ನೇತಾಜಿ ಸುಭಾಸ್ ಚಂದ್ರ ಬೋಸ್ ಅವರ ಜನ್ಮದಿನವನ್ನು ಒಳಗೊಂಡಂತೆ ಗಣರಾಜ್ಯೋತ್ಸವ ಆಚರಿಸಲಾಗುವುದು. ಪ್ರತಿ ವರ್ಷ ಜನವರಿ 24ರ ಬದಲಿಗೆ ಜನವರಿ 23ರಿಂದಲೇ ಆಚರಣೆ ಆರಂಭಿಸಲಾಗುವುದು ಎಂದು ಸರ್ಕಾರಿ ಮೂಲಗಳು ತಿಳಿಸಿರುವುದಾಗಿ ಎನ್ಡಿಟಿವಿ ವರದಿ ಮಾಡಿದೆ.
“ನಮ್ಮ ಇತಿಹಾಸ, ಸಂಸ್ಕೃತಿಯ ಪ್ರಮುಖ ಅಂಶಗಳನ್ನು ಆಚರಿಸಲು/ಸ್ಮರಿಸಲು ನರೇಂದ್ರ ಮೋದಿ ಸರ್ಕಾರಕ್ಕೆ ಇದು ಅನುಕೂಲ ಮಾಡಿಕೊಡುತ್ತದೆ” ಎಂದು ಮೂಲಗಳು ಹೇಳಿವೆ.
ಈ ಹಿಂದೆ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನವನ್ನು ಪರಾಕ್ರಮ್ ದಿವಸ್ ಎಂದು ಆಚರಿಸಲು ಸರ್ಕಾರವು ಆರಂಭಿಸಿತ್ತು.
ವಾರ್ಷಿಕವಾಗಿ ಹಲವು ದಿನಗಳನ್ನು ಸರ್ಕಾರ ಆಚರಿಸುತ್ತಿದೆ. ಆಗಸ್ಟ್ 14 ವಿಭಜನೆಯ ಭಯಾನಕ ನೆನಪಿನ ದಿನ, ಅಕ್ಟೋಬರ್ 31- ರಾಷ್ಟ್ರೀಯ ಏಕತಾ ದಿನ (ಸರ್ದಾರ್ ಪಟೇಲ್ ಅವರ ಜನ್ಮದಿನ), ನವೆಂಬರ್ 15 ಜನಜಾತಿಯ ಗೌರವ್ ದಿನ (ಬಿರ್ಸಾ ಮುಂಡಾ ಅವರ ಜನ್ಮ ವಾರ್ಷಿಕೋತ್ಸವ), ನವೆಂಬರ್ 26 ಸಂವಿಧಾನ ದಿನ, ಡಿಸೆಂಬರ್ 26 ವೀರ್ ಬಾಲ್ ದಿನ (ಗುರು ಗೋವಿಂದ್ ಸಿಂಗ್ ಅವರ ನಾಲ್ವರು ಪುತ್ರರಿಗೆ ಗೌರವ) ಆಚರಣೆಗಳನ್ನು ಸರ್ಕಾರ ಆರಂಭಿಸಿರುವುದನ್ನು ಮೂಲಗಳು ಉಲ್ಲೇಖಿಸಿವೆ.
ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಗೆ ಸಂಬಂಧಿಸಿದ ಸ್ಥಳಗಳ ಕುರಿತು ಪ್ರಚಾರ ಮಾಡಲು ಯೋಜನೆಗಳನ್ನು ರೂಪಿಸಿದೆ. ಅಕ್ಟೋಬರ್ 21, 1943ರಂದು ಬೋಸ್ ಅವರು ತಾತ್ಕಾಲಿಕ ಸರ್ಕಾರವಾದ ಆಜಾದ್ ಹಿಂದ್ ಘೋಷಿಸಿದ್ದರು. ಅದರ ವಾರ್ಷಿಕೋತ್ಸವದ ಸ್ಮರಣಾರ್ಥ ಕಾರ್ಯಕ್ರಮಗಳ ಭಾಗವಾಗಿ ಪ್ರವಾಸೋದ್ಯಮ ಸಚಿವಾಲಯವು ಕ್ಯುರೇಟೆಡ್ ಪ್ರವಾಸಗಳನ್ನು ಯೋಜಿಸುತ್ತಿದೆ ಎಂದು ಈ ಹಿಂದೆ ಪಿಟಿಐ ಹೇಳಿತ್ತು.
“ಅಂತಹ ಸ್ಥಳಗಳನ್ನು ಗುರುತಿಸಲಾಗುತ್ತಿದೆ. ನೇತಾಜಿ ಸುಭಾಸ್ ಚಂದ್ರ ಬೋಸ್ ಅವರಿಗೆ ಸಂಬಂಧಿಸಿದ ಸ್ಥಳಗಳನ್ನು ಒಳಗೊಂಡಿರುವ ಕ್ಯುರೇಟೆಡ್ ಪ್ರವಾಸಗಳನ್ನು ನಾವು ಸಿದ್ಧಪಡಿಸಿದ್ದೇವೆ” ಎಂದು ಅಧಿಕಾರಿಯೊಬ್ಬರು ಹೇಳಿದ್ದರು.
ಇದನ್ನೂ ಓದಿರಿ: ಸಂವಿಧಾನ, ಸುಪ್ರೀಂ ಕೋರ್ಟ್ ಮೇಲೆ ನಂಬಿಕೆ ಇಲ್ಲ: ಮತ್ತೆ ನಾಲಿಗೆ ಹರಿಬಿಟ್ಟ ಯತಿ ನರಸಿಂಗಾನಂದ