Homeಅಂಕಣಗಳುಜಗಳೂರೆಂಬ ಬರಡು ನೆಲದ ಭಗೀರಥ ಪ್ರತಿಭೆ: ಪ್ರವೀಣ್ ಕುಮಾರ್

ಜಗಳೂರೆಂಬ ಬರಡು ನೆಲದ ಭಗೀರಥ ಪ್ರತಿಭೆ: ಪ್ರವೀಣ್ ಕುಮಾರ್

- Advertisement -
- Advertisement -
ಎಲೆಮರೆ-34
ಅರುಣ್ ಜೋಳದಕೂಡ್ಲಿಗಿ

ಕುಡಿಯುವ ನೀರಿಗೆ ಬರ ಇರುವ, ಅಂತರ್ಜಲ ತುಂಬಾ ಆಳಕ್ಕೆ ಕುಸಿದಿರುವ ಜಗಳೂರಿನಂತಹ ಬರಡು ನೆಲದಲ್ಲಿ, ಪ್ರವೀಣ್ ಕುಮಾರ್ ಭೂಗರ್ಭ ಶಾಸ್ತ್ರದಲ್ಲಿ ತಜ್ಞತೆ ಪಡೆದು, ತನ್ನ ಪಿಹೆಚ್‍ಡಿ ಸಂಶೋಧನೆಗೆ ಜಗಳೂರನ್ನೆ ಆಯ್ಕೆ ಮಾಡಿಕೊಂಡಿರುವುದು ವಿಶೇಷವಾಗಿದೆ.

ಓಮ್ನಿ ಕಾರಲ್ಲಿ ಇಬ್ಬರು ಯುವಕರು ಬಂದು ಯಾವು ಯಾವುದೋ ಮಿಷನ್ ತೆಗೆದುಕೊಂಡು ನೆಲದ ಮೇಲಿಟ್ಟು ಪರೀಕ್ಷೆ ಮಾಡುತ್ತಿದ್ದದ್ದು ರೈತರಿಗೆ ವಿಶೇಷವೆನ್ನಿಸಿತ್ತು. ಕುತೂಹಲಗೊಂಡು ಹೀಗೆ ಪರೀಕ್ಷೆ ಮಾಡುವ ಹುಡುಗನನ್ನು `ಏನ್ ಸ್ವಾಮಿ ಇದು?’ ಎಂದು ಕೇಳಿಯೇ ಬಿಟ್ಟರು. `ನಮ್ಮ ಭಾಗದಲ್ಲಿ ನೆಲದ ಒಳಗಿನ ನೀರು ಕಡಿಮೆಯಾಗುತ್ತಿದೆ, ಅದರ ಬಗ್ಗೆ ಸಂಶೋಧನೆ ಮಾಡ್ತಿದಿನಿ, ಎಷ್ಟು ಆಳಕ್ಕೆ ನೀರು ಹೋಗಿದೆ, ಯಾಕೆ ಹೋಗಿದೆ? ಮತ್ತೆ ನೀರು ಬರಬೇಕಂದ್ರೆ ಏನು ಮಾಡಬೇಕು ಅನ್ನೋದನ್ನು ಪರೀಕ್ಷೆ ಮಾಡತೀನಿ’ ಎಂದು ಒಬ್ಬ ಯುವಕ ರೈತರಿಗೆ ಸರಳವಾಗಿ ಅರ್ಥವಾಗುವಂತೆ ವಿವರಿಸುತ್ತಾನೆ. ಅದಕ್ಕೆ ರೈತರು `ಹೋದ ನೀರನ್ನು ವಾಪಾಸ್ ಹೆಂಗೆ ತರ್ತೀರಿ? ಎಂದು ಮರುಪ್ರಶ್ನೆ ಮಾಡುತ್ತಾರೆ. ಆ ಯುವಕ ತಾಳ್ಮೆಯಿಂದಲೆ `ಹೇಗೆ ನೀರನ್ನು ಮತ್ತೆ ತರಬೇಕು ಅಂತಾನೆ ಸಂಶೋಧನೆ ಮಾಡ್ತಿದಿನಿ, ನಾಲ್ಕೈದು ವರ್ಷ ಸಂಶೋಧನೆ ಮಾಡಿದ ಮೇಲೆ ಏನೇನು ಮಾಡಬಹುದು ಅಂತ ಹೇಳಬಹುದು, ಈಗಲೆ ಹೇಳೋಕೆ ಆಗಲ್ಲ’ ಎಂದು ಉತ್ತರಿಸುತ್ತಾನೆ. ಈ ಸಂಭಾಷಣೆ ನಡೆದದ್ದು ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಅರಿಶಿಣಗುಂಡಿ ಗ್ರಾಮದಲ್ಲಿ. ಈ ಪ್ರಯೋಗ ಮಾಡಿದ ಯುವಕ ಜಗಳೂರು ತಾಲೂಕಿನ ಜ್ಯೋತಿಪುರದ ಪ್ರವೀಣ್ ತನ್ನ ಪಿಹೆಚ್.ಡಿ ಸಂಶೋಧನೆಯ ವಿಷಯವಾದ `ಹೈಡ್ರೋ ಜಿಯಾಲಜಿಕಲ್ ಅಕೌಂಟಿಂಗ್ ಆಫ್ ಜಗಳೂರ್ ತಾಲೂಕ್ ದಾವಣಗೆರೆ ಡಿಸ್ಟ್ರಿಕ್ಟ್ ಕರ್ನಾಟಕ ಸ್ಟೇಟ್ ಇನ್ ದ ಪರ್ಸ್‍ಸ್ಪೆಕ್ಟಿವ್ ಆಫ್ ಆರ್ಟಿಫಿಷಿಯಲ್ ರೀಚಾರ್ಜ್’ ಕುರಿತು ಸಂಶೋಧನೆಗಾಗಿ.

ಸಮಾಜ ವಿಜ್ಞಾನ ಮತ್ತು ಮಾನವಿಕ ವಿಷಯದ ಸಂಶೋಧನೆಗಳಲ್ಲಿ ತಮ್ಮ ಪ್ರದೇಶದ ಸಂಸ್ಕøತಿ ಇತಿಹಾಸವನ್ನು ಕುರಿತು ಅಧ್ಯಯನ ಮಾಡುವುದು ಸಾಮಾನ್ಯ ಸಂಗತಿ. ಆದರೆ ಭೂಗರ್ಭ ಶಾಸ್ತ್ರ ಕಲಿಯುತ್ತಿರುವ ವಿಜ್ಞಾನದ ವಿದ್ಯಾರ್ಥಿಯೊಬ್ಬ ತನ್ನದೇ ಪ್ರದೇಶದ ಸಮಸ್ಯೆಯೊಂದನ್ನು ಆಯ್ದುಕೊಂಡು ಸಂಶೋಧನೆ ಮಾಡುವುದು ನಿಜಕ್ಕೂ ವಿಶಿಷ್ಟವಾದದ್ದು. ಜಗಳೂರು ತಾಲೂಕು ನೀರಿನ ಬವಣೆಯಲ್ಲಿದೆ. ಅಂತರ್ಜಲ ದೊಡ್ಡಮಟ್ಟದಲ್ಲಿ ಕೆಳಗಿಳಿದಿದೆ. ಇದೇ ನೆಲದಲ್ಲಿ ಬೆಳೆದ ತಾನು ತನ್ನ ಸಂಶೋಧನೆಯಿಂದ ಈ ಪ್ರದೇಶದ ರೈತರಿಗೆ, ಜನ ಸಾಮಾನ್ಯರಿಗೆ ಉಪಯುಕ್ತ ಆಗುವಂತೆ ಅಂತರ್ಜಲವನ್ನು ಹೆಚ್ಚಿಸುವ ಕುರಿತು ವೈಜ್ಞಾನಿಕ ಸಂಶೋಧನೆ ಕೈಗೊಂಡ ಈ ಯುವಕನೇ ಪ್ರವೀಣ್.

ಅರಣ್ಯ ಇಲಾಖೆಯ ದಿನಗೂಲಿ ನೌಕರ ದಲಿತ ಸಮುದಾಯದ ಡಿ.ವೆಂಕಟೇಶ್ ಮತ್ತು ಅಂಗನವಾಡಿ ಕಾರ್ಯಕರ್ತೆ ಮಹಾಂತಮ್ಮ ದಂಪತಿಗಳ ಮಗನಾದ ಪ್ರವೀಣ್ ಜಗಳೂರಿನಂತಹ ಬರಡು ಪ್ರದೇಶದಲ್ಲಿ ಕಡುಕಷ್ಟದಲ್ಲಿ ಓದಿದ ಯುವಕ. ಪಿ.ಯು ತನಕ ಜಗಳೂರಿನ ನಲಂದಾ ಕಾಲೇಜಿನಲ್ಲಿ ಓದಿದ ಪ್ರವೀಣ್ ಕೇಂದ್ರೀಯ ವಿಶ್ವವಿದ್ಯಾಲಯಗಳ ಸಿಇಟಿಯಲ್ಲಿ ಉತ್ತಮ ಅಂಕ ಗಳಿಸಿ ಸೆಂಟ್ರಲ್ ಯುನಿವರ್ಸಿಟಿ ಗುಲ್ಬರ್ಗಾಕ್ಕೆ 2012ರಲ್ಲಿ ಸೇರುತ್ತಾನೆ. ಭೂವಿಜ್ಞಾನ ವಿಭಾಗದಲ್ಲಿ ಬಿಎಸ್ಸಿ ಆನರ್ಸ್ ನಾಲ್ಕನೆ ರ್ಯಾಂಕ್ ಪಡೆಯುತ್ತಾರೆ. ಆನ್ವಯಿಕ ಭೂವಿಜ್ಞಾನ ಮತ್ತು ಜಿಯೋ ಇನ್ಪಾರ್ಮಾಟಿಕ್‍ನಲ್ಲಿ ಎಂ.ಎಸ್ಸಿ ಪದವಿಯನ್ನು ಪಡೆಯುತ್ತಾನೆ. ಇದೀಗ ಪ್ರೊ.ಮಹಮದ್ ಅಸ್ಲಾಂ ಅವರ ಮಾರ್ಗದರ್ಶನದಲ್ಲಿ ಜಗಳೂರು ಭಾಗದಲ್ಲಿ ಅಂತರ್ಜಲವನ್ನು ಹೆಚ್ಚಿಸುವ ಸಾಧ್ಯತೆಗಳ ಕುರಿತು ಸಂಶೋಧನೆ ಮಾಡುತ್ತಿದ್ದಾರೆ.

ಈ ಸಂಶೋಧನೆ ಕುರಿತಂತೆ, ಪ್ರವೀಣ್ ಕುಮಾರ್ `ಜಗಳೂರು ಭಾಗದಲ್ಲಿ ಮಳೆ ನೀರಿನಿಂದ ರೀಚಾರ್ಜ್ ಮಾಡುವುದು ಹೇಗೆ? ಈ ಭಾಗದಲ್ಲಿ ನೀರಿನ ಆಳ ಎಷ್ಟಿದೆ, ಒಳಗಡೆ ಪ್ಲೆಕ್ಚಿಯೇಷನ್ ಹೇಗಿದೆ? ಇದೆಲ್ಲವನ್ನು ನೂರು ವರ್ಷದ ಮಳೆಯ ಅಂಕಿಅಂಶಗಳನ್ನು ಆಧರಿಸಿ ಅಧ್ಯಯನ ಮಾಡುತ್ತಿದ್ದೇನೆ. ಜಗಳೂರಿನ ಕುಡಿವ ನೀರಿನ ಗುಣಮಟ್ಟದ ಪರೀಕ್ಷೆಯನ್ನು 30 ಹಳ್ಳಿಗಳಲ್ಲಿಯೂ, 50 ಹಳ್ಳಿಗಳ ಲೋಕೇಷನ್ನುಗಳಲ್ಲಿ ವರ್ಟಿಕಲ್ ಎಲೆಕ್ರಿಕ್ಟ್ ಸರ್ವೆ ಮಾಡಲಾಗಿದೆ. ಅಂತಿಮವಾಗಿ ಈ ಸಂಶೋಧನೆಯಿಂದ ಜಗಳೂರು ಭಾಗದಲ್ಲಿ ಅಂತರ್ಜಲವನ್ನು ಹೇಗೆ ವೃದ್ಧಿಸಬಹುದು ಎನ್ನುವುದಕ್ಕೆ ಭೂಗರ್ಭ ಶಾಸ್ತ್ರದ ನೆಲೆಯ ವೈಜ್ಞಾನಿಕ ಮಾರ್ಗಗಳನ್ನು ಕಂಡುಹಿಡಿಯಲಾಗುವುದು’ ಎಂದು ಹೇಳುತ್ತಾನೆ.

ಭೂಗರ್ಭ ಶಾಸ್ತ್ರದ ಸಂಶೋಧನೆಗಳಲ್ಲಿ ಪ್ರವೀಣ್ ಕುಮಾರ್ ನಿರಂತರವಾಗಿ ತೊಡಗಿಕೊಂಡ ಕಾರಣ ಹೊಸ ಹೊಸ ಸಂಶೋಧನೆಗಳ ಮೂಲಕ ಗಮನಸೆಳೆದಿದ್ದಾನೆ. ಇಂತಹ ಪ್ರಯತ್ನಗಳಿಗಾಗಿ ಹಲವು ಪ್ರಶಸ್ತಿಗಳು ಪ್ರವೀಣ್ ಅವರನ್ನು ಗುರುತಿಸಿವೆ. ಕೊಲ್ಕತ್ತಾದ ಅಂತರಾಷ್ಟ್ರೀಯ ಎನ್ವಿರಾನ್‍ಮೆಂಟ್ ಅಂಡ್ ಇಕಾಲಜಿ ಪೌಂಡೇಷನ್ ಅವರು 2017ರ `ಜೂನಿಯರ್ ಸೈಂಟಿಸ್ಟ್’ ಪ್ರಶಸ್ತಿ, ಕೊಲ್ಕತ್ತಾದ ವಲ್ರ್ಡ್ ಅಚೀವರ್ಸ್ ಪೌಂಡೇಷನ್ 2018ರಲ್ಲಿ `ಕ್ಲೀನ್ ಎನ್ವಿರಾನ್‍ಮೆಂಟ್ ಎಜುಕೇಷನ್ ಅಂಡ್ ಪ್ರಮೋಷನ್’ ಪ್ರಶಸ್ತಿ, 2019ರಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಬಗೆಗೆ ಕೇಂದ್ರ ಮತ್ತು ಯುವಜನ ಸಚಿವಾಲಯ ಪ್ರಾಯೋಜಿಸಿದ ಸೆಮಿನಾರಿನಲ್ಲಿ `ಸ್ವಾಮಿ ವಿವೇಕಾನಂದ ಎಕ್ಸಲೆನ್ಸ್ ಅವಾರ್ಡ್’, ಥಾಯಲ್ಯಾಂಡಿನ ಬ್ಯಾಂಕಾಕ್‍ನಲ್ಲಿ ಆಯೋಜಿಸಿದ ಎರಡನೆ ಅಂತರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನದ ಸಮ್ಮೇಳನದಲ್ಲಿ 2019ರ `ಯುವ ವಿಜ್ಞಾನಿ’ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಈಚೆಗೆ ಆಸ್ಟ್ರಿಯಾ ದೇಶದ ಯುನೈಟೆಡ್ ಸ್ಪೇಸ್ ರಿಸರ್ಚ್ ಕೇಂದ್ರವು ಥಾಯ್‍ಲ್ಯಾಂಡ್‍ನ ಏಷಿಯನ್ ಇನ್‍ಸ್ಟಿಟೂಟ್ ಆಫ್ ಟೆಕ್ನಾಲಜೀಸ್‍ನ ಸಹಯೋಗದಲ್ಲಿ ಥಾಯಲ್ಯಾಂಡಿನ ಪತುಮಥನಿಯಲ್ಲಿ 202 ರ ಜನವರಿ 6ರಿಂದ 10ರ ವರೆಗೆ ಅಂತರಾಷ್ಟ್ರೀಯ ತರಬೇತಿ ಶಿಬಿರವನ್ನು ಆಯೋಜಿಸಿತ್ತು. ಆಸ್ಟ್ರಿಯಾ ಸರಕಾರವು ಸೆಟಲೈಟ್ ತಂತ್ರಜ್ಞಾನದಲ್ಲಿ ಆಧುನಿಕ ಸಾಫ್ಟ್‍ವೇರ್ ಅಭಿವೃದ್ಧಿಯನ್ನು ಉತ್ತೇಜಿಸಲು, ಈ ಕ್ಷೇತ್ರದಲ್ಲಿ ತಜ್ಞತೆ ಪಡೆದವರಿಂದ ಅರ್ಜಿ ಕರೆಯಲಾಗಿತ್ತು. ಅರ್ಜಿ ಸ್ವೀಕೃತಿಯ ನಂತರ ಅರ್ಜಿದಾರರಿಗೆ ಈ ಸಂಶೋಧನೆಯಿಂದ ನಿಮ್ಮ ದೇಶಕ್ಕೆ ಏನು ಕೊಡುಗೆ ನೀಡುತ್ತೀರಿ? ಎಂದು ಕೇಳಲಾಗಿತ್ತು. ಇದಕ್ಕೆ ಸಮರ್ಥವಾದ ಉತ್ತರ ನೀಡಿದ 18 ಜನರನ್ನು ಅಂತಿಮವಾಗಿ ಆರಿಸಿ, ಪ್ರತಿ ದೇಶದಿಂದ ಆಯ್ದ ಇಬ್ಬರಿಗೆ ಅವಕಾಶ ನೀಡಲಾಗಿತ್ತು. ಹಾಗಾಗಿ ಭಾರತದ ಪ್ರತಿನಿಧಿಗಳಾಗಿ ಉತ್ತರಖಂಡದ ಐಐಟಿ ರೂರ್ಕಿಯಿಂದ ಒಬ್ಬರು ಆಯ್ಕೆಯಾದರೆ, ಮತ್ತೊಬ್ಬರು ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಜ್ಯೋತಿಪುರದ ಪ್ರವೀಣ್ ಆಯ್ಕೆಯಾಗಿದ್ದರು.

ಈ ತರಬೇತಿ ಶಿಬಿರದಲ್ಲಿ ಲ್ಯಾಂಡ್ ಸರ್ವೆ, ವೆಹಿಕಲ್ ಟ್ರಾಕಿಂಗ್, ಫಾರೆಸ್ಟ್ ನ್ಯಾವಿಗೇಷನ್, ಶಿಪ್ ನ್ಯಾವಿಗೇಷನ್ ಮುಂತಾದ ಹೊಸ ಸಂಶೋಧನೆಗಳ ಬಗೆಗೆ ಚರ್ಚೆಯಾಯಿತು. ಉದಾಹರಣೆಗೆ ಲ್ಯಾಂಡ್ ಸರ್ವೆ ಎಂದರೆ ಈಗಲೂ ಚೈನ್ ಹಿಡಿದು ಅಳತೆ ಮಾಡಲಾಗುತ್ತದೆ. ಆದರೆ ಲ್ಯಾಂಡ್ ಸರ್ವೆ ಸಾಫ್ಟ್‍ವೇರ್ ಅಭಿವೃದ್ಧಿಯಾದರೆ ಅಳತೆ ಮಾಡುವ ನೆಲದ ನಾಲ್ಕು ಬಿಂದುಗಳನ್ನು ಗುರುತಿಸಿಕೊಂಡು, ಆಂಟೆನಾ ನಿಲ್ಲಿಸಿ ಸ್ಯಾಟಲೈಟ್ ಸಂಪರ್ಕಿಸಿದರೆ ವಾರಗಟ್ಟಲೆ ಮಾಡುವ ಭೂ ಅಳತೆಯನ್ನು ಒಂದು ಗಂಟೆಯಲ್ಲಿ ಮಾಡಬಹುದಾಗಿದೆ. ಇಂತಹ ಹೊಸ ಬಗೆಯ ಸಂಶೋಧನೆಗಳ ಚರ್ಚೆ ಸಂವಾದ ಸಂಶೋಧನ ಪ್ರಬಂಧಗಳು ಈ ಶಿಬಿರದಲ್ಲಿ ಮಂಡನೆಯಾದವು. ಇದರಲ್ಲಿ ಪ್ರವೀಣ್ ಅವರ ಕೃತಕ ಪುನರ್‍ಭರ್ತಿ ಕಾರ್ಯ, ಜಲ ಸಂಪನ್ಮೂಲ ನಿರ್ವಹಣೆ, ಹೈಡ್ರಾಲಾಜಿ, ಘನತ್ಯಾಜ್ಯ ನಿರ್ವಹಣೆ, ಭೂ ಗರ್ಭಕ್ಕೆ ನೀರನ್ನು ಪುನರ್ ಹಾಯಿಸುವ ಹೊಸ ವಿಧಾನ, ಭೂಮಿ ಮತ್ತು ಪರಿಸರ ವಿಜ್ಞಾನದ ಬಗೆಗಿನ ಹೊಸ ಬಗೆಯ ಆಲೋಚನೆಗಳು ಮತ್ತು ಜಿಯೋ ಇನ್ಫಾರ್ಮೆಟಿಕ್ಸ್ ಮತ್ತು ರಿಮೋಟ್ ಸೆನ್ಸಿಂಗ್ ವಿಷಯದಲ್ಲಿ ಪ್ರವೀಣ್ ಕುಮಾರ್ ಅವರ ತಜ್ಞತೆಯು ಗಮನಸೆಳೆಯಿತು. ಇದೆಲ್ಲದರ ಪರಿಣಾಮವಾಗಿ ಈ ಶಿಬಿರದಲ್ಲಿ ಪ್ರವೀಣ್ ಅವರನ್ನು `ಅಂತರಾಷ್ಟ್ರೀಯ ಪ್ರಯಾಣ ವಿದ್ಯಾರ್ಥಿ ವೇತನ’ಕ್ಕೆ ಆಯ್ಕೆಮಾಡಲಾಯಿತು. ಇದು ಪ್ರವೀಣ್ ಅವರ ಈತನಕದ ಜೀವಿತದ ದೊಡ್ಡ ಸಾಧನೆಯೆಂದೇ ಹೇಳಬೇಕು.

ಕುಡಿಯುವ ನೀರಿಗೆ ಬರ ಇರುವ, ಅಂತರ್ಜಲ ತುಂಬಾ ಆಳಕ್ಕೆ ಕುಸಿದಿರುವ ಜಗಳೂರಿನಂತಹ ಬರಡು ನೆಲದಲ್ಲಿ, ಭೂಗರ್ಭ ಶಾಸ್ತ್ರದಲ್ಲಿ ತಜ್ಞತೆ ಪಡೆದು, ತನ್ನ ಪಿಹೆಚ್‍ಡಿ ಸಂಶೋಧನೆಗೆ ಜಗಳೂರನ್ನೆ ಆಯ್ಕೆ ಮಾಡಿಕೊಂಡಿರುವುದು ವಿಶೇಷವಾಗಿದೆ. ಜಗಳೂರು ಭಾಗದ ಅಂತರ್ಜಲ ಹೆಚ್ಚಿಸುವ ಸಾಧ್ಯತೆಗಳ ಬಗ್ಗೆ ಶೋಧಿಸುತ್ತಿರುವ ದಲಿತ ಸಮುದಾಯಕ್ಕೆ ಸೇರಿದ ಯುವಕ ಪ್ರವೀಣ್ ಈ ಭಾಗದ ಭಗೀರಥನಂತೆಯೇ ಕಾಣುತ್ತಾನೆ.


ಇದನ್ನು ಓದಿ: ಮನಸ್ಸುಗಳ ಬೆಸೆಯುವ ಸೌಹಾರ್ದದ ಕನಸುಗಾರ ಇಬ್ರಾಹಿಂ ಸುತಾರ…
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...