Homeಮುಖಪುಟಲಂಕೇಶರ ಒಡನಾಟ–ಕವಿ ಮೂಡ್ನಾಕೂಡು ಚಿನ್ನಸ್ವಾಮಿಯವರ ಆತ್ಮಕತೆ ‘ನೆನಪಿನ ಹಕ್ಕಿಯ ಹಾರಲು ಬಿಟ್ಟು’

ಲಂಕೇಶರ ಒಡನಾಟ–ಕವಿ ಮೂಡ್ನಾಕೂಡು ಚಿನ್ನಸ್ವಾಮಿಯವರ ಆತ್ಮಕತೆ ‘ನೆನಪಿನ ಹಕ್ಕಿಯ ಹಾರಲು ಬಿಟ್ಟು’

ಪವರ್ ಎಂದರೆ ಏನು ಎಂಬುದನ್ನು ಲಂಕೇಶರನ್ನು ನೋಡಿಯೇ ನಾನು ಅರ್ಥ ಮಾಡಿಕೊಂಡದ್ದು. ಅದು ರಾಜಕೀಯ ಬಲವೂ ಅಲ್ಲ, ಹಣಬಲವೂ ಅಲ್ಲ. ಅದು ಜ್ಞಾನದ ಬಲ. ನೈತಿಕತೆಯ ಬಲ.

- Advertisement -
- Advertisement -

90 ರ ದಶಕದಲ್ಲಿ ನನ್ನ ಬಿಡುವಿನ ಸಮಯವೆಲ್ಲವೂ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದ ಒಡನಾಟದಲ್ಲಿಯೆ ಕಳೆದುಹೋಗುತ್ತಿತ್ತು. ಕಛೇರಿ ಮುಗಿದ ನಂತರ ನಾನು ನೇರವಾಗಿ ಮನೆಗೆ ಹೋದದ್ದು ಕಡಿಮೆ. ಸೀದಾ ನನ್ನ ದಾರಿ ರವೀಂದ್ರ ಕಲಾಕ್ಷೇತ್ರಕ್ಕೆ ಸಾಗುತ್ತಿತ್ತು. ಕವಿಗಳು, ಲೇಖಕರು, ನಾಟಕದವರು ಅಲ್ಲಿ ಸದಾ ಹಾಜರಿರುತ್ತಿದ್ದರು. ಒಮ್ಮೊಮ್ಮೆ ಅಲ್ಲಿ ಸಿಜಿಕೆಯವರು ಟೀ ಕುಡಿಯುತ್ತಾ, ಮುಷ್ಟಿಯಲ್ಲಿ ಸಿಗರೇಟು ಊದುತ್ತಾ ನಮ್ಮಂಥ ಯುವಕರನ್ನು ಉತ್ಸಾಹದಿಂದ ಬರಮಾಡಿಕೊಳ್ಳುತ್ತಿದ್ದರು. ನಾನು ಯಾವುದೇ ಸಾಹಿತ್ಯ ಕಾರ್ಯಕ್ರಮದಲ್ಲಿ ಹಾಜರಿರುತ್ತಿದ್ದೆ. ಬೆಂಗಳೂರಿನಲ್ಲಿ ನಡೆಯುವ ಕವಿಗೋಷ್ಠಿಗಳಲ್ಲಿ ಸಾಮಾನ್ಯವಾಗಿ ನನ್ನ ಹೆಸರಿರುತ್ತಿತ್ತು. ಒಮ್ಮೆ ಯವನಿಕಾ ಸಭಾಂಗಣದಲ್ಲಿ ಸಾಹಿತ್ಯ ಅಕಾಡೆಮಿ ಆಯೋಜಿಸಿದ ಕಾರ್ಯಕ್ರಮವೆಂದು ಕಾಣುತ್ತದೆ. ಕವಿಗೋಷ್ಠಿಯಿತ್ತು. ಸಭಾಂಗಣದ ಮುಂಭಾಗದಲ್ಲಿ ಸಾಹಿತ್ಯ ಲೋಕದ ಅನೇಕ ದಿಗ್ಗಜರು ಕುಳಿತಿದ್ದರು. ಅವರಲ್ಲಿ ಲಂಕೇಶ್ ಕೂಡ ಒಬ್ಬರು. ನಾನು ಅಂದು ‘ಗೋಧೂಳಿ’ ಎಂಬ ಕವಿತೆಯನ್ನು ವಾಚಿಸಿದೆ. ಗೋಷ್ಠಿ ಮುಗಿದಮೇಲೆ ಚಹಾ ವಿರಾಮವಿತ್ತು. ಲಂಕೇಶರು ಹೊರಗಡೆ ಚಹಾ ಸೇವಿಸುತ್ತಾ, ಸಿಗರೇಟು ಎಳೆಯುತ್ತಾ, ಗೆಳೆಯರೊಂದಿಗೆ ಹರಟುತ್ತಾ ನಿಂತಿದ್ದರು. ಅವರನ್ನು ಮಾತನಾಡಿಸಲು ಯಾರಿಗಾದರೂ ಸ್ವಲ್ಪ ಭಯವಿದ್ದೇ ಇರುತ್ತಿತ್ತು. ದೂರದಲ್ಲಿ ನಿಂತಿದ್ದ ನನ್ನನ್ನು ಸನ್ನೆ ಮಾಡಿ ಕರೆದರು. ಹತ್ತಿರ ಹೋದೆ. ‘ನಿಮ್ಮ ಪದ್ಯ ಚೆನ್ನಾಗಿದೆ ಕಣ್ರೀ, ಪತ್ರಿಕೆಗೆ ಕಳಿಸಿ’ ಅಂದರು. ಆಗ ನಾನು ಉಬ್ಬಿಹೋಗಿದ್ದೆ. ಆ ನೆಪದಲ್ಲಿ ಬಸವನಗುಡಿಯಲ್ಲಿದ್ದ ಲಂಕೇಶ್ ಪತ್ರಿಕೆ ಕಛೇರಿಗೆ ಹೋಗಿ ಕವಿತೆ ಕೊಟ್ಟು ಬಂದಿದ್ದೆ. ಆ ಘಟನೆಯ ಮುಖಾಂತರ ಲಂಕೇಶ್ ಬಳಗಕ್ಕೆ ನಾನೂ ಪ್ರವೇಶ ಪಡೆದೆ. ಆ ನಂತರವೂ ನಿಯತವಾಗಿ ನನ್ನ ಕವಿತೆಗಳು ಅಲ್ಲಿ ಪ್ರಕಟಗೊಂಡವು.

ಲಂಕೇಶ್ ಪತ್ರಿಕೆ ಕಛೇರಿ ಕೇವಲ ಅವರ ಆಡಳಿತ ಕಛೇರಿಯಾಗಿರಲಿಲ್ಲ. ಅದೊಂದು ಮುಕ್ತ ಸಾಂಸ್ಕøತಿಕ ಕೇಂದ್ರವಾಗಿತ್ತು. ಹೊಸಬರಿಗೆ ಪ್ರವೇಶವಿದ್ದರೂ ಮೇಷ್ಟ್ರು ಬಹಳ ಚೂಸಿಯಾಗಿರುತ್ತಿದ್ದರು. ಶೂದ್ರ ಶ್ರೀನಿವಾಸ, ಡಿ. ಆರ್. ನಾಗರಾಜ್, ಕಿ. ರಂ. ನಾಗರಾಜ, ರಾಮಚಂದ್ರ ಶರ್ಮ, ಜಿ. ಕೆ. ಗೋವಿಂದರಾವ್, ನಟರಾಜ ಹುಳಿಯಾರ್, ಶ್ರೀನಿವಾಸ ಗೌಡ, ಸಿ. ಎಸ್ ದ್ವಾರಕಾನಾಥ್, ಬಸವರಾಜೇ ಅರಸ್ ಮುಂತಾದವರು ಲಂಕೇಶರಿಗೆ ಬಹಳ ಆತ್ಮೀಯರಾಗಿದ್ದರು. ನಾನು ಅವರ ಆತ್ಮೀಯ ಬಳಗವನ್ನು ಸೇರಿಕೊಳ್ಳುವುದು ತಡವಾಗಲಿಲ್ಲ. ಆ ಬಳಗವು ಬಸವರಾಜು ಅವರಿಗೆ ಮಾತ್ರ ತಿಳಿದಿತ್ತು. ಅದಕ್ಕೆ ಲಂಕೇಶ್ ‘ದುಷ್ಟಕೂಟ’ವೆಂದು ನಾಮಕರಣ ಮಾಡಿದ್ದರು. ಲಂಕೇಶರ ಭೇಟಿಗಾಗಿ ಬಂದ ಯಾರಿಗೂ ಅಷ್ಟು ಸುಲಭವಾಗಿ ಅವರ ಚೇಂಬರಿಗೆ ಪ್ರವೇಶ ಸಿಗುತ್ತಿರಲಿಲ್ಲ. ಬಸವರಾಜು ಒಳಗೆ ಹೋಗಿ ಅಪ್ಪಣೆ ಪಡೆದೇ ಕಳಿಸಬೇಕಾಗಿತ್ತು. ನಾನು ಹೋದಾಗ ಆ ವಿಶೇಷ ಅಪ್ಪಣೆ ಬೇಕಾಗಿರಲಿಲ್ಲ. ನನಗೆ ನೇರ ಪ್ರವೇಶವಿತ್ತು. ಒಮ್ಮೊಮ್ಮೆ ಅವರು ಸಿನಿಮಾ ನೋಡುತ್ತಿರುವಾಗಲೂ ಬಸವರಾಜು ನೀವು ಹೋಗಿ ಎನ್ನುತ್ತಿದ್ದರು. ನಾನು ಮೆಲ್ಲಗೆ ಒಳಹೊಕ್ಕು ಜೊತೆಯಲ್ಲಿ ಸಿನಿಮಾ ನೋಡಿದ್ದಿದೆ. ಅವರು ಕೇವಲ ಮನರಂಜನೆಗಾಗಿ ಸಿನಿಮಾ ನೋಡುತ್ತಿರಲಿಲ್ಲ. ನೋಡಿದ ಮೇಲೆ ಅದನ್ನು ಕುರಿತು ಚರ್ಚಿಸುತ್ತಿದ್ದರು. ಜಗತ್ತಿನ ಹಲವು ಕ್ಲಾಸಿಕ್ಸ್ ಸಿನಿಮಾಗಳನ್ನು ತರಿಸಿ ನೋಡುತ್ತಿದ್ದರು. ಪ್ರತಿ ಗುರುವಾರ ಸಂಜೆ ತಮ್ಮ ಪತ್ರಕರ್ತರೊಡನೆ ವಾರದ ಸಭೆ ನಡೆಸುತ್ತಿದ್ದರು. ಅಕಸ್ಮಾತ್ ನಾನು ಅಲ್ಲಿಗೆ ಧಾವಿಸಿದರೆ ‘ಬಾ ಬಾ ನೀನು ಹಾರ್ಮ್‍ಲೆಸ್ ಫೆಲೊ, ಕೂತ್ಕೋ’ ಅನ್ನುತ್ತಿದ್ದರು. ಸ್ವಭಾವತಃ ನಾನು ಹೆಚ್ಚು ಮಾತಾಡಿದವನಲ್ಲ. ಅವರ ಮುಂದೆ ಕುಳಿತಾಗ, ಅವರ ಮಾತು ಕೇಳಿಸಿಕೊಳ್ಳುತ್ತಿರುವಾಗ ಬೌದ್ಧಿಕವಾಗಿ ನಾವು ಅವರಿಗೆ ಎಟಕುವವರಲ್ಲ ಎಂದು ನನಗಂತೂ ಮನವರಿಕೆಯಾಗಿತ್ತು. ಅವರ ಓದಿನ ಹರವು ಬಹಳ ವಿಸ್ತಾರವಾದದ್ದು. ಡಿ. ಆರ್. ಎನ್. ಕೂಡ ಲಂಕೇಶರೊಡನೆ ಮಾತಾಡುವಾಗ ನಾನು ಸ್ವಲ್ಪ ಕೇರ್ಫುಲ್ ಆಗಿರ್ತೀನಿ ಎಂದು ಹೇಳುತ್ತಿದ್ದರು. ಆದರೂ ಸೃಜನಶೀಲರನ್ನು ಅದರಲ್ಲೂ ಕೆಳವರ್ಗದವರನ್ನು, ಮುಸ್ಲಿಮರು ದಲಿತರನ್ನು ವಿಶೇಷವಾಗಿ ಪ್ರೀತಿಸುತ್ತಿದ್ದರು. ನಮ್ಮನ್ನು ಅವಕಾಶವಂಚಿತರು ಎಂದು ದೃಢವಾಗಿ ನಂಬಿದ್ದವರು ಅವರು.

ಲಂಕೇಶ್ ತಮ್ಮ ಕಛೇರಿಯಲ್ಲಿ ‘ಸಂವೇದನೆ’ ಎಂಬ ವೇದಿಕೆಯನ್ನು ಹುಟ್ಟುಹಾಕಿದ್ದರು. ಪ್ರತಿ ತಿಂಗಳ ಒಂದು ಶನಿವಾರ ಅಲ್ಲಿ ಸಂವಾದ ಕಾರ್ಯಕ್ರಮ ನಡೆಯುತ್ತಿತ್ತು. ಆ ಕಾರ್ಯಕ್ರಮಕ್ಕೆ ನಾನು ತಪ್ಪದೇ ಹಾಜರಾಗುತ್ತಿದ್ದೆ. ಅಂಥ ಒಂದು ದಿನ ವೇದಿಕೆಯ ಮೇಲೆ ಲಂಕೇಶ್ ಅವರ ಜೊತೆಗೆ ಅನಂತಮೂರ್ತಿಯವರು ಇದ್ದರು. ಚರ್ಚೆ ಸ್ವಾರಸ್ಯಕರವಾಗಿತ್ತು. ಒಂದು ಹಂತದಲ್ಲಿ ಅನಂತಮೂರ್ತಿ ‘ನಾನು ಬೈಬಲ್ ಓದುವಾಗ ಮೂವ್ ಆಗ್ತೀನಿ, ಭಗವದ್ಗೀತೆ ಓದುವಾಗ ಮೂವ್ ಆಗ್ತೀನಿ’ ಅಂತ ಮಾತು ಮುಂದುವರೆಸಿದ್ದರು. ಲಂಕೇಶ್ ಗೆ ಎಂಥಾ ಸಿಟ್ಟು ಬಂದಿತ್ತೆಂದರೆ, ತಕ್ಷಣ, ‘ರೀ ನಿಲ್ಸ್ರೀ ಸಾಕು, ಬೈಬಲ್ ಓದುವಾಗ್ಲೂ ಮೂವ್ ಆಗ್ತೀರಾ, ಭಗವದ್ಗೀತೆ ಓದುವಾಗ್ಲೂ ಮೂವ್ ಆಗ್ತೀರಾ. ಎಷ್ಟು ಸುಳ್ ಹೇಳ್ತೀರಾ, ಭಗವದ್ಗೀತೆ ಒಂದ್ ಥರ್ಡ್ ರೇಟ್ ಟೆಕ್ಷ್ಟ್’ ಎಂದುಬಿಟ್ಟರು. ಇವರು ಸಮಜಾಯಿಸಿ ಕೊಡಲು ಶುರುಮಾಡಿದರು, ಅವರು ಕೇಳುವ ಮೂಡ್ನಲ್ಲಿ ಇರಲಿಲ್ಲ. ಆ ಕಿತ್ತಾಟದಲ್ಲಿ ಸಭೆ ಮುಗಿಯಿತು. ಅನಂತಮೂರ್ತಿ ಸಭೆ ಮುಗಿಯುತ್ತಿದ್ದ ಹಾಗೆ ಎದ್ದು ಹೊರಟುಬಿಟ್ಟರು.

ಸುಬ್ಬು ಹೊಲೆಯಾರ್ ಅವರನ್ನು ಕಂಡರೆ ಲಂಕೇಶರಿಗೆ ಅಚ್ಚುಮೆಚ್ಚು. ಸುಬ್ಬು ವಾರದಲ್ಲೊಮ್ಮೆಯಾದರೂ ಅವರನ್ನು ಭೇಟಿ ಮಾಡಲೇಬೇಕಾಗಿತ್ತು. ಆ ಕಿರಿಯ ಸ್ನೇಹಿತನ ಮೇಲೆ ಅದೆಷ್ಟು ಪ್ರೀತಿಯೆಂದರೆ ತಿಂಡಿ ತರಿಸಿ ತಿನ್ನಿಸಿ, ಹೋಗುವಾಗ ಆಟೋಗಾಗಿ ಕಾಸು ಕೊಟ್ಟು ಕಳುಹಿಸುತ್ತಿದ್ದರು. ನಾನು ಅವರನ್ನು ನೋಡಲು ಹೋಗುವುದು ತಡವಾದರೆ ಸುಬ್ಬುವಿನ ಮೂಲಕ ಬುಲಾವ್ ಬರುತ್ತಿತ್ತು. ಎಲ್ಲಯ್ಯಾ ಅವನು ಚಿನ್ನಸ್ವಾಮಿ ಕಾಣಲೇ ಇಲ್ಲ ಅನ್ನುತ್ತಿದ್ದರಂತೆ. ಅವರ ‘ಮರೆಯುವ ಮುನ್ನ’ ಅಂಕಣದಲ್ಲಿ ಲೆಕ್ಕಾಧಿಕಾರಿ ಎಂದು ಸ್ವಲ್ಪ ಕೀಟಲೆ ಮಾಡಿ ನನ್ನ ಬಗ್ಗೆ ಬರೆದಿದ್ದದ್ದು ನೆನಪಿದೆ.

ಒಂದು ದಿನ ಹೀಗಾಯಿತು. ತಿಂಗಳ ಕಾರ್ಯಕ್ರಮ ಮುಗಿದಮೇಲೆ ಎಲ್ಲರೂ ಹೊರಡುತ್ತಿದ್ದರು. ಲಂಕೇಶ್ ತಮ್ಮ ಕೊಠಡಿಯ ಬಾಗಿಲ ಬಳಿ ನಿಂತಿದ್ದರು. ನಾನೂ ಜರಗನಹಳ್ಳಿ ಶಿವಶಂಕರ್ ಮತ್ತಿತರರೊಡನೆ ಹೊರಟಿದ್ದೆ. ಲಂಕೇಶ್ ನನ್ನನ್ನು ನೋಡಿದವರೆ ‘ನೀನಿರು’ ಎಂದರು. ಸಂಜೆ ಎಂಟರ ನಂತರ ಅವರ ಕಛೇರಿಯಲ್ಲಿ ಆಪ್ತ ಬಳಗದೊಂದಿಗೆ ಗುಂಡುಪಾರ್ಟಿ ಇದ್ದೇ ಇರುತ್ತಿತ್ತು. ನಾನು ಭಯದಿಂದಲೇ ಹೋಗಿ ಕುಳಿತೆ. ಮೇಲೆ ಹೆಸರಿಸಿದ ಅನೇಕ ಗೆಳೆಯರು ಅಲ್ಲಿ ಉಪಸ್ಥಿತರಿದ್ದರು. ಲಂಕೇಶರ ಸಹಾಯಕ ಗಿರಿ ಎಲ್ಲರ ಮುಂದೆ ಗಾಜಿನ ಲೋಟಗಳನ್ನು ತಂದಿಟ್ಟ. ವಾಡಿಕೆಯಂತೆ ತುಂಬಿದ ಆರ್. ಸಿ. ವಿಸ್ಕಿ ಬಾಟೆಲಿನಲ್ಲಿ ಎಲ್ಲರ ಲೋಟಗಳಿಗೂ ಪೆಗ್ ಅಳತೆಯಲ್ಲಿ ಹುಯ್ಯುತ್ತಿದ್ದ. ಅವನು ನನ್ನ ಲೋಟಕ್ಕೆ ಹಾಕಲು ಬಂದಾಗ ಲಂಕೇಶ್ ‘ಹೇಯ್ ಬೇಡ ಇರು’ ಎಂದರು. ಎಲ್ಲರೂ ನನ್ನ ಮುಖ ನೋಡುತ್ತಿದ್ದರು. ತಕ್ಷಣ ಅವರ ಮೇಜಿನ ಕೆಳ ಡ್ರಾಯರ್ ನಿಂದ ಒಂದು ಸ್ಕಾಚ್ ಬಾಟಲನ್ನು ತೆಗೆದು ಅವರೇ ನನ್ನ ಗ್ಲಾಸಿಗೆ ಒಂದು ಪೆಗ್ ಸುರಿದರು. ತಮ್ಮ ಗ್ಲಾಸಿಗೂ ಒಂದು ಪೆಗ್ ಹಾಕಿಕೊಂಡರು. ಮಿಕ್ಕೆಲ್ಲರಿಗೂ ಅಸೂಯೆ ಕಾಡಿರಬೇಕು. ಒಬ್ಬರು, ‘ಇದು ಬಹಳ ಅನ್ಯಾಯ’ ಎಂದರು. ಲಂಕೇಶರ ಪ್ರವೃತ್ತಿಯೇ ಹಾಗೆ. ಎಲ್ಲವೂ ನೇರ, ನಿಷ್ಠುರ. ನಾನು ಲೋಟಕ್ಕೆ ಮುಕ್ಕಾಲು ತುಂಬುವಷ್ಟು ನೀರು ಹಾಕಿದೆ. ‘ಫುಲ್ ನೀರು ಹಾಕು, ಆರೋಗ್ಯಕ್ಕೆ ಒಳ್ಳೇದು’ ಎಂದರು. ಅಂದು ನಾನು ಅದೃಷ್ಟಶಾಲಿಯಾಗಿದ್ದೆ. ಅವರಲ್ಲಿ ಹೋಗಲು ಯಾಕೆ ಸಹಲೇಖಕರಿಗೆ ಭಯ ಇತ್ತೆಂದರೆ ಈ ಕಾರಣಕ್ಕೆ. ಅವರು ಎಲ್ಲರನ್ನೂ ಎಲ್ಲವನ್ನು ಗಮನಿಸುತ್ತಿದ್ದರು. ನೇರವಾಗಿ ಗದರಿಸುವ ಸ್ವಭಾವ ಅವರದು.

ಪವರ್ ಎಂದರೆ ಏನು ಎಂಬುದನ್ನು ಲಂಕೇಶರನ್ನು ನೋಡಿಯೇ ನಾನು ಅರ್ಥ ಮಾಡಿಕೊಂಡದ್ದು. ಅದು ರಾಜಕೀಯ ಬಲವೂ ಅಲ್ಲ, ಹಣಬಲವೂ ಅಲ್ಲ. ಅದು ಜ್ಞಾನದ ಬಲ. ನೈತಿಕತೆಯ ಬಲ. ಇಲ್ಲಿ ಕುಡಿಯುವುದು, ಇಸ್ಪೀಟು ಆಡುವುದು ನೈತಿಕತೆಯೇ ಎಂದು ಸಂಪ್ರದಾಯಸ್ಥರು ಗೊಣಗಬಹುದು. ಇತರರನ್ನು ನೋಯಿಸದಿರುವವನು, ದುರ್ಬಲರಿಗೆ ಸಹಾಯ ಮಾಡುವವನು, ತನ್ನ ವ್ಯವಹಾರಗಳಲ್ಲಿ ಪ್ರಾಮಾಣಿಕವಾಗಿರುವವನು ನೈತಿಕಬಲವನ್ನು ಪಡೆಯುತ್ತಾನೆ. ನೈತಿಕತೆಯ ಒತ್ತಾಸೆಯಿಲ್ಲದಿದ್ದರೆ ಜ್ಞಾನ ಕೆಲಸಮಾಡುವುದಿಲ್ಲ. ನನ್ನ ಪ್ರಕಾರ ನೈತಿಕತೆ + ಜ್ಞಾನ = ವಿಸ್ಡಮ್. ವಿಸ್ಡಮ್ ಪದಕ್ಕೆ ಸಂವಾದಿಯಾಗಿ ವಿವೇಕ ಎಂದು ಸಾಮಾನ್ಯವಾಗಿ ಬಳಸುತ್ತಾರೆ. ಇದನ್ನು ಯಾಕೆ ಹೇಳಿದೆನೆಂದರೆ ಜೆ. ಎಚ್. ಪಟೇಲರು ಮುಖ್ಯಮಂತ್ರಿಯಾಗಿದ್ದ ಕಾಲವದು. ಮಾರ್ಚ್, 8 ಲಂಕೇಶರ ಹುಟ್ಟುಹಬ್ಬ. ಮಧ್ಯಾಹ್ನದ ಸಮಯವಿರಬಹುದು. ಪ್ರತಿ ಹುಟ್ಟುಹಬ್ಬದ ದಿನದಂದು ಬನ್ನೇರುಘಟ್ಟ ರಸ್ತೆಯಲ್ಲಿದ್ದ ಅವರ ತೋಟದಲ್ಲಿ ದೊಡ್ಡ ಕಾರ್ಯಕ್ರಮವಿರುತ್ತಿತ್ತು. ಸಾಮಾನ್ಯವಾಗಿ ಅಂದು ಅವರ ಯಾವುದಾದರೂ ಒಂದು ಪುಸ್ತಕ ಬಿಡುಗಡೆಯಾಗುತ್ತಿತ್ತು. ನಾವು ಕೆಲವರು ಖಾಯಂ ಅತಿಥಿಗಳು. ಅಲ್ಲಿಗೆ ಹೋಗಲೆಂದು ಕಛೇರಿಗೆ ಬಂದ ನಾನು ಅವರ ಕೊಠಡಿಯ ಒಳಗೆ ಹೋಗಿ ಕುಳಿತೆ. ಛೇಂಬರಿನಲ್ಲಿ ಇನ್ನೊಬ್ಬರಿದ್ದರು, ಅವರು ಯಾರೆಂದು ನೆನಪಿಗೆ ಬರುತ್ತಿಲ್ಲ. ಒಂದು ಫೋನ್ ರಿಂಗಾಯಿತು. ಯಥಾಪ್ರಕಾರ ಬಸವರಾಜು ಫೋನ್ ತೆಗೆದುಕೊಂಡು ಜೆ. ಎಚ್. ಪಟೇಲರು ಲೈನಿನಲ್ಲಿದ್ದಾರೆ ಎಂದರು. ಲಂಕೇಶ್ ‘ಏನಂತೆ, ಹುಟ್ಟುಹಬ್ಬದ ವಿಷ್ ಮಾಡೋಕ್ ತಾನೆ, ತಲುಪಿದೆ ಅಂತ ಹೇಳಿಬಿಡು’ ಅಂದವರೆ ಫೋನನ್ನು ಕೆಳಗಿಟ್ಟರು. ಪಟೇಲರ ಫೋನ್ ಸ್ವೀಕರಿಸಲಿಲ್ಲ. ನಾನು ದಂಗುಬಡಿದವನಂತೆ ಕೂತಿದ್ದೆ. ಒಬ್ಬ ಮುಖ್ಯಮಂತ್ರಿಯ ಪೋನ್ ಅನ್ನು ತಿರಸ್ಕರಿಸುವುದಿದೆಯಲ್ಲ, ಅದು ಯಾವ ಬಲವಿರಬಹುದು? ಪತ್ರಿಕೆ ಲಂಕೇಶರ ಅಸ್ತ್ರವಾಗಿತ್ತು. ಒಂದು ಸರ್ಕಾರವನ್ನು ಬೀಳಿಸುವಷ್ಟು ಶಕ್ತಿಶಾಲಿಯಾಗಿತ್ತು. ಒಂದಷ್ಟು ಯುವಕರಿಗೆ ಸರಿದಾರಿಯಲ್ಲಿ ನಡೆಯುವ, ಮಾರ್ಗದರ್ಶನ ಮಾಡುವ ಶಕ್ತಿಯಿತ್ತು. ಲಂಕೇಶರನ್ನು ಕಂಡಿರದ ಇವತ್ತಿನ ಯುವಸಮುದಾಯ ಅವರನ್ನು ನೆನೆಯುತ್ತಿರುವುದು ಅವರ ಆ ಬಲಕ್ಕೆ (ಪವರ್) ಸಾಕ್ಷಿಯಾಗಿದೆ.

ಒಮ್ಮೆ ನಾನು ಗದುಗಿನಲ್ಲಿ ಕೆಲಸ ಮಾಡುತ್ತಿರುವಾಗ ಯಾವುದೋ ಸಭೆಯ ನಿಮಿತ್ತ ಬೆಂಗಳೂರಿಗೆ ಬಂದಿದ್ದೆ. ಲಂಕೇಶರನ್ನು ಮಾತಾಡಿಸಿ ಹೋಗೋಣವೆಂದುಕೊಂಡು ಅವರ ಕಛೇರಿಗೆ ಹೋದೆ. ಸಂಜೆ ಐದರ ಸಮಯವಿರಬಹುದು. ಕೆಳಮಹಡಿಯ ರೂಮಿನಲ್ಲಿ ಅವರ ಖಾಯಂ ಗೆಳೆಯರೊಂದಿಗೆ ಇಸ್ಪೀಟಿನಲ್ಲಿ ಮಗ್ನರಾಗಿದ್ದರು. ಬಸವರಾಜು ಕನಿಕರ ತೋರಿ, ಅಲ್ಲೇ ಹೋಗಿ ವಿಷ್ ಮಾಡಿ ಬನ್ನಿ ಸರ್ ಎಂದರು. ನಾನು ಅಲ್ಲಿಗೆ ಹೋದೆ. ಸರ್, ಹೀಗೆ ಬೆಂಗ್ಳೂರಿಗೆ ಬಂದಿದ್ದೆ, ಮಾತಾಡಿಸಿ ಹೋಗೋಣ ಅನ್ನಿಸ್ತು ಬಂದೆ, ಅಂದೆ. ಲಂಕೇಶ್ ಎಲೆಗಳನ್ನು ಮಡಚಿಟ್ಟು ಆಟ ಬಿಟ್ಟು ಮೇಲೆದ್ದರು. ರಾಮಚಂದ್ರ ಶರ್ಮರಿಗೆ ಬಹಳ ಸಿಟ್ಟು ಬಂತು. ಇದು ಮೋಸ ಎಂದು ಕೈ ಹಿಡಿದೆಳೆದು ಕೂರಿಸುತ್ತಿದ್ದರು. ಆಟದಲ್ಲಿ ಇವರು ಯಾವ ಹಂತದಲ್ಲಿದ್ದರು, ಸೋಲುತ್ತಿದ್ದರೋ, ಗೆಲುವನ್ನು ಬಿಟ್ಟುಕೊಟ್ಟರೋ ನನಗೆ ತಿಳಿಯುವಂತಿರಲಿಲ್ಲ. ಏ, ಇರಯ್ಯಾ ಚಿನ್ನಸ್ವಾಮಿ ಗದಗಿನಿಂದ ಬಂದಿದಾನೆ, ಮುಗಿಸ್ಕೊಂಡ್ ಮೇಲೆ ಬಾ ಎಂದು ಎದ್ದು ಬಂದೇಬಿಟ್ಟರು. ಚೇಂಬರಿನಲ್ಲಿ ಸ್ವಲ್ಪಹೊತ್ತು ಮಾತಾಡಿಸಿ ಬೀಳ್ಕೊಟ್ಟರು. ಇದು ವಯಸ್ಸಿನ ಅಂತರವಿಲ್ಲದೆ ತಮಗೆ ಇಷ್ಟವಾದವರನ್ನು ನಡೆಸಿಕೊಳ್ಳುತ್ತಿದ್ದ ಅವರ ರೀತಿ.

ಶೂದ್ರ ಶ್ರೀನಿವಾಸ ಮತ್ತು ಲಂಕೇಶರ ನಡುವೆ ಭಿನ್ನಾಭಿಪ್ರಾಯ ಉಂಟಾಗಿದ್ದ ಕಾಲ. ಲಂಕೇಶ್ ಅಕ್ಷರ ಹೊಸಕಾವ್ಯವನ್ನು ಪರಿಷ್ಕರಿಸುತ್ತಿದ್ದರು. ಶೂದ್ರ ನನಗೆ ಕರೆಮಾಡಿ ನಿಮ್ಮ ಕವಿತೆಗಳನ್ನು ಲಂಕೇಶರಿಗೆ ತಲುಪಿಸಿಬಿಡಿ ಎಂದರು. ನಾನು ಸ್ವಲ್ಪ ಉಮೇದಿನಿಂದಲೇ ಎರಡು ಕವಿತೆಗಳನ್ನು ತೆಗೆದುಕೊಂಡು ಹೋಗಿ, ‘ಪದ್ಯಗಳನ್ನು ಕೊಡಲು ಶೂದ್ರ ಹೇಳಿದರು’ ಎಂದುಬಿಟ್ಟೆ. ತಕ್ಷಣ ಸಿಡಿಮಿಡಿಗೊಂಡ ಅವರು ಶೂದ್ರ ಯಾಕೆ ಹೇಳಬೇಕು? ಅಲ್ಲಿ ಇಟ್ಟು ಹೋಗು ಎಂದರು. ಕವಿತೆಗಳನ್ನು ಅವರು ಪ್ರಕಟಿಸಲಿಲ್ಲ. ಅವರು ‘ಮೂಡಿ’ ಎಂಬುದು ಎಲ್ಲರಿಗೂ ತಿಳಿದ ವಿಷಯವೇ ಆಗಿತ್ತು. ಯಾರಿಗೆ ಯಾವಾಗ ರೇಗುತ್ತಾರೋ, ಮೆಚ್ಚುತ್ತಾರೋ ತಿಳಿಯದಾಗಿತ್ತು. ಮತ್ತೊಮ್ಮೆ ತೋಟದಲ್ಲಿ ಅವರ ವಿಸ್ಕಿಗೆ ನೀರು ಹಾಕಲು ಹೋಗಿ ಹೀಗೇ ಬೈಸಿಕೊಂಡಿದ್ದೆ. ನಂತರ ಅವರೇ ಬೆನ್ನು ಸವರಿ ‘ಮುಸ್ಸಂಜೆಯ ಕಥಾ ಪ್ರಸಂಗ’ವನ್ನು ಹಸ್ತಾಕ್ಷರದೊಂದಿಗೆ ಕೈಗಿತ್ತಿದ್ದರು.

ಯು.ಆರ್. ಅನಂತಮೂರ್ತಿಯವರಿಗೆ 60 ತುಂಬಿತ್ತು. ಆ ದಿನ ಸ್ನೇಹಿತರು ಒಂದು ಕಡೆ ಸೇರಬೇಕೆಂದು ತೀರ್ಮಾನವಾಯಿತು. ಲಂಕೇಶ್ ಮತ್ತು ಅನಂತಮೂರ್ತಿ ಇಬ್ಬರನ್ನೂ ಇಷ್ಟಪಡುವ ಅಭಿಮಾನೀ ಬಳಗವೊಂದಿತ್ತು. ಅವರೆಲ್ಲರೂ ಪ್ರಗತಿಪರರೆಂದು ಗುರುತಿಸಿಕೊಂಡವರೆ. ಕಪ್ಪಣ್ಣನವರು ರೇಸ್ ಕೋರ್ಸ್ ಕ್ಲಬ್ಬಿನಲ್ಲಿ ಪಾರ್ಟಿ ಆರ್ಗನೈಸ್ ಮಾಡಿದ್ದರು. ಮೇಲೆ ಹೆಸರಿಸಿದ ಎಲ್ಲ ಗೆಳೆಯರೂ ಅಲ್ಲಿದ್ದರು. ಅನಂತಮೂರ್ತಿಯವರಿಗೆ ಅಭಿನಂದನೆಗಳ ಸುರಿಮಳೆಯಾಯಿತು. ಲಂಕೇಶ್ ಯುವಕವಿಗಳಾದ ನಮಗೆ ಎಲ್ಲರೂ ಇಲ್ಲೇ ಒಂದೊಂದು ಪದ್ಯ ಬರೆದು ಓದಿ ಎಂದರು. ನಾವು ಪದ್ಯ ಬರೆಯುವುದರಲ್ಲಿ ಮಗ್ನರಾಗಿದ್ದೆವು. ಲಂಕೇಶ್ ಮತ್ತು ಅನಂತಮೂರ್ತಿ ಸಂವಾದದಲ್ಲಿ ