ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ (ಎ.ಎಂ.ಎಂ.ಎ- ಅಮ್ಮ) ಅಧ್ಯಕ್ಷೆಯಾಗಿ ನಟಿ ಶ್ವೇತಾ ಮೆನನ್ ಆಯ್ಕೆಯಾಗಿದ್ದು, ಈ ಹುದ್ದೆಯನ್ನು ಅಲಂಕರಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಒಟ್ಟು 159 ಮತಗಳನ್ನು ಪಡೆದು ಶ್ವೇತಾ ಮೆನನ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದು, ಪ್ರತಿಸ್ಪರ್ಧಿ ನಟ ದೇವನ್ ಅವರಿಗೆ ಸೋಲಾಗಿದೆ. ದೇವನ್ 132 ಮತಗಳನ್ನು ಪಡೆದಿದ್ದಾರೆ. ನಟಿ ಹಾಗೂ ಡಬ್ಬಿಂಗ್ ಕಲಾವಿದೆ ಕುಕ್ಕು ಪರಮೇಶ್ವರನ್ ಅವರು ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಇದೇ ಮೊದಲ ಬಾರಿಗೆ ಎ.ಎಂ.ಎಂ.ಎನ ಉನ್ನತ ಹುದ್ದೆಗಳಿಗೆ ಮಹಿಳೆಯರು ಆಯ್ಕೆಯಾಗಿದ್ದಾರೆ.
View this post on Instagram
“ನಾವು ಮಹಿಳೆಯರು ಚುನಾವಣೆಯಲ್ಲಿ ಗೆದ್ದಿದ್ದೇವೆ. ನನಗೆ ತುಂಬಾ ಸಂತೋಷವಾಗಿದೆ” ಎಂದು ಶ್ವೇತಾ ಮಾಧ್ಯಮಗಳಿಗೆ ತಿಳಿಸಿದ್ದು, ಎಲ್ಲಾ ಸದಸ್ಯರು ಒಟ್ಟಾಗಿ ಸಂಘವಾಗಿ ಮುಂದುವರಿಯುತ್ತೇವೆ.
ಈ ಹಿಂದೆ ಎ.ಎಂ.ಎಂ.ಎ ತೊರೆದ ಮಹಿಳಾ ನಟರನ್ನು ಮರಳಿ ಕರೆತರಲು ಕರೆ ನೀಡುತ್ತೇವೆ. ಅವರಿಗೆ ಸ್ವಾಗತ, ನಾವೆಲ್ಲರೂ ಒಂದೇ ಕುಟುಂಬ. ಅವರಿಗೆ ಒಳ್ಳೆಯದಾಗುವುದಾದರೆ ನಾನು ಅವರನ್ನು ವೈಯಕ್ತಿಕವಾಗಿ ಭೇಟಿಯಾಗಲು ಸಿದ್ಧಳಿದ್ದೇನೆ” ಎಂದಿದ್ದಾರೆ.
ಮಲಯಾಳಂ ಸಿನಿಮಾ ರಂಗದಲ್ಲಿ ಮಹಿಳೆಯರ ಮೇಲೆ ನಡೆದ ಮತ್ತು ನಡೆಯುತ್ತಿರುವ ದೌರ್ಜನ್ಯಗಳ ಕುರಿತು ಜಸ್ಟೀಸ್ ಹೇಮಾ ಸಮಿತಿ ನೀಡಿದ್ದ ವರದಿಯನ್ನು 2024 ರ ಆಗಸ್ಟ್ 19 ರಂದು ಸರ್ಕಾರ ಸಾರ್ವಜನಿಕಗೊಳಿಸಿತ್ತು. ಆ ಬಳಿಕ ಅನೇಕ ನಟರ ಮೇಲೆ ಲೈಂಗಿಕ ಕಿರುಕುಳ ಆರೋಪಗಳು ಕೇಳಿ ಬಂದಿತ್ತು, ಪ್ರಕರಣಗಳು ದಾಖಲಾಗಿತ್ತು. ಈ ನಡುವೆ ನಟ ಮೋಹನ್ಲಾಲ್ ನೇತೃತ್ವದ ಎ.ಎಂ.ಎಂ.ಎ ಆಡಳಿತ ಸಮಿತಿಯಿಂದ ಸಿನಿಮಾ ದಿಗ್ಗಜರು ಕೆಳಗಿಳಿದಿದ್ದರು. ಹಾಗಾಗಿ, ಸಮಿತಿಗೆ ಚುನಾವಣೆ ಅಗತ್ಯವಾಗಿತ್ತು.
