ಪ್ರಶ್ನೆ ಪತ್ರಿಕೆ ಸೋರಿಕೆಯಾದ ಹಿನ್ನೆಲೆಯಲ್ಲಿ ಭಾನುವಾರ ನಡೆಯಬೇಕಿದ್ದ ‘ಯುಪಿಟಿಇಟಿ’ ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ ಎಂದು ಕಾನೂನು ಮತ್ತು ಸುವ್ಯವಸ್ಥೆ ಹೆಚ್ಚುವರಿ ಮಹಾನಿರ್ದೇಶಕ ಪ್ರಶಾಂತ್ ಕುಮಾರ್ ಪರೀಕ್ಷೆ ಪ್ರಾರಂಭವಾಗುವ ಸ್ವಲ್ಪ ಸಮಯದ ಮೊದಲು ಪ್ರಕಟಿಸಿದ್ದಾರೆ. ಸುಮಾರು 19.99 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಉತ್ತರ ಪ್ರದೇಶ ಶಿಕ್ಷಕರ ಅರ್ಹತಾ ಪರೀಕ್ಷೆಗೆ (UPTET) ಇಂದು ಹಾಜರಾಗಬೇಕಿತ್ತು.
ಪ್ರಕರಣದ ಹಿನ್ನಲೆಯಲ್ಲಿ ವಿಶೇಷ ಕಾರ್ಯಪಡೆಯು (ಎಸ್ಟಿಎಫ್) ಉತ್ತರ ಪ್ರದೇಶದ ವಿವಿಧ ನಗರಗಳಿಂದ ತಾಂತ್ರಿಕ ಮತ್ತು ಇತರ ಗುಪ್ತಚರಗಳನ್ನು ಬಳಸಿಕೊಂಡು ಕಳೆದ ರಾತ್ರಿ 23 ಜನರನ್ನು ಬಂಧಿಸಿದೆ ಎಂದು ಪ್ರಶಾಂತ್ ಕುಮಾರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಎಸ್ಟಿಎಫ್ ಬಂಧಿಸಿರುವವರಲ್ಲಿ ಲಕ್ನೋದಿಂದ ನಾಲ್ವರು, ಪ್ರಯಾಗ್ರಾಜ್ನಿಂದ 13, ಮೀರತ್ನಿಂದ ಮೂವರು ಮತ್ತು ಕೌಶಂಬಿ ಜಿಲ್ಲೆಯ ಒಬ್ಬರು ಸೇರಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಉತ್ತರ ಪ್ರದೇಶ: ದಲಿತ ಕುಟುಂಬದ ನಾಲ್ವರ ಕೊಲೆ, ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಶಂಕೆ
“ಆರೋಪಿಗಳಿಂದ ಪ್ರಶ್ನೆ ಪತ್ರಿಕೆಯ ಫೋಟೊಕಾಪಿಯನ್ನು ಪಡೆಯಲಾಗಿದ್ದು, ಅದನ್ನು ಸರ್ಕಾರದೊಂದಿಗೆ ಹಂಚಿಕೊಳ್ಳಲಾಗಿದೆ. ಇದು ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳ ಒಂದೇ ಸೆಟ್ ಎಂಬುದಾಗಿ ಬೆಳಕಿಗೆ ಬಂದಿದೆ. ಆದ್ದರಿಂದ ತಕ್ಷಣವೇ ಈ ಪರೀಕ್ಷೆಗಳನ್ನು ರದ್ದುಪಡಿಸಲು ಸರ್ಕಾರ ನಿರ್ಧರಿಸಿದೆ. ಮುಂಬರುವ ಒಂದು ತಿಂಗಳಲ್ಲಿ ಪರೀಕ್ಷೆಗಳನ್ನು ನಡೆಸಲಾಗುವುದು” ಎಂದು ಪ್ರಶಾಂತ್ ಕುಮಾರ್ ಹೇಳಿದ್ದಾರೆ.
“ಈ ಪರೀಕ್ಷೆಯಲ್ಲಿನ ಎಲ್ಲಾ ವೆಚ್ಚಗಳನ್ನು ಸರ್ಕಾರವು ಭರಿಸಲಿದೆ. ಅಭ್ಯರ್ಥಿಗಳು ಶುಲ್ಕವನ್ನು ಪಾವತಿಸಬೇಕಾಗಿಲ್ಲ ಅಥವಾ ಪರೀಕ್ಷಾ ಮೂನೆಯನ್ನು ಭರ್ತಿ ಮಾಡಬೇಕಾಗಿಲ್ಲ. ಇದಲ್ಲದೇ, UPSRTC ಬಸ್ಸುಗಳ ಮೂಲಕ ಆಯಾ ಅಭ್ಯರ್ಥಿಗಳ ಮನೆಗೆ ಉಚಿತವಾಗಿ ಅವರನ್ನು ಕಳುಹಿಸಲಾಗಿದೆ. ಪ್ರಕರಣವನ್ನು ಉತ್ತರ ಪ್ರದೇಶದ ಎಸ್ಟಿಎಫ್ ತನಿಖೆ ನಡೆಸಲಿದ್ದು, ಸೋರಿಕೆಯಲ್ಲಿ ಭಾಗಿಯಾಗಿರುವ ವ್ಯಕ್ತಿಗಳು ಅಥವಾ ಸಂಸ್ಥೆಗಳನ್ನು ಕಾನೂನಿನ ಮುಂದೆ ತರಲಾಗುವುದು” ಪ್ರಶಾಂತ್ ಹೇಳಿದ್ದಾರೆ.
ಭಾನುವಾರ ಬೆಳಗಿನ ಜಾವದವರೆಗೂ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಪರೀಕ್ಷಾ ಕೇಂದ್ರಗಳಿಗೆ ತಲುಪಿರಲಿಲ್ಲ. ಪ್ರಸ್ತುತ ಪರೀಕ್ಷಾ ಕೇಂದ್ರಗಳಲ್ಲಿನ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿಗಳಿಂದ ಮೊಬೈಲ್ ಫೋನ್ ಮತ್ತು ಪ್ರಶ್ನೆ ಪತ್ರಿಕೆಗಳ ನಕಲು ಪ್ರತಿಯನ್ನು ವಶಪಡಿಸಿಕೊಳ್ಳಲಾಗಿದೆ. ಉತ್ತರಪ್ರದೇಶದ ಹೊರತಾಗಿ, ಬಿಹಾರದ ಕೆಲವು ಜನರು ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಲಾಕಪ್ ಡೆತ್: ’ಉತ್ತರ ಪ್ರದೇಶದಲ್ಲಿ ಮಾನವ ಹಕ್ಕುಗಳು ಉಳಿದಿವೆಯೇ?’- ರಾಹುಲ್ ಗಾಂಧಿ