ಮಹಾರಾಷ್ಟ್ರದಲ್ಲಿ ಚುನಾವಣಾ ಮೈತ್ರಿ ಮೂಲಕ ಸ್ಥಾನ ಹಂಚಿಕೆ ಮಾಡಿಕೊಂಡು ಚುನಾವಣೆ ಎದುರಿಸಿದ್ದ ಪಕ್ಷಗಳು ಈಗ ಅಧಿಕಾರಕ್ಕಾಗಿ ಮುಸುಕಿನ ಗುದ್ದಾಟ ನಡೆಸಿವೆ. ಅದಾಗ್ಯೂ ಚುನಾವಣೆಯಲ್ಲಿ 105 ಸ್ಥಾನ ಗಳಿಸುವ ಮೂಲಕ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದರೆ ಅಧಿಕಾರ ಗದ್ದುಗೆ ಏರಲು ಮತ್ತೊಂದು ಪಕ್ಷದ ಬೆಂಬಲ ಅಗತ್ಯವಾಗಿದೆ. ಆದರೆ, ಸಿಎಂ ಖುರ್ಚಿಗಾಗಿ ಶಿವಸೇನೆ ಮತ್ತು ಬಿಜೆಪಿ ಹೊಡೆದಾಡುತ್ತಿರುವುದು ಈಗ ಜಗಜ್ಜಾಹೀರಾಗಿದೆ.
ಇದನ್ನೂ ಓದಿ: ಮಹಾರಾಷ್ಟ್ರ ಆಕರ್ಷಣೆಯ ಕೇಂದ್ರ ಬಿಂದುವಾದ ಠಾಕ್ರೆ ಕುಡಿ: ಸಿಎಂ ಆಗ್ತಾರಾ ಆದಿತ್ಯ ಠಾಕ್ರೆ..?
ಇಂದು ಶಿವಸೇನೆ ಪಕ್ಷದ ದಿವಾಕರ್ ರಾವೋಟೆ ನಿಯೋಗ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದೆ. ಈಗ ಬಿಜೆಪಿಯ ದೇವೇಂದ್ರ ಫಡ್ನವೀಸ್ ಕೂಡ ರಾಜ್ಯಪಾಲರನ್ನು ಭೇಟಿಯಾಗುವುದಾಗಿ ಹೊರಟಿದ್ದಾರೆ. ಮೈತ್ರಿ ಮೂಲಕ ಒಂದೇ ಎಂದು ಘೋಷಿಸಿದ್ದ ಪಕ್ಷಗಳೀಗ ಬೇರೆ, ಬೇರೆಯಾಗಿ ರಾಜ್ಯಪಾಲರನ್ನು ಭೇಟಿಯಾಗುತ್ತಿರುವುದು ಸಾಕಷ್ಟು ಕುತೂಹಲ ಕೆರಳಿಸಿದೆ.
ಆದರೆ ಶಿವಸೇನೆ ರಾಜ್ಯಪಾಲರನ್ನು ಭೇಟಿಯಾಗಿರುವ ಬಗ್ಗೆ ಪ್ರತಿಕ್ರಿಯಿಸಿ, ದೀಪಾವಳಿ ಹಬ್ಬದ ಶುಭಾಶಯ ವಿನಿಮಯಕ್ಕಾಗಿ ರಾಜ್ಯಪಾಲರನ್ನು ಭೇಟಿಯಾಗಿದ್ದಾಗಿ ತಿಳಿಸಿದೆ. ಬಿಜೆಪಿ ಮತ್ತು ಶಿವಸೇನೆ ಮೈತ್ರಿ ಮೂಲಕ ಚುನಾವಣೆ ಎದುರಿಸಿದ್ದರೂ ಸಹ ಬಿಜೆಪಿ ಹೆಚ್ಚು ಸ್ಥಾನ ಗೆಲ್ಲುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊಮ್ಮಿದೆ. ಈಗ ಅಧಿಕಾರಕ್ಕಾಗಿ ಮಿತ್ರ ಪಕ್ಷಗಳ ಮಧ್ಯೆ ಒಡಕುಂಟಾಗಿದೆ. ಬಿಜೆಪಿ ಚುನಾವಣಾ ಪೂರ್ವ ಮೈತ್ರಿಯಲ್ಲಿ ನೀಡಿದ ವಾಗ್ದಾನವನ್ನು ಪೂರೈಸಬೇಕು. 50:50 ಸೂತ್ರಕ್ಕೆ ಬಿಜೆಪಿ ಬದ್ಧವಾಗಿರಬೇಕು ಎಂದು ಶಿವಸೇನೆ ಪಟ್ಟು ಹಿಡಿದಿದೆ.
