Homeಕರ್ನಾಟಕಉಪ್ಪಿನಂಗಡಿ ಅಶಾಂತಿ ಪ್ರಕರಣಕ್ಕೆ ಪಿಎಫ್‌ಐ, ಸಂಘ ಪರಿವಾರ, ಪೊಲೀಸರು ಸಮಾನ ಹೊಣೆಗಾರರು- ಸಿಪಿಐ(ಎಂ)

ಉಪ್ಪಿನಂಗಡಿ ಅಶಾಂತಿ ಪ್ರಕರಣಕ್ಕೆ ಪಿಎಫ್‌ಐ, ಸಂಘ ಪರಿವಾರ, ಪೊಲೀಸರು ಸಮಾನ ಹೊಣೆಗಾರರು- ಸಿಪಿಐ(ಎಂ)

"ಉಭಯ ಕೋಮುಗಳ ಪ್ರತಿಭಟನೆಯಲ್ಲಿ ಭಜನೆ ಹಾಗೂ ನಮಾಜಿಗೆ ಅವಕಾಶ ನೀಡುತ್ತಿರುವುದು ಪೊಲೀಸ್ ಇಲಾಖೆಯ ದೌರ್ಬಲ್ಯ"

- Advertisement -
- Advertisement -

ಉಪ್ಪಿನಂಗಡಿ ಪೊಲೀಸ್ ಠಾಣೆಯ ಎದುರು ಸಂಭವಿಸಿದ ಲಾಠಿಚಾರ್ಜ್, ಅಶಾಂತಿಯ ಪ್ರಕರಣಗಳು ಜಿಲ್ಲೆಯಲ್ಲಿ ಕಳೆದ 4 ತಿಂಗಳಿನಿಂದ ಸಂಘ ಪರಿವಾರ ಮತ್ತು ಪಿಎಫ್‌ಐ ಸಂಘಟನೆಗಳು ಸಂಯೋಜಿಸಿ ನಿರ್ದೇಶಿಸುತ್ತಿರುವ ಮತೀಯ ಹುನ್ನಾರ, ಕೋಮು ಗಲಭೆಗೆ ವೇದಿಕೆ ನಿರ್ಮಿಸುವ ಪೂರ್ವ ಯೋಜಿತ ಕೃತ್ಯಗಳ ಮುಂದುವರಿದ ಭಾಗವೇ ಆಗಿವೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಸಿ.ಪಿ.ಐ(ಎಂ) ಸಮಿತಿ ಕಾರ್ಯದರ್ಶಿ ಕೆ.ಯಾದವ ಶೆಟ್ಟಿ ಹೇಳಿದ್ದಾರೆ.

ಪತ್ರಿಕೆ ಹೇಳಿಕೆ ನೀಡಿರುವ ಅವರು, ವಿದ್ಯಾರ್ಥಿಗಳ ಮೇಲೆ ಹಲ್ಲೆ, ಭಿನ್ನ ಧರ್ಮಿಯ ಸಹಭೋಜನ ಮತ್ತು ಸಹಕೂಟಗಳ ಮೇಲೆ ಗುಂಪು ಹಲ್ಲೆ, ಪರಸ್ಪರ ವ್ಯಾಪಾರ-ವ್ಯವಹಾರಗಳ ಮೇಲೆ ದಾಂಧಲೆ, ಲವ್ ಜಿಹಾದ್ ಕಟ್ಟುಕತೆಗಳು, ದನ ಕಳ್ಳತನ ಮತ್ತು ನಾಗಬನ ಧ್ವಂಸದ ಪ್ರಕರಣ ಹಾಗೂ ಪೂಜಾ ಸ್ಥಳಗಳ ಅಪವಿತ್ರ ಇವೇ ಮೊದಲಾದ ಸಮಾಜ ಬಾಹಿರ ಕೃತ್ಯಗಳು ಒಂದಾದ ಮೇಲೆ ಒಂದರಂತೆ ಜಿಲ್ಲೆಯಲ್ಲಿ ಕಳೆದ 4 ತಿಂಗಳಿನಿಂದ ನಿರಂತರವಾಗಿ ನಡೆಯುತ್ತಿವೆ. ಇವುಗಳ ಹಿಂದೆ ಸಂಘ ಪರಿವಾರದ ಸಂಘಟನೆಗಳ ಸಿದ್ಧಾಂತ ಮತ್ತು ಕಾರ್ಯಕರ್ತರು ಭಾಗಿಯಾಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಅದೇ ರೀತಿ ಅದಕ್ಕೆ ಪ್ರತಿಯಾಗಿ ಪಿ.ಎಫ್.ಐ.ನ ಸಿದ್ಧಾಂತದಿಂದ ಪ್ರಭಾವಿತರಾದ ಕಾರ್ಯಕರ್ತರು ಕ್ರಿಯೆಗೆ ಪ್ರತಿಕ್ರಿಯೆ ಎಂಬ ನೆಲೆಯಲ್ಲಿ ಸಕ್ರಿಯವಾಗಿ ಸಮಾಜ ಬಾಹಯ, ಶಾಂತಿ ಭಂಗದ ಕೃತ್ಯಗಳಲ್ಲಿ ಭಾಗವಹಿಸಿ ಕಾನೂನನ್ನು ಕೈಗೆತ್ತಿಕೊಂಡಿರುತ್ತಾರೆ. ಇಂತಹ ಸಂದರ್ಭಗಳಲ್ಲಿ ನೆಲದ ಕಾನೂನನ್ನು ಎತ್ತಿ ಹಿಡಿದು ಕಾನೂನಿನನ್ವಯ ಕಾರ್ಯ ಪ್ರವೃತ್ತರಾಗಿ ಸಮಾಜದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡಬೇಕಾದ ಪೊಲೀಸರು ಮತ್ತೆ ಇದೇ ಸಂಘಟನೆಗಳ ನಾಯಕರೊಂದಿಗೆ ಒಪ್ಪಂದ ನಡೆಸಿ ಲೋಪವೆಸಗಿದ್ದಾರೆ ಎಂದು ಯಾದವ್‌ ದೂರಿದ್ದಾರೆ.

ಅಪರಾಧಿಗಳನ್ನು ಹಸ್ತಾಂತರ ಮತ್ತು ಕೆಲವು ಘಟನೆಗಳಲ್ಲಿ ಅಪರಾಧಿಗಳ ಅದಲು ಬದಲಿನಂತಹ ಪರಸ್ಪರ ಸಂಯೋಜನೆಯನ್ನು ರೂಪಿಸುವ ಮೂಲಕ ಸಂಘ ಪರಿವಾರ ಹಾಗೂ ಪಿಎಫ್‌ಐನಂತಹ ಸಮಾಜಬಾಹಿರ ಸಂಘಟನೆಗಳಿಗೆ ಪೊಲೀಸರು ಕುಮ್ಮಕ್ಕು ನೀಡಿರುವುದನ್ನು ಕಾಣಬಹುದು. ಆದುದರಿಂದ ಉಪ್ಪಿನಂಗಡಿಯಲ್ಲಿ ನಡೆದ ಅಹಿತಕರ ಘಟನೆಗಳು ಈ ಎರಡು ಸಮಾಜ ಬಾಹಿರ ಕೃತ್ಯಗಳ ವಾರೀಸುದಾರ ಸಂಘಟನೆಗಳೊಂದಿಗೆ ಪೊಲೀಸ್ ಇಲಾಖೆಯೂ ಹೊಣೆಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿರಿ: ದಕ್ಷಿಣ ಕನ್ನಡ: ಯುವಕರ ಮೇಲೆ ತಲವಾರ್‌‌ ದಾಳಿ; ಐವರಿಗೆ ಗಾಯ

ಸಂಘ ಪರಿವಾರ ಹಾಗೂ ಪಿಎಫ್‌ಐ ಸಂಘಟನೆಗಳು ಇತ್ತೀಚಿನ ಪೊಲೀಸ್ ಠಾಣೆಗಳ ಮುಂಭಾಗದ ಪ್ರತಿಭಟನೆಯಲ್ಲಿ ಭಜನೆ, ನಮಾಜಿನಂತಹ ಪವಿತ್ರ ಧಾರ್ಮಿಕ ಆಚರಣೆಗಳನ್ನು ಬಳಕೆ ಮಾಡಿರುವುದು ಸಮಾಜದಲ್ಲಿ ಮತೀಯ ದ್ರುವೀಕರಣ ಮತ್ತಷ್ಟು ಆಳಗೊಳಿಸುವ ವ್ಯವಸ್ಥಿತ ಹುನ್ನಾರವಾಗಿದೆ. ಇಂತಹ ಅಪಾಯಕಾರಿ ಬೆಳವಣಿಗೆಗಳನ್ನು ಜನತೆ ಒಕ್ಕೊರಲಿನಿಂದ ವಿರೋಧಿಸಬೇಕಾಗಿದೆ ಎಂದು ಮನವಿ ಮಾಡಿದ್ದಾರೆ.

