ಮೀನು ವ್ಯಾಪಾರಿ ಮುಸ್ಲಿಂ ಯುವಕನೋರ್ವನನ್ನು ತಂಡವೊಂದು ಕೊಲೆಗೆ ಯತ್ನಿಸಿದ ಘಟನೆ ಮಂಗಳೂರಿನ ಕುಂಟಿಕಾನ ಎಂಬಲ್ಲಿ ಶುಕ್ರವಾರ (ಮೇ.2) ಬೆಳಿಗ್ಗೆ ನಡೆದಿದ್ದು, ಈ ವೇಳೆ ಹಿಂದೂ ಮಹಿಳೆ ಬೊಬ್ಬೆ ಹೊಡೆದು ದುಷ್ಕರ್ಮಿಗಳಿಂದ ಆತನನ್ನು ರಕ್ಷಿಸಿದ್ದಾರೆ ಎಂದು ವರದಿಯಾಗಿದೆ.
ಬಜ್ಪೆಯಲ್ಲಿ ರೌಡಿಶೀಟರ್ ಸುಹಾಸ್ ಶೆಟ್ಟಿ ಎಂಬಾತನನ್ನು ದುಷ್ಕರ್ಮಿಗಳ ಗುಂಪೊಂದು ಮಾರಣಾಂತಿಕವಾಗಿ ಹಲ್ಲೆ ನಡೆಸಿ, ಹತ್ಯೆಗೈದ ಘಟನೆ ಗುರುವಾರ ರಾತ್ರಿ ನಡೆದಿತ್ತು. ಈ ಬೆನ್ನಲ್ಲೇ ಯುವಕನ ಹತ್ಯೆ ಯತ್ನ ಮಾಡಲಾಗಿದೆ. ಮೀನಿನ ವ್ಯಾಪಾರಿಯ ಮೇಲೆ ಸುಮಾರು 4ರಿಂದ 5 ಮಂದಿಯಿದ್ದ ತಂಡ ದಾಳಿ ನಡೆಸುತ್ತಿರುವ ದೃಶ್ಯ ಸ್ಥಳೀಯ ಕಟ್ಟಡವೊಂದರಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಉಳ್ಳಾಲ ನಿವಾಸಿ ಲುಕ್ಮಾನ್ ಎಂಬಾತ ತನ್ನ ಗ್ರಾಹಕನಿಗೆ ಮೀನು ನೀಡಲೆಂದು ಎಂದಿನಂತೆ ಮಂಗಳೂರಿನ ಕುಂಟಿಕಾನಕ್ಕೆ ತೆರಳಿದ್ದರು. “ಬೆಳಗ್ಗೆ 6:30ರ ಸುಮಾರಿಗೆ ಗ್ರಾಹಕನನ್ನು ಕಾಯುತ್ತಾ ನಿಂತಿದ್ದಾಗ ಕಪ್ಪು ಬಣ್ಣದ ಇನ್ನೋವ ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡವೊಂದು ಅವರ ಮೇಲೆ ದಾಳಿ ಮಾಡಿ ಕೊಲೆಗೆ ಯತ್ನಿಸಿದೆ” ವರದಿ ಹೇಳಿದೆ.
“ಅಪಾಯದ ಅರಿವಾಗಿ ಸ್ಥಳದಿಂದ ಓಡಿದಾಗ ಅಟ್ಟಾಡಿಸಿಕೊಂಡು ಹೋದ ದುಷ್ಕರ್ಮಿಗಳು ಲುಕ್ಮಾನ್ ಅವರನ್ನು ಕೆಳಗೆ ಬೀಳಿಸಿ ತಲೆಗೆ ಕಲ್ಲು ಎತ್ತಿ ಹಾಕಿ ಕೊಲೆಗೆ ಯತ್ನಿಸಿದ್ದಾರೆ. ಈ ವೇಳೆ ಹಿಂದೂ ಮಹಿಳೆಯೊಬ್ಬರು ಬೊಬ್ಬೆ ಹಾಕುತ್ತಾ ಓಡೋಡಿ ಬಂದು ದುಷ್ಕರ್ಮಿಗಳಿಂದ ಅವರನ್ನು ರಕ್ಷಿಸಿದ್ದಾರೆ” ಎಂದು ವರದಿ ವಿವರಿಸಿದೆ.
“ಮಹಿಳೆಯ ಬೊಬ್ಬೆಗೆ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಬಳಿಕ ಅದೇ ಮಹಿಳೆ ಲುಕ್ಮಾನ್ ಅವರನ್ನು ಪೊಲೀಸರ ಬಳಿ ಡ್ರಾಪ್ ಮಾಡಿದ್ದಾರೆ” ಎನ್ನಲಾಗಿದೆ.
ನನಗೂ ಬೆದರಿಕೆ ಕರೆಗಳು ಬರುತ್ತಿವೆ, ಪತ್ತೆ ಹಚ್ಚುವಂತೆ ಪೊಲೀಸರಿಗೆ ಸೂಚಿಸಿದ್ದೇನೆ: ಸಿದ್ದರಾಮಯ್ಯ