ನವದೆಹಲಿ: ಹರಿಯಾಣದ ರಾಜ್ಯಮಟ್ಟದ ಟೆನಿಸ್ ಆಟಗಾರ್ತಿ ರಾಧಿಕಾ ಯಾದವ್ ಅವರ ಹತ್ಯೆಯು ಕೇವಲ ವೈಯಕ್ತಿಕ ದ್ವೇಷ ಮತ್ತು ಸಾಮಾಜಿಕ ಕಳಂಕದಿಂದ ನಡೆದ ಘಟನೆಯಾಗಿತ್ತು. ಅಲ್ಲಿ ಆಕೆಯ ತಂದೆಯೇ ಆಕೆಗೆ ನಾಲ್ಕು ಸುತ್ತು ಗುಂಡುಗಳನ್ನು ಹಾರಿಸಿದ್ದನು. ಆದರೆ, ಈ ಘಟನೆ ನಡೆದ ಕೆಲವೇ ಸಮಯದಲ್ಲಿ ‘ಗೋಧಿ ಮೀಡಿಯಾ’ ಎಂದು ಗುರುತಿಸಲ್ಪಡುವ ಕೆಲವು ಮುಖ್ಯವಾಹಿನಿ ಮಾಧ್ಯಮಗಳು ಇದಕ್ಕೆ ಕೋಮು ಬಣ್ಣ ಹಚ್ಚಲು ಪ್ರಯತ್ನಿಸಿದವು.
ಹಲವು ಮುಖ್ಯವಾಹಿನಿ ಮಾಧ್ಯಮಗಳು ಆರಂಭದಲ್ಲಿ ರಾಧಿಕಾ ಹತ್ಯೆಗೆ ‘ಲವ್ ಜಿಹಾದ್’ ಕಾರಣ ಎಂದು ದೊಡ್ಡದಾಗಿ ಬಿತ್ತರಿಸಿದ್ದವು. ರಾಧಿಕಾ ಕೆಲವು ವರ್ಷಗಳ ಹಿಂದೆ ಮುಸ್ಲಿಂ ಕಲಾವಿದ ಇನಾಮ್-ಉಲ್-ಹಕ್ ಅವರೊಂದಿಗೆ ಒಂದು ಮ್ಯೂಸಿಕ್ ಆಲ್ಬಂ ಮಾಡಿದ್ದು ಇದಕ್ಕೆ ಏಕೈಕ ಆಧಾರವಾಗಿತ್ತು. ಆದರೆ, ರಾಧಿಕಾ ಅವರ ತಂದೆ ದೀಪಕ್ ಯಾದವ್ ತಾನೇ ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡ ತಕ್ಷಣವೇ ಸತ್ಯಾಂಶ ಹೊರಬಿತ್ತು.
ಈ ಮಧ್ಯೆ, ವೈರಲ್ ಆದ ಮ್ಯೂಸಿಕ್ ವೀಡಿಯೊದಲ್ಲಿ ರಾಧಿಕಾ ಯಾದವ್ ಜೊತೆ ಕಾಣಿಸಿಕೊಂಡಿದ್ದ ನಟ ಶುಕ್ರವಾರ ಒಂದು ಸ್ಪಷ್ಟನೆ ನೀಡಿದ್ದಾರೆ. ಅವರು ತಮ್ಮ ವೃತ್ತಿಪರ ಸಂಬಂಧವನ್ನು ಹೊರತುಪಡಿಸಿ ರಾಧಿಕಾಳೊಂದಿಗೆ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ. ಇನಾಮ್-ಉಲ್-ಹಕ್ ಅವರು ದುಬೈನಲ್ಲಿ ಟೆನಿಸ್ ಪ್ರೀಮಿಯರ್ ಲೀಗ್ ವೇಳೆ ರಾಧಿಕಾಳನ್ನು ಮೊದಲ ಬಾರಿಗೆ ಭೇಟಿಯಾಗಿದ್ದರು ಮತ್ತು ನಂತರ ಒಂದು ಮ್ಯೂಸಿಕ್ ವೀಡಿಯೊದಲ್ಲಿ ಕೆಲಸ ಮಾಡಿದ್ದರು. ಆ ವೀಡಿಯೊ ಯೂಟ್ಯೂಬ್ನಲ್ಲಿ ಲಭ್ಯವಿದ್ದು, ಅದಕ್ಕಾಗಿಯೇ ಅದನ್ನು ಪದೇ ಪದೇ ಪ್ರಸ್ತಾಪಿಸಲಾಗುತ್ತಿದೆ ಎಂದೂ ಕೆಲ ಮಾಧ್ಯಮಗಳ ವರದಿಗಳು ಹೇಳಿವೆ.
ಮುಸ್ಲಿಂ ವಿರೋಧಿ, ಇಸ್ಲಾಮೋಫೋಬಿಕ್ ದ್ವೇಷ ಭಾಷಣಗಳನ್ನು ಹರಡಲು ಯಾವುದೇ ಅವಕಾಶವನ್ನು ಬಿಡದ ಕೆಲ ಮುಖ್ಯವಾಹಿನಿ ಮಾಧ್ಯಮಗಳು, 25 ವರ್ಷದ ರಾಧಿಕಾಳ ಹತ್ಯೆಯಾದ ಕೆಲವೇ ಸಮಯದಲ್ಲಿ ತಾವು ‘ಲವ್ ಜಿಹಾದ್’ ಎಂದು ಬಿತ್ತರಿಸಿದ್ದು ತಪ್ಪು ಎಂದು ಒಪ್ಪಿಕೊಳ್ಳಬೇಕಾಯಿತು. ರಾಧಿಕಾಳ ತಂದೆ ತಮ್ಮ ಪರವಾನಗಿ ಪಡೆದ ರಿವಾಲ್ವರ್ನಿಂದ ಆಕೆಯನ್ನು ಗುಂಡಿಕ್ಕಿ ಹತ್ಯೆಗೈದಿದ್ದಾರೆ ಮತ್ತು ತಾನೇ ಮಗಳನ್ನು ಹತ್ಯೆಗೈದಿರುವುದಾಗಿ ಅಪರಾಧದ ನಂತರ ತನ್ನ ಸಹೋದರನೊಂದಿಗೆ ಒಪ್ಪಿಕೊಂಡಿದ್ದಾರೆ ಎಂಬುದು ಶೀಘ್ರದಲ್ಲೇ ದೃಢಪಟ್ಟಿತು.
ರಾಧಿಕಾ ಯಾದವ್ ಅವರ ಚಿಕ್ಕಪ್ಪ ವಿಜಯ್ ಯಾದವ್, “ಒಬ್ಬ ವ್ಯಕ್ತಿ ತಾನೇ ತಪ್ಪಿತಸ್ಥ ಎಂದು ಅರಿತುಕೊಂಡಾಗ, ಅದಕ್ಕಿಂತ ದೊಡ್ಡ ಶಿಕ್ಷೆ ಬೇರಿಲ್ಲ” ಎಂದಿದ್ದಾರೆ.
ವಿಜಯ್ ಯಾದವ್, “ದೀಪಕ್ ಯಾದವ್ ನನ್ನ ಸಹೋದರ. ಅವನೇ ತನ್ನ ಮಗಳನ್ನು ಕೊಂದಿದ್ದೇನೆ, ತನ್ನನ್ನು ಕೊಂದುಬಿಡು…’ ಎಂದು ಹೇಳಿದ. ಕಾರಣ ಕೇಳಿದರೆ ಹೇಳಲಿಲ್ಲ. ‘ಕೇವಲ ಮನಸ್ಸು ಕೆಟ್ಟಿತ್ತು’ ಎಂದು ಹೇಳಿದ” ಎಂದು ತಿಳಿಸಿದ್ದಾರೆ.
ಸಾರ್ವಜನಿಕರಿಂದ ತನಗೆ ಮಗಳ ದುಡಿಮೆಯಲ್ಲಿ ಬದುಕು ಸಾಗಿಸುತ್ತಿದ್ದೀಯಾ ಎಂಬ “ನಿಂದನೆಗಳು”, ಟೆನಿಸ್ ಅಕಾಡೆಮಿ, ಇನ್ಸ್ಟಾಗ್ರಾಮ್ ರೀಲ್ ಮತ್ತು ಮ್ಯೂಸಿಕ್ ವೀಡಿಯೊ ಸೇರಿದಂತೆ ಹಲವು ಕಾರಣಗಳು ಮಗಳ ಹತ್ಯೆಗೆ ಕಾರಣವೆಂದು ದೀಪಕ್ ಯಾದವ್ ಅವರು ಹೇಳಿಕೊಂಡಿದ್ದಾರೆ ಎಂದು ಕೆಲವು ದೃಢಪಡಿಸದ ವರದಿಗಳು ಹೇಳಿವೆ.
ಗುರುಗ್ರಾಮ್ ನ್ಯಾಯಾಲಯ ಶನಿವಾರ ದೀಪಕ್ ಯಾದವ್ಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
25 ವರ್ಷದ ರಾಧಿಕಾ ಅವರ ದೇಹಕ್ಕೆ ನಾಲ್ಕು ಗುಂಡುಗಳು ತಗುಲಿವೆ. ಇವುಗಳಲ್ಲಿ ಮೂರು ಗುಂಡುಗಳು ಬೆನ್ನಿಗೆ ಮತ್ತು ಒಂದು ಭುಜಕ್ಕೆ ಹೊಕ್ಕಿದೆ ಎಂದು ಮೂವರು ವೈದ್ಯರ ತಂಡದ ಮರಣೋತ್ತರ ಪರೀಕ್ಷಾ ವರದಿ ತಿಳಿಸಿದೆ ಎಂದು ಪೊಲೀಸರು ಶುಕ್ರವಾರ ಮಾಹಿತಿ ನೀಡಿದ್ದಾರೆ. ಶನಿವಾರ ವಜಿರಾಬಾದ್ನಲ್ಲಿ ಆಕೆಯ ಅಂತ್ಯಕ್ರಿಯೆ ನಡೆದಿದೆ.
ಗುರುವಾರ ಬೆಳಿಗ್ಗೆ 10:30 ರ ಸುಮಾರಿಗೆ, ಸುಶಾಂತ್ ಲೋಕ್-2 ರ ‘ಬ್ಲಾಕ್-ಜಿ’ನಲ್ಲಿರುವ ತಮ್ಮ ಮೂರು ಅಂತಸ್ತಿನ ಮನೆಯ ಅಡುಗೆಮನೆಯಲ್ಲಿ ರಾಧಿಕಾ ಉಪಹಾರ ತಯಾರಿಸುತ್ತಿದ್ದಾಗ ದೀಪಕ್ ಯಾದವ್ ಆಕೆಯನ್ನು ನಾಲ್ಕು ಸುತ್ತು ಗುಂಡು ಹಾರಿಸಿ ಹತ್ಯೆಗೈದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ತಂದೆಯು ತಾನು ಮಗಳ ಕೊಲೆಗೆ ಮೊದಲೇ ಸಂಚು ರೂಪಿಸಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಗುರುಗ್ರಾಮ್ ಪೊಲೀಸರ ಸಾರ್ವಜನಿಕ ಸಂಪರ್ಕ ಅಧಿಕಾರಿ ಸಂದೀಪ್ ಕುಮಾರ್ ಹೇಳಿದ್ದಾರೆ.
ದೀಪಕ್ ಯಾದವ್ ಸಾಮಾನ್ಯವಾಗಿ ಬೆಳಿಗ್ಗೆ ಹಾಲು ತರಲು ತಾವೇ ಹೋಗುತ್ತಿದ್ದರು. ಆದರೆ ಗುರುವಾರ ಮಗನಿಗೆ ಹೋಗುವಂತೆ ಹೇಳಿದರು. ಮನೆಯಲ್ಲಿ ರಾಧಿಕಾಳೊಂದಿಗೆ ಒಬ್ಬಂಟಿಯಾಗಿದ್ದಾಗ, ಅವಳು ಉಪಹಾರ ತಯಾರಿಸುತ್ತಿದ್ದಾಗ ಆಕೆಯ ಮೇಲೆ ದೀಪಕ್ ಗುಂಡುಗಳನ್ನು ಹಾರಿಸಿದನು ಎಂದು ಸಂದೀಪ್ ಕುಮಾರ್ ವಿವರಿಸಿದರು.
ಈ ಪ್ರಕರಣಕ್ಕೆ ಲವ್ ಜಿಹಾದ್ ಹಣೆಪಟ್ಟಿ ಕಟ್ಟುವ ಮೂಲಕ ಕೋಮು ಉದ್ವಿಗ್ನತೆಯನ್ನು ಹೆಚ್ಚಿಸಲು ‘ಗೋಧಿ ಮೀಡಿಯಾ’ಗಳು ಪ್ರಯತ್ನಿಸಿದವು. ಈ ಪ್ರಕರಣವು ವಾಸ್ತವ ಸ್ಥಿತಿಯನ್ನು ಮರೆಮಾಚಿ ಸುದ್ದಿಯನ್ನು ತಿರುಚಲು ಗೋಧಿ ಮೀಡಿಯಾಗಳು ಹೇಗೆ ಬಳಸಿಕೊಳ್ಳುತ್ತವೆ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ.
ಕಾಶ್ಮೀರದ ಮುಸ್ಲಿಂ ಪ್ರಾಬಲ್ಯ ಪ್ರದೇಶಗಳಿಗೆ ಭೇಟಿ ಕೊಡಬೇಡಿ: ಬಂಗಾಳಿಗಳಿಗೆ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಕರೆ



Suvendu is a communal biased politician. Being a leader of a political party he should restrain from such comments.