ಇದೀಗ RCEP ಒಪ್ಪಂದಕ್ಕೆ ಸಹಿ ಹಾಕಬಹುದೆಂಬ ಆತಂಕದಿಂದ ರೈತರು ಬೀದಿಗಿಳಿದಿದ್ದಾರೆ. ನಮ್ಮ ಪಕ್ಷದ ಕೇಂದ್ರದ ವಕ್ತಾರಾಧಿಯಾಗಿ ನಾವೆಲ್ಲಾ ಅದರ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಒಂದು ವೇಳೆ ಸಹಿ ಬಿದ್ದಲ್ಲಿ ಬೀದಿಗಿಳಿಯುತ್ತೇನೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದರು.
ಇಂದು ಬೆಂಗಳೂರಿನಲ್ಲಿ ನಡೆದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಿದ್ದರಾಮಯ್ಯನವರು ಪ್ರಸ್ತಾವಿತ ಆರ್.ಸಿ.ಇ.ಪಿ ಒಪ್ಪಂದದ ಬಗ್ಗೆ ಮಾತನಾಡುತ್ತಾ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಲ್ಲಿ ಹಾಲು ಉತ್ಪಾದನೆ ಒಂದು ಉಧ್ಯಮ. ಆದರೆ ನಮಗೆ ಅದು ಉಪಕಸುಬಾಗಿದೆ ಇದನ್ನು ಕೇಂದ್ರ ಸರ್ಕಾರ ಅರ್ಥಮಾಡಿಕೊಳ್ಳಬೇಕು ಎಂದಿದ್ದಾರೆ.
ಪ್ರವಾಹ ಬಂದು 90 ದಿನಗಳಾಗುತ್ತಿದೆ. ಸಂತ್ರಸ್ತರಿಗೆ ಪರಿಹಾರ ಸಿಕ್ಕಿಲ್ಲ. ಇದನ್ನು ಹೇಳಿದರೆ ನಾನು ಸುಳ್ಳು ಹೇಳ್ತೇನೆ ಎಂದು ಯಡಿಯೂರಪ್ಪ ಹೇಳುತ್ತಾರೆ. 4 ದಶಕಗಳ ಕಾಲ ರಾಜಕೀಯದಲ್ಲಿದ್ದು, ಶಾಸಕನಿಂದ ಮುಖ್ಯಮಂತ್ರಿವರೆಗೆ ಹಲವು ಹುದ್ದೆಗಳನ್ನು ನಿರ್ವಹಿಸಿದ್ದೇನೆ. 13 ಬಾರಿ ಬಜೆಟ್ ಮಂಡಿಸಿದ್ದೇನೆ. ಎಲ್ಲಿಂದ ಮಾಹಿತಿ ಪಡೆಯಬೇಕೆಂದು ಗೊತ್ತಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ನೆರೆಯಿಂದ 2,47,628 ಮನೆಗಳು ಬಿದ್ದಿವೆ ಎಂದು ಕೇಂದ್ರಕ್ಕೆ ಕೊಟ್ಟಿರುವ ಲೆಕ್ಕ. 92,920 ಸಾವಿರ ಮನೆಗಳಿಗೆ ಹಾನಿಯಾಗಿದೆ ಎಂದು ಜಾಹಿರಾತಿನಲ್ಲಿ ಕೊಟ್ಟಿರುವ ಲೆಕ್ಕ. ಈ ಎರಡರಲ್ಲಿ ಯಾವುದು ಸತ್ಯ? ಯಾವುದು ಸುಳ್ಳು ಮಿಸ್ಟರ್ ಯಡಿಯೂರಪ್ಪನವರೆ ಎಂದು ಸಿದ್ದು ಪ್ರಶ್ನಿಸಿದ್ದಾರೆ.
ವರ್ಗಾವಣೆಯ ದಂಧೆ, ಆಪರೇಷನ್ ಕಮಲ, ನೆರೆ ಪರಿಹಾರದಲ್ಲಿ ವೈಫಲ್ಯ- ಇವಿಷ್ಟೇ ಯಡಿಯೂರಪ್ಪನವರ ನೂರು ದಿನಗಳ ಸಾಧನೆ – ಒಂದು ದೊಡ್ಡ ಸೊನ್ನೆ ಎಂದು ವ್ಯಂಗ್ಯವಾಡಿದ್ದಾರೆ.
ರಾಜ್ಯದಲ್ಲಿ ಸುಮಾರು 80 ಲಕ್ಷ ಲೀಟರ್ ಹಾಲು ಉತ್ಪಾದನೆ ಆಗುತ್ತಿದೆ. 14,500 ಹಾಲಿನ ಸೊಸೈಟಿಗಳಿವೆ. ಸುಮಾರು 25 ಲಕ್ಷ ಸದಸ್ಯರಿದ್ದಾರೆ. ಒಟ್ಟಾರೆ ರಾಜ್ಯದಲ್ಲಿ ಒಂದೂವರೆ ಕೋಟಿ ಜನರಿಗೆ ಹಾಲು ಉತ್ಪಾದನೆ ಜೀವನೋಪಾಯಕ್ಕೆ ಆಧಾರ. ದೇಶದಲ್ಲಿ ಸುಮಾರು ಹತ್ತು ಕೋಟಿ ಜನ ಈ ಕಸುಬಿನಲ್ಲ್ಲಿದ್ದಾರೆ. ಈ ಕರಾಳ ಒಪ್ಪಂದ ಜಾರಿಯಾದಲ್ಲಿ ಅಷ್ಟು ಜನ ಬೀದಿಗೆ ಬೀಳಬೇಕಾದ ಅಪಾಯವಿದೆ ಎಂದಿದ್ದಾರೆ.
ಮೊದಲನೆಯದಾಗಿ ಈ ಸರ್ಕಾರ ಏನಾದ್ರು ರೈತರ ಪರ ಇದೆ ಅನ್ನೋದಾದ್ರೆ ಅದಕ್ಕೆ ಸೈನ್ ಹಾಕಬಾರದು. ಆಕಸ್ಮಾತ್ ಸೈನ್ ಹಾಕಿದ್ರೆ ನಾವು ಬೀದಿಗಿಳಿದು ಹೋರಾಟ ಮಾಡಲು ಸಿದ್ಧ ಎಂದು ತಮ್ಮ ಗಟ್ಟಿ ನಿಲುವನ್ನು ಸಿದ್ದರಾಮಯ್ಯವರು ಸ್ಪಷ್ಟವಾಗಿ ಹೇಳಿದ್ದಾರೆ.