ರೈತ ವಿರೋಧಿ ಕಾಯ್ದೆಗಳನ್ನು, ಸುಗ್ರೀವಾಜ್ಞೆಗಳನ್ನು ಹಿಂಪಡೆಯದ ಹೊರತು ಗಾಂಧಿ ಜಯಂತಿ ಆಚರಿಸುವ ನೈತಿಕ ಹಕ್ಕು ರಾಜ್ಯ, ಕೇಂದ್ರ ಸರ್ಕಾರಗಳಿಗಿಲ್ಲ ಎಂದು ಕರ್ನಾಟಕ ಜನಶಕ್ತಿಯ ಮುಖಂಡ ಕೆ.ಎಲ್ ಅಶೋಕ್ ಪ್ರತಿಪಾದಿಸಿದ್ದಾರೆ.
ರಾಜ್ಯಾದ್ಯಂತ ಅನ್ನದಾತರ ಉಪವಾಸ ಸತ್ಯಾಗ್ರಹದ ಭಾಗವಾಗಿ ಕೃಷಿ ಕಾಯ್ದೆಗಳ ರದ್ಧತಿಗೆ ಆಗ್ರಹಿಸಿ ಶಿವಮೊಗ್ಗದಲ್ಲಿ ಆರಂಭಗೊಂಡ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, “ಗಾಂಧೀಜಿಯವರ ಸ್ವರಾಜ್ಯದ ಕನಸನ್ನು ನುಚ್ಚುನೂರು ಮಾಡುವ ಕೆಲಸ ನಡೆಯುತ್ತಿದೆ. ಗಾಂಧೀಜಿಯವರ ಕನಸುಗಳನ್ನು ಸಾಕಾರ ಮಾಡಬೇಕಾದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈಗ ತರುತ್ತಿರುವ ರೈತವಿರೋಧಿ, ದಲಿತ ವಿರೋಧಿ, ಕಾರ್ಮಿಕ ವಿರೋಧಿ ಮಸೂದೆಗಳನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ಅವರು ಗಾಂಧಿ ಬಗ್ಗೆ ಮಾತನಾಡುವ ನೈತಿಕ ಹಕ್ಕು ಕಳೆದುಕೊಳ್ಳುತ್ತಾರೆ” ಎಂದರು.
ಗಾಂಧಿ ಜಯಂತಿಯಂದು ರೈತವಿರೋಧಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ರೈತ ಸಂಘಟನೆಗಳಿಂದ ಉಪವಾಸ ಸತ್ಯಾಗ್ರಹ ಆರಂಭ.. ಹೋರಾಟಗಾರ ಕೆ.ಎಲ್ ಅಶೋಕ್ರವರ ಮಾತುಗಳು
Posted by Naanu Gauri on Thursday, October 1, 2020
ಶಿವಮೊಗ್ಗವು ರೈತ ಚಳವಳಿ, ದಲಿತ ಚಳವಳಿ ಮತ್ತು ಮುಖ್ಯಮಂತ್ರಿಗಳ ತವರೂರಾಗಿದೆ. ನಿನ್ನೆ ಕೂಡ ಮುಖ್ಯಮಂತ್ರಿಗಳು ಸಚಿವ ಸಂಪುಟದಲ್ಲಿ ಮತ್ತೆ ಸುಗ್ರೀವಾಜ್ಞೆ ತರುವ ಕುರಿತು ಮಾತನಾಡಿದ್ದಾರೆ. ಅದನ್ನು ಕೈಬಿಟ್ಟು ಈ ಮಸೂದೆಗಳನ್ನು ಹಿಂಪಡೆಯಬೇಕು. ಆಗ ಮಾತ್ರ ಯಡಿಯೂರಪ್ಪನವರು ಹಸಿರು ಶಾಲು ಹೊದ್ದು ಪ್ರಮಾಣ ವಚನ ಸ್ವೀಕರಿಸಿದ್ದಕ್ಕೆ ಅರ್ಥ ಬರುತ್ತದೆ. ಇಲ್ಲದಿದ್ದಲ್ಲಿ ನೀವು ರೈತರಿಗೆ ದ್ರೋಹ ಬಗೆದಿರಿ ಎಂದು ಚರಿತ್ರೆಯಲ್ಲಿ ದಾಖಲಾಗುತ್ತದೆ ಎಂದು ಕೆ.ಎಲ್ ಅಶೋಕ್ ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಎಚ್.ಆರ್ ಬಸವರಾಜಪ್ಪನವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ನೂರಾರು ರೈತರು ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದಾರೆ.
ಇದನ್ನೂ ಓದಿ : ಗಾಂಧಿ ಜಯಂತಿಯಂದು ಕೃಷಿ ಮಸೂದೆ ವಿರೋಧಿಸಿ ’ಅನ್ನದಾತ’ರ ಉಪವಾಸ ಸತ್ಯಾಗ್ರಹ