ನವದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪರೇಡ್ಗೆ ಪಶ್ಚಿಮ ಬಂಗಾಳದ ಸ್ತಬ್ಧಚಿತ್ರವನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದ ವಿವಾದದ ನಡುವೆ, ಕೋಲ್ಕತ್ತಾದಲ್ಲಿ ನಡೆಯುವ ಗಣರಾಜ್ಯೋತ್ಸವದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಸ್ತಬ್ಧಚಿತ್ರ ಪ್ರದರ್ಶಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗಣರಾಜ್ಯೋತ್ಸವ ಆಚರಣೆಗೆ ಮುನ್ನ ಜನವರಿ 26 ರಂದು ರೆಡ್ ರೋಡ್ನಲ್ಲಿರುವ ನೇತಾಜಿ ಪ್ರತಿಮೆಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಾಲಾರ್ಪಣೆ ಮಾಡಲಿದ್ದಾರೆ ಎಂದು ಹೇಳಿದ್ದಾರೆ.
“ನಾವು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125 ನೇ ಜನ್ಮ ವಾರ್ಷಿಕೋತ್ಸವದಂದು ರೆಡ್ ರೋಡ್ನಲ್ಲಿ ಗಣರಾಜ್ಯೋತ್ಸವ ಪರೇಡ್ನಲ್ಲಿ ಟ್ಯಾಬ್ಲೋ ಪ್ರದರ್ಶಿಸುತ್ತೇವೆ. ಅದಕ್ಕಾಗಿ ನಾವು ಸಿದ್ಧತೆಗಳನ್ನು ಪ್ರಾರಂಭಿಸಿದ್ದೇವೆ” ಎಂದು ಅಧಿಕಾರಿ ಹೇಳಿದ್ದಾರೆ.
ಮಂಗಳವಾರ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸಿಎಂ ಮಮತಾ ಬ್ಯಾನರ್ಜಿ ಅವರಿಗೆ ಪತ್ರ ಬರೆದು ಕೇಂದ್ರ ಲೋಕೋಪಯೋಗಿ ಇಲಾಖೆಯ ಟ್ಯಾಬ್ಲೋದಲ್ಲಿ ಈಗಾಗಲೇ ಸುಭಾಷ್ ಚಂದ್ರ ಬೋಸ್ ಅವರನ್ನು ಒಳಗೊಂಡಿರುವುದರಿಂದ, ಪಶ್ಚಿಮ ಬಂಗಾಳದ ಟ್ಯಾಬ್ಲೋವನ್ನು ಮೆರವಣಿಗೆಗೆ ಸೇರಿಸಲಾಗಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ಗಣರಾಜ್ಯೋತ್ಸವ ಪರೇಡ್ ಟ್ಯಾಬ್ಲೊ ವಿವಾದ: ಒಕ್ಕೂಟ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಇತ್ತ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 1945ರ ನಾಪತ್ತೆ ಪ್ರಕರಣದ ಕಡತಗಳನ್ನು ಬಿಡುಗಡೆ ಮಾಡಬೇಕು ಮತ್ತು ಜಪಾನ್ ದೇವಾಲಯದಲ್ಲಿ ಸಂರಕ್ಷಿಸಿರುವ ನೇತಾಜಿಯ ಚಿತಾಬಸ್ಮವನ್ನು ಡಿ.ಎನ್.ಎ ವಿಶ್ಲೆಷಣೆ ಮಾಡಬೇಕು ಎಂದು ಪಶ್ಚಿಮ ಬಂಗಾಳ ಸರ್ಕಾರ ಅಗ್ರಹಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಪಕ್ಷದ ವಕ್ತಾರ ಕುನಾಲ್ ಘೋಷ್ , ದೇಶದ ಜನರ ಬೇಡಿಕೆಯಾದ ನೇತಾಜಿ ಅವರ ನಾಪತ್ತೆ ಕುರಿತ ರಹಸ್ಯ ಕಡತಗಳನ್ನು ಕೇಂದ್ರ ಸರ್ಕಾರ ಏಕೆ ಬಿಡುಗಡೆ ಮಾಡುತ್ತಿಲ್ಲ? ಎಂಬುದನ್ನು ನಾವು ತಿಳಿದುಕೊಳ್ಳಬೇಕು ಎಂದು ಹೇಳಿದ್ದಾರೆ.
ಆಗಸ್ಟ್ 18, 1945 ರಂದು ನೇತಾಜಿ ಅವರು ಪ್ರಯಾಣಿಸುತ್ತಿದ್ದ ವಿಮಾನವು ಜಪಾನ್ ಆಕ್ರಮಿತ ತೈವಾನ್ನಲ್ಲಿ ಅಪಘಾತಕ್ಕೆ ಸಿಲುಕಿತ್ತು, ನಂತರ ಬೋಸ್ ಕಣ್ಮರೆಯಾಗಿದ್ದರು. ರೆಂಕೋಜಿ ದೇವಸ್ಥಾನದಲ್ಲಿರುವ ಅವರ ಅಸ್ತಿಯನ್ನು ಡಿಎನ್ಎ ಪರೀಕ್ಷೆಗೆ ಒಳಪಡಿಸಲು ಅನುಕೂಲ ಮಾಡಿಕೊಡಿ”ಎಂದು ಅವರು ಒತ್ತಾಯಿಸಿದ್ದಾರೆ.
ನೇತಾಜಿ ಸಾವಿನ ಕುರಿತು ಹಲವು ಅನುಮಾನಗಳಿದ್ದು, ಆ ಬಗ್ಗೆ ಸೂಕ್ತ ತನಿಕೆ ಮಾಡಬೇಕು ಎಂದು ಟಿಎಂಸಿ ನಾಯಕರು ಒತ್ತಾಯಿಸಿದ್ದಾರೆ.