Homeಅಂಕಣಗಳು`ರಾಜಾನ ಕಿವಿ ಕತ್ತಿ ಕಿವಿ': ಈ ಸಾರ್ವಕಾಲಿಕ ಕಥೆ ನಿಮಗೆ ಗೊತ್ತೆ?

`ರಾಜಾನ ಕಿವಿ ಕತ್ತಿ ಕಿವಿ’: ಈ ಸಾರ್ವಕಾಲಿಕ ಕಥೆ ನಿಮಗೆ ಗೊತ್ತೆ?

ಮಕ್ಕಳ ನೋಟವೇ ಅವರ ಒಳನೋಟ. ದೊಡ್ಡವರಿಗೆ ಅದು ಸಾಲದು. ವಿಶೇಷ ಪ್ರಯತ್ನ ಬೇಕು ಅಂತ ಹ್ಯಾನ್ಸ್ ಅವರು ಹೇಳತಾರ. ಸತ್ಯ ಕಪಟಿಗಳಿಗೆ ಕಾಣುವುದಿಲ್ಲ. ಮುಗ್ಧರಿಂದ ಅದನ್ನು ಮುಚ್ಚಿ ಇಡಲಿಕ್ಕೆ ಸಾಧ್ಯ ಇಲ್ಲ ಅನ್ನುವುದನ್ನು ಎಷ್ಟು ಸರಿ ಹೇಳಿದರು ಹಳಸಲ್ಲ.

- Advertisement -
- Advertisement -

ಒಂದು ಊರಾಗ ಒಬ್ಬ ಚಕ್ರವರ್ತಿ ಮಹಾರಾಜ ಇದ್ದ. ಅವನಿಗೆ ಟೀಕೆ ಅಂದ್ರ ಆಗತಿದ್ದಿಲ್ಲ. ಯಾರಾದರೂ ತನ್ನ ವಿರುದ್ಧ ಮಾತಾಡಿದರ ಅವರಿಗೆ ಶಿಕ್ಷೆ ಕೊಡತಿದ್ದ.

ಅವನಿಗೆ ದೇವರು ಶಿಕ್ಷೆ ಕೊಟ್ಟ. `ನೀನು ನಿನ್ನ ಟೀಕೆ ಮಾಡುವವರ ಮಾತು ಕೇಳದೆ ಹೋದಾಗಲೆಲ್ಲ ನಿನ್ನ ಕಿವಿ ದೊಡ್ಡದಾಗಿ ಬೆಳೆಯಲಿಕ್ಕೆ ಹತ್ತಿಬಿಡತಾವು,’ ಅಂತ.

ಇದನ್ನ ರಾಜಾ ಎಚ್ಚರಿಕೆ ಅಂತ ತಿಳಕೋಬೇಕಾಗಿತ್ತು. ಆದರ ಹಂಗ ತಿಳಕೋಳಿಲ್ಲ. ಅವ ತನ್ನ ಹಳೇ ಚಾಳಿ ಮುಂದುವರೆಸಿದ. ಅವನ ಕಿವಿ ದೊಡ್ಡದಾಗಿ ಬೆಳಕೋತನ ಹೋದವು.

ಆ ಊರಾಗ ಕಿಟ್ಟಪ್ಪ ಅಂತ ಒಬ್ಬವ ಕ್ಷೌರಿಕ ಇದ್ದ. ಅವ ಪ್ರತಿ ವಾರ ಅರಮನೆಗೆ ಹೋಗಿ ರಾಜನ ಕಟಿಂಗ್ ಮಾಡ್ತಿದ್ದ. ಅವರ ಅಪ್ಪ ರಾಜನ ಅಪ್ಪಗ ಮಾಡತಿದ್ದ, ಅವರ ಅಪ್ಪ ಅವರ ಅಪ್ಪಗ, ಅವರ ಅಪ್ಪ ಅವರ ಅಪ್ಪಗ ಹಿಂಗ ಒಂದು ಘನ ಪರಂಪರೆ ನಡಕೊತ ಬಂದಿತ್ತು.

ಹಿಂಗ ಒಂದು ದಿವಸ ಎನಾತಪ ಅಂದ್ರ ಕಿಟ್ಟಪ್ಪ ಅರಮನಿಗೆ ಹೋಗಿ ರಾಜಾನ್ನ ಕುರ್ಚಿ ಮ್ಯಾಲ ಕೂಡಿಸಿ, ಬಿಳಿ ಖಾದಿ ಅರಿಬಿ ಹೊದಿಸಿ, ರಾಜನ ಅಮಿತಾಬ್ ಬಚ್ಚನ್ ಕಟ್ ಕೂದಲ ಸರಿಸಿ ನೋಡತಾನ, ಅವನ ಕಿವಿ ದೊಡ್ಡವಾಗಿ ಬಿಟ್ಟಾವು.

ತಾನು ರಾತ್ರೆ ಕುಡದದ್ದು ಹೆಚ್ಚು ಆತೋ ಏನೋ ಅಂತ ಅವನಿಗೆ ಸಂಶಯ ಬಂತು. ಒಂದು ಈಟು ನಿದ್ದಿ ಬಂದಾವು ಧಣಿ ಅಂತ ಹೇಳಿ, ಸಿಂಕ ಕಡೆ ಹೋಗಿ ತನ್ನ ಮಾರಿ ತೊಳಕೊಂಡು, ಅರಿವಿಲೆ ವರಿಸಿಕೊಂಡು ಬಂದು ಇನ್ನೊಮ್ಮೆ ನೋಡಿದ. ರಾಜಾನ ಕಿವಿ ಬರೆ ದೊಡ್ಡವ ಅಷ್ಟ ಅಲ್ಲ, ಅವು ಕತ್ತಿ ಕಿವಿ ಆದ ಹಂಗ ಆಗಿಬಿಟ್ಟಾವು.

ಅವನಿಗೆ ಗಾಬರಿ ಆಗಿದ್ದು ರಾಜಾ ನೋಡಿದ. “ಲೇ ಮಗನ ಕಿಟ್ಯಾ. ಇಲ್ಲೇ ನೋಡಿದ್ದು ಇಲ್ಲೇ ಮರ್ತು ಬಿಡಬೇಕು. ಹೊರಗ ಹೋಗಿ ಯಾರರ ಹತ್ತರ ನನ್ನ ಕಿವಿ ಸುದ್ದಿ ಹೇಳಿದಿ ಅಂದ್ರ ನೋಡು ನಿನ್ನ ಜೀವಾ ತಗದಬಿಡ್ತೇನಿ” ಅಂತ ಹೆದರಿಸಿಬಿಟ್ಟ.

ಕಿಟ್ಟಪ್ಪ ಹೆದರಿ ಹೂಂ ಅಂದ. ಆದರ ಆವಗ ತಡಿಲಿಕ್ಕೆ ಆಗವಲ್ಲದು. ತನ್ನ ಕೆಲಸ ಮುಗದ ಮ್ಯಾಲೆ ಹೊರಗ ಹೋಗಿ ಓಡಲಿಕ್ಕೆ ಶುರು ಮಾಡಿದ. ಊರು ಹೊರಗ ಒಂದು ಅಡವಿಯೊಳಗ ಒಂದು ಕಡೆ ನಿಂತು ಒಂದು ಮರದ ಪೋಟರಿ ಒಳಗ ಜೋರಾಗಿ ಒದರಿ ಹೇಳಿದ- “ರಾಜನ ಕಿವಿ ಕತ್ತಿ ಕಿವಿ”, “ರಾಜನ ಕಿವಿ ಕತ್ತಿ ಕಿವಿ”. ಅವ ಹೇಳಿ ಹೇಳಿ ನಗೋದು ಅಲ್ಲೇ ಹತ್ತಿರದಲ್ಲೇ ಇದ್ದ ಒಬ್ಬ ಕುರಿಗಾಹಿಗೆ ಗೊತ್ತಾತು. ಕಿಟ್ಟಪ್ಪ ಏನು ಹೇಳಿದ್ದ ಅಂತ ಅವನಿಗೆ ಗೊತ್ತಾಗಲಿಲ್ಲ. ಆದರೆ ಅವ ಏನೋ ಹೇಳಿಕೊಂಡು ನಗಲಿಕ್ಕೆ ಹತ್ತಿದ್ದ ಅಂತ ಅವ ಹೋಗಿ ರಾಜಾನ ಸೈನಿಕರಿಗೆ ಹೇಳಿದ.

ರಾಜಾನಿಂದ ನೇಮಕಗೊಂಡಿದ್ದ ನ್ಯಾಯಾಧೀಶರು ಕಿಟ್ಟಪ್ಪನಿಗೆ ದೇಶದ ರಹಸ್ಯಗಳನ್ನು ಅರಣ್ಯದ ಬಯಲಿನೊಳಗ ಬಯಲು ಮಾಡಿದ್ದಕ್ಕ ರಾಜದ್ರೋಹದ ಆರೋಪ ಸಾಬೀತು ಮಾಡಿದರು. ರಾಜಾ ಅಂದ್ರ ದೇಶ ಆಗಿದ್ದರಿಂದ ಅವನ ಮೇಲೆ ದೇಶದ್ರೋಹದ ಆರೋಪನು ಆಟೋಮೇಟಿಕ ಆಗಿ ಸಾಬೀತು ಆಯಿತು.

ಅವನನ್ನ ಆನೆ ಕಾಲಿನಲ್ಲಿ ತುಳಿಸಿ, ಅದರ ನಂತರ ಎನಾರ ಉಳದರ ಅದನ್ನ ತೋಪು ಮುಂದೆ ಕಟ್ಟಿ ಮದ್ದು ಗುಂಡು ಹಾರಿಸಬೇಕು. ಅದಕ್ಕಿಂತ ಮೊದಲು ಅವನಿಗೆ ವಿಷ ಹಾಕಿದ ಊಟ ಮಾಡಿಸಬೇಕು, ಅಂತ ತೀರ್ಪು ಪ್ರಕಟಿಸಿದರು.

ಕಿಟ್ಟಪ್ಪ ಹೋದ. ಆ ನಂತರ ಒಂದೆರಡು ವರ್ಷಕ್ಕ ಆ ಊರಾಗ ಒಬ್ಬ ಹಲಿಗಿ ತಯಾರು ಮಾಡೋ ಕಲಾವಿದ ಇದ್ದ. ಆತ ಹಾಗೂ ಒಬ್ಬ ಬಡಿಗಿ ಕೂಡಿ ಆ ಅರಣ್ಯಕ್ಕ ಹೋದರು. ಯಾವ ಗಿಡದ ಪೊಟರಿ ಒಳಗ ಕಿಟ್ಟಪ್ಪ ರಹಸ್ಯ ಬಯಲು ಮಾಡಿದ್ದನೋ ಆ ನಶೀಬ ಇಲ್ಲದ ಗಿಡ ಕಡದರು. ಅದನ್ನ ತೊಗೊಂಡು ಹೋಗಿ ಆ ಕಲಾವಿದ ಹಲಿಗಿ ತಯಾರು ಮಾಡಿದ.

ಆ ನಂತರ ಅವ ಅದನ್ನ `ಧಕ್ಕನಕ, ನಕ್ಕನಕ’ ಅಂತ ಬಾರಸಲಿಕ್ಕೆ ಹೋದ. ಆದರ ಅವನಿಗೆ ಶಾಕ್ ಆತು. ಅದು ಧಕ್ಕನಕ ಅಂತ ಸಪ್ಪಳ ಮಾಡೋ ಬದಲಿ, “ರಾಜನ ಕಿವಿ ಕತ್ತಿ ಕಿವಿ” ಅಂತ ಮನಿಶಾರ ದನಿಯೊಳಗ ಮಾತು ಆಡಲಿಕ್ಕೆ ಹತ್ತಿಬಿಟ್ಟಿತು.

ಅವನ ಮಗ ಅದನ್ನ ತೊಗೊಂಡು ಊರಾಗ ಎಲ್ಲ ಅಡ್ಡಾಡಿಬಿಟ್ಟ. ಅದನ್ನ ಬಾರಸೋದು, ಅದು “ರಾಜನ ಕಿವಿ ಕತ್ತಿ ಕಿವಿ” ಅಂತ ಅನ್ನೋದು, ಅದರಿಂದ ಜನರಿಗೆ ಖುಶಿ ಆಗೋದು, ಅವರು ಇಷ್ಟು ದೊಡ್ಡ ರಾಷ್ಟ್ರೀಯ ರಹಸ್ಯ ಗೊತ್ತಾಗಿದ್ದು ನೋಡಿ ಇವನಿಗೆ ಬಾಂಬೆ ಮಿಠಾಯಿ ತೊಗೊಳೋ ಅಂತ ಒಂದು ಆಣೆ ಕೊಡೋದು, ಎಲ್ಲ ನಡಿತು.

ಇದು ರಾಜಾನ ಸೈನಿಕರಿಗೆ ತಿಳೀತು. ಅವರು ಬಂದು, ಕಲಾವಿದನ ಒದ್ದು, ಆ ಹಲಿಗಿ, ಅದಕ್ಕ ಉಪಯೋಗಿಸಿದ್ದ ಕಟ್ಟಿಗಿ, ಎಲ್ಲ ಜಪ್ತಿ ಮಾಡಿಕೊಂಡು ಹೋದರು. ಆ ಹಲಿಗಿ ಮುರದು, ಬೆಂಕಿ ಹಚ್ಚಿ ಸುಟ್ಟರು. ಆ ಬೂದಿ ತೊಗೊಂಡು ಹೋಗಿ ನೀರಿಗೆ ಹಾಕಿದರು. ಆದರ ದೊರೆಯ ರಹಸ್ಯ ಸೋರಿಕೆ ನಿಲ್ಲಲಿಲ್ಲ. ಆ ನದಿಯ ಮೀನು ಎಲ್ಲ ಮಾತು ಆಡಲಿಕ್ಕೆ ಹತ್ತಿದವು. “ರಾಜನ ಕಿವಿ ಕತ್ತಿ ಕಿವಿ”, “ರಾಜನ ಕಿವಿ ಕತ್ತಿ ಕಿವಿ” ಅಂತ ಮೀನು ಪೇಟೆ ತುಂಬ ಸುದ್ದಿ!. ಎಲ್ಲರೂ ಕೇಳೋದು, ಮುಸಿ ಮುಸಿ ನಗೋದು.

ಒಂದು ದಿವಸ ರಾಜಾ- ರಾಣಿ ಸೀ ಫುಡ್ ತಿನ್ನಬೇಕು ಅಂತ ಹೇಳಿ ಹೋಟೆಲಿಗೆ ಹೋದರು. ಅವರ ತಾಟಿನಾಗ ತಂದು ಇಟ್ಟ ಭೂತಾಯಿ ಮೀನು ಸಹಿತ “ರಾಜನ ಕಿವಿ ಕತ್ತಿ ಕಿವಿ” ಅಂತ ಹೇಳಿ ಕಣ್ಣು ಹೊಡೀತು! ಅದನ್ನ ನೋಡಿ ಬಂದ ರಾಜಾಗ ನಿದ್ದಿ ಬರಲಿಲ್ಲ. ಆದ ಬೇಜಾರಿನಾಗ ಅವ ಕೊರಗಿ ಕೊರಗಿ ಒಂದು ದಿವಸ ಸತ್ತು ಹೋದ. ಅವನ ಸಮಾಧಿ ಮ್ಯಾಲೆ ಒಂದು ಗಿಡ ನೆಟ್ಟರು. ಅದಕ್ಕ ಮೀನಿನ ಗೊಬ್ಬರ ಹಾಕಿದರು. ಆ ಗಿಡದಿಂದ ರಾತ್ರಿ ಅವಾಜು ಬರಲಿಕ್ಕ ಶುರು ಆತು. “ರಾಜನ ಕಿವಿ ಕತ್ತಿ ಕಿವಿ”.

ಈ ತಾಜಾ ಪಂಚತಂತ್ರದ ಕತಿಯಿಂದ ನಾವು ಏನು ಪಾಠ ಕಲಿಯಬಹುದು ಅಂದ್ರ – ಸತ್ಯ ಹೇಳಿದವರು, ಅದನ್ನ ಕೇಳಲಾರದವರು, ಹೇಳಕೂಡದು ಅಂದವರು, ಹೇಳಿದವರಿಗೆ ಶಿಕ್ಷೆ ಕೊಟ್ಟವರು, ಕೇಳಿಸಿಕೊಂಡವರು, ಹೇಳಲಿಕ್ಕೆ ಅನುಕೂಲ ಮಾಡಿಕೊಟ್ಟವರು, ಕೇಳಿದರೂ ಕೇಳಲಿಲ್ಲ ಅಂತ ನಟನೆ ಮಾಡಿದವರು ಇವರು ಯಾರೂ ಉಳಿಯಲಿಕ್ಕೆ ಇಲ್ಲ, ಆದರ ಸತ್ಯ ಉಳಿತದ.

ನೀವು ಸತ್ಯ ಹೇಳಿದವರ ಇತಿಹಾಸ ನೋಡಿಕೊತ ಹೋದರ ಏನು ಬಹಳ ಖುಷಿ ಆಗೋದಿಲ್ಲ. ಯಹೂದೀ ಕುಟುಂಬದಾಗ ಹುಟ್ಟಿ, ದೆಹಲಿಯ ಗಲ್ಲಿಗಳಲ್ಲಿ ಸಂತನ ಹಂಗ ಬದುಕಿ, ಹಿಂದೂ -ಇಸ್ಲಾಮಿನ ತತ್ವ ತಿಳಿದುಕೊಂಡು, ಸಮಭಾವದ ಪಾಠ ಹೇಳಿದ ಸೂಫಿ ಸರ್ಮದನ ಕತಿ ಏನು ಆತು ಅಂತ ನೋಡ್ರಿ. ಸರ್ವಶಕ್ತ ಒಬ್ಬನನ್ನು ಬಿಟ್ಟು ಇನ್ನೊಬ್ಬರು ಪೂಜೆಗೆ ಅರ್ಹರಲ್ಲ ಅಂತ ಹೇಳಿದ ರಾಜನ ಮಾತನ್ನು ಕೇಳದೆ ಯಾರು ಪೂಜೆಗೆ ಅರ್ಹರಲ್ಲ ಅಂತ ಹೇಳಿದ. ಗಲ್ಲುಶಿಕ್ಷೆ ವಿಧಿಸಿದಾಗ ನಾನು ಸಾಯಬಹುದು, ನನ್ನ ಮಾತನ್ನು ನೀವು ಏನು ಮಾಡುವಿರಿ ಅಂತ ಮರು ಪ್ರಶ್ನೆ ಮಾಡಿದ.

ನಾನೇ ಸತ್ಯ ಅಂತ ಘೋಷಿಸಿ ಕೊಂಡ ಸೂಫಿ ಮನ್ಸೂರ್ ನನ್ನು ರಾಜಾ ಗಲ್ಲಿಗೆ ಹಾಕುತ್ತಾನ. ಸಾಯುವ ಮುನ್ನ ಅವನ ಕೈ ಕತ್ತರಿಸಿ ಹಾಕುತ್ತಾರ. ಮುಖಕ್ಕೆ ತನ್ನ ರಕ್ತ ಬಳಿದುಕೊಂಡು ನಾನು ಸಾಯುವಾಗ ನನ್ನ ಮುಖ್ಯ ಬಿಳಿಚಿತ್ತು ಅಂತ ಯಾರೂ ತಿಳಿದು ಕೊಳ್ಳುವುದುಬೇಡ ಅಂತ ಗಹಗಹಿಸಿ ನಗುತ್ತಾನೆ.

ನಾನು ದೇವಪುತ್ರ ಅಂತ ಹೇಳಿಕೊಂಡು, ಜನರಿಂದ ಯಹೂದೀಗಳ ದೇವರು ಅಂತ ಅನ್ನಿಸಿಕೊಂಡ ಯೇಸುವಿನ ಇತಿಹಾಸ ನೋಡಿದರ ಆಶ್ಚರ್ಯ ಆಗತದ. ಹಳೆಯ ದೇವರ ಗುಡಿಗಳನ್ನು ಧ್ವಂಸ ಮಾಡಿ, ಅಲ್ಲಿ ಸಾಲ ಕೊಡುತ್ತಿದ್ದ ಅರ್ಚಕರನ್ನು ಓಡಿಸಿ, ಕೂಲಿ ಮಾಡುವ ಜನ ವಾರದ ರಜಾ ದಿನಗಳಾದ ಶನಿವಾರ- ಭಾನುವಾರವೂ ಸಹ ಕೆಲಸ ಮಾಡಿದರೆ ತಪ್ಪೇನೂ ಇಲ್ಲ ಅಂದಿದ್ದು, ಅಂಧ ವಿಶ್ವಾಸದ ಬಗ್ಗೆ ಜಾಗೃತಿ ಮೂಡಿಸಿದ್ದು, ಏಕತೆ, ಸಮಾನತೆ, ಭ್ರಾತೃತ್ವ ಇರಬೇಕು ಅಂತ ಹೇಳಿದ್ದು ಅವನಿಗೆ ಮುಳುವಾದವು. ಅಂದಿನ ರಾಜಾ ಪಾಂತಿಯಸ ಪಿಲೆಟ್ ಅವನಿಗೆ ಶಿಲುಬೆ ಶಿಕ್ಷೆ ವಿಧಿಸಿದ.

ಆ ಮಾತಿಗೆ ಈಗ ಎರಡು ಸಾವಿರ ವರ್ಷ ಮೀರಿದವು. ಅವರು ಯಾರು ಈಗ ಉಳಿದಿಲ್ಲ. ಅವರು ಹೇಳಿದ ಸತ್ಯ ಮಾತ್ರ ಉಳಕೊಂಡದ.

ಈಗ ನಮ್ಮನ್ನು ಆಳುವ ಪರಂತಪರು ಯಾವ ಟೀಕೆಯನ್ನು ಸಹಿಸುತ್ತಿಲ್ಲ. ಸೃಜನಾತ್ಮಕ ಟೀಕೆಗೆ ಸಹಿತ ಇಲ್ಲೇ ಜಾಗ ಇಲ್ಲ. ಅಧಿಕಾರ ಅವರನ್ನ ಕುರುಡರನ್ನಾಗಿಸಿದೆ. ಸತ್ಯಕ್ಕೆ ಸಾವಿಲ್ಲ ಅನ್ನುವ ಸರಳ ಸತ್ಯ ಅವರಿಗೆ ಕಾಣುತ್ತಿಲ್ಲ.

ಅಂಥವರಿಗೆ ಡೆನ್ಮಾರ್ಕ್ ದೇಶದ ಒಂದು ಕತೆ ನೆನಪು ಮಾಡಿಕೊಡಬಹುದು. ಅದು ಹ್ಯಾನ್ಸ್ ಕ್ರಿಶ್ಚಿಯನ್ ಆಂಡರ್ಸನ್ ಅವರು 1850 ರ ಸುಮಾರಿಗೆ ಬರೆದ ಮಕ್ಕಳ ಕತೆ `ಮಹಾರಾಜರ ಹೊಸ ಉಡುಪು’.

ಎಲ್ಲರಿಗೂ ಗೊತ್ತಿರುವ ಈ ಕತೆಯಲ್ಲಿ ದಗಾಕೋರ ದರ್ಜಿಗಳು ರಾಜನಿಗೆ ಹೊಸ ಉಡಪು ತಯಾರಿಸುವ ನೆಪದಲ್ಲಿ ಬಂಗಾರ – ರೇಷ್ಮೆ ದಾನ ಪಡಿತಾರ. ಇದು ಬರೀ ಬುದ್ಧಿವಂತರಿಗೆ ಕಾಣತದ ಅಂತ ಸುಳ್ಳು ಹೇಳಿ ಯಾವ ಬಟ್ಟೆಯನ್ನು ತಯಾರು ಮಾಡದೆ, ರಾಜನನ್ನು ನಗ್ನವಾಗಿಸಿ ಊರಾಗ ಎಲ್ಲ ಓಡಾಡಿಸಿ ಬಿಡತಾರ. ದೊಡ್ಡವರು ಎಲ್ಲ ಸುಮ್ಮನೆ ಇದ್ದರೂ ಅಲ್ಲಿನ ಮಗುವೊಂದು ಮಹಾರಾಜರ ಮೈ ಮೇಲೆ ಬಟ್ಟೆ ಇಲ್ಲ ಅಂತ ಜೋರಾಗಿ ಹೇಳಿ ಬಿಡತದ. ದೊಡ್ಡವರು ನಕ್ಕು ಬಿಡತಾರ.

ಆವಾಗ ರಾಜಾಗ ನಾಚಿಕೆ ಆಗತದ. ಮಕ್ಕಳ ನೋಟವೇ ಅವರ ಒಳನೋಟ. ದೊಡ್ಡವರಿಗೆ ಅದು ಸಾಲದು. ವಿಶೇಷ ಪ್ರಯತ್ನ ಬೇಕು ಅಂತ ಹ್ಯಾನ್ಸ್ ಅವರು ಹೇಳತಾರ. ಸತ್ಯ ಕಪಟಿಗಳಿಗೆ ಕಾಣುವುದಿಲ್ಲ. ಮುಗ್ಧರಿಂದ ಅದನ್ನು ಮುಚ್ಚಿ ಇಡಲಿಕ್ಕೆ ಸಾಧ್ಯ ಇಲ್ಲ ಅನ್ನುವುದನ್ನು ಎಷ್ಟು ಸರಿ ಹೇಳಿದರು ಹಳಸಲ್ಲ.

ಇದನ್ನು ತಿಳಿಯದಷ್ಟೂ ಇವರು ಮುಗ್ಧರಲ್ಲ, ಅಲ್ಲವೇ ಮನೋಲ್ಲಾಸಿನಿ?


ಇದನ್ನೂ ಓದಿ: ದಿನಕರ ದೇಸಾಯಿಯವರ ನಂತರ ನಿಜ ನಾಯಕತ್ವದ ಕನವರಿಕೆಯಲ್ಲಿ ದಿಕ್ಕೆಟ್ಟ ಉತ್ತರ ಕನ್ನಡ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...