ಪಂಜಾಬ್ ರೈತರು ಗೋ ಬ್ಯಾಕ್ ಮೋದಿ ಎಂಬ ಘೋಷಣೆಗಳೊಂದಿಗೆ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ ಕಾರಣಕ್ಕೆ ಫ್ಲೈ ಓವರ್ ಮೇಲೆಯೇ 15 ರಿಂದ 20 ನಿಮಿಷ ಕಾಲ ಪ್ರಧಾನಿ ನರೇಂದ್ರ ಮೋದಿಯವರು ಸಿಲುಕಿಕೊಂಡರು. ಬಳಿಕ ಫಿರೋಜ್ಪುರದ ರ್ಯಾಲಿಯನ್ನು ರದ್ದುಗೊಳಿಸಿ ದೆಹಲಿಗೆ ವಾಪಸ್ ತೆರಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ಪಂಜಾಭ್ ಭೇಟಿಗೆ ಮೊದಲಿನಿಂದಲೂ ರೈತರು ವಿರೋಧ ವ್ಯಕ್ತಪಡಿಸಿದ್ದರು. ಎರಡು ವರ್ಷಗಳ ನಂತರ ರಾಜ್ಯಕ್ಕೆ ಇದು ಮೋದಿಯವರ ಮೊದಲ ಭೇಟಿಯಾಗಿತ್ತು. ಪಾಕಿಸ್ತಾನದ ಗಡಿಯಲ್ಲಿರುವ ಫಿರೋಜ್ಪುರಕ್ಕೆ ಪ್ರಮುಖ ಧಾರ್ಮಿಕ ಕೇಂದ್ರಗಳು ಮತ್ತು ಮೂರು ಆರೋಗ್ಯ ಸಂಸ್ಥೆಗಳಿಗೆ ಹೋಗಲು ಸಹಾಯಕವಾಗುವ ಮೆಗಾ ರೋಡ್ ಕಾರಿಡಾರ್ಗಳು ಸೇರಿದಂತೆ 42,000 ಕೋಟಿ ರೂಪಾಯಿಗಳಿಗೂ ಹೆಚ್ಚು ಮೌಲ್ಯದ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಲು ನಿರ್ಧರಿಸಲಾಗಿತ್ತು. ಈ ಕುರಿತು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದರು.
ಮೋದಿ ಆಗಮನದ ಸುದ್ದಿಯಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ #GoBackModi #FarmersProtest ಹ್ಯಾಶ್ಟ್ಯಾಗ್ಗಳು ಟ್ರೆಂಡ್ ಆಗಲು ಶುರುವಾಗಿದ್ದವು.
ಪಂಜಾಬ್ನ ಫಿರೋಜ್ಪುರದಲ್ಲಿ ಇಂದು ನಡೆಯಬೇಕಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ರ್ಯಾಲಿಯನ್ನು “ಕೆಲವು ಕಾರಣಗಳಿಗಾಗಿ” ಮುಂದೂಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯ ಹೇಳಿದರು. 15-20 ನಿಮಿಷ ಪ್ರಧಾನಿ ಮೋದಿ ಫ್ಲೈ ಓವರ್ ಮೇಲೆ ಅಷ್ಟು ಹೊತ್ತು ಸಿಲುಕಿಕೊಳ್ಳಲು ರಾಜ್ಯ ಸರ್ಕಾರದ ಭದ್ರತಾ ಲೋಪವೇ ಕಾರಣ ಎಂದು ಗೃಹ ಸಚಿವಾಲಯ ಆರೋಪಿಸಿತು.
ಲಖಿಂಪುರ್ ಖೇರಿ ಹತ್ಯಾಕಾಂಡದ ಆರೋಪಿ ಆಶಿಶ್ ಮಿಶ್ರಾ ತಂದೆ ಸಚಿವ ಅಜಯ್ ಮಿಶ್ರಾ ತೇನಿಯನ್ನು ಸಂಪುಟದಿಂದ ವಜಾಗೊಳಿಸದೇ ಇರುವುದು, ರೈತರ ಮೇಲೆ ಎಫ್ಐಆರ್ ದಾಖಲಿಸಿರುವುದು, ಎಂಎಸ್ಪಿ ಕಾನೂನು ಶೀಘ್ರ ಜಾರಿ ಮಾಡದಿರುವುದು ಸೇರಿದಂತೆ ಹಲವು ಘಟನೆಗಳ ವಿರುದ್ಧ ರೈತರು ಪ್ರತಿಭಟನೆ ನಡೆಸಿದ್ದಾರೆ.
ಬಿಜೆಪಿ ನಾಯಕರು ‘ಭದ್ರತಾ ಲೋಪ’ ಎಂಬುದನ್ನೇ ಹೆಚ್ಚು ಪ್ರಚಾರ ಮಾಡುತ್ತಿದ್ದಾರೆ. ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ಖಾಲಿ ಕುರ್ಚಿಗಳು ಹರಿದಾಡಿವೆ. ಈ ಫೋಟೋಗಳನ್ನು ಕಿಸಾನ್ ಏಕ್ತಾ ಮೋರ್ಚಾ ಟ್ವಿಟರ್ ಖಾತೆಯಲ್ಲೂ ಹಂಚಿಕೊಳ್ಳಲಾಗಿದೆ. ಮೋದಿ ಪಾಲ್ಗೊಳ್ಳಬೇಕಿದ್ದ ಕಾರ್ಯಕ್ರಮದಲ್ಲಿ ಖಾಲಿ ಕುರ್ಚಿಗಳು ರಾರಾಜಿಸಿವೆ ಎಂದು ನೆಟ್ಟಿಗರು ವ್ಯಂಗ್ಯ ಮಾಡಿ, ‘ಇದೇ ಭದ್ರತಾ ಲೋಪ’ ಎಂದಿದ್ದಾರೆ.
ಇದರ ಜೊತೆಗೆ ರೈತ ಚಳವಳಿಯ ಸಂದರ್ಭದಲ್ಲಿ ಕೇಂದ್ರ ಸರ್ಕಾರ ರೈತರೊಂದಿಗೆ ಕಟುವಾಗಿ ವರ್ತಿಸಿದ ಚಿತ್ರಗಳನ್ನು ಅನೇಕರು ಹಂಚಿಕೊಂಡಿದ್ದಾರೆ. ಬಿಜೆಪಿ ನಾಯಕರು ‘ಕಾಂಗ್ರೆಸ್’ ಪಕ್ಷವನ್ನು ದೂಷಿಸುತ್ತಿದ್ದರೂ ರೈತರ ಹೋರಾಟವನ್ನು ಪ್ರಸ್ತಾಪಿಸುತ್ತಿಲ್ಲ. ಆದರೆ ನೆಟ್ಟಿಗರು ರೈತರ ಹೋರಾಟವನ್ನು ನೆಪಿಸುತ್ತಿರುವುದನ್ನು ಕಾಣಬಹುದು.
ಬರಹಗಾರ್ತಿ ಗಾಯತ್ರಿ ಎಚ್.ಎನ್. ಹೀಗೆ ಬರೆದಿದ್ದಾರೆ: “ಮೇಘಾಲಯದ ಹಾಲಿ ರಾಜ್ಯಪಾಲ ಹಾಗೂ ಹಿರಿಯ ಬಿಜೆಪಿ ನಾಯಕ ಸತ್ಯಪಾಲ್ ಮಲಿಕ್ ಇತ್ತೀಚೆಗೆ ಪ್ರಧಾನಮಂತ್ರಿ ಮೋದಿಯವರು “ರೈತರೇನು ನಮಗಾಗಿ ಸತ್ತರೇ?” ಅಂದುಬಿಟ್ಟರು ಅನ್ನುತ್ತಾ, ಈ ಬಗ್ಗೆ ಅಮಿತ್ ಷಾ`ಗೆ ಹೇಳಿದಾಗ ಅವರು “ಅವನಿಗೆ ತಲೆ ತಿರುಗಿದೆ, ನೀವೇನೂ ಯೋಚನೆ ಮಾಡಬೇಡಿ” ಅನ್ನುವರ್ಥದಲ್ಲಿ ಮಾತಾಡಿದರು ಎಂದು ಮೋದಿಯನ್ನು ದೂರಿಕೊಂಡ (ಅದೇವೇಳೆಗೆ ಷಾ`ರನ್ನು ಒಪ್ಪವಿಟ್ಟುಕೊಂಡ) ವಿಡಿಯೋ ತುಣುಕು ಮೊನ್ನೆ ಮೊನ್ನೆ ಸಖತ್ ವೈರಲ್ ಆಯಿತು. ಅದರ ಬೆನ್ನಲ್ಲೇ ಇವತ್ತು ಪಂಜಾಬಿನಲ್ಲಿ ‘ಭದ್ರತಾ ಲೋಪ’ದ ಸುದ್ದಿ ಬಂದಿದೆ. ಇದ್ದಕ್ಕಿದ್ದ ಹಾಗೇ ಬಿಜೆಪಿಯ ಹಿರಿತಲೆಯೊಂದು ಮೋದಿ ವಿರುದ್ಧ ಬಹಿರಂಗವಾಗಿ ಮಾತಾಡಿದ್ದು, ಅಮಿತ್ಷಾರನ್ನು ಒಪ್ಪ ಇಟ್ಟುಕೊಂಡಿದ್ದು ಟ್ರೋಲ್ ಮಾಡಿ ಬಿಸಾಡುವ ಸಂಗತಿ ಅಲ್ಲವೇ ಅಲ್ಲ. ಅದು ಮೋದಿಗೆ ಅದರ ಸಾಕುತಾಯಿ ಕೊಟ್ಟ ಸ್ಪಷ್ಟ ಸಂದೇಶವಾಗಿರಬಹುದು. ನೀನು ಎಷ್ಟು ಜನಪ್ರಿಯನಾದರೂ ಎಷ್ಟು ಭಕ್ತರನ್ನು ಬೆಳೆಸಿದರೂ ನಿನ್ನ ಜುಟ್ಟು ನಮ್ಮ ಕೈಲಿದೆ ಅನ್ನುವ ಎಚ್ಚರಿಕೆಯಾಗಿರಬಹುದು. ಇದೇ ಹಿನ್ನೆಲೆಯಲ್ಲಿ ಇವತ್ತಿನ ಭದ್ರತಾಲೋಪವನ್ನೂ ನೋಡುವ ಮನಸಾಗುತ್ತಿದೆ. ಪಂಜಾಬ್ ಮುಖ್ಯಮಂತ್ರಿ ಇದಕ್ಕೆ ಹೊಣೆಗಾರರೇನೋ ಹೌದು. ಆದರೆ ಚುನಾವಣೆಗೆ ಎದುರಾಗಿ ರಾಜ್ಯದ ಮುಖ್ಯಮಂತ್ರಿಯೊಬ್ಬರು ಇಂಥಾ ಮೂರ್ಖತನ ಮಾಡಲಾರರು ಎಂದೇ ಬಲವಾಗಿ ಅನಿಸುತ್ತಿದೆ. ಆದರೂ ಹೀಗಾಗಿದೆ ಅಂದರೆ ಇದರ ಒಳಮರ್ಮ ಏನೋ ಗಹನವಾದ್ದೇ ಇರಬೇಕು. ಮತ್ತು, ಅದು ನೇರವಾಗಿ ಮೋದಿ ಮತ್ತವರ ಪಕ್ಷಕ್ಕೆ ಸಂಬಂಧಿಸಿದ್ದಿರಬೇಕು. ಎಷ್ಟೆಂದರೂ ಇದು ರಾಜಕಾರಣ. ಕೆಲಸ ಮುಗಿದ ಮೇಲೆ ಆಯುಧವನ್ನು ಮುರಿದು ಬಿಸಾಡುವುದು ಹಳೇಹಪ್ಪಟ್ಟು ರಾಜನೀತಿ. ನನಗೇಕೋ ಆ ವ್ಯಕ್ತಿ, ಸಂಸ್ಥೆಯೊಂದರ ಅಜೆಂಡಾ ಸಾಕಾರಗೊಳಿಸುವ ಸಂಚಿಗೆ ಬಳಕೆಯಾದ ಹೆಡ್ಡನಂತೆ ಕಾಣತೊಡಗಿದ್ದಾರೆ”
ಸಿನಿಮಾ ವಿಮರ್ಶಕ ಹರಿಪರಾಕ್ ಹೀಗೆ ಬರೆದಿದ್ದಾರೆ:
ಯುವಬರಹಗಾರ ಭುವನ್ ಅವರು ರೈತ ಹೋರಾಟದ ಚಿತ್ರವನ್ನು ಹಂಚಿಕೊಂಡು ಇಂದಿನ ಘಟನೆಯನ್ನು ವಿಶ್ಲೇಷಿಸಿದ್ದಾರೆ.
ಚಿತ್ರ 1: ಒಕ್ಕೂಟ ಸರ್ಕಾರ ಜಾರಿ ತರಲು ಹೊರಟಿದ್ದ 3 ಕರಾಳ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯ ಗಡಿಗಳಲ್ಲಿ ರೈತರನ್ನು ತಡೆಯಲು ಸರ್ಕಾರ ರಸ್ತೆಯಲ್ಲಿ ಮೊಳೆಗಳನ್ನು ನೆಟ್ಟಿತು. ಚಿತ್ರ 2:ಪಂಜಾಬ್ ರೈತರಿಂದ ರಸ್ತೆ ತಡೆ, ಫ್ಲೈ ಓವರ್ ನಲ್ಲಿ ಸುಮಾರು 15 ಕ್ಕೂ ಹೆಚ್ಚು ನಿಮಿಷ ಸಿಲುಕಿ, ಫಿರೋಜ್ಹ್ ಪುರ ರ್ಯಾಲಿ ರದ್ದು ಗೊಳಿಸಲಾಯಿತು.
ಎನ್.ಎಸ್.ಆರ್. ಅವರು “ಪಂಜಾಬಿನ ಜನತೆ ಮೋದಿಯವರ ಇಂದಿನ ಚುನಾವಣೆ ರ್ಯಾಲಿ ರದ್ದು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ದೆಹಲಿಯಲ್ಲಿ ರೈತರು ಒಂದು ವರ್ಷ ಬಿಸಿಲು, ಮಳೆ, ಚಳಿಯನ್ನು ಲೆಕ್ಕಿಸದೆ ಕೂತಿದ್ದಾಗ ಅವರನ್ನು ಭೇಟಿಯಾಗಿ ಏನ್ ನಿಮ್ಮ ಸಮಸ್ಯೆ ಎಂದು ವಿಚಾರಿಸದೆ ಈಗ ಪಕ್ಷದ ಪರವಾಗಿ ಮತ ಕೇಳಲು ಹೋಗುವುದು ಹಾಸ್ಯಾಸ್ಪದವಾಗಿದೆ. ಪ್ರಧಾನಿ ಹುದ್ದೆಯಲ್ಲಿರುವವರು ಪಕ್ಷದ ಅಧ್ಯಕ್ಷರ ಹಾಗೆ ಸದಾಕಾಲವೂ ಒಂದಿಲ್ಲೊಂದು ರಾಜ್ಯದ ಚುನಾವಣೆ ಪ್ರಚಾರದಲ್ಲಿ ತೊಡಗಿಕೊಳ್ಳುವುದು ಸರಿಯಲ್ಲ” ಎಂದು ಪೋಸ್ಟ್ ಮಾಡಿದ್ದಾರೆ.
ಚಿಂತಕ ಕೆ.ಎಲ್.ಚಂದ್ರಶೇಖರ್ ಐಜೂರು ಅವರು ಪಿ.ಲಂಕೇಶ್ ಅವರ ನೀಲು ಕಾವ್ಯದ ಸಾಲುಗಳನ್ನು ಹಂಚಿಕೊಂಡು ಇಂದಿನ ಘಟನೆಯನ್ನು ವಿಮರ್ಶಿಸಿದ್ದಾರೆ.
“ಚಪ್ಪಾಳೆಗಳ ಸ್ಫೂರ್ತಿಯಿಂದ ಹುಟ್ಟಿದ ನಾಯಕಚಪ್ಪಾಳೆಗಳ ನಡುವೆಯೇ ಹೀನಾಯವಾಗಿಸಾಯುವನು”-ನೀಲು
ಅನೇಕರು ವ್ಯಂಗ್ಯ ಮಾಡಿರುವುದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ನೋಡಬಹುದಾಗಿದೆ.