ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ನಡೆಯಲಿರುವ 2021ರ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಆದರೆ ಅದರಲ್ಲಿ ಮಾಜಿ ಮುಖ್ಯಮಂತ್ರಿ ವಿ.ನಾರಾಯಣಸಾಮಿ ಅವರ ಹೆಸರಿಲ್ಲದಿರುವುದು ಕಂಡುಬಂದಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಪುದುಚೇರಿಯ ಅಖಿಲಭಾರತ ಕಾಂಗ್ರೆಸ್ ಸಮಿತಿ(ಎಐಸಿಸಿ) ಉಸ್ತುವಾರಿ ದಿನೇಶ್ ಗುಂಡುರಾವ್, “ಮಾಜಿ ಮುಖ್ಯಮಂತ್ರಿ ವಿ.ನಾರಾಯಣಸಾಮಿ ಪುದುಚೇರಿಯಲ್ಲಿ ನಡೆಯಲಿರುವ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಅವರು ಚುನಾವಣಾ ಪ್ರಚಾರ ಹಾಗೂ ನಿರ್ವಹಣೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲಿದ್ದಾರೆ” ಎಂದು ಹೇಳಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ಪಕ್ಷ ಪುದುಚೇರಿ ಅಸೆಂಬ್ಲಿ ಚುನಾವಣೆಗೆ 14 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. 30 ಸದಸ್ಯ ಬಲದ ವಿಧಾನಸಭೆಯಲ್ಲಿ ಐದು ಸೀಟುಗಳು ಎಸ್ಸಿ ಅಭ್ಯರ್ಥಿಗಳಿಗೆ ಮೀಸಲಾಗಿದೆ. ಪುದುಚೇರಿಯ ವಿಧಾನಸಭೆಗೆ ಎಪ್ರಿಲ್ 6ರಂದು ಚುನಾವಣೆ ನಡೆಯಲಿದೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ನಾರಾಯಣಸಾಮಿ ನೇತೃತ್ವದ ಕಾಂಗ್ರೆಸ್ 5 ವರ್ಷವನ್ನು ಪೂರ್ಣಗೊಳಿಸುವ ಮೊದಲೇ ಪತನಗೊಂಡಿತ್ತು. ಫೆಬ್ರವರಿ 22ರಂದು ಬಹುಮತ ಸಾಬೀತಿಗೆ ಮೊದಲೇ ನಾರಾಯಣಸಾಮಿ ರಾಜೀನಾಮೆ ನೀಡಿದ್ದರು.
2016ರ ಚುನಾವಣೆಯಲ್ಲಿ ಕಾಂಗ್ರೆಸ್ 15 ಸ್ಥಾನಗಳಲ್ಲಿ ಜಯ ಸಾಧಿಸಿತ್ತು. ಅಖಿಲ ಭಾರತ ಎನ್ ಆರ್ ಕಾಂಗ್ರೆಸ್ 8 ಸೀಟುಗಳು, ಎಐಎಡಿಎಂಕೆ 4 ಸ್ಥಾನಗಳನ್ನು ಗೆದ್ದರೆ, ಡಿಎಂಕೆ ಎರಡು ಸ್ಥಾನಗಳನ್ನು ಜಯಿಸಿದ್ದವು. ಬಿಜೆಪಿ ಒಂದೂ ಸೀಟು ಗೆದ್ದಿರಲಿಲ್ಲ.
ಇದನ್ನೂ ಓದಿ: ಸಂದರ್ಶಕ ಉಪನ್ಯಾಸಕಿಯಾಗಲು ನೀತಾ ಅಂಬಾನಿಗೆ ಪ್ರಸ್ತಾಪ: ಬನಾರಸ್ ವಿವಿಯ ವಿದ್ಯಾರ್ಥಿಗಳ ಪ್ರತಿಭಟನೆ