ದಕ್ಷಿಣ ಕನ್ನಡ ಜಿಲ್ಲೆ ಉಳ್ಳಾಲ ಪೊಲೀಸ್ ಠಾಣೆ ವ್ಯಾಪ್ತಿಯ ಮುನ್ನೂರು ಗ್ರಾಮದ ನೇತ್ರಾವತಿ ನದಿ ಕಿನಾರೆಯಲ್ಲಿ ಪಶ್ಚಿಮ ಬಂಗಾಳದ ಯುವತಿ ಮೇಲೆ ಬುಧವಾರ (ಏ.16) ರಾತ್ರಿ ಸಾಮೂಹಿಕ ಅತ್ಯಾಚಾರ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಈ ಸಂಬಂಧ ಪೊಲೀಸರು ಮೂವರು ಆರೋಪಿಗಳನ್ನು ಗುರುವಾರ (ಏ.17) ಬಂಧಿಸಿದ್ದಾರೆ.
“ಗುರುವಾರ ನಸುಕಿನಲ್ಲಿ ನೀರು ಕೇಳುತ್ತಾ ಯುವತಿ ಮುನ್ನೂರು ಗ್ರಾಮದ ಮನೆಯೊಂದರ ಬಾಗಿಲು ಬಡಿದಿದ್ದರು. ಮೈತುಂಬ ಗಾಯಗೊಂಡಿದ್ದ ಆಕೆಗೆ ಸ್ವಲ್ಪ ಹೊತ್ತಿನಲ್ಲಿ ಪ್ರಜ್ಞೆ ತಪ್ಪಿತ್ತು. ಚಿಕಿತ್ಸೆ ಬಳಿಕ ಪೊಲೀಸರಿಗೆ ಹೇಳಿಕೆ ನೀಡಿರುವ ಯುವತಿ, ರಿಕ್ಷಾ ಚಾಲಕನೊಬ್ಬ ಆಹಾರದಲ್ಲಿ ಮತ್ತು ಬರುವ ಪದಾರ್ಥ ಸೇರಿಸಿ ತನ್ನನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಇನ್ನಿಬ್ಬರು ಸ್ನೇಹಿತರ ಜೊತೆ ಸೇರಿ ಕಾರಿನಲ್ಲಿ ಅತ್ಯಾಚಾರ ನಡೆಸಿರುವ ಶಂಕೆ ಇದೆ ಎಂದು ತಿಳಿಸಿದ್ದಾರೆ” ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ತಿಳಿಸಿದ್ದಾರೆ.
ಪ್ರಕರಣ ಸಂಬಂಧ ರಿಕ್ಷಾ ಚಾಲಕನಾಗಿರುವ ಮೂಲ್ಕಿ ಕಾರ್ನಾಡು ನಿವಾಸಿ ಪ್ರಭುರಾಜ್ (38), ಕೋಟೆಕಾರು ಕುಂಪಲದ ಚಿತ್ರಾಂಜಲಿನಗರದ ನಿವಾಸಿ ಮಿಥುನ್ (37) ಹಾಗೂ ಮಂಗಳೂರಿನ ಪಡೀಲ್ ಕೋಡಕ್ಕಲ್ ನಿವಾಸಿ ಮನೀಶ್ (30) ಅವರನ್ನು ಬಂಧಿಸಲಾಗಿದೆ ಎಂದು ಅನುಪಮ್ ಅಗ್ರವಾಲ್ ಮಾಹಿತಿ ನೀಡಿದ್ದಾರೆ.
“ಪಶ್ಚಿಮ ಬಂಗಾಳದ ಕೂಚ್ಬಿಹಾರ್ ಮೂಲದ ಸುಮಾರು 20 ವರ್ಷ ಪ್ರಾಯದ ಯುವತಿ, ಕೇರಳದ ಪ್ಲೈವುಡ್ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಹೊಸ ಕೆಲಸ ಹುಡುಕುದಕ್ಕಾಗಿ ಗೆಳೆಯನ ಜೊತೆ ಮಂಗಳೂರಿಗೆ ಬಂದಿದ್ದರು. ಮಂಗಳೂರಲ್ಲಿ ಇಬ್ಬರ ನಡುವೆ ಜಗಳವಾಗಿತ್ತು. ಈ ವೇಳೆ ಯುವತಿಯ ಮೊಬೈಲ್ ಹಾನಿಗೊಂಡಿತ್ತು. ಅದನ್ನು ರಿಪೇರಿ ಮಾಡಿಸಲು ರಿಕ್ಷಾ ಹತ್ತಿದ ಯುವತಿ, ಮೊಬೈಲ್ ರಿಪೇರಿ ಆದ ಬಳಿಕ ಪಶ್ಚಿಮ ಬಂಗಾಳದ ರೈಲು ಹತ್ತಲು ತನ್ನನ್ನು ಸಮೀಪದ ರೈಲು ನಿಲ್ಧಾಣಕ್ಕೆ ಬಿಡುವಂತೆ ರಿಕ್ಷಾ ಚಾಲಕನಲ್ಲಿ ಕೋರಿದ್ದರು” ಎಂದು ಅಗ್ರವಾಲ್ ಹೇಳಿದ್ದಾರೆ.
“ಯುವತಿ ಗುರುವಾರ ನಸುಕಿನಲ್ಲಿ ಮುನ್ನೂರು ಗ್ರಾಮದ ಕೊಟ್ಟಾರಿಮೂಲೆ ಬಂಗುಲೆ ನೇತ್ರಾವತಿ ನದಿ ತೀರ ಸಮೀಪದ ಮನೆಯೊಂದರ ಬಾಗಿಲು ಬಡಿದು ನೀರು ಕೇಳಿದ್ದರು. ಮನೆಯವರು ಬಾಗಿಲು ತೆಗೆದ ಸ್ವಲ್ಪ ಹೊತ್ತಿನಲ್ಲೇ ಆಕೆ ಪ್ರಜ್ಞೆ ತಪ್ಪಿದ್ದರು. ಈ ವೇಳೆ ಮನೆಯವರು ಪೊಲೀಸ್ ಸಹಾಯವಾಣಿಗೆ (112) ಕರೆ ಮಾಡಿ ವಿಷಯ ತಿಳಿಸಿದ್ದರು. ಸ್ವಲ್ಪ ಹೊತ್ತಿನಲ್ಲೇ ಪೊಲೀಸರು ಸ್ಥಳಕ್ಕೆ ಧಾವಿಸಿ ಸಂತ್ರಸ್ತ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ”
“ರಿಕ್ಷಾ ಚಾಲಕ ಆಹಾರದಲ್ಲಿ ಮತ್ತು ಬರುವ ಪದಾರ್ಥ ಬೆರೆಸಿದ್ದರಿಂದ ಪ್ರಜ್ಞೆ ಕಳೆದುಕೊಂಡಿದ್ದೆ. ಪ್ರಜ್ಞೆ ಮರಳಿದಾಗ ಕಾರೊಂದರಲ್ಲಿ ರಿಕ್ಷಾ ಚಾಲಕ ಸೇರಿ ಮೂವರು ಯುವಕರ ಜೊತೆ ಇದ್ದೆ. ಕಿರುಚಾಡಿದಾಗ ಅವರು ನನ್ನನ್ನು ರಸ್ತೆ ಬದಿಯಲ್ಲಿ ಬಿಟ್ಟು ಪರಾರಿಯಾದರು. ನಾನು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾಗ ಮೂವರು ಸೇರಿ ನನ್ನ ಮೇಲೆ ಅತ್ಯಾಚಾರ ನಡೆಸಿರಬಹುದು” ಎಂದು ಯುವತಿ ಹೇಳಿಕೆ ನೀಡಿದ್ದಾಗಿ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಯುವತಿ ನೀಡಿದ ಹೇಳಿಕೆ ಆಧರಿಸಿ ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ. ಆಕೆಯ ಮೇಲೆ ಅತ್ಯಾಚಾರ ನಡೆದಿದೆಯೇ?..ಇಲ್ಲವೇ? ಎಂಬುವುದು ವೈದ್ಯಕೀಯ ಪರೀಕ್ಷೆಯ ವರದಿ ಬಂದ ಬಳಿಕ ತಿಳಿಯಲಿದೆ ಎಂದು ಅನುಪಮ್ ಅಗ್ರವಾಲ್ ಹೇಳಿದ್ದಾರೆ.
ಬಂಧಿತರ ಪೈಕಿ ಪ್ರಭುರಾಜ್ 10 ವರ್ಷಕ್ಕಿಂತಲೂ ಹೆಚ್ಚು ಸಮಯದಿಂದ ಆಟೋ ಚಾಲಕರಾಗಿದ್ದಾರೆ. ಆತ ಬುಧವಾರ ಮಧ್ಯಾಹ್ನ 2.30ರಿಂದಲೇ ಯುವತಿ ಜೊತೆಗಿದ್ದರು. ಮೊಬೈಲ್ ದುರಸ್ತಿಗಾಗಿ ಆತನ ಜೊತೆ ಯುವತಿ ಅನೇಕ ಮಳಿಗೆಗಳಿಗೆ ಸುತ್ತಿದ್ದಾರೆ. ಈ ವೇಳೆ ಪ್ರಭುರಾಜ್ ಆಕೆಗೆ ಉಪಾಹಾರ ನೀಡಿದ್ದರು. ಮೊಬೈಲ್ ದುರಸ್ತಿಯ ಹಣವನ್ನೂ ಅವರೇ ಪಾವತಿಸಿದ್ದರು. ಇನ್ನಿಬ್ಬರು ಆರೋಪಿಗಳಲ್ಲಿ ಆರೋಪಿ ಮಿಥುನ್ ಪೇಂಟಿಂಗ್, ಚಾಲಕ ಹಾಗೂ ಎಲೆಕ್ಟ್ರಿಷಿಯನ್ ಕೆಲಸಗಳನ್ನು ಮಾಡುತ್ತಿದ್ದರು. ಮನೀಶ್ ಡೆಲಿವರಿ ಬಾಯ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಯುವತಿಯ ಪ್ರಜ್ಞೆ ತಪ್ಪಿಸಿ ಮುನ್ನೂರು ಗ್ರಾಮಕ್ಕೆ ಕರೆದೊಯ್ಯುವಾಗ ಮೂವರು ಆರೋಪಿಗಳೂ ಮದ್ಯಪಾನ ಮಾಡಿದ್ದರು. ಯುವತಿಗೂ ಮದ್ಯ ಕುಡಿಸಿದ್ದರು ಎಂದು ಪೊಲೀಸ್ ಆಯುಕ್ತರು ವಿವರಿಸಿದ್ದಾರೆ.
ವರದಿಗಳ ಪ್ರಕಾರ, ಆರೋಪಿಗಳ ವಿರುದ್ಧ ಉಳ್ಳಾಲ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 126 (ಬಲವಂತದಿಂದ ಬಂಧನದಲ್ಲಿರಿಸುವುದು), ಸೆಕ್ಷನ್ 140 (2) (ಬಲವಂತದಿಂದ ಅಪಹರಣ ನಡೆಸುವುದು), 352 (ಶಾಂತಿಭಂಗವನ್ನುಂಟುಮಾಡುವುದು), ಸೆಕ್ಷನ್ 351 (1) ( ಕ್ರಿಮಿನಲ್ ಬೆದರಿಕೆ ಒಡ್ಡುವುದು) 115 (2) (ಹಲ್ಲೆನಡೆಸುವುದು), ಸೆಕ್ಷನ್ 64 (ಅತ್ಯಾಚಾರ ನಡೆಸುವುದು), ಸೆಕ್ಷನ್ 309 (6) (ಬೆದರಿಸಿ ಸುಲಿಗೆ ಮಾಡುವುದು), ಸೆಕ್ಷನ್ 70 (ಸಾಮೂಹಿಕ ಅತ್ಯಾಚಾರ) ಹಾಗೂ ಸೆಕ್ಷನ್ 3 (5)ರ (ಕೂಟ ರಚಿಸಿಕೊಂಡು ಕ್ರಿಮಿನಲ್ ಕೃತ್ಯ ನಡೆಸುವುದು) ಅಡಿ ಎಫ್ಐಆರ್ ದಾಖಲಾಗಿದೆ.
ಜಾತಿಗಣತಿ ಕುರಿತ ಸಚಿವ ಸಂಪುಟ ಸಭೆ ‘ಅಪೂರ್ಣ, ಆದರೆ ಸೌಹಾರ್ದಯುತ’: ಎಚ್.ಕೆ.ಪಾಟೀಲ್