ದಕ್ಷಿಣ ಜಿಲ್ಲೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಬೂದಿಮುಚ್ಚಿದ ಕೆಂಡದಂತಿರುವ ಕೋಮು ಉದ್ವಿಘ್ನತೆಯ ಸಮಯದಲ್ಲಿ ಕಳೆದ ಎರಡು ತಿಂಗಳ ಹಿಂದೆ ನೀಡಿರುವ ಹೇಳಿಕೆ ಸಮಾಜ ಬಾಹಿರ ಕೃತ್ಯಗಳಲ್ಲಿರುವ ಸಂಘ ಪರಿವಾರದ ಕಾರ್ಯಕರ್ತರನ್ನು ಹುರಿದುಂಬಿಸಿದೆ. ಸಂವಿಧಾನವನ್ನು ಎತ್ತಿ ಹಿಡಿಯಬೇಕಾದ ಮುಖ್ಯಮಂತ್ರಿ, ಉಸ್ತುವಾರಿ ಸಚಿವರು, ಬಿಜೆಪಿ ಪಕ್ಷದ ಸಂಸದರು, ಶಾಸಕರು, ನಾಯಕರು ಪೊಲೀಸ್ ಇಲಾಖೆಯ ಸ್ವತಂತ್ರ ಕಾರ್ಯನಿರ್ವಹಣೆಯ ಮೇಲೆ ಪ್ರಭಾವ ಬೀರಿದ್ದಾರೆ. ಇದರ ಪರಿಣಾಮವಾಗಿ ಜಿಲ್ಲೆಯ ಕೆಲವು ಪೊಲೀಸ್ ಠಾಣೆಗಳಲ್ಲಿ ಆಯುಧ ಪೂಜೆ ಆಚರಣೆಯು ಸಂಘ ಪರಿವಾರದ ಡ್ರೆಸ್ ಕೋಡಿನೊಂದಿಗೆ ನಡೆದಿದೆ. ಇದನ್ನು ಬಲವಾಗಿ ಉನ್ನತ ಪೊಲೀಸರು ಬೆಂಬಲಿಸಿ ಪ್ರತಿಪಾದಿಸಿರುವುದನ್ನು ಈ ಹಿನ್ನೆಲೆಯಲ್ಲಿ ಗಮನಿಸಬೇಕು ಎಂದು ಅವರು ಹೇಳಿದ್ದಾರೆ.

ಅದೇ ರೀತಿ ಇತ್ತೀಚೆಗೆ ಕರಾವಳಿ ಜಿಲ್ಲೆಯ ಪೊಲೀಸ್ ಠಾಣೆಗಳಲ್ಲಿ ಸಂಘ ಪರಿವಾರ ಪ್ರತಿಭಟನೆಯ ಭಾಗವಾಗಿ ಭಜನೆ ಹಾಡುವ ಕ್ರಮವನ್ನು ಪೊಲೀಸರು ತಡೆಯದಿರುವುದು. ಇದೇ ರೀತಿಯಲ್ಲಿ ಉಪ್ಪಿನಂಗಡಿ ಠಾಣೆ ಆವರಣದಲ್ಲಿ ಪ್ರತಿಭಟನಾಕಾರರು ಧಾರ್ಮಿಕ ನಮಾಜನ್ನು ಕೂಡಾ ಮಾಡಲು ಅವಕಾಶ ನೀಡಿರುವುದು ಪೊಲೀಸ್ ಇಲಾಖೆಯ ದೌರ್ಬಲ್ಯವಾಗಿದೆ. ಅಷ್ಟು ಮಾತ್ರವೇ ಅಲ್ಲದೆ ಕೆಲವು ಪೊಲೀಸ್ ಠಾಣೆಗಳಲ್ಲಿ ಗರ್ಭಿಣೆ ಮಹಿಳೆಯರಿಗೆ ಸಂಪ್ರದಾಯದ ಹಿನ್ನೆಲೆಯ ಸೀಮಂತ ಥರದ ಮೊದಲಾದ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಪೊಲೀಸ್ ಇಲಾಖೆ ಕರ್ತವ್ಯದ ಪರಿಧಿಯನ್ನು ದಾಟಿರುವ ಪ್ರಕರಣಗಳು ನಡೆದಿವೆ ಎಂದು ಅವರು ಎಚ್ಚರಿಸಿದ್ದಾರೆ.

