ಕಾಂಗ್ರೆಸ್ ಅಧಿಕಾರವಧಿಯಲ್ಲಿ ಕಟ್ಟಿದ ಸಂಸ್ಥೆಗಳಿಗೆ, ಜಾರಿಗೊಳಿಸಿದ ಯೋಜನೆಗಳಿಗೆ, ಐತಿಹಾಸಿಕ ಸ್ಥಳಗಳಿಗೆ ಮರುನಾಮಕರಣ ಮಾಡಿ ಸಂಘ ಪರಿವಾರದ ಸಿದ್ಧಾಂತಗಳನ್ನು ಮುನ್ನೆಲೆಗೆ ತರುವ ರಾಜಕಾರಣವನ್ನು ಬಿಜೆಪಿ ಮೊದಲಿನಿಂದಲೂ ಮಾಡುತ್ತಾ ಬಂದಿದೆ. ಅದರ ಮುಂದುವರಿದ ಭಾಗವಾಗಿ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಹೊಸ ಪ್ರಸ್ತಾಪವನ್ನು ಈಗ ಹಂಚಿಕೊಂಡಿದ್ದಾರೆ.
ಇಂದಿರಾ ಕ್ಯಾಂಟೀನ್ ಹೆಸರು ಬದಲಿಸಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಆಗಾಗ್ಗೆ ಹೇಳುವುದನ್ನು ನಾಡಿನ ಜನತೆ ಕಟುವಾಗಿ ಟೀಕಿಸಿದ್ದಾರೆ. ಈಗ ಶೋಭಾ ಕರಂದ್ಲಾಜೆ ಅವರು, ಹೆಸರು ಬದಲಾವಣೆಯ ರಾಜಕಾರಣದ ಭಾಗವಾಗಿ, “ಶೃಂಗೇರಿಯ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯಕ್ಕೆ ರಾಜೀವ್ ಗಾಂಧಿ ಹೆಸರನ್ನು ಬದಲಾಯಿಸಿ ಶಂಕರಾಚಾರ್ಯರ ಹೆಸರು ನಾಮಕರಣ ಮಾಡುವುದು ಸೂಕ್ತ” ಎಂದಿದ್ದಾರೆ.
ಅಂಕೋಲಾ ತಾಲ್ಲೂಕಿನ ಕೈಗಡಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿರುವ ಅವರು, ‘ವಿಶ್ವವಿದ್ಯಾಲಯದ ಹೆಸರು ಬದಲಿಸಬೇಕು ಎಂಬ ಬೇಡಿಕೆಯಿದೆ. ಈ ಬಗ್ಗೆ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಿದರೆ ಪರಿಶೀಲಿಸಲು ಕೇಂದ್ರದ ಸಂಸ್ಕೃತಿ ಖಾತೆ ಸಚಿವರಿಗೆ ಒತ್ತಡ ತರುತ್ತೇನೆ’ ಎಂದು ತಿಳಿಸಿದ್ದಾರೆ.
ಈ ಹಿಂದೆ ಮೊಟೆರಾ ಸ್ಟೇಡಿಯಂಗೆ ನರೇಂದ್ರಮೋದಿ ಸ್ಟೇಡಿಯಂ ಎಂದು ಮರುನಾಮಕರಣ ಮಾಡಲಾಗಿತ್ತು. ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಎಂದು ಬದಲಾಯಿಸಲಾಯಿತು.
ಉತ್ತರ ಪ್ರದೇಶದಲ್ಲಿ ಆಗಾಗ್ಗೆ ಹೆಸರು ಬದಲಾವಣೆ ನಡೆಯುತ್ತಲೇ ಇರುತ್ತದೆ. ಅಲಹಾಬಾದ್ಗೆ ಪ್ರಯಾಗ್ ರಾಜ್ ಎನ್ನಲಾಗಿದೆ. ಐತಿಹಾಸಿಕ ಮುಘಲ್ಸರೈ ರೈಲ್ವೆ ನಿಲ್ದಾಣಕ್ಕೆ ಆರ್ಎಸ್ಎಸ್ನ ಐಕಾನ್ ದೀನ್ದಯಾಳ್ ಉಪಾಧ್ಯಾಯ ಅವರ ಹೆಸರನ್ನು ಇಡಲಾಗಿದೆ. ಫೈಜಾಬಾದ್ಗೆ ಅಯೋಧ್ಯೆ ಎಂದು ಕರೆಯಲಾಗಿದೆ.
ದೆಹಲಿಯಲ್ಲಿನ ಔರಂಗ್ ಜೇಬ್ ರಸ್ತೆಗೆ ಎಪಿಜೆ ಅಬ್ದುಲ್ ಕಲಾಂ ಹೆಸರನ್ನು ಇಡಲಾಗಿತ್ತು. 2014ಕ್ಕೆ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ಹೆಸರು ಬದಲಾವಣೆಯ ರಾಜಕಾರಣ ಹೆಚ್ಚಾಗುತ್ತಲೇ ಇದೆ.
ಇದನ್ನೂ ಓದಿ: ಇಂದಿರಾ ಕ್ಯಾಂಟೀನ್: ಜನಪರ ಯೋಜನೆಗಳನ್ನು ಜಾರಿ ಮಾಡುವುದು ಮುಖ್ಯವೇ, ಹೆಸರು ಬದಲಾವಣೆ ಮುಖ್ಯವೇ?