Homeಮುಖಪುಟಭಗವದ್ಗೀತೆ ಕಾರ್ಯಕ್ರಮದಲ್ಲಿ ಚಿಕನ್ ಪಫ್ಸ್ ಮಾರಿದ ಮುಸ್ಲಿಂ ವ್ಯಾಪಾರಿಗೆ ಥಳಿತ : ಮೂವರ ಬಂಧನ

ಭಗವದ್ಗೀತೆ ಕಾರ್ಯಕ್ರಮದಲ್ಲಿ ಚಿಕನ್ ಪಫ್ಸ್ ಮಾರಿದ ಮುಸ್ಲಿಂ ವ್ಯಾಪಾರಿಗೆ ಥಳಿತ : ಮೂವರ ಬಂಧನ

ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಲು ಕೋರಿ ಹೈಕೋರ್ಟ್ ನ್ಯಾಯಾಧೀಶರಿಗೆ ಪತ್ರ

- Advertisement -
- Advertisement -

ಲಕ್ಷ ಕಂಠ ಗೀತಾ ಪಾರಾಯಣ (ಸುಮಾರು 5 ಲಕ್ಷ ಜನರಿಂದ ಭಗವದ್ಗೀತೆ ಪಾರಾಯಣ) ಕಾರ್ಯಕ್ರಮದಲ್ಲಿ ಚಿಕನ್ ಪಫ್ಸ್ ಮಾರಿದ ಬಡ ಮುಸ್ಲಿಂ ವ್ಯಾಪಾರಿಗೆ ಥಳಿಸಿದ ಘಟನೆ ಭಾನುವಾರ (ಡಿಸೆಂಬರ್ 7) ಕೋಲ್ಕತ್ತಾದ ಬ್ರಿಗೇಡ್ ಪೆರೇಡ್ ಮೈದಾನದಲ್ಲಿ ನಡೆದಿದೆ.

ಈ ಕುರಿತ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಸಂಬಂಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಲು ಕೋರಿ ಕಲ್ಕತ್ತಾ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿದೆ.

ಘಟನೆ ಸಂಬಂಧ ಪ್ರಮುಖ ಆರೋಪಿಗಳಾದ ಸೌಮಿಕ್ ಗೋಲ್ಡರ್ (23), ಸ್ವರ್ಣೇಂದು ಚಕ್ರವರ್ತಿ (32) ಮತ್ತು ತರುಣ್ ಭಟ್ಟಾಚಾರ್ಯ (51) ಅವರನ್ನು ಬುಧವಾರ (ಡಿಸೆಂಬರ್ 11) ಬೆಳಿಗ್ಗೆ ಬಂಧಿಸಲಾಗಿದೆ ಎಂದು ವರದಿಯಾಗಿದೆ.

ಬಂಧಿತರ ವಿರುದ್ದ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್‌) ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ. ಸೌಮಿಕ್ ಗೋಲ್ಡರ್ ಪ್ರಕರಣ ಪ್ರಮುಖ ಆರೋಪಿ ಎಂದು ಗುರುತಿಸಲಾಗಿದೆ.

ಬ್ರಿಗೇಡ್ ಪೆರೇಡ್ ಮೈದಾನದಲ್ಲಿ ರಾಜಕೀಯ ಸಮಾವೇಶಗಳು ಸೇರಿದಂತೆ ವಿವಿಧ ರೀತಿಯ ಬೃಹತ್ ಕಾರ್ಯಕ್ರಮಗಳು ನಡೆಯುವಾಗ ಕಲರ್‌ಫುಲ್ ಟ್ಯೂಬ್ ಪಾಪಡ್, (ಬಣ್ಣದ ನಳಿಕೆ ರೀತಿಯ ಹಪ್ಪಳ), ಲೋಝೆಂಜ್‌ಗಳು (ಮಾತ್ರೆ ರೀತಿಯ ಬಣ್ಣ ತಿಂಡಿಗಳು), ಕಾಟನ್ ಕ್ಯಾಂಡಿ, ಸ್ಕಿನ್ನಿ ಐಸ್‌ಕ್ರೀಮ್ ಸ್ಟಿಕ್‌ಗಳು ಇತ್ಯಾದಿ ಸಣ್ಣಪುಟ್ಟ ತಿಂಡಿ-ತಿನಿಸುಗಳನ್ನು ಮಾರಿ ಜೀವನ ನಡೆಸುವ ನೂರಾರು ಮಂದಿಯಿದ್ದಾರೆ.