ಸಂಘ ಪರಿವಾರದ ಕ್ರಿಯೆ, ಪಿಎಫ್‌ಐನಂತಹ ಸಂಘಟನೆಗಳ ಪ್ರತಿತಂತ್ರ ಮತ್ತು ಪೊಲೀಸರ ಓಲೈಕೆಯ ಅಧಿಕಾರ ತಂತ್ರಗಳು ಜಿಲ್ಲೆಯನ್ನು ಕೋಮು ಉದ್ವಿಘ್ನತೆಯ ಅಗ್ನಿ ಕುಂಡದ ಬಳಿ ತಂದಿರಿಸಿದೆ. ಜಿಲ್ಲೆಯ ಶಾಂತಿ, ಸಾಮರಸ್ಯ, ಸಹಬಾಳ್ವೆ ಮರೀಚಿಕೆಯಾಗಿದೆ. ಕೊರೊನಾ ಸಾಂಕ್ರಾಮಿಕದಿಂದ, ಕೇಂದ್ರ, ರಾಜ್ಯ ಸರಕಾರದ ತಪ್ಪು ಆರ್ಥಿಕ ನೀತಿ, ಕೈಗಾರಿಕಾ ನೀತಿಯಿಂದ; ವ್ಯಾಪಕ ಬಡತನ, ಹಸಿವು, ಬೆಲೆ ಏರಿಕೆ, ನಿರುದ್ಯೋಗದಿಂದ ಜಿಲ್ಲೆಯ ಜನತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಹಿಳೆಯರ ಮೇಲೆ, ಅಪ್ರಾಪ್ತ ಮಕ್ಕಳ ಮೇಲೆ ದೌರ್ಜನ್ಯ, ಅತ್ಯಾಚಾರದ ಘಟನೆಗಳು ಹೆಚ್ಚಾಗುತ್ತಿದೆ. ಇಂತಹ ಜ್ವಲಂತ ಸಮಸ್ಯೆಗಳು ಜನರನ್ನು ಕಾಡುತ್ತಿರುವಾಗ ಸಂಘ ಪರಿವಾರದ ಸಂಘಟನೆಗಳು ಮತ್ತು ಪಿ.ಎಫ್.ಐ. ಜನರನ್ನು ದಾರಿ ತಪ್ಪಿಸಿ ರಾಜಕೀಯ ಲಾಭ ಪಡೆಯಲು ಕೋಮು ದ್ವೇಷದ ವಿಷ ಪ್ರಸರಿಸುತ್ತಿರುವುದು ತೀವ್ರ ಖಂಡನೀಯ ಎಂದಿದ್ದಾರೆ.

ಜಿಲ್ಲೆಯ ಜಾತ್ಯಾತೀತ ಪರಂಪರೆ, ಶಾಂತಿ ಮತ್ತು ಅಭಿವೃದ್ಧಿಗಾಗಿ ಪ್ರಗತಿಪರ ಶಕ್ತಿಗಳೊಂದಿಗೆ ಸೇರಿ ಪರಸ್ಪರ ಶಾಂತಿ ಸೌಹಾರ್ದತೆಗಾಗಿ ಕಾರ್ಯಕ್ರಮ ರೂಪಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.


ಇದನ್ನೂ ಓದಿರಿ: ಉಪ್ಪಿನಂಗಡಿ ಲಾಠಿಚಾರ್ಜ್‌: ಪಾಪ್ಯುಲರ್ ಫ್ರಂಟ್‌‌ ಆಫ್‌ ಇಂಡಿಯಾ ಖಂಡನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...