ಮಲಯಾಳಂ ಚಲನಚಿತ್ರೋದ್ಯಮದಲ್ಲಿ ಮಹಿಳೆಯರ ಕೆಲಸದ ಪರಿಸ್ಥಿತಿಗಳನ್ನು ಅಧ್ಯಯನ ಮಾಡಲು ಹೇಮಾ ಸಮಿತಿಯನ್ನು 2019ರಲ್ಲಿ ಸರ್ಕಾರ ರಚಿಸಿತ್ತು. ಈ ಸಮಿತಿಯ ವರದಿಯು ಲೈಂಗಿಕ ಕಿರುಕುಳ ಮತ್ತು ಇತರ ಹಿಂಸಾಚಾರ ಸೇರಿದಂತೆ ಪುರುಷ ಸಹೋದ್ಯೋಗಿಗಳಿಂದ ಮಹಿಳೆಯರು ಎದುರಿಸುತ್ತಿರುವ ಭಯಾನಕ ದೌರ್ಜನ್ಯಗಳನ್ನು ಬಹಿರಂಗಪಡಿಸಿತ್ತು.
ವರದಿ ಬಿಡುಗಡೆಯಾದ ನಂತರ, ಕಲಾವಿದರ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರು ಸೇರಿದಂತೆ ಹಲವಾರು ನಟರ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಹಲ್ಲೆ ಆರೋಪಗಳು ಕೇಳಿ ಬಂದಿತ್ತು. ಪತ್ರಿಕಾ ಹೇಳಿಕೆಯಲ್ಲಿ, ಎ.ಎಂ.ಎಂ.ಎ. ಆಡಳಿತ ಸಮಿತಿಯು ನೈತಿಕ ಹೊಣೆಗಾರಿಕೆಯನ್ನು ಉಲ್ಲೇಖಿಸಿ ರಾಜೀನಾಮೆ ನೀಡುವ ನಿರ್ಧಾರವನ್ನು ಪ್ರಕಟಿಸಿತ್ತು.
2025ರ ಆಗಸ್ಟ್ 15ರಂದು ನಡೆದ ಚುನಾವಣೆಯಲ್ಲಿ, ಕುಕ್ಕು ಪರಮೇಶ್ವರನ್ 172 ಮತಗಳನ್ನು ಪಡೆದಿದ್ದು, ಅವರ ವಿರುದ್ಧ ಸ್ಪರ್ಧಿಸಿದ್ದ ರವೀಂದ್ರನ್ 115 ಮತಗಳನ್ನು ಪಡೆದು ಸೋಲನುಭವಿಸಿದ್ದಾರೆ. ಸಂಘಕ್ಕೆ ಜಯನ್ ಆರ್ ಮತ್ತು ಲಕ್ಷ್ಮಿ ಪ್ರಿಯಾ ಅವರು ಉಪಾಧ್ಯಕ್ಷರಾಗಿ, ಹನ್ಸಿಬಾ ಹಸನ್ ಜಂಟಿ ಕಾರ್ಯದರ್ಶಿಯಾಗಿ ಮತ್ತು ಉನ್ನಿ ಶಿವಪಾಲ್ ಖಜಾಂಚಿಯಾಗಿ ಆಯ್ಕೆಯಾಗಿದ್ದಾರೆ.
ಕಾರ್ಯಕಾರಿ ಸಮಿತಿಯಲ್ಲಿ ಮಹಿಳೆಯರಿಗೆ ಮೀಸಲಾದ ಹುದ್ದೆಗಳಿಗೆ ಸರಯು ಮೋಹನ್, ಅಂಜಲಿ ನಾಯರ್, ಆಶಾ ಅರವಿಂದ್ ಮತ್ತು ನೀನಾ ಕುರುಪ್ ಆಯ್ಕೆಯಾಗಿದ್ದಾರೆ.
ಕಾರ್ಯಕಾರಿ ಸಮಿತಿಯ ಸಾಮಾನ್ಯ ಸದಸ್ಯ ಹುದ್ದೆಗಳಿಗೆ, ಸಂತೋಷ್ ಕೀಜತ್ತೂರ್, ವಿನು ಮೋಹನ್, ಕೈಲಾಶ್, ಟಿನಿ ಟಾಮ್, ಜಾಯ್ ಮ್ಯಾಥ್ಯೂ, ರೋನಿ ಡೇವಿಡ್ ರಾಜ್, ಮತ್ತು ಸಿಜೋಯ್ ವರ್ಗೀಸ್ ಆಯ್ಕೆಗೊಂಡಿದ್ದಾರೆ.
ಧರ್ಮಸ್ಥಳ ಶವಶೋಧ| ಮಧ್ಯಂತರ ವರದಿ ಇಲ್ಲ; ನ್ಯಾಯಾಲಯಕ್ಕೆ ಪೂರ್ಣ ವರದಿ: ಎಸ್ಐಟಿ