ಅಂತಹ ಮಾರಾಟಗಾರರಲ್ಲಿ ಹಲ್ಲೆಗೊಳಗಾದ ಶೇಖ್ ರಿಯಾಝುಲ್ ಕೂಡ ಒಬ್ಬರು. ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ಅರಂಬಾಗ್ ನಿವಾಸಿಯಾದ ಇವರು, ಸುಮಾರು ಇಪ್ಪತ್ತು ವರ್ಷಗಳಿಂದ ಕೋಲ್ಕತ್ತಾದಲ್ಲಿ ಪಫ್ಸ್ ಮಾರಾಟ ಮಾಡುತ್ತಿದ್ದಾರೆ ಎಂದು ದಿ ವೈರ್ ವರದಿ ಹೇಳಿದೆ.

ಭಾನುವಾರದ ಭಗವದ್ಗೀತೆ ಕಾರ್ಯಕ್ರಮದಲ್ಲಿ ಜನಸ್ತೋಮದ ನಡುವೆ ರಿಯಾಝುಲ್ ಅವರು ವೆಜ್ ಮತ್ತು ಚಿಕನ್ ಎರಡೂ ರೀತಿಯ ಪಫ್ಸ್‌ಗಳನ್ನು ಬಾಕ್ಸ್‌ವೊಂದರಲ್ಲಿ ಹಾಕಿಕೊಂಡು ಮಾರಾಟ ಮಾಡುತ್ತಿದ್ದರು.

ಈ ವೇಳೆ, ಕೆಲವರು ನಿಮ್ಮ ಬಾಕ್ಸ್‌ನಲ್ಲಿ ಚಿಕನ್ ಪಫ್ಸ್ ಇದೆಯಾ? ಎಂದು ರಿಯಾಝುಲ್ ಅವರಿಗೆ ಕೇಳಿದ್ದಾರೆ. ರಿಯಾಝುಲ್ ಇದೆ ಎಂದಾಗ ಅವರು ಥಳಿಸಲು ಶುರು ಮಾಡಿದ್ದಾರೆ. ರಿಯಾಝುಲ್ ಅವರ ಹೆಸರು ಗೊತ್ತಾದ ಮೇಲೆ ಇನ್ನಷ್ಟು ತೀವ್ರವಾಗಿ ಥಳಿಸಿದ್ದಾರೆ. ಅಲ್ಲದೆ, ಬಸ್ಕಿ ಹೊಡೆಸಿದ್ದಾರೆ ಎಂದು ದಿ ವೈರ್ ವರದಿ ವಿವರಿಸಿದೆ.

“ಅವರು ನನ್ನಲ್ಲಿದ್ದ 3 ಸಾವಿರ ರೂಪಾಯಿ ವಸ್ತುವನ್ನು ಹಾಳುಗಡೆವಿದರು. ಆ ಮೊತ್ತ ನನ್ನ ಒಂದು ವಾರದ ಆದಾಯಕ್ಕಿಂತ ಹೆಚ್ಚು” ಎಂದು ರಿಯಾಝುಲ್ ಹೇಳಿರುವುದಾಗಿ ವರದಿ ಉಲ್ಲೇಖಿಸಿದೆ.

ರಿಯಾಝುಲ್ ಪ್ರತಿದಿನ ಕೋಲ್ಕತ್ತಾದ ಮಧ್ಯಭಾಗದಲ್ಲಿರುವ ಬೇಕರಿಯೊಂದರಿಂದ ವೋಲ್‌ಸೇಲ್ ದರದಲ್ಲಿ ಪಫ್ಸ್ ಖರೀದಿಸಿ, ನಗರದ ವಿವಿಧ ಭಾಗಗಳಲ್ಲಿ ನಡೆದುಕೊಂಡು ಹೋಗಿ ಅವುಗಳನ್ನು ಮಾರಾಟ ಮಾಡುತ್ತಿದ್ದರು. ಬ್ರಿಗೇಡ್ ಪೆರೇಡ್ ಮೈದಾನದಲ್ಲಿ ಫುಟ್ಬಾಲ್ ಪಂದ್ಯಗಳು ಅಥವಾ ದೊಡ್ಡ ರಾಜಕೀಯ ಸಮಾವೇಶಗಳು ಇದ್ದರೆ, ಅಲ್ಲಿಯೇ ವ್ಯಾಪಾರ ಮಾಡಿ ದಿನವೊಂದಕ್ಕೆ 500 ರಿಂದ 1,000 ರೂ.ಗಳವರೆಗೆ ಗಳಿಸುತ್ತಿದ್ದರು. ಸಾಮಾನ್ಯ ದಿನಗಳಲ್ಲಿ, ಅವರ ಆದಾಯ 200-300 ರೂ. ಇತ್ತು. ತಲಾ 30-35 ರೂ. ಬೆಲೆಗೆ ಪಫ್ಸ್ ಮಾರುತ್ತಿದ್ದರು. ಕೆಲಸ ನಿಮಿತ್ತ ನಗರದ ಖಿದ್ದರ್ಪೋರ್‌ನಲ್ಲಿ ವಾಸಿಸುತ್ತಿದ್ದರು.

ರಿಯಾಝುಲ್ ಈ ಪಫ್ಸ್ ಮಾರಿಯೇ ಜೀವನದ ಬಂಡಿ ಓಡಿಸುತ್ತಿದ್ದರು. ಅವರಿಗೆ ಪತ್ನಿ ಮತ್ತು ಇಬ್ಬರು ಗಂಡು ಮಕ್ಕಳಿದ್ದಾರೆ. ಹಿರಿಯ ಮಗ ಹೈದರಾಬಾದ್‌ನಲ್ಲಿ ಆಭರಣ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದರೆ, ಕಿರಿಯ ಮಗ ವರ್ಕ್‌ಶಾಪ್‌ ಒಂದರಲ್ಲಿ ಅಪ್ರೆಂಟಿಸ್ ಆಗಿದ್ದಾನೆ.

ಹಲ್ಲೆಯ ವಿಡಿಯೋ ಬಹಿರಂಗವಾದಾಗಿನಿಂದ ನನ್ನ ಕುಟುಂಬ ಭಯದಿಂದ ಬದುಕುತ್ತಿದೆ ಎಂದು ರಿಯಾಝುಲ್ ಹೇಳಿಕೊಂಡಿದ್ದಾರೆ. “ನನಗೆ ಏನಾಯಿತು ಎಂದು ನನ್ನ ಮನೆಯವರು ಅಳುತ್ತಿದ್ದಾರೆ. ಅವರು ಭಯಭೀತರಾಗಿದ್ದಾರೆ. ನಾನು ಕಡು ಬಡವ. ಈಗ ನನಗೆ ನನ್ನ ಕುಟುಂಬದ ಭವಿಷ್ಯದ ಚಿಂತೆಯಾಗಿದೆ. ನಾನು ಯಾರನ್ನೂ ಮಾಂಸಹಾರ ಖರೀದಿಸಲು ಒತ್ತಾಯಿಸಿಲ್ಲ. ಆದರೂ, ಅವರು ನನಗೆ ಏಕೆ ಹೊಡೆದರು ಎಂದು ಗೊತ್ತಿಲ್ಲ” ಎಂದಿದ್ದಾರೆ.

ರಿಯಾಝುಲ್ ಮೇಲೆ ಹಲ್ಲೆ ನಡೆದಿರುವುದು ಒಂದು ಘಟನೆ ಮಾತ್ರವಲ್ಲ. ಟೋಪ್ಸಿಯಾ ಮೂಲದ ಶೇಖ್ ಸಲಾವುದ್ದೀನ್ ಎಂಬ ಮಾರಾಟಗಾರ ಸೇರಿದಂತೆ ಕನಿಷ್ಠ ಇಬ್ಬರು ಇತರ ಪಫ್ಸ್ ಮಾರಾಟಗಾರರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ವರದಿಯಾಗಿದೆ.

“ಅವತ್ತು ನನ್ನ ಮೇಲೆಯೂ ಹಲ್ಲೆ ನಡೆಯುತ್ತಿತ್ತು. ಆದರೆ, ನಾನು ಆಗಲೇ ಮನೆಗೆ ಹೋದ ಕಾರಣ ಸ್ವಲ್ಪದರಲ್ಲಿ ಪಾರಾದೆ. ನಮ್ಮಲ್ಲಿ ಸುಮಾರು 15ರಿಂದ 20 ಜನರು ಪಫ್ಸ್ ಮಾರುತ್ತಾರೆ. ದುರ್ಗಾ ಪೂಜೆಯಿಂದ ಹಿಡಿದು ವಿವಿಧ ಪಂದ್ಯಾಟಗಳವರೆಗೆ ವಿವಿಧ ಕಾರ್ಯಕ್ರಮಗಳಲ್ಲಿ ಹಲವು ವರ್ಷಗಳಿಂದ ನಾವು ಪಫ್ಸ್ ಮಾರಿದ್ದೇವೆ. ಎಂದಿಗೂ ಇಂತಹ ಅನುಭ ಆಗಿಲ್ಲ ಎಂದು ರಿಯಾಝುಲ್ ಅವರ ಸ್ನೇಹಿತ ಹಾಗೂ ಪಫ್ಸ್ ಮಾರಾಟಗಾರ ಶೇಖ್ ಮೊಯ್ದುಲ್ ಇಸ್ಲಾಂ ಹೇಳಿರುವುದಾಗಿ ದಿ ವೈರ್‌ ತಿಳಿಸಿದೆ.

ರಿಯಾಝುಲ್ ಮೇಲೆ ಹಲ್ಲೆ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕಿಸ್ಟ್) (ಸಿಪಿಐ(ಎಂ)) ನಾಯಕ ಮತ್ತು ವಕೀಲ ಸಯಾನ್ ಬಂಡೋಪಾಧ್ಯಾಯ ಅವರು ಕಲ್ಕತ್ತಾ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸುಜಯ್ ಪಾಲ್ ಅವರಿಗೆ ಪತ್ರ ಬರೆದು, ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳ ಅನುಸಾರ ಇದು ಗುಂಪು ಹತ್ಯೆಗೆ ಸಮಾನವಾದ ಪ್ರಕರಣ ಎಂದಿದ್ದಾರೆ. ನ್ಯಾಯಾಲಯ ಸ್ವಯಂ ಪ್ರೇರಿತ ಪ್ರಕರಣ ಕೈಗೆತ್ತಿಕೊಳ್ಳಲು ಮನವಿ ಮಾಡಿದ್ದಾರೆ.

ಬಂಡೋಪಾಧ್ಯಾಯ ಅವರು ಸೋಮವಾರ (ಡಿಸೆಂಬರ್ 8) ಮಧ್ಯಾಹ್ನ ಕೋಲ್ಕತ್ತಾದ ಮೈದಾನ್ ಪೊಲೀಸ್ ಠಾಣೆಗೆ ಭೇಟಿ ನೀಡಿ ನೇರವಾಗಿ ಘಟನೆ ಸಂಬಂಧ ದೂರು ದಾಖಲಿಸಿದ್ದಾರೆ. ದೂರಿನ ಜೊತೆಗೆ ಹೈಕೋರ್ಟ್ ನ್ಯಾಯಾಧೀಶರಿಗೆ ಬರೆದ ಪತ್ರದ ಪ್ರತಿಯನ್ನೂ ಸಲ್ಲಿಸಿದ್ದಾರೆ.

ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳ ಪ್ರಕಾರ, ಗುಂಪು ಹಲ್ಲೆ ಕೂಡ ‘ಗುಂಪು ಹತ್ಯೆ’ಯ ವ್ಯಾಪ್ತಿಗೆ ಬರುತ್ತದೆ. ಈ ಘಟನೆ ಕೋಲ್ಕತ್ತಾದ ಹೃದಯ ಭಾಗದಲ್ಲಿ ನಡೆದಿದೆ, ದೂರದ ಜಿಲ್ಲೆಯಲ್ಲಿ ಅಲ್ಲ. ಇಂತಹ ಘಟನೆ ನಗರದ ಮಧ್ಯಭಾಗದಲ್ಲಿ ನಡೆದಿದ್ದರೂ ಕೋಲ್ಕತ್ತಾ ಪೊಲೀಸರು ಮೌನವಾಗಿದ್ದಾರೆ. ಅವರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕಿತ್ತು ಎಂದು ಬಂಡೋಪಾಧ್ಯಾಯ ಹೇಳಿದ್ದರು.

ಪ್ರಮುಖ ಆರೋಪಿ ಉತ್ತರ 24 ಪರಗಣ ಜಿಲ್ಲೆಯ ಬಿಜೆಪಿ ಪದಾಧಿಕಾರಿ ಎಂದು ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳಿಕೊಂಡಿದ್ದಾರೆ. ಆದರೆ, ಈ ಬಗ್ಗೆ ಪೊಲೀಸರು ಖಚಿತಪಡಿಸಿಲ್ಲ.

ಸಿಪಿಐ(ಎಂ) ನಾಯಕಿ ದೀಪ್ಸಿತಾ ಧರ್ ರಿಯಾಝುಲ್ ಮೇಲಿನ ದಾಳಿಯ ವಿರುದ್ಧ ಮೊದಲು ಧ್ವನಿ ಎತ್ತಿದವರು. ಇವರು ಸಂತ್ರಸ್ತ ವ್ಯಾಪಾರಿಗಳಿಗೆ ಪರಿಹಾರ ನೀಡಲು ನಿಧಿಸಂಗ್ರಹ ಅಭಿಯಾನ ಪ್ರಾರಂಭಿಸಿದ್ದಾರೆ.

ಮಾಂಸಹಾರ ಸಾಮಾನ್ಯವಾಗಿರುವ ಬಂಗಾಳದಂತಹ ಸ್ಥಳದಲ್ಲಿ ಮಾಂಸಹಾರ ಮಾರಾಟದ ಹೆಸರಿನಲ್ಲಿ ಹಲ್ಲೆ ನಡೆದಿರುವುದು ಆಶ್ಚರ್ಯಕರ. ವೈರಲ್ ವಿಡಿಯೋದಲ್ಲಿ ಹಲ್ಲೆಕೋರರು ಸ್ಪಷ್ಟವಾಗಿ ಗೋಚರಿಸುತ್ತಿದ್ದರೂ ಪೊಲೀಸರು ಯಾರನ್ನೂ ಬಂಧಿಸಿಲ್ಲ ಏಕೆ? ಚುನಾವಣಾ ಲಾಭಕ್ಕಾಗಿ ಈ ದ್ವೇಷ ಸಂಸ್ಕೃತಿಯನ್ನು ಪ್ರೋತ್ಸಾಹಿಸಲಾಗುತ್ತಿದೆಯೇ ಎಂದು ನಾನು ಬಿಜೆಪಿ ಮತ್ತು ಟಿಎಂಸಿ ಎರಡನ್ನೂ ಪ್ರಶ್ನಿಸಲು ಬಯಸುತ್ತೇವೆ ಎಂದು ದೀಪ್ಸಿತಾ ಧರ್ ಹೇಳಿದ್ದರು.

“ನೀವು ಮಾಂಸಾಹಾರ ತಿನ್ನದಿದ್ದರೆ ಖರೀದಿಸಬೇಡಿ, ಆದರೆ ಮಾರಾಟಗಾರನಿಗೆ ಥಳಿಸಿದ್ದು ಏಕೆ? ಅದು ಅವರ ಜೀವನೋಪಾಯ. ನಾನು ಈ ಘಟನೆಯನ್ನು ಖಂಡಿಸುತ್ತೇನೆ” ಎಂದು ಟಿಎಂಸಿ ವಕ್ತಾರ ಕುನಾಲ್ ಘೋಷ್ ಬರೆದುಕೊಂಡಿದ್ದರು.

Courtesy : thewire.in

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ್ಯಾಲೆಸ್ತೀನಿಯನ್ ಬಂಧಿತನ ಮೇಲೆ ಲೈಂಗಿಕ ದೌರ್ಜನ್ಯ; ಇಸ್ರೇಲ್ ಸೈನಿಕರ ವಿರುದ್ಧದ ಆರೋಪ ಕೈಬಿಟ್ಟ ಸೇನೆ

ಕ್ಯಾಮೆರಾದಲ್ಲಿ ಭಾಗಶಃ ಸೆರೆಹಿಡಿಯಲಾದ ಹಲ್ಲೆಯಲ್ಲಿ, ಬಂಧಿತ ಪ್ಯಾಲೆಸ್ತೀನಿಯನ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹೊತ್ತಿರುವ ಐದು ಸೈನಿಕರ ವಿರುದ್ಧದ ಆರೋಪಗಳನ್ನು ಕೈಬಿಡುತ್ತಿರುವುದಾಗಿ ಇಸ್ರೇಲ್ ಸೇನೆ (ಮಾರ್ಚ್ 12) ತಿಳಿಸಿದೆ. ಈ ಘೋಷಣೆಯನ್ನು ಪ್ರಧಾನಿ...

‘ಇರಾನ್ ಸರ್ವೋಚ್ಚ ನಾಯಕ ಜೀವಂತವಾಗಿರಬಹುದು, ಆದರೆ ಗಂಭೀರವಾಗಿ ಗಾಯಗೊಂಡಿದ್ದಾರೆ’: ಡೊನಾಲ್ಡ್ ಟ್ರಂಪ್

ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಮೊಜ್ತಬಾ ಖಮೇನಿ(56) "ಬಹುಶಃ ಜೀವಂತವಾಗಿದ್ದಾರೆ ಆದರೆ ಗಂಭೀರವಾಗಿ ಗಾಯಗೊಂಡಿದ್ದಾರೆ" ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಶುಕ್ರವಾರ ಪ್ರಸಾರವಾದ ಫಾಕ್ಸ್ ನ್ಯೂಸ್ ರೇಡಿಯೋದ ಬ್ರಿಯಾನ್ ಕಿಲ್ಮೀಡ್ ಅವರ...

ಬಾಗಲಕೋಟೆ| ಜನರ ಮೇಲೆ ಕಲ್ಲು ಎಸೆದ ಆರೋಪ; ಸಾವಳಗಿಯಲ್ಲಿ ದಲಿತ ಯುವಕನನ್ನು ಕೊಂದ ಗುಂಪು

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಸಾವಳಗಿ ಗ್ರಾಮದಲ್ಲಿ ದಲಿತ ದೌರ್ಜನ್ಯದ ಆಘಾತಕಾರಿ ಘಟನೆಯೊಂದು ನಡೆದಿದೆ. ಶಾಲಾ ಕಾರ್ಯಕ್ರಮವೊಂದರಲ್ಲಿ ಜನರ ಮಲೆ ಸಣ್ಣ ಕಲ್ಲು ಎಸೆದ ಎಂಬ ಆರೋಪದ ಮೇಲೆ ದಲಿತ ಯುವಕನನ್ನು ಕ್ರೂರವಾಗಿ...

ಒಳಮೀಸಲಾತಿ ಇಲ್ಲದೆ 56 ಸಾವಿರ ಹುದ್ದೆಗಳ ನೇಮಕಾತಿ ಇಲ್ಲ: ಸಚಿವ ಮುನಿಯಪ್ಪ

“ಒಳಮೀಸಲಾತಿ ಇಲ್ಲದೆ ಒಂದೇ ಒಂದು ಹುದ್ದೆಯನ್ನೂ ನೇಮಕ ಮಾಡಲು ಬಿಡುವುದಿಲ್ಲ, ಮುಖ್ಯಮಂತ್ರಿಗಳು ಈ ಬಗ್ಗೆ ಒಪ್ಪಿಕೊಂಡಿದ್ದಾರೆ. 27ರಂದು ನಡೆಯುವ ಸಚಿವ ಸಂಪುಟ ಸಭೆ ನಮಗೆ ಚಾರಿತ್ರಿಕವಾಗಲಿದೆ. ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇರಲಿ” ಎಂದು...

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...

‘ಒಳಮೀಸಲಾತಿ ಜಾರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುತ್ತಿಲ್ಲ’: ಮಂದಕೃಷ್ಣ ಮಾದಿಗ ಆರೋಪ

‘ಒಳಮೀಸಲಾತಿ ಜಾರಿಗೆ ತರುತ್ತೇವೆಂದು ಹೇಳಿದ್ದ ಕಾಂಗ್ರೆಸ್, ಈಗ ಒಳಮೀಸಲಾತಿ ಅನುಷ್ಠಾನದಲ್ಲಿ ಮೀನಾಮೇಷ ಎಣಿಸುತ್ತಿದೆ. ಕಾಂಗ್ರೆಸ್ ನ ಹೈಕಮಾಂಡ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ. ಈ ಮೂವರನ್ನು ನಿಯಂತ್ರಿಸುವವರು ಕಾಂಗ್ರೆಸ್...

ಸಾವರ್ಕರ್ ಕುರಿತು ಹೇಳಿಕೆ : ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದು

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ (2022ರಲ್ಲಿ) ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಕುರಿತು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು...

‘ಒಳಮೀಸಲಾತಿ ಜಾರಿಯಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದರೆ ಹೋರಾಟ ವಿಧಾನಸೌಧಕ್ಕೆ ಸ್ಥಳಾಂತರವಾಗುತ್ತದೆ’: ಮಾದರ ಚೆನ್ನಯ್ಯ ಸ್ವಾಮೀಜಿ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು ಬಿಟ್ಟು ಒಳಮೀಸಲಾತಿ ಹೋರಾಟವನ್ನು ಅಂತಿಮ ಘಟ್ಟಕ್ಕೆ ತಂದಿದ್ದಾರೆ. ಅನೇಕರು ಬದುಕನ್ನು ಮಾತ್ರವಲ್ಲ, ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇದು 2ನೇ ಸ್ವಾತಂತ್ರ್ಯ ಹೋರಾಟವಾಗಿದೆ....

ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವೆಳ್ಳಾಪ್ಪಳ್ಳಿ ನಟೇಶನ್ ಅನರ್ಹ

ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್‌ಎನ್‌ಡಿಪಿ ಯೋಗಂ) ನ ಪ್ರಧಾನ ಕಾರ್ಯದರ್ಶಿ ಮತ್ತು ಮತ್ತು ಎಸ್‌ಎನ್ ಟ್ರಸ್ಟ್‌ನ ಕಾರ್ಯದರ್ಶಿ ಸ್ಥಾನದಿಂದ ವೆಳ್ಳಾಪ್ಪಳ್ಳಿ ನಟೇಶನ್ ಅವರನ್ನು ಕೇರಳ ಹೈಕೋರ್ಟ್ ಗುರುವಾರ (ಮಾ.12) ಅನರ್ಹಗೊಳಿಸಿದ್ದು,...