Homeಮುಖಪುಟಅಣು ಶಕ್ತಿಯ ಖಾಸಗೀಕರಣ : 'ಶಾಂತಿ' ಮಸೂದೆಗೆ ಲೋಕಸಭೆ ಅಸ್ತು

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಖಾಸಗಿ ಕಂಪನಿಯೊಂದು ಪರಮಾಣು ಇಂಧನ ವಲಯ ಪ್ರವೇಶಿಸುವ ಯೋಜನೆ ಘೋಷಿಸಿದ ಬೆನ್ನಲ್ಲೇ ಮಸೂದೆ ಮಂಡನೆ- ಕಾಂಗ್ರೆಸ್ ಸಂಸದ ಮನೀಶ್ ತಿವಾರಿ

- Advertisement -
- Advertisement -

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, ‘ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು.

ವಿಪಕ್ಷಗಳ ಸದಸ್ಯರು ಮಸೂದೆಗೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಭಾರತೀಯ ಪರಮಾಣು ಇಂಧನ ವಲಯದಲ್ಲಿ ಖಾಸಗಿ ಕಂಪನಿಗಳ ಪ್ರವೇಶವು ಅವುಗಳ ಲಾಭಗಳಿಕೆಗೆ ಮಾತ್ರ ಸಹಾಯ ಮಾಡುತ್ತದೆ. ಹೆಚ್ಚಿನ ವಿದ್ಯುತ್ ಬೆಲೆಗಳ ಹೊರೆಯನ್ನು ಹೊರುತ್ತಿರುವ ಸಾಮಾನ್ಯ ಜನರಿಗೆ ಇದರಿಂದ ಯಾವುದೇ ಉಪಯೋಗ ಇಲ್ಲ ಎಂದು ಹೆಚ್ಚಿನ ಸಂಸದರು ಹೇಳಿದರು.

ಮಸೂದೆಯನ್ನು ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಅಥವಾ ಸ್ಥಾಯಿ ಸಮಿತಿಗೆ ಕಳುಹಿಸಬೇಕೆಂಬ ಬೇಡಿಕೆಯನ್ನು ಪುರಸ್ಕರಿಸದ ಕಾರಣ, ಮಸೂದೆ ಅಂಗೀಕಾರವಾದಾಗ ಇಂಡಿಯಾ ಒಕ್ಕೂಟದ ಸಂಸದರು ಸಭಾತ್ಯಾಗ ಮಾಡಿದರು.

ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಮಾತನಾಡಿ, ಶಾಂತಿ ಮಸೂದೆಯು ಅಸ್ತಿತ್ವದಲ್ಲಿರುವ ಎರಡು ಪ್ರಗತಿಪರ ಶಾಸನಗಳನ್ನು ಬದಲಾಯಿಸುತ್ತಿದೆ ಎಂದು ವಿವರಿಸುತ್ತಾ ಮಸೂದೆಯ ವಿರೋಧಕ್ಕೆ ಮುಕ್ತವಾಗಿ ಧ್ವನಿಗೂಡಿಸಿದರು.

ಸ್ವಾವಲಂಬನೆಯ ಕಡೆಗೆ ಭಾರತದ ಪರಮಾಣು ಕಾರ್ಯಕ್ರಮವನ್ನು ಮೊದಲು ಪರಿಚಯಿಸಿದ್ದು ಜವಾಹರಲಾಲ್ ನೆಹರು ಎಂದು ಅವರು ನೆನಪಿಸಿಕೊಂಡರು.

ಪರಮಾಣು ಅಪಘಾತಗಳಿಗೆ ಪೂರೈಕೆದಾರರನ್ನು ಹೊಣೆಗಾರರನ್ನಾಗಿ ಮಾಡುವ ಪರಮಾಣು ಹೊಣೆಗಾರಿಕೆ ಆಡಳಿತದ ಕುರಿತು 2010ರ ಒಪ್ಪಂದವನ್ನು ಮುರಿಯುವ ಮೂಲಕ ಬಿಜೆಪಿ ನೇತೃತ್ವದ ಸರ್ಕಾರವು ಭಾರತದ ಇಂಧನ ಸ್ವಾತಂತ್ರ್ಯ ಮತ್ತು ಶುದ್ಧ ಇಂಧನ ಗುರಿಗಳನ್ನು ದುರ್ಬಲಗೊಳಿಸುತ್ತಿದೆ ಎಂದು ಹೇಳಿದರು.

“ಪರಮಾಣು ಶಕ್ತಿ ನಿಯಂತ್ರಕದ ಪಾತ್ರದ ಬಗ್ಗೆ ಸ್ಪಷ್ಟತೆಯನ್ನು ನೀಡದಿದ್ದಕ್ಕಾಗಿ” ಅವರು ಕರಡು ಮಸೂದೆಯ ಪ್ರತಿಯನ್ನು ಹರಿದು ಹಾಕಿದರು.

ಪರಮಾಣು ಇಂಧನ ವಲಯದಲ್ಲಿ ವಿದೇಶಿ ಕಂಪನಿಗಳ ಪ್ರವೇಶವನ್ನು ತಿವಾರಿ ವಿರೋಧಿಸದಿದ್ದರೂ, ಪೂರೈಕೆದಾರರ ಹೊಣೆಗಾರಿಕೆಯನ್ನು ನಿಗದಿಪಡಿಸಬೇಕು ಮತ್ತು ಮುಖ್ಯವಾಗಿ, ಪರಮಾಣು ಇಂಧನ ನಿಯಂತ್ರಣ ಮಂಡಳಿಯ ಸ್ವಾತಂತ್ರ್ಯವನ್ನು ಖಚಿತಪಡಿಸಿಕೊಳ್ಳಬೇಕು ಎಂದು ಅವರು ಆಗ್ರಹಿಸಿದರು. ಈ ಎರಡೂ ಕಳವಳಗಳನ್ನು ಮಸೂದೆ ಪರಿಹರಿಸಿಲ್ಲ ಎಂದು ತಿವಾರಿ ಅಸಮಾಧಾನ ವ್ಯಕ್ತಪಡಿಸಿದರು.

“ನಾವು ವಿದೇಶಿ ಪೂರೈಕೆದಾರರ ಮೇಲೆ ಅವಲಂಬಿತರಾಗಿರುವುದರಿಂದ ಪರಮಾಣು ಅಪಘಾತ ಸಂಭವಿಸಿದರೆ… ಪೂರೈಕೆದಾರರು ಹೊಣೆಗಾರರಾಗಬೇಕಲ್ಲವೇ?” ಎಂದು ಅವರು ಕೇಳಿದರು.

ಮಸೂದೆಯಲ್ಲಿ ನಿಗದಿಪಡಿಸಿದ ಹೊಣೆಗಾರಿಕೆಯ ಮೇಲಿನ 410 ಮಿಲಿಯನ್ ಡಾಲರ್ ಮಿತಿಯನ್ನು ಅವರು ಟೀಕಿಸಿದರು. ಭೋಪಾಲ್ ಅನಿಲ ದುರಂತದ ಸಮಯದಲ್ಲಿ ಮಿತಿ 470 ಮಿಲಿಯನ್ ಡಾಲರ್ ಆಗಿತ್ತು ಎಂದ ಅವರು, 10,000 ಕೋಟಿ ರೂ.ಗಳ ಮಿತಿಗೆ ಒತ್ತಾಯಿಸಿದರು.

ಸರ್ಕಾರ ನಡೆಸುವ ಸಂಸ್ಥೆಗಳಿಗೆ ವಿಮಾ ರಕ್ಷಣೆಯಿಂದ ವಿನಾಯಿತಿ ನೀಡಲಾಗುವುದು ಎಂಬ ಷರತ್ತನ್ನು ಅವರು ವಿರೋಧಿಸಿದರು. ದುರಂತದ ಸಂದರ್ಭದಲ್ಲಿ ಪರಿಹಾರವನ್ನು ಸಂಪೂರ್ಣವಾಗಿ ಸರ್ಕಾರವೇ ಭರಿಸುತ್ತದೆಯೇ ಎಂದು ಕೇಳಿದರು. ಮಸೂದೆಯಲ್ಲಿ ಪರಮಾಣು ತ್ಯಾಜ್ಯ ವಿಲೇವಾರಿಗೆ ಬಲವಾದ ಕಾರ್ಯವಿಧಾನದ ಕೊರತೆಯ ಬಗ್ಗೆಯೂ ಅವರು ಕಳವಳ ವ್ಯಕ್ತಪಡಿಸಿದರು.

“ಮನಮೋಹನ್ ಸಿಂಗ್ ತಾರತಮ್ಯ ನೀತಿಯನ್ನು ಮುರಿಯಲು ಪ್ರಯತ್ನಿಸಿದ್ದರು. ನೀವು (ಬಿಜೆಪಿ) ಆ ಕಾರ್ಯಕ್ರಮವನ್ನು ಹಳಿತಪ್ಪಿಸಲು ಪ್ರಯತ್ನಿಸಿದ್ದೀರಿ” ಎಂದು ತಿವಾರಿ ಹೇಳಿದರು. ಮಸೂದೆಯನ್ನು ಜೆಪಿಸಿ ಅಥವಾ ಸ್ಥಾಯಿ ಸಮಿತಿಗೆ ಕಳುಹಿಸಬೇಕು ಎಂದು ಒತ್ತಾಯಿಸಿದರು.

“ಖಾಸಗಿ ಸಮೂಹವೊಂದು ಭಾರತದಲ್ಲಿ ಪರಮಾಣು ಇಂಧನ ವಲಯವನ್ನು ಪ್ರವೇಶಿಸುವ ಯೋಜನೆಯನ್ನು ಘೋಷಿಸಿದ ಒಂದು ತಿಂಗಳ ನಂತರ ಈ ಮಸೂದೆಯನ್ನು ಅಂಗೀಕರಿಸಲಾಗಿದೆ ಎಂದು ತಿವಾರಿ ಆರೋಪಿಸಿದರು. ಇದು ಕಾಕತಾಳೀಯವೇ? ಎಂದು ಪ್ರಶ್ನಿಸಿದರು. ಇದಕ್ಕೆ ಆಡಳಿತ ಪಕ್ಷದವರು ಆಕ್ಷೇಪ ವ್ಯಕ್ತಪಡಿಸಿದರು. ಮಸೂದೆ ಮಂಡಿಸಿದ ಕೇಂದ್ರ ಸಚಿವ ಜಿತೇಂದ್ರ ಸಿಂಗ್, ಈ ಆರೋಪವನ್ನು ‘ಆಧಾರರಹಿತ ಮತ್ತು ರಾಜಕೀಯ ಪ್ರೇರಿತ’ ಎಂದು ಹೇಳಿದರು.

ತೃಣಮೂಲ ಕಾಂಗ್ರೆಸ್ ಸಂಸದ ಸೌಗತ ರೇ ಅವರು ಭಾರತದ ಪರಮಾಣು ಇಂಧನ ಕ್ಷೇತ್ರದಲ್ಲಿ ಪ್ರಮುಖ ಖಾಸಗಿ ಕಂಪನಿಗಳ ಪ್ರವೇಶವನ್ನು ವಿರೋಧಿಸಿದರು ಮತ್ತು ಹೊಣೆಗಾರಿಕೆ ಮಿತಿಯನ್ನು ಹೆಚ್ಚಿಸಬೇಕೆಂದು ಒತ್ತಾಯಿಸಿದರು.

ಸಿಪಿಐ(ಎಂಎಲ್) ಸಂಸದ ಸುದಾಮ ಪ್ರಸಾದ್, ಶಾಂತಿ ಮಸೂದೆ “ಸಾರ್ವಜನಿಕ ವಿರೋಧಿ, ಪರಿಸರ ವಿರೋಧಿ” ಮತ್ತು “ಖಾಸಗಿ ಸಂಸ್ಥೆಗಳಿಗೆ ಲಾಭ ಮಾಡಿಕೊಡುವ ಪ್ರಯತ್ತ ಎಂದರು. ಸರ್ಕಾರ ಭಾರತದ ಇಂಧನ ಅವಶ್ಯಕತೆಗಳನ್ನು ಪೂರೈಸಲು ಅಸಮರ್ಥವಾಗಿದೆಯೇ? ಎಂದು ಪ್ರಶ್ನಿಸಿದರು. ಇಂತಹ ಸೂಕ್ಷ್ಮ ಇಂಧನ ಮೂಲವನ್ನು ಖಾಸಗಿ ವಲಯಕ್ಕೆ ಹಸ್ತಾಂತರಿಸುವುದು ‘ಏಕಸ್ವಾಮ್ಯ’ಕ್ಕೆ ಕಾರಣವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.

ಬಿಜು ಜನತಾದಳದ (ಬಿಜೆಡಿ) ಸಂಸದ ರವೀಂದ್ರ ನಾರಾಯಣ್ ಬೆಹೆರಾ ಮಸೂದೆಯನ್ನು ಬೆಂಬಲಿಸಿದರು. “ಬಲವಾದ ಸಂಶೋಧನೆ ಮತ್ತು ಅಭಿವೃದ್ಧಿಯೊಂದಿಗೆ, ಭಾರತವು ಪರಮಾಣು ತಂತ್ರಜ್ಞಾನದಲ್ಲಿ ಸ್ವಾವಲಂಬನೆಯನ್ನು ಸಾಧಿಸಲು ಸಾಧ್ಯವಾಗಿದೆ ಮತ್ತು ಪರಮಾಣು ಕಾರ್ಯಕ್ರಮವನ್ನು ಜವಾಬ್ದಾರಿಯುತ ರೀತಿಯಲ್ಲಿ ನಿರ್ವಹಿಸುತ್ತಿದೆ” ಎಂದು ಅವರು ಹೇಳಿದರು. ಇಂಧನ ಕ್ಷೇತ್ರದ ವೈವಿಧ್ಯೀಕರಣವು ಗ್ರಾಹಕರಿಗೆ ವಿದ್ಯುತ್ ಬೆಲೆಗಳನ್ನು ಕಡಿಮೆ ಮಾಡಲು ಕಾರಣವಾಗಬಹುದು ಎಂದರು. ಈ ಮಸೂದೆ ಖಂಡಿತವಾಗಿಯೂ ನವ ಭಾರತ ನಿರ್ಮಾಣಕ್ಕೆ ಸಹಾಯ ಮಾಡುತ್ತದೆ ಎಂದು ಹೇಳಿದರು.

ಸಮಾಜವಾದಿ ಪಕ್ಷದ ಸಂಸದರಾದ ಆದಿತ್ಯ ಯಾದವ್ ಮತ್ತು ಪುಷ್ಪೇಂದ್ರ ಸರೋಜ್ ಅವರು ಮಸೂದೆಯು ಸರಿಯಾದ ತ್ಯಾಜ್ಯ ವಿಲೇವಾರಿಗೆ ಬದ್ಧವಾಗಿಲ್ಲ ಎಂಬಂತಹ ವಿವಿಧ ಆಧಾರದ ಮೇಲೆ ಮಸೂದೆಯನ್ನು ವಿರೋಧಿಸಿದರು ಮತ್ತು 2008ರಲ್ಲಿ ಬಿಜೆಪಿ ವಿರೋಧ ಪಕ್ಷದಲ್ಲಿದ್ದಾಗ ಭಾರತ-ಯುಎಸ್ ಪರಮಾಣು ಒಪ್ಪಂದವನ್ನು ವಿರೋಧಿಸಿತ್ತು ಎಂದು ಗಮನಸೆಳೆದರು.

ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು. ಈ ಮಸೂದೆ ‘ನ್ಯೂಕ್ಲಿಯರ್ ಅಲ್ಲ, ಅನ್‌ಕ್ಲಿಯರ್’ ಮತ್ತು ಅಪಾಯಕಾರಿ ಮಸೂದೆ ಎಂದರು. ಮಸೂದೆಯನ್ನು ಸ್ಥಾಯಿ ಸಮಿತಿ ಅಥವಾ ಜೆಪಿಸಿಗೆ ಕಳುಹಿಸಬೇಕೆಂದು ಆಗ್ರಹಿಸಿದರು.

ಮಸೂದೆ ಮಂಡಿಸಿದ ವಿಜ್ಞಾನ ಮತ್ತು ತಂತ್ರಜ್ಞಾನ ರಾಜ್ಯ ಸಚಿವ ಜಿತೇಂದ್ರ ಸಿಂಗ್, ಹೊಸ ಮಸೂದೆಯು 1962ರ ಪರಮಾಣು ಶಕ್ತಿ ಕಾಯ್ದೆ ಮತ್ತು 2010ರ ಪರಮಾಣು ಹಾನಿಗೆ ನಾಗರಿಕ ಹೊಣೆಗಾರಿಕೆ ಕಾಯ್ದೆಯನ್ನು ರದ್ದುಗೊಳಿಸುತ್ತದೆ. ಅವುಗಳನ್ನು ‘ಭಾರತದ ಪ್ರಸ್ತುತ ಮತ್ತು ಭವಿಷ್ಯದ ಇಂಧನ ಅವಶ್ಯಕತೆಗಳಿಗೆ ಹೊಂದಿಕೆಯಾಗುವ ಒಂದೇ, ಸಮಗ್ರ ಕಾನೂನೊಂದಿಗೆ’ ಬದಲಾಯಿಸಲು ಪ್ರಯತ್ನಿಸುತ್ತದೆ ಎಂದು ಹೇಳಿದರು.

ಮಸೂದೆಯು “ಪರಮಾಣು ಹಾನಿಗೆ ಪ್ರಾಯೋಗಿಕ ನಾಗರಿಕ ಹೊಣೆಗಾರಿಕೆ ಆಡಳಿತವನ್ನು ಮತ್ತು ಪರಮಾಣು ಶಕ್ತಿ ನಿಯಂತ್ರಣ ಮಂಡಳಿಗೆ ಶಾಸನಬದ್ಧ ಸ್ಥಾನಮಾನವನ್ನು ನೀಡಲು” ಅನುಮತಿಸುತ್ತದೆ ಎಂದು ಪ್ರತಿಪಾದಿಸಿದರು.

ಶಾಂತಿ ಮಸೂದೆಯು ಖಾಸಗಿ ಕಂಪನಿ ಅಥವಾ ಸರ್ಕಾರಿ ಉದ್ಯಮ ಅಥವಾ ಜಂಟಿ ಉದ್ಯಮಕ್ಕೆ ಪರಮಾಣು ವಿದ್ಯುತ್ ಯೋಜನೆ ಅಥವಾ ರಿಯಾಕ್ಟರ್ ನಿರ್ಮಿಸಲು, ಹೊಂದಲು, ನಿರ್ವಹಿಸಲು ಅಥವಾ ರದ್ದುಗೊಳಿಸಲು, ಸಾಗಿಸಬಹುದಾದ ಯುರೇನಿಯಂ -235 ರ ಪರಿವರ್ತನೆ, ಸಂಸ್ಕರಣೆ ಮತ್ತು ಪುಷ್ಟೀಕರಣ ಸೇರಿದಂತೆ ಪರಮಾಣು ಇಂಧನ ತಯಾರಿಕೆ, ಪರಮಾಣು ಇಂಧನದ ಆಮದು, ರಫ್ತು, ಸ್ವಾಧೀನ ಅಥವಾ ಸ್ವಾಧೀನಕ್ಕಾಗಿ ಪರವಾನಗಿಗಳನ್ನು ನೀಡಲು ಕೇಂದ್ರಕ್ಕೆ ಅವಕಾಶ ನೀಡುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...