ಬುಧವಾರ ಪ್ರಧಾನಿ ನರೇಂದ್ರ ಮೋದಿಯವರ ಪಂಜಾಬ್ ಪ್ರವಾಸದ ವೇಳೆ ಫಿರೋಜ್ಪುರ-ಮೊಗಾ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಭದ್ರತಾ ಲೋಪಕ್ಕೆ ಕಾರಣವಾದ ಅಪರಿಚಿತ ವ್ಯಕ್ತಿಗಳ ವಿರುದ್ಧ ಫಿರೋಜ್ಪುರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
100 ಕ್ಕೂ ಹೆಚ್ಚು ಜನರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಕುಲ್ಗರ್ಹಿ ಸ್ಟೇಷನ್ ಹೌಸ್ ಆಫೀಸರ್ ಬೀರಬಲ್ ಸಿಂಗ್ ಶುಕ್ರವಾರ ತಿಳಿಸಿದ್ದು, ಬೇರೆ ಯಾವುದೇ ವಿವರಗಳನ್ನು ಹಂಚಿಕೊಳ್ಳಲು ನಿರಾಕರಿಸಿದ್ದಾರೆ.
“ಇದು ಸೂಕ್ಷ್ಮ ಪ್ರಕರಣವಾಗಿದ್ದು ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸದಂತೆ ನಮಗೆ ಸೂಚನೆಗಳು ಬಂದಿವೆ. ಈ ಕುರಿತು ತನಿಖೆ ನಡೆಸಲಾಗುತ್ತಿದೆ. ಯಾವುದೇ ವ್ಯಕ್ತಿಯನ್ನು ಬಂಧಿಸಿಲ್ಲ ಮತ್ತು ವಶಕ್ಕೆ ಪಡೆದಿಲ್ಲ” ಎಂದು ಎಸ್ಎಚ್ಒ ಹೇಳಿದ್ದಾರೆ.
ಅಪರಿಚಿತ ವ್ಯಕ್ತಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರೂ, ಬುಧವಾರ ಸಂಜೆ ಭಾರತೀಯ ಕಿಸಾನ್ ಯೂನಿಯನ್ (ಕ್ರಾಂತಿಕಾರಿ) ಸದಸ್ಯರು ಪ್ರಧಾನಿ ಬೆಂಗಾವಲು ಪಡೆ ಸಂಚಾರವನ್ನು ಸ್ಥಗಿತಗೊಳಿಸಿದ್ದು ನಾವೇ ಎಂದು ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.
ಇದನ್ನೂ ಓದಿ: ಪಂಜಾಬ್ ಭದ್ರತಾ ಲೋಪ ಆರೋಪ: ಹೊಸ ವಿಡಿಯೊ ವೈರಲ್ ನೊಂದಿಗೆ ಮತ್ತಷ್ಟು ಪ್ರಶ್ನೆಗಳು
ಇದರ ನಡುವೆಯೇ ಘಟನೆಯ ಸಮಯದಲ್ಲಿ ಮಾಡಲಾಗಿರುವ ಹೊಸ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿವಾದದ ಬಗ್ಗೆ ಆಡಳಿತರೂಢ ಬಿಜೆಪಿಯ ಸಚಿವರು ಮತ್ತು ನಾಯಕರ ಹೇಳಿಕೆಗಳ ಬಗ್ಗೆ ಮತ್ತಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಪ್ರಧಾನಿ ಮೋದಿಯ ಕಾರು ಫ್ಲೈಓವರ್ನಲ್ಲಿ ನಿಂತಿರುವಾಗ, ಅವರ ಕಾರಿನ ತೀರಾ ಹತ್ತಿರದಲ್ಲೇ ಒಂದಷ್ಟು ಜನರು ಬಿಜೆಪಿ ಧ್ವಜವನ್ನು ಬೀಸುತ್ತಾ, ಘೋಷಣೆ ಕೂಗುವುದನ್ನು ಪ್ರತಿಭಟನಾ ನಿರತ ರೈತರು ಪ್ರಧಾನಿಯನ್ನು ತಡೆದಿದ್ದಾರೆ ಎಂದು ಮಾಧ್ಯಮಗಳು ಬುಧವಾರ ಸುದ್ದಿ ಮಾಡಿದ್ದವು. ಆದರೆ ಡಿಜಿಟಲ್ ಮಾಧ್ಯಮಗಳು, ಪ್ರಧಾನಿಯ ಕಾರಿನ ತೀರಾ ಹತ್ತಿರದಲ್ಲಿ ಇದ್ದ ಗುಂಪು ರೈತರ ಗುಂಪಲ್ಲ, ಬಿಜೆಪಿ ಕಾರ್ಯಕರ್ತರಾಗಿದ್ದು ಅವರ ಕೈಯ್ಯಲ್ಲಿ ಇದ್ದಿದ್ದು, ಬಿಜೆಪಿ ಧ್ವಜ ಎಂದು ಸ್ಪಷ್ಟವಾಗಿ ತೋರಿಸಿವೆ.
ವಿಡಿಯೊದಲ್ಲಿ, ಬಿಜೆಪಿ ಕಾರ್ಯಕರ್ತರು ಪ್ರಧಾನಿಯ ಕಾರಿಗಿಂತ ಕೆಲವೇ ಮೀಟರ್ ಅಂತರದಲ್ಲಿ ನಿಂತು ಧ್ವಜವನ್ನು ಬೀಸುತ್ತಾ ಘೋಷಣೆ ಕೂಗುತ್ತಿದ್ದಾರೆ. ಜನರು ಹಿಡಿದಿರುವ ಧ್ವಜವು ಬಿಜೆಪಿಯದ್ದಾಗಿದ್ದು, ನರೇಂದ್ರ ಮೋದಿ ಜಿಂದಾಬಾದ್ ಎಂದು ಘೋಷಣೆ ಕೂಗುತ್ತಿದ್ದಾರೆ. ಎರಡು ರಸ್ತೆಗಳಿರುವ ಫ್ಲೈಓವರ್ನಲ್ಲಿ ಒಂದು ರಸ್ತೆಯಲ್ಲಿ ಪ್ರಧಾನಿಯ ಕಾರು ಮತ್ತು ಅವರ ಬೆಂಗಾವಲು ಇದ್ದು, ಇನ್ನೊಂದು ರಸ್ತೆಯಲ್ಲಿ ಜನರು ಘೋಷಣೆ ಕೂಗುತ್ತಿದ್ದಾರೆ.
ಈ ರಸ್ತೆಯಲ್ಲಿ ಬಸ್ಸು ಮತ್ತು ಇತರ ವಾಹನ ನಿಂತಿರುವುದು ಕೂಡಾ ಕಾಣುತ್ತದೆ. ಜೊತೆಗೆ ಘೋಷಣೆ ಕೂಗುತ್ತಿರುವ ವ್ಯಕ್ತಿಗಳ ಮುಖವೂ ಸ್ಪಷ್ಟವಾಗಿದೆ. ಆದರೆ ಯಾರೊಬ್ಬರೂ ಅವರನ್ನು ಚದುರಿಸುವುದಾಗಲಿ, ದೂರ ಕಳಿಸುವುದಾಗಲಿ ಮಾಡುತ್ತಿಲ್ಲ. ಹೊಸ ವೈರಲ್ ವಿಡಿಯೊವನ್ನು ಹಲವಾರು ಜನರು ಹಂಚಿ ಕೊಂಡಿದ್ದು, ಅಲ್ಲಿಗೆ ಬಿಜೆಪಿ ಕಾರ್ಯಕರ್ತರು ಹೇಗೆ ಬಂದರು? ಇದು ಭದ್ರತಾ ಲೋಪವಲ್ಲವೇ? ಎಂದು ಪ್ರಶ್ನಿಸಿದ್ದಾರೆ.