ಬುಡಕಟ್ಟು ಹಕ್ಕುಗಳಿಗಾಗಿ ಕಳೆದ ಐದು ದಶಕಗಳಿಂದ ಹೋರಾಡುತ್ತಿರುವ ಫಾದರ್ ಸ್ಟ್ಯಾನ್ ಸ್ವಾಮಿ ಬಂಧನ ವಿರೋಧಿಸಿ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್(PUCL) ಬೆಂಗಳೂರಿನ ಮೌರ್ಯ ಸರ್ಕಲ್ನ ಮಹಾತ್ಮಾ ಗಾಂಧಿ ಪ್ರತಿಮೆಯ ಬಳಿ ಶನಿವಾರ ಪ್ರತಿಭಟನೆ ನಡೆಸಿತು.
ತನಿಖೆಗೆ ಸಹಕರಿಸುತ್ತಿರುವ 83 ವರ್ಷದ ವ್ಯಕ್ತಿಯನ್ನು NIA ಅಕ್ರಮವಾಗಿ ಬಂಧಿಸಿದಾಗ, ಜನರು ಸುಮ್ಮನಿರಬೇಕೇ? ಎಂದು ಪ್ರಶ್ನಿಸಿರುವ PUCL, ಭೀಮಾ ಕೊರೆಗಾಂವ್ ಪ್ರಕರಣದಲ್ಲಿ ಬಂಧನಕ್ಕೊಳಗಾದ ಇತರ ಎಲ್ಲರನ್ನೂ ಬಿಡುಗಡೆ ಮಾಡಬೇಕೆಂದು ಕೂಡಾ ಒತ್ತಾಯಿಸಿದೆ.
ಇದನ್ನೂ ಓದಿ: ’ಬಿಜೆಪಿಯದ್ದು ಕೊಳಕು ರಾಜಕೀಯ’-ಹೋರಾಟಗಾರ ಸ್ಟ್ಯಾನ್ ಸ್ವಾಮಿ ಬಂಧನಕ್ಕೆ ದೇಶದಾದ್ಯಂತ ಆಕ್ರೋಶ
ಫಾದರ್ ಸ್ಟಾನ್ ಸ್ವಾಮಿ ಬಂಧನವನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರೋಧಿಸಿದ್ದು, ಅವರಿಗೆ ನ್ಯಾಯ ಸಿಗಬೇಕು, ಅವರ ಬಂಧನ ಮತ್ತು ಜೈಲುವಾಸ ವಿಷಾದನೀಯ ಎಂದು ಹೇಳಿದ್ದಾರೆ.
“ಬುಡಕಟ್ಟು ಜನಾಂಗದವರ ಪ್ರಜಾಪ್ರಭುತ್ವದ ಮೌಲ್ಯಗಳ ಉಲ್ಲಂಘನೆಯನ್ನು ಅವರು ಪ್ರಶ್ನಿಸಿದ್ದಾರೆ. ಇದನ್ನು ಅಪರಾಧವೆಂದು ಪರಿಗಣಿಸುವುದು ಸಂವಿಧಾನ ವಿರೋಧಿಯಾಗಿದೆ. ಫಾದರ್ ಸ್ಟಾನ್ ಸ್ವಾಮಿ ದಶಕಗಳಿಂದ ಬುಡಕಟ್ಟು ಜನಾಂಗಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಭೂಮಿ ಮತ್ತು ಅರಣ್ಯ ಹಕ್ಕುಗಳಿಗಾಗಿ ನಡೆಸಿದ ಆಂದೋಲನಗಳಲ್ಲಿ ಬೆಂಬಲಿತ ಬುಡಕಟ್ಟು ಜನಾಂಗದವರ ವಿಷಯಗಳ ಬಗ್ಗೆಯೂ ಆಳವಾಗಿ ಅಧ್ಯಯನ ಮಾಡಿದ್ದಾರೆ. ಅವರ ವಿರುದ್ಧದ ಕ್ರಮವು ಭಿನ್ನಾಭಿಪ್ರಾಯದ ದಮನಗಳನ್ನು ಅಡಗಿಸುವುದಾಗಿದೆ. ಅವರ ಬಂಧನ ಮತ್ತು ಜೈಲುವಾಸವು ವಿಷಾದನೀಯವಾಗಿದೆ” ಎಂದು ಪಿಣರಾಯಿ ಹೇಳಿದ್ದಾರೆ.
ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ 83 ವರ್ಷದ ಸ್ಟ್ಯಾನ್ ಸ್ವಾಮಿಯನ್ನು NIA ನಿನ್ನೆ ಜಾಖಂಡ್ನ ರಾಂಚಿಯಲ್ಲಿ ಬಂಧಿಸಿದ್ದು, ಬುಡಕಟ್ಟು ಜನರ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಿರುವ ಸ್ಟ್ಯಾನ್ ಸ್ವಾಮಿಯ ಮೇಲೆ ಭಯೋತ್ಪಾದನೆ ತಡೆ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ಕಠಿಣ ವಿಭಾಗಗಳ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಲಾಗಿದೆ.
ಇದನ್ನೂ ಓದಿ: ಭೀಮಾ ಕೋರೆಗಾಂವ್: 83 ವರ್ಷದ ಹಿರಿಯ ಹೋರಾಟಗಾರ ಸ್ಟ್ಯಾನ್ ಸ್ವಾಮಿ ಬಂಧಿಸಿದ NIA