ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಅಂಬಾರಗೋಡ್ಲು-ಕಳಸವಳ್ಳಿ ನಡುವೆ ಶರಾವತಿ ಹಿನ್ನೀರಿನ ಮೇಲೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಮಿಸಿರುವ 473 ಕೋಟಿ ರೂಪಾಯಿ ವೆಚ್ಚದ ತೂಗುಸೇತುವೆ (ಸಿಗಂದೂರು ಸೇತುವೆ) ಉದ್ಘಾಟನೆ ವಿಚಾರದಲ್ಲಿ ಬಿಜೆಪಿ ಕಾಂಗ್ರೆಸ್ ನಡುವೆ ರಾಜಕೀಯ ಜಟಾಪಟಿ ಏರ್ಪಟ್ಟಿದೆ.
ನೂತನ ಸೇತುವೆಯನ್ನು ಇಂದು (ಜು.14) ಕೇಂದ್ರ ಹೆದ್ದಾರಿ ಹಾಗೂ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಲೋಕಾರ್ಪಾಣೆ ಮಾಡಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಸ್ಥಳೀಯ ಸಂಸದ ಬಿ.ವೈ ರಾಘವೇಂದ್ರ, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮತ್ತು ಶಾಸಕ ಬಿ.ವೈ ವಿಜಯೇಂದ್ರ ಸೇರಿದಂತೆ ಪ್ರಮುಖರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.
ಆದರೆ, ಸೇತುವೆ ಲೋಕಾರ್ಪಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಸ್ಥಳೀಯ ಕಾಂಗ್ರೆಸ್ ಶಾಸಕರು ಸೇರಿದಂತೆ ಕಾಂಗ್ರೆಸ್ ಕಡೆಯ ಪ್ರಮುಖರಿಗೆ ಆಹ್ವಾನ ನೀಡದೆ ಶಿಷ್ಟಾಚಾರ ಉಲ್ಲಂಘಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಇದು ಕಾಂಗ್ರೆಸ್-ಬಿಜೆಪಿ ನಡುವೆ ಜಟಾಪಟಿಗೆ ಕಾರಣವಾಗಿದೆ.
ಸಿಎಂ ಆದಿಯಾಗಿ ಕಾಂಗ್ರೆಸ್ನ ಜನಪ್ರತಿನಿಧಿಗಳನ್ನು ಆಹ್ವಾನಿಸದೆ ಅಗೌರವ ತೋರಲಾಗಿದೆ. ಸೇತುವೆ ಉದ್ಘಾಟನೆ ಬಿಜೆಪಿ ಕಾರ್ಯಕ್ರಮವಾಗಿ ಮಾರ್ಪಟ್ಟಿದೆ. ಕೇಂದ್ರ ಸರ್ಕಾರ ಸೇತುವೆಗೆ ಅನುದಾನ ನೀಡಿದ್ದರೂ, ರಾಜ್ಯ ಸರ್ಕಾರ ಸಹಕಾರ ಕೊಟ್ಟಿಲ್ಲವೇ? ಎಂದು ಸಾಗರದ ಕಾಂಗ್ರೆಸ್ ಶಾಸಕ ಗೋಪಾಲಕೃಷ್ಣ ಬೇಳೂರು ಪ್ರಶ್ನಿಸಿದ್ದಾರೆ.
ಸಿಎಂಗೆ ಶಿಷ್ಟಾಚಾರದಂತೆ ಆಹ್ವಾನಪತ್ರ ನೀಡಿಲ್ಲ. ಸಾಗರ ಕ್ಷೇತ್ರದ ಶಾಸಕನಾದ ನನ್ನನ್ನೇ ಆಹ್ವಾನಿಸಿಲ್ಲ. ಸಿಗಂದೂರು ದೇವಸ್ಥಾನದ ಧರ್ಮದರ್ಶಿ ಎಸ್.ರಾಮಪ್ಪ ಅವರನ್ನೂ ಕರೆಯದೆ ಅಪಮಾನಿಸಲಾಗಿದೆ ಎಂದು ಗೋಪಾಲಕೃಷ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನನ್ನನ್ನು ಆಹ್ವಾನಿಸಿಲ್ಲ: ಮಧು ಬಂಗಾರಪ್ಪ ಗರಂ
ಸೇತುವೆ ಉದ್ಘಾಟನೆಗೆ ನನ್ನನ್ನು ಆಹ್ವಾನಿಸಿಲ್ಲ. ಸಿಎಂಗೂ ಸರಿಯಾಗಿ ಆಹ್ವಾನ ನೀಡಿಲ್ಲ ಎಂದು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಕಿಡಿಕಾರಿದ್ದಾರೆ.
ಮುಖ್ಯಮಂತ್ರಿಗಳನ್ನು ಬಹಳ ಅಗೌರವವಾಗಿ ಕೇಂದ್ರ ಸರ್ಕಾರ ನಡೆಸಿಕೊಂಡಿದೆ. ಅವರಿಗೆ ಸರಿಯಾದ ಆಹ್ವಾನ ನೀಡಿಲ್ಲ. ದುರಹಂಕಾರದಿಂದ ನಾವು ಮಾಡಬೇಕು ಎನ್ನುವುದು ಇದ್ದರೆ ಏನು ಮಾಡುವುದಕ್ಕೆ ಆಗುವುದಿಲ್ಲ. ಅಗೌರವ ತೋರುವುದು ಬಹಳ ತಪ್ಪು ಎಂದಿದ್ದಾರೆ.
ಸಿಗಂದೂರನ್ನೇ ಮುಳುಗಿಸಲಿಕ್ಕೆ ಹೋದವರು, ಈಗ ಸೇತುವೆ ಕಟ್ಟಿ ಉಳಿಸಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಅವರು ಆ ಜಾಗ ಯಾರದ್ದು ಎಂಬುದನ್ನು ನೆನಪಿಸಿಕೊಳ್ಳಬೇಕು. ಅವರು ಈ ರೀತಿ ಮಾಡಿದರೆ ಮುಂದಿನ ದಿನಗಳಲ್ಲಿ ನಾವು ಸರಿಯಾಗಿ ಉತ್ತರ ನೀಡಬೇಕಾಗುತ್ತದೆ. ಸಿಗಂದೂರು ಸೇತುವೆ ಸಾರ್ವಜನಿಕರಿಗೆ ಅನುಕೂಲವಾಗಬೇಕು ಅಷ್ಟೇ ಎಂದು ಸಚಿವ ಮಧುಬಂಗಾರಪ್ಪ ಗುಡುಗಿದ್ದಾರೆ.
ಸೇತುವೆ ಉದ್ಘಾಟನೆ ಮುಂದೂಡಿ: ನಿತಿನ್ ಗಡ್ಕರಿಗೆ ಸಿಎಂ ಪತ್ರ
“ಸೇತುವೆ ಉದ್ಘಾಟನೆಯ ಕಾರ್ಯಕ್ರಮದ ಕರಡು ಆಹ್ವಾನ ಪತ್ರಿಕೆಯ, ಆಹ್ವಾನಿತರ ಪಟ್ಟಿಯಲ್ಲಿ ನನ್ನ ಹೆಸರನ್ನು ಮುದ್ರಿಸಲಾಗಿದೆ. ಆದರೆ ಈ ಬಗ್ಗೆ ನಿಮ್ಮ ಸಚಿವಾಲಯದಿಂದ ನನಗೆ ಮಾಹಿತಿಯನ್ನೇ ನೀಡಿಲ್ಲ” ಎಂದಿರುವ ಸಿಎಂ ಸಿದ್ದರಾಮಯ್ಯ ಅವರು, ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಪತ್ರ ಬರೆದು ಕಾರ್ಯಕ್ರಮ ಮುಂದೂಡುವಂತೆ ಮನವಿ ಮಾಡಿದ್ದಾರೆ.
ಜುಲೈ 11ರಂದು ಪತ್ರ ಬರೆದಿರುವ ಸಿಎಂ, “ಸಾಧ್ಯವಾದರೆ ಕಾರ್ಯಕ್ರಮ ಮುಂದೂಡಿ. ನಿಮ್ಮ ಅನುಕೂಲದ ದಿನಾಂಕಗಳನ್ನು ತಿಳಿಸಿದರೆ ನಾನೂ ಜೊತೆಯಾಗುತ್ತೇನೆ” ಎಂದಿದ್ದಾರೆ.
“ಇನ್ನು ಮುಂದೆ, ರಾಜ್ಯ ಮಟ್ಟದ ಕಾರ್ಯಕ್ರಮಗಳನ್ನು ಆಯೋಜಿಸುವ ಮುನ್ನ ರಾಜ್ಯ ಸರ್ಕಾರದ ಜೊತೆಗೆ ನಿಮ್ಮ ಸಚಿವಾಲಯ ಸಮಾಲೋಚನೆ ನಡೆಸುವುದು ಸಮಂಜಸ. ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದಕ್ಕೂ ಮುನ್ನ ರಾಜ್ಯ ಸರ್ಕಾರದ ಜೊತೆಗೆ ವ್ಯವಹರಿಸಿ ಎಂದು ನಿಮ್ಮ ಸಚಿವಾಲಯಕ್ಕೆ ನಿರ್ದೇಶನ ನೀಡಿ” ಎಂದಿದ್ದಾರೆ.
ಇಂದು ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನಲ್ಲಿ ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡುವ ಕಾರ್ಯಕ್ರಮ ಇದೆ. ಅಲ್ಲಿ ಪಾಲ್ಗೊಳ್ಳುವುದು ಪೂರ್ವ ನಿಗದಿಯಾಗಿರುವುದರಿಂದ, ಸೇತುವೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗುತ್ತಿಲ್ಲ’ ಎಂದಿದ್ದಾರೆ.
ಶಿಷ್ಟಾಚಾರದ ಉಲ್ಲಂಘನೆ ಆಗಿಲ್ಲ: ಸಂಸದ ರಾಘವೇಂದ್ರ
“ಸಿಎಂ ಸಿದ್ದರಾಮಯ್ಯ ಅವರನ್ನು ಆಹ್ವಾನಿಸುವ ವಿಚಾರದಲ್ಲಿ ಶಿಷ್ಟಾಚಾರದ ಉಲ್ಲಂಘನೆ ಆಗಿಲ್ಲ. ಆಹ್ವಾನ ಪತ್ರದಲ್ಲಿ ಮೊದಲ ಹೆಸರು ಅವರದ್ದೇ ಇದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೇ ಶಾಸಕರನ್ನು ಕಾರ್ಯಕ್ರಮಕ್ಕೆ ಕರೆದಿದ್ದಾರೆ. ಆಹ್ವಾನ ಪತ್ರ ಶುಕ್ರವಾರ ರಾತ್ರಿ ಅಂತಿಮಗೊಂಡಿದೆ. ನನಗೆ ಹಾಗೂ ಯಡಿಯೂರಪ್ಪನವರಿಗೆ ಶನಿವಾರ ಕೊಟ್ಟಿದ್ದಾರೆ” ಎಂದು ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದಾರೆ.
ಸೇತುವೆಗೆ ಹೆಸರಿಡುವ ವಿಚಾರ
ಸೇತುವೆ ಉದ್ಘಾಟನೆಗೆ ಆಹ್ವಾನ ಮಾತ್ರವಲ್ಲ, ಸೇತುವೆಗೆ ಹೆಸರಿಡುವ ವಿಚಾರದಲ್ಲೂ ಕಾಂಗ್ರೆಸ್-ಬಿಜೆಪಿ ನಡುವೆ ಜಟಾಪಟಿ ನಡೆಯುತ್ತಿದೆ. ಬಿಜೆಪಿಗರು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರ ಹೆಸರನ್ನು ಸೇತುವೆಗೆ ಇಡುವಂತೆ ಆಗ್ರಹಿಸುತ್ತಿದ್ದಾರೆ. ಈ ನಡುವೆ ಹರನಾಥ್ ರಾವ್ ಎಂಬವರು ಸೇತುವೆಗೆ ಯಡಿಯೂಪ್ಪ ಹೆಸರಿಡಲು ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
“ಶರಾವತಿ ಹಿನ್ನೀರಿನ ಜನರ ಬೇಡಿಕೆಯಾಗಿದ್ದ ಸಿಗಂದೂರು ಸೇತುವೆಯ ನಿರ್ಮಾಣಕ್ಕೆ ಬಿ. ಎಸ್. ಯಡಿಯೂರಪ್ಪ ಕಾರಣ. ಆದ್ದರಿಂದ ಸೇತುವೆಗೆ ಅವರ ಹೆಸರನ್ನು ಇಡಬೇಕು. ಈ ಕುರಿತು ಹೈಕೋರ್ಟ್ನಲ್ಲಿ ಸ್ವಯಂ ಪ್ರೇರಿತವಾಗಿ ರಿಟ್ ಅರ್ಜಿ ಸಲ್ಲಿಸಿದ್ದೇನೆ” ಎಂದು ಹರನಾಥ್ ರಾವ್ ಹೇಳಿದ್ದಾರೆ.
ಸೇತುವೆ ‘ಸಿಂಗಂದೂರು ಚೌಡೇಶ್ವರಿ’ ಹೆಸರಿಡುವಂತೆ ಕಾಂಗ್ರೆಸ್ಸಿಗರು ಆಗ್ರಹಿಸುತ್ತಿದ್ದಾರೆ. ಶಾಸಕ ಗೋಪಾಲಕೃಷ್ಣ ಕೂಡ, ಚೌಡೇಶ್ವರಿ ಹೆಸರೇ ಇಡುವುದು. ಅದೇ ಅಂತಿಮ ಎಂದಿದ್ದಾರೆ. ಈ ಮೂಲಕ ಪರೋಕ್ಷವಾಗಿ ಯಡಿಯೂರಪ್ಪ ಹೆಸರಿಡುವುದಕ್ಕೆ ಅವರು ವಿರೋಧ ವ್ಯಕ್ತಪಡಿಸಿದ್ದಾರೆ.
ಸಿಗಂದೂರು ಸೇತುವೆ
ಶರಾವತಿ ಹಿನ್ನೀರಿನಲ್ಲಿ ನಿರ್ಮಿಸಲಾದ 2.25 ಕಿ.ಮೀ ಉದ್ದದ ಸಿಂಗದೂರು ತೂಗು ಸೇತುವೆ, ಭಾರತದ ಎರಡನೇ ಅತಿ ಉದ್ದದ ಕೇಬಲ್ ಆಧಾರಿತ ಸೇತುವೆಯಾಗಿದೆ. 11 ಪಿಲ್ಲರ್ಗಳನ್ನು ಹೊಂದಿರುವ ಈ ಸೇತುವೆಯಲ್ಲಿ, ಶೇಕಡ 70ರಷ್ಟು ಭಾರವನ್ನು ಕೇಬಲ್ಗಳು ಹೊರುತ್ತವೆ. ರೋಪ್ವೇ ತಂತ್ರಜ್ಞಾನದೊಂದಿಗೆ ಸಮತೋಲನ ಕಾಯ್ದುಕೊಳ್ಳಲಾಗುತ್ತದೆ. 2019ರಲ್ಲಿ ನಿತಿನ್ ಗಡ್ಕರಿ ಈ ಸೇತುವೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು.
ಸಿಗಂದೂರು ಚೌಡೇಶ್ವರಿ ದೇವಸ್ಥಾನ ಮತ್ತು ಕೊಲ್ಲೂರು ದೇವಾಲಯಕ್ಕೆ ಸಂಪರ್ಕ ಕಲ್ಪಿಸುವುದು. ಶಿವಮೊಗ್ಗ ಮತ್ತು ಉಡುಪಿ ಜಿಲ್ಲೆಗಳ ನಡುವಿನ ಸಂಪರ್ಕವನ್ನು ಸುಧಾರಿಸುವುದು ಮತ್ತು ಸ್ಥಳೀಯರಿಗೆ ಲಾಂಚ್ಗೆ ಅವಲಂಬಿತವಾಗಿರದೆ ಸುರಕ್ಷಿತ ಸಂಚಾರ ಸೌಲಭ್ಯ ಒದಗಿಸುವುದು ಈ ಸೇತುವೆ ನಿರ್ಮಾಣದ ಉದ್ದೇಶವಾಗಿದೆ.
‘ಹೊಳೆಬಾಗಿಲು-ಕಳಸವಳ್ಳಿ ಸೇತುವೆ’ ಎಂದು ಸ್ಥಳೀಯರು ಕರೆಯುವ ಈ ಸೇತುವೆಯಿಂದ ಪ್ರವಾಸಿಗರಿಗೆ ಮತ್ತು ಸ್ಥಳೀಯರಿಗೆ ಸಿಗಂದೂರು ದೇವಸ್ಥಾನಕ್ಕೆ ನೇರ ರಸ್ತೆ ಸಂಪರ್ಕ ದೊರೆಯಲಿದೆ. ಶರಾವತಿ ಹಿನ್ನೀರಿನ ದ್ವೀಪದಲ್ಲಿ ವಾಸಿಸುವ ಜನರ ಬಹುಕಾಲದ ಕನಸು ಈಡೇರಿದಂತಾಗಿದೆ.
ಸೇತುವೆ ಉದ್ಘಾಟನೆ ನಿಮಿತ್ತ ಇಂದು ಮಧ್ಯಾಹ್ನ 12 ಗಂಟೆಯಿಂದ ಸಾಗರ ಪಟ್ಟಣದ ನೆಹರು ಮೈದಾನದಲ್ಲಿ ಬೃಹತ್ ಕಾರ್ಯಕ್ರಮ ನಡೆಯಲಿದೆ. ಸುಮಾರು 10 ಸಾವಿರದಷ್ಟು ಜನರು ಸೇರುವೆ ನಿರೀಕ್ಷೆಯನ್ನು ಸಂಘಟಕರು ಹೊಂದಿದ್ದಾರೆ. ಇದೇ ಸಂದರ್ಭದಲ್ಲಿ 925 ಕೋಟಿ ರೂ. ವೆಚ್ಚದ ರಾಷ್ಟ್ರೀಯ ಹೆದ್ದಾರಿ 369 ಸಾಗರದಿಂದ ಮರಕುಟಿಕದವರೆಗೆ ಸಾಗರ ಪಟ್ಟಣದ ಬೈಪಾಸ್ ರಸ್ತೆ ಸೇರಿ ದ್ವಿಪಥ ಸಂಪರ್ಕ ರಸ್ತೆಯ ಶಂಕು ಸ್ಥಾಪನೆ ನೆರವೇರಲಿದೆ.
ದೇವನಹಳ್ಳಿ: “ರೈತರಿಗೆ ಭೂಮಿ ಕೇವಲ ಆಸ್ತಿಯಲ್ಲ, ಗುರುತು!” – ರೈತ ಹೋರಾಟಕ್ಕೆ ದೇಶದ 30 ಸಂಘಟನೆಗಳ ಬೆಂಬಲ ಘೋಷಣೆ


