ಮಾರಣಾಂತಿಕ ಕೊರೋನಾ ವೈರಸ್ ಇಂದು ಇಡೀ ವಿಶ್ವಕ್ಕೆ ಬೆದರಿಕೆ ಒಡ್ಡಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಈ ಸೋಂಕಿಗೆ ಈವರೆಗೆ ನಾನಾ ದೇಶಗಳಲ್ಲಿ 10,000 ಸಾವಿರಕ್ಕೂ ಅಧಿಕ ಜನ ಸಾವನ್ನಪ್ಪಿದ್ದರೆ, ಸುಮಾರು 2 ಲಕ್ಷ ಜನರಿಗೆ ಸೋಂಕು ತಗುಲಿದೆ. ಭಾರತದಲ್ಲೂ ಸ್ಟೇಜ್-2 ರಲ್ಲಿರುವ ಈ ಸೋಂಕು ಈವರೆಗೆ 5 ಜನರನ್ನು ಬಲಿ ಪಡೆದಿದೆ. ಅಲ್ಲದೆ, ಇದು ಸ್ಟೇಜ್-3 ಪ್ರವೇಶಿಸಿದರೆ ಚೀನಾ-ಇಟಲಿಯಂತೆ ಇಲ್ಲೂ ಸಹ ಸಾಲು ಸಾಲು ಹೆಣಗಳು ಉರುಳುವುದು ಖಚಿತ ಎನ್ನಲಾಗುತ್ತಿದೆ. ಪರಿಣಾಮ ಇಡೀ ದೇಶ ಇಂದು ಭಯದಲ್ಲಿರುವುದು ಸುಳ್ಳಲ್ಲ.
ಇಂತಹ ಸಂದರ್ಭದಲ್ಲಿ ಇಡೀ ದೇಶದ ಜನರಿಗೆ ಧೈರ್ಯ ತುಂಬಬೇಕಾದದ್ದು ಹಾಗೂ ತನ್ನ ಸರ್ಕಾರ ಭವಿಷ್ಯದಲ್ಲಿ ಎದುರಾಗಬಹುದಾದ ಮಾರಕ ದಾಳಿಗೆ ಹೇಗೆ ಸಜ್ಜಾಗಿದೆ? ಜನರಿಗೆ ಎಂತಹ ಗುಣಮಟ್ಟದ ಚಿಕಿತ್ಸೆ ನೀಡಲಾಗುತ್ತದೆ? ಎಂದು ಯೋಜನೆ ರೂಪಿಸಿ ಅದನ್ನು ಜನರಿಗೆ ತಿಳಿಸಬೇಕಾದದ್ದು ದೇಶವನ್ನಾಳುವ ಪ್ರಧಾನಿಯ ಜವಾಬ್ದಾರಿಯೂ ಹೌದು.
ಭಾರತದ ಹಳ್ಳಿಗಾಡು ಪ್ರದೇಶದಲ್ಲಿ ಈಗಲೂ ಸುಮಾರು 80 ಕಿಮೀ ಅಂತರದಲ್ಲಿ ಸರ್ಕಾರಿ ಆಸ್ಪತ್ರೆಗಳಿಲ್ಲ. ಇದ್ದರೂ ಅಗತ್ಯವಿದ್ದಷ್ಟು ಬೆಡ್ ವ್ಯವಸ್ಥೆ ಇಲ್ಲ ಎನ್ನುತ್ತಿವೆ ಅಂಕಿಅಂಶಗಳು. ಇನ್ನು ನಗರ ಪ್ರದೇಶದಲ್ಲಿ ಖಾಸಗಿ ಆಸ್ಪತ್ರೆಗಳ ಚಿಕಿತ್ಸೆಯ ರೇಟಿಗೆ ಹೆದರಿ ಎಷ್ಟೋ ಜನ ಖಾಯಿಲೆ ಬಂದರೂ ಆಸ್ಪತ್ರೆಗೆ ಹೋಗಲೇ ಹೆದರುವಂತಹ ಸ್ಥಿತಿ ಇದೆ.
ಇಂತಹ ಸಂದರ್ಭದಲ್ಲಿ ಕೊರೋನಾ ವೈರಸ್ ಪೀಡಿತರಿಗೆ ಸರ್ಕಾರ ಎಂತಹ ಚಿಕಿತ್ಸೆ ನೀಡಲಿದೆ? ಅದರ ಗುಣಮಟ್ಟ ಏನು? ನಗರ ಮತ್ತು ಗ್ರಾಮೀಣ ಭಾಗದಲ್ಲಿ ಈ ವೈರಸ್ ಎದುರಿಸಲು ಕೈಗೊಂಡಿರುವ ಕ್ರಮ ಏನು? ಎಂಬ ಕುರಿತು ಪ್ರಧಾನಿ ಜನರಿಗೆ ತಿಳಿಸುವುದು ಅಗತ್ಯವಾಗಿತ್ತು ಮತ್ತು ಅನಿವಾರ್ಯವೂ ಆಗಿತ್ತು.
ಇಂತಹ ಜನಸ್ನೇಹಿ ಯೋಜನೆಗಳನ್ನು ರೂಪಿಸಬೇಕಾದ ಪ್ರಧಾನಿ ನರೇಂದ್ರ ಮೋದಿ ಗುರುವಾರ ಜನರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಮಾರ್ಚ್ 22 ರ ಭಾನುವಾರ ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆವರೆಗೆ 14 ಗಂಟೆಗಳ ಕಾಲ ʼಜನತಾ ಕರ್ಫ್ಯೂʼ ಹೇರುವಂತೆ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಅಲ್ಲದೇ ಅದೇ ದಿನ ಸಂಜೆ 5 ಗಂಟೆಗೆ ಕರೋನಾ ವಿರುದ್ಧ ಹಗಲಿರುಳು ದುಡಿಯುತ್ತಿರುವ ವರ್ಗಗಳಿಗೆ ಧನ್ಯವಾದ ಕೋರುವ ನಿಟ್ಟಿನಲ್ಲಿ ಮನೆ ಬಾಗಿಲು, ಕಿಟಕಿ ಅಥವಾ ಬಾಲ್ಕನಿಯಲ್ಲಿ ನಿಂತು ಚಪ್ಪಾಳೆ ತಟ್ಟಿ ಎಂದು ಕಿವಿಮಾತು ಹೇಳಿದ್ದಾರೆ. ಅದಾಗಿ ಹತ್ತು ನಿಮಿಷದಲ್ಲೇ ಬಿಜೆಪಿ ಸಾಮಾಜಿಕ ಜಾಲತಾಣ ವಿಭಾಗ ಅದನ್ನು ಗ್ರಾಫಿಕ್ಸ್ ಪೇಜ್ ಮೂಲಕ ವ್ಯಾಪಕವಾಗಿ ಸುದ್ದಿ ಪಸರಿಸುವಂತೆ ಮಾಡಿದೆ.
ಸರಿಸುಮಾರು ಅದೇ ಹೊತ್ತಿಗೆ ನೆರೆಯ ಕೇರಳ ರಾಜ್ಯದಲ್ಲಿ ಅಲ್ಲಿನ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸುದ್ದಿಗೋಷ್ಟಿ ಕರೆದು ಕರೋನಾ ವಿರುದ್ಧದ ಹೋರಾಟಕ್ಕೆ 20 ಸಾವಿರ ಕೋಟಿ ರೂಪಾಯಿಯ ವಿಶೇಷ ಪ್ಯಾಕೇಜ್ ಘೊಷಣೆ ಮಾಡುತ್ತಾರೆ. ಅಲ್ಲದೇ ತೆರಿಗೆ ವಿನಾಯಿತಿ, ವಿದ್ಯುತ್, ನೀರಿನ ಬಿಲ್ ಪಾವತಿಗೆ ಹೆಚ್ಚುವರಿ ಸಮಯ ನೀಡುವ ಭರವಸೆ ನೀಡುತ್ತಾರೆ. ಆರೋಗ್ಯ ಕ್ಷೇತ್ರಕ್ಕಾಗಿ 500 ಕೋಟಿ ರೂಪಾಯಿ ಮೀಸಲಿಡುವ ಜೊತೆಗೆ ಮುಂಚಿತವಾಗಿಯೇ ವಿಧವಾ ವೇತನ, ವೃದ್ಧಾಪ್ಯ ವೇತನ ಬಿಡುಗಡೆ, ಬಡ ಕುಟುಂಬಗಳಿಗೆ ಸಾಲ ಯೋಜನೆ, ವೈರಸ್ ಹಾವಳಿ ಕಡಿಮೆಯಾಗುವವರೆಗೆ 10 ಕೆಜಿ ಅಕ್ಕಿ ವಿತರಣೆ ಈ ರೀತಿಯ ಹತ್ತು ಹಲವು ಕಾರ್ಯಕ್ರಮಗಳನ್ನು ಘೋಷಿಸುತ್ತಾರೆ.
ಕೇರಳ ಸರ್ಕಾರದ ಜನಸ್ನೇಹಿ ಕಾರ್ಯ ವಿಧಾನವನ್ನು ನರೇಂದ್ರ ಮೋದಿ ಸರ್ಕಾರದ ಕಾರ್ಯ ವಿಧಾನಕ್ಕೆ ಹೋಲಿಕೆ ಮಾಡಲಾಗದಷ್ಟು ವ್ಯತ್ಯಾಸ ಎರಡರ ನಡುವೆ ಇದೆ.
ಆದರೆ, ಇದರ ಹೊರತಾಗಿಯೂ ಜನ ಒಂದು ದಿನ ರಸ್ತೆಗೆ ಇಳಿಯದೆ ಪ್ರಧಾನಿ ಮಾತು ಕೇಳಿ ಮನೆಯಲ್ಲೇ ಇದ್ದರೇ ಈ ವೈರಸ್ ತಹಬಂದಿಗೆ ಬರುತ್ತಾ? ಎಂದು ಪ್ರಶ್ನೆ ಮಾಡಿದರೆ, ಹಾಗೆ ಆಗಲು ಸಾಧ್ಯವೇ ಇಲ್ಲಾ ಎನ್ನುತ್ತಾರೆ ನುರಿತ ವೈದ್ಯರು. ಹಾಗಾದರೆ ಈ ಕೊರೋನಾ ವೈರಸ್ ಹೇಗೆ ಹರಡುತ್ತೆ? ಮತ್ತೆ ಈ ಸೋಂಕು ಎಷ್ಟು ದಿನದಲ್ಲಿ ನಿಮ್ಮ ದೇಹದಲ್ಲಿ ಕಾಣಿಸಿಕೊಳ್ಳುತ್ತೆ ಎಂಬುದಕ್ಕೆ ಇಲ್ಲಿದೆ ಉತ್ತರ.
ಕೊರೋನಾ ಸೋಂಕು ಹರಡುವುದು ಹೇಗೆ ಗೊತ್ತಾ?
ಎಲ್ಲರಿಗೂ ತಿಳಿದಿರುವಂತೆ ಕೊರೋನಾ ಸೋಂಕು ವ್ಯಕ್ತಿಯಿಂದ ವ್ಯಕ್ತಿಗೆ ಹರಡುವ ಅಂಟು ರೋಗ. ಸೋಂಕು ಪೀಡಿತ ವ್ಯಕ್ತಿ ಸೀನಿದರೆ, ಕೆಮ್ಮಿದರೆ ಅಥವಾ ನಮ್ಮನ್ನು ಸ್ಪರ್ಶಿಸಿದರೆ ಆ ಸೋಂಕು ನಮಗೂ ತಗುಲುವ ಸಾಧ್ಯತೆ ಹೆಚ್ಚು. ಒಂದು ವೇಳೆ ನಿಮಗೆ ಆ ಸೋಂಕು ತಗುಲಿದರೂ ಸಹ ಅದು ಕಾಣಿಸಿಕೊಳ್ಳಲು 5 ದಿನಗಳೇ ಬೇಕಾಗಬಹುದು.
5 ದಿನದ ನಂತರ ನಿಮಗೆ ಕೆಮ್ಮು, ಷೀನು, ಸಿಂಬಳ ಸೇರಿದಂತೆ ರೋಗದ ಗುಣ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ಇದಾದ ನಂತರ 14 ದಿನಗಳಲ್ಲಿ ಈ ಸೋಂಕು ಗಂಟಲು ಮತ್ತು ಶ್ವಾಸಕೋಶಕ್ಕೆ ವ್ಯಾಪಿಸಿ ಉಸಿರಾಟದ ತೊಂದರೆ ಉಂಟಾಗಿ ಸಾವು ಸಂಭವಿಸುತ್ತದೆ. ಇದೇ ಕಾರಣಕ್ಕೆ ಸೋಂಕಿಗೆ ಒಳಗಾದ ವ್ಯಕ್ತಿಯನ್ನು 14 ದಿನ ಐಸೋಲೇಷನ್ ಅಂದರೆ ತೀವ್ರ ನಿಗಾ ಘಟಕದಲ್ಲಿ ಇಟ್ಟಿರುವುದು. ಹೀಗಾಗಿ ಈ ಸೋಂಕು ಅಕಸ್ಮಾತ್ ನಿಮ್ಮಲ್ಲಿದ್ದರೆ ಅದು 19 ರಿಂದ 20 ದಿನ ಜೀವಂತವಾಗಿರುತ್ತದೆ. ಹಾಗೆ ನೋಡಿದರೆ ಇಡೀ ದೇಶಕ್ಕೆ 20 ದಿನ ಕರ್ಫ್ಯೂ ಹೇರಬೇಕು. ಹೀಗಾಗಿ ಕೇವಲ ಒಂದು ದಿನ ಕರ್ಫ್ಯೂ ಹೇರಿ ಏನುಪಯೋಗ? ಎಂಬುದು ನುರಿತ ವೈದ್ಯರ ಪ್ರಶ್ನೆ.
ಅದಿರಲಿ ಪ್ರಧಾನಿ ನರೇಂದ್ರ ಮೋದಿ ಅವರ ಇಂತಹ ರಾತ್ರಿ ೮ರ ಘೋಷಣೆಗೆ ಬೇರೆ ರೀತಿಯ ಇತಿಹಾಸವಿದೆ. ಆದರೂ, ಪ್ರಧಾನಿ ದಯವಿಟ್ಟು ಜನ ರಸ್ತೆಗೆ ಇಳಿಯಬೇಡಿ ಎಂದು ಮನವಿ ಮಾಡಿದ್ದಾರೆಯೇ ವಿನಃ ಆದೇಶ ಹೊರಡಿಸಿಲ್ಲ. ಹಾಗೆ ಆದೇಶ ಹೊರಡಿಸುವ ಹಕ್ಕು ಅವರಿಗೂ ಇಲ್ಲ ಎಂಬುದು ಬೇರೆ ವಿಚಾರ. ಆದರೆ, ಅವರ ಮನವಿಯೇ ಶಾಸನ ಎಂಬಂತಹ ಭ್ರಮೆಯಲ್ಲಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಇಡೀ ದೇಶದಲ್ಲಿ ಯಾವ ಪೊಲೀಸ್ ಅಧಿಕಾರಿಯೂ ಮಾಡಲು ಮುಂದಾಗದ ಕೆಲಸಕ್ಕೆ ಮುಂದಾಗಿ ಇದೀಗ ಪೇಚಿಗೆ ಮತ್ತು ನಗೆಪಾಟಲಿಗೆ ಸಿಲುಕಿದ್ದಾರೆ.
ರಸ್ತೆಗಿಳಿದರೆ ಕೇಸ್ ಹಾಕ್ತಾರಂತೆ ಭಾಸ್ಕರ್ ರಾವ್!
ಮಾರ್ಚ್ 22 ಭಾನುವಾರ ದೇಶದಾದ್ಯಂತ ಜನತಾ ಕರ್ಫ್ಯೂ ಆಚರಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ ಬೆನ್ನಿಗೆ ಇಂದು ಪತ್ರಿಕಾಗೋಷ್ಠಿ ನಡೆಸಿ ಬೆಂಗಳೂರು ನಾಗರೀಕರಿಗೆ ಎಚ್ಚರಿಕೆ ನೀಡಿರುವ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, “ಭಾನುವಾರ ದೇಶದಾದ್ಯಂತ ಜನತಾ ಕರ್ಫ್ಯೂ ಇರುವ ಹಿನ್ನೆಲೆ ಸಾರ್ವಜನಿಕರು ಮನೆಯಲ್ಲೇ ಇದ್ದು ಸಹಕರಿಸಬೇಕು. ಪ್ರವಾಸ, ವಾಕಿಂಗ್, ಕಾರ್ಯಕ್ರಮ ಅಂತ ಓಡಾಡುವಂತಿಲ್ಲ. ಅಕಸ್ಮಾತ್ ರಸ್ತೆ ಮೇಲೆ ತಿರುಗಾಡಿದ್ರೆ act 31(L) ಅಡಿಯಲ್ಲಿ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತೆ. ಪ್ರಕರಣ ದಾಖಲಿಸಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದ್ದಾರೆ.
ಭಾಸ್ಕರ್ ರಾವ್ ಮಾಧ್ಯಮಗಳ ಎದುರು ಹೀಗೊಂದು ಹೇಳಿಕೆ ನೀಡುತ್ತಿದ್ದಂತೆ ಎಚ್ಚೆತ್ತಿರುವ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರಿಗೆ ಸರಿಯಾಗಿಯೇ ಕ್ಲಾಸ್ ತಗೊಂಡಿದ್ದಾರೆ, “ಭಾನುವಾರ ರಸ್ತೆ ಮೇಲೆ ಓಡಾಡಿದ್ರೆ ಕೇಸ್ ಹಾಕ್ತೀರ? ನಿಮಗೆ ಯಾರು ಇಂತಹ ಅಧಿಕಾರ ಕೊಟ್ಟದ್ದು? ಕೇಸ್ ಹಾಕೋದಕ್ಕೆ ಕಾನೂನಿನಲ್ಲಿ ಅವಕಾಶ ಇದೆಯಾ?
ಏಕೆ ಆ ರೀತಿ ಹೆದರಿಸುವ ಹೇಳಿಕೆ ಕೊಡ್ತೀರಾ..? ಜನರು ಸ್ವಯಂಪ್ರೇರಿತರಾಗಿ ಮನೆಯಲ್ಲಿ ಇರೋದೆ ಜನತಾ ಕರ್ಫ್ಯೂ. ಹೀಗೆ ಹೇಳಿಕೆ ಕೊಟ್ಟು ಜನರಲ್ಲಿ ಗೊಂದಲ ಮೂಡಿಸಬೇಡಿ ಎಂದು ಎಂದು ತಾಕೀತು ಮಾಡಿದ್ದಾರೆ. ಈ ಕುರಿತು ವಿವರಣೆ ಕೇಳಿ ನೊಟೀಸ್ ಸಹ ನೀಡಿದ್ದಾರೆ. ಅಲ್ಲದೆ, ಸಭೆಯಲ್ಲಿ ಭಾಸ್ಕರ್ ರಾವ್ ಅವರನ್ನು ಸರಿಯಾಗಿಯೇ ಜಾಡಿಸಿದ್ದಾರೆ ಎನ್ನಲಾಗುತ್ತಿದೆ.
ಒಟ್ಟಾರೆ ಪ್ರಧಾನಿಯ ಮಾತೇ ವೇದವಾಕ್ಯ ಎಂದು ಭ್ರಮೆಯಿಂದ ವ್ಯಕ್ತಿ ನಿಷ್ಠೆ ತೋರಿಸಲು ಮುಂದಾಗುವ ಕಮಲಪ್ರಿಯ ಅಧಿಕಾರಿಗಳಿಗೆ ಇಂದಿನ ಭಾಸ್ಕರ್ ರಾವ್ ಪ್ರಸಂಗ ಒಂದು ಪಾಠವಾಗಲಿ.