ಇದನ್ನೂ ಓದಿ: ಬಿಜೆಪಿಯ ದುರಹಂಕಾರಕ್ಕೆ ಜನ ಪಾಠ ಕಲಿಸಿದ್ದಾರೆ: ’ಸಾಮ್ನಾ’ದಲ್ಲಿ ಮಿತ್ರನಿಗೆ ತಿವಿದ ಶಿವಸೇನೆ
ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ, ಗೃಹ ಸಚಿವ ಅಮಿತ್ ಶಾ ಜತೆ ಈಗಾಗಲೇ ಚರ್ಚಿಸಿದ್ದಾರೆ. ಅಧಿಕಾರ ಹಂಚಿಕೆ ಸಂಬಂಧ ನಡೆದ ಸಭೆಯಲ್ಲಿ ಉದ್ಧವ್ ಠಾಕ್ರೆ, ಅಮಿತ್ ಶಾ, ಚಂದ್ರಕಾಂತ್ ಪಾಟೀಲ್, ದೇವೇಂದ್ರ ಫಡ್ನವೀಸ್ ಸೇರಿದಂತೆ ಎರಡೂ ಪಕ್ಷಗಳ ಪ್ರಮುಖರು ಭಾಗವಹಿಸಿದ್ದರು. ‘ನಮಗೂ ಪಕ್ಷದ ಬೆಳವಣಿಗೆ ಅತ್ಯಗತ್ಯ. ಪಕ್ಷದ ಸಂಘಟನೆ ಮತ್ತು ಬಲವರ್ಧನೆಗೆ ಶಿವಸೇನೆ ಪ್ರಾಮುಖ್ಯತೆ ನೀಡುತ್ತದೆ. ಲೋಕಸಭೆಯಲ್ಲೂ ಶಿವಸೇನೆ ಹೆಚ್ಚು ಸ್ಥಾನಗಳನ್ನು ಗೆದ್ದಿದೆ. ಎಲ್ಲಾ ಸಮಯದಲ್ಲಿ ಬಿಜೆಪಿಗೆ ಅಧಿಕಾರ ಬಿಟ್ಟು ಕೊಡಲು ಸಾಧ್ಯವಿಲ್ಲ. ಬಿಜೆಪಿ ಚುನಾವಣಾ ಪೂರ್ವ ಮೈತ್ರಿ ಒಪ್ಪಂದಕ್ಕೆ ಬದ್ಧವಾಗಿರಬೇಕು’ ಎಂದು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಿಎಂ ಗಾದಿಯ ಮೇಲೆ ಕಣ್ಣಿಟ್ಟಿರುವ ಶಿವಸೇನೆ, ಅಧಿಕಾರಕ್ಕೇರುವ ತವಕದಲ್ಲಿದೆ. ಆದರೆ ಬಿಜೆಪಿ ಇದಕ್ಕೆ ಒಪ್ಪುತ್ತಿಲ್ಲ. ಹೀಗಾಗಿ ಚುನಾವಣಾ ಫಲಿತಾಂಶದ ನಂತರ ಎರಡೂ ಪಕ್ಷಗಳು ಹಾವು-ಮುಂಗುಸಿಯಂತೆ ಕಚ್ಚಾಟಕ್ಕಿಳಿದಿವೆ.