ರಾಜ್ಯದಾದ್ಯಂತ ಇರುವ ದೇವಾಲಯಗಳಲ್ಲಿ ಹೆಣ್ಣುಮಕ್ಕಳಿಗೆ ಸ್ವಯಂ ರಕ್ಷಣಾ ತರಬೇತಿ ನೀಡಬೇಕು ಎನ್ನುವ ಸರ್ಕಾರದ ಆದೇಶವನ್ನು ಖಂಡಿಸಿರುವ ಅಖಿಲ ಭಾರತ ಪ್ರಗತಿಪರ ಮಹಿಳಾ ಒಕ್ಕೂಟ, ಇದರ ವಿರುದ್ಧ ಪತ್ರ ಅಭಿಯಾನವನ್ನು ಆರಂಭಿಸಿದೆ.
ಮಹಿಳೆಯರ ಮೇಲಿನ ಲೈಂಗಿಕ ಮತ್ತು ಇತರೆ ದೌರ್ಜನ್ಯವನ್ನು ತಡೆಗಟ್ಟುವ ಕ್ರಮವಾಗಿ ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ ಈ ಆದೇಶ ಹೊರಡಿಸಿದೆ. ಆದರೆ ಈ ಆದೇಶವನ್ನು ಖಂಡಿರುವ ಮಹಿಳಾ ಒಕ್ಕೂಟ, ‘ಇದು ನಮ್ಮ ಸಾಂವಿಧಾನಿಕ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಉಲ್ಲಂಘಿಸಿದೆ’ ಎಂದು ಆರೋಪಿಸಿದೆ.
ಈ ಕುರಿತು ನಾನುಗೌರಿ.ಕಾಂ ಜೊತೆ ಮಾತನಾಡಿದ ಮಹಿಳಾ ಒಕ್ಕೂಟದ ಸದಸ್ಯರಾದ ಶಿಲ್ಪ, “ಈ ಆದೇಶವನ್ನು ಸರ್ಕಾರ ಹೊರಡಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ಆದೇಶ ನಿಜಕ್ಕೂ ನಮ್ಮ ಸಾಂವಿಧಾನಿಕ ಮೌಲ್ಯಗಳನ್ನು ಉಲ್ಲಂಘಿಸಿದೆ” ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಅಸ್ಸಾಂ ಬಿಜೆಪಿ ಅಭ್ಯರ್ಥಿ ಕಾರಿನಲ್ಲಿ ಇವಿಎಂ ಪತ್ತೆ: ಮರುಮತದಾನಕ್ಕೆ ಆದೇಶ, 4 ಅಧಿಕಾರಿಗಳ ಅಮಾನತು!
“ಸರ್ಕಾರದ ಈ ಆದೇಶದ ಹಿಂದೆ ಸೂಕ್ಷ್ಮವಾಗಿ ಮಹಿಳೆಯರ ಮೇಲಿನ ದೌರ್ಜನ್ಯವನ್ನು ತಡೆಗಟ್ಟುವ ಹೊಣೆಯನ್ನು ಸಂಪೂರ್ಣ ಮಹಿಳೆಯರ ಮೇಲೆ ಹಾಕುವ ಹುನ್ನಾರವಿದೆ. ಅಂದರೆ ದೌರ್ಜನ್ಯ ಮಾಡುವವರನ್ನು ಶಿಕ್ಷಿತರನ್ನಾಗಿರಸುವ ಬದಲಿಗೆ ಮಹಿಳೆಯರೇ ಸ್ವಯಂ ರಕ್ಷಿಸಿಕೊಳ್ಳುವಂತೆ ತರಬೇತಿ ನೀಡಲಾಗುತ್ತಿದೆ. ಇದು ಸರಿಯಲ್ಲ. ಬದಲಿಗೆ ಹೆಣ್ಣು ಮಕ್ಕಳಿಗೆ ಸ್ವರಕ್ಷಣೆಯ ತರಬೇತಿ ನೀಡುತ್ತಲೇ ಮಹಿಳಾ ದೌರ್ಜನ್ಯವನ್ನು ತಡೆಯಲು ಶಾಲಾ ಹಂತದಿಂದಲೇ ಎಲ್ಲಾ ಮಕ್ಕಳಿಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಆದರೆ ಸರ್ಕಾರ ಅಂತಹ ಯಾವುದೇ ಕೆಲಸಗಳನ್ನು ಮಾಡಿಲ್ಲ” ಎಂದು ಹೇಳಿದರು.
“ಇನ್ನು, ನಮ್ಮ ದೇಶದಲ್ಲಿ ಎಷ್ಟೋ ಜಾತಿಗಳಿಗೆ ದೇವಸ್ಥಾನದೊಳಗೆ ಪ್ರವೇಶವಿಲ್ಲ. ಹಾಗಾಗಿ ಕೆಲವು ನಿರ್ದಿಷ್ಟ ಜಾತಿಗಳು ಮಾತ್ರ ಈ ಸೌಲಭ್ಯವನ್ನು ಪಡೆದುಕೊಳ್ಳಲಿವೆ. ಜೊತೆಗೆ ಅನ್ಯಧರ್ಮೀಯರೂ ಸಹ ಈ ಸೌಲಭ್ಯದಿಂದ ವಂಚಿತರಾಗುತ್ತಾರೆ. ಹಾಗಾಗಿ ಸರ್ಕಾರದ ಈ ಆದೇಶ ಜಾತ್ಯಾತೀತ ಮತ್ತು ಧರ್ಮನಿರಪೇಕ್ಷ ವಿರೋಧಿಯಾಗಿದೆ” ಎಂದು ಹೇಳಿದರು.
ಇನ್ನೊಂದು ಪ್ರಮುಖವಾದ ವಿಷಯವೆಂದರೆ, ನಮ್ಮ ದೇವಸ್ಥಾನಗಳಲ್ಲಿ ‘ಪರಿಶುದ್ದತೆ’ ಎನ್ನುವ ಪರಿಕಲ್ಪನೆಯಿದೆ. ಅಂದರೆ ಹೆಣ್ಣುಮಕ್ಕಳು ಮಾಸಿಕ ಋತು ಚಕ್ರಕ್ಕೆ ಒಳಗಾದಾಗ ದೇವಸ್ಥಾನಗಳಿಗೆ ಪ್ರವೇಶಿಸಬಾರದು ಎನ್ನುವ ಮನೋಭಾವವಿರುತ್ತದೆ. ಹಾಗಾಗಿ ಸರ್ಕಾರದ ಈ ಕ್ರಮ ಸಾಕಷ್ಟು ಸಮಸ್ಯೆಗಳಿಂದ ಕೂಡಿದೆ. ಈ ಕಾರಣಕ್ಕಾಗಿಯೇ ನಮ್ಮ ಒಕ್ಕೂಟದ ವತಿಯಿಂದ ಇದನ್ನು ವಿರೋಧಿಸಿ ಮುಕ್ತ ಪತ್ರ ಅಭಿಯಾನವನ್ನು ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.
ಈ ಪತ್ರಕ್ಕೆ ಸಹಿ ಹಾಕುವುದರ ಮೂಲಕ ನಮ್ಮ ದನಿಗೆ ದನಿಗೂಡಿಸಿ ಎಂದು ಮಹಿಳಾ ಒಕ್ಕೂಟ ಮನವಿ ಮಾಡಿದೆ. ಈ ಪತ್ರಕ್ಕೆ ಸಹಿಮಾಡಲು ಈ ಲಿಂಕ್ ಕ್ಲಿಕ್ ಮಾಡಿ. https://forms.gle/icJwrZYSYMSYsXVcA
ಇದನ್ನೂ ಓದಿ: ಸಿಡಿ ಕೇಸ್: ಆರೋಗ್ಯ ಸಮಸ್ಯೆ ಎಂದು ವಿಚಾರಣೆಗೆ ಗೈರಾದ ರಮೇಶ್ ಜಾರಕಿಹೊಳಿ