರೀಕರಣಕ್ಕೆ ಒಡ್ಡಿರುವುದು” ಎಂದು ಹೋರಾಟಗಾರರು ಅಭಿಪ್ರಾಯ ವ್ಯಕ್ತಪಡಿಸಿದರು.
ಇದನ್ನೂ ಓದಿ: ಮುತ್ತಯ್ಯ ಮುರುಳೀಧರನ್ ಬಯೋಪಿಕ್: 800 ಚಿತ್ರದ ನಿರ್ದೇಶಕರಿಗೆ ಜೀವ ಬೆದರಿಕೆ!
“ಆರೋಗ್ಯ ಪ್ರತಿಯೊಬ್ಬ ಪ್ರಜೆಯ ಹಕ್ಕು” ಎಂಬ ಸಂವಿಧಾನದ ಆಶಯಗಳು ಈಗ ಕಾಗದದಲ್ಲಷ್ಟೇ ಉಳಿದಿದೆ. ಸರಕಾರಿ ಆಸ್ಪತ್ರೆಗಳನ್ನು ಮುಚ್ಚಲಾಗುತ್ತಿದೆ ಅಥವಾ ದುರ್ಬಲಗೊಳಿಸಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳ ಪರ ಆರೋಗ್ಯ ನೀತಿಗಳನ್ನು ರೂಪಿಸಲಾಗುತ್ತಿದೆ. ಆಯುಷ್ಮಾನ್ ಸಹಿತ ಸರಕಾರಿ ಆರೋಗ್ಯ ವಿಮೆಗಳು ಖಾಸಗಿ ಆರೋಗ್ಯ ವ್ಯಾಪಾರಿಗಳ ಖಜಾನೆ ತುಂಬುತ್ತಿವೆ.
ಜನಸಂಖ್ಯಾವಾರು ರಾಜ್ಯ ಸರಕಾರದ ನಿಯಮಗಳ ಪ್ರಕಾರವೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕನಿಷ್ಟ 120 ಪ್ರಾಥಮಿಕ ಆರೋಗ್ಯ ಕೇಂದ್ರ, 40 ಹಾಸಿಗೆಗಳ 32 ಸಮುದಾಯ ಆಸ್ಪತ್ರೆ, 100 ಹಾಸಿಗೆಗಳ 8 ತಾಲೂಕು ಆಸ್ಪತ್ರೆ ಇರಬೇಕು. ಆದರೆ ಈಗ 80 ಪ್ರಾಥಮಿಕ ಆರೋಗ್ಯ ಕೇಂದ್ರ 7 ಸಮುದಾಯ ಆಸ್ಪತ್ರೆ, 4 ತಾಲೂಕು ಆಸ್ಪತ್ರೆಗಳು ಮಾತ್ರ ಇದೆ. ಇರುವ ಆಸ್ಪತ್ರೆಗಳಲ್ಲೂ ಅರ್ಧದಷ್ಟು ವೈದ್ಯರ, ಸಿಬ್ಬಂದಿಗಳು ಸ್ಥಾನ ಖಾಲಿ ಬಿದ್ದಿದೆ. ತಜ್ಞ ವೈದ್ಯರಂತೂ ಇಲ್ಲವೇ ಇಲ್ಲ ಅನ್ನುವಷ್ಟು ವಿರಳ. ಜಿಲ್ಲಾಸ್ಪತ್ರೆ ವೆನ್ಲಾಕ್ ಶತಮಾನ ಕಳೆದರೂ ಅದೇ ಹಳೆಯ ಸ್ಥಿತಿಯಲ್ಲಿದೆ. ಇದು ಜನಸಾಮಾನ್ಯರ ಆರೋಗ್ಯದ ಸ್ಥಿತಿಯ ಮೇಲೆ ಗಂಭೀರ ಪರಿಣಾಮ ಬೀರಿದೆ.
ಇದನ್ನೂ ಓದಿ: ಪ್ರತ್ಯೇಕ ಜಾಹೀರಾತು: ಬಿಹಾರದಲ್ಲಿ ಜೆಡಿಯು-ಬಿಜೆಪಿ ನಡುವಿನ ಮುನಿಸಿಗೆ ತೇಪೆ?
“ಖಾಸಗಿ ಆಸ್ಪತ್ರೆಗಳ, ಮೆಡಿಕಲ್ ಕಾಲೇಜುಗಳ ಲಂಗುಲಗಾಮಿಲ್ಲದ ವ್ಯಾಪಾರಕ್ಕೆ ಅನುವು ಮಾಡಿಕೊಟ್ಟಿದೆ. 8 ಖಾಸಗಿ ಮೆಡಿಕಲ್ ಕಾಲೇಜುಗಳಿರುವ ನಮ್ಮ ಜಿಲ್ಲೆಯಲ್ಲಿ ಒಂದು ಸರಕಾರಿ ಮೆಡಿಕಲ್ ಕಾಲೇಜು ಇಲ್ಲದಿರುವುದು ನಮ್ಮ ಜನಪ್ರತಿನಿಧಿಗಳ ರಾಜಕೀಯ ಇಚ್ಚಾಶಕ್ತಿಯ ಕೊರತೆಯನ್ನು ಎತ್ತಿ ತೋರಿಸುತ್ತದೆ” ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಹೇಳಿದರು.
ಖಾಸಗಿ ಮೆಡಿಕಲ್ ಕಾಲೇಜುಗಳ ಆಡುಂಬೊಲವಾಗಿರುವ ಮಂಗಳೂರು (ಉಳ್ಳಾಲ) ವಿಧಾನಸಭಾ ಕ್ಷೇತ್ರದಲ್ಲಿ ಸರಕಾರಿ ಆಸ್ಪತ್ರೆಗಳ ಸ್ಥಿತಿ ಶೋಚನೀಯ. ನಿಯಮಗಳ ಪ್ರಕಾರ 15 ಪ್ರಾಥಮಿಕ ಆರೋಗ್ಯ ಕೇಂದ್ರ ಇರಬೇಕಾದಲ್ಲಿ 8 ಪ್ರಾಥಮಿಕ ಆರೋಗ್ಯ ಕೇಂದ್ರ ಮಾತ್ರ ಇದೆ. 40 ಹಾಸಿಗೆಗಳ 4 ಸಮುದಾಯ ಇರಬೇಕಾದ ಆಸ್ಪತ್ರೆಯಲ್ಲಿ ಒಂದೇ ಒಂದು ಸಮುದಾಯ ಆಸ್ಪತ್ರೆಯೂ ಕ್ಷೇತ್ರದಲ್ಲಿ ಇಲ್ಲ. ಉಳ್ಳಾಲದಲ್ಲಿ ಸುಸಜ್ಜಿತ ಕಟ್ಟಡ ಕಟ್ಟಲಾಗಿದ್ದರೂ ಸಮುದಾಯ ಆಸ್ಪತ್ರೆಯಾಗಿ ಇನ್ನೂ ಮೇಲ್ದರ್ಜೆಗೆ ಏರಿಸಲಾಗಿಲ್ಲ. ಉಳ್ಳಾಲ ತಾಲೂಕಾಗಿ ಘೋಷಿಸಲ್ಪಟ್ಟಿದ್ದರೂ 100 ಹಾಸಿಗೆಗಳ ತಾಲೂಕು ಆಸ್ಪತ್ರ ಸ್ಥಾಪನೆ ಕುರಿತು ಸಣ್ಣ ಚರ್ಚೆಯೂ ಸರಕಾರದ ಮಟ್ಟದಲ್ಲಿ ನಡೆದಿಲ್ಲ.
ಇದರಿಂದಾಗಿ ಖಾಸಗಿ ಮೆಡಿಕಲ್ ಕಾಲೇಜು ಆಸ್ಪತ್ರೆಗಳು ಆಡಿದ್ದೇ ಆಟ ಎಂಬಂತಾಗಿದೆ. ಬಡರೋಗಿಗಳು ಖಾಸಗಿ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳ ಕಲಿಕೆಯ ಸಾಧನದಂತಾಗಿ ಹೋಗಿದ್ದಾರೆ. ಈ ಹಿನ್ನಲೆಯಲ್ಲಿ, ಸರಕಾರದ ವೈದ್ಯಕೀಯ ಅಧಿನಿಯಮದಂತೆ ಮಂಗಳೂರು (ಉಳ್ಳಾಲ) ವಿಧಾನ ಸಭಾ ಕ್ಷೇತ್ರ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ, ತಾಲೂಕು ಆಸ್ಪತ್ರೆಗಳು ಸ್ಥಾಪನೆಗೊಳ್ಳಬೇಕು. ಜಿಲ್ಲೆಯಲ್ಲಿ ಒಂದು ಸರಕಾರಿ ಮೆಡಿಕಲ್ ಕಾಲೇಜು, ಕ್ಯಾನ್ಸರ್ ಆಸ್ಪತ್ರೆ ಸ್ಥಾಪಿಸಬೇಕು. ವೆನ್ಲಾಕನ್ನು ಪೂರ್ಣ ಪ್ರಮಾಣದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಬೇಕು ಎಂದು ಜನಾಂದೋಲನ ರೂಪಿಸಲು ನಿರ್ಧರಿಸಲಾಗಿದೆ ಎಂದು ಹೋರಾಟಗಾರರು ಹೇಳಿದರು.
ಇದನ್ನೂ ಓದಿ: ಸುಳ್ಳು ಹೇಳುವುದರಲ್ಲಿ ಪ್ರಧಾನಿಗೆ ಪೈಪೋಟಿ ನೀಡಲಾರೆವು; ರಾಹುಲ್ ಗಾಂಧಿ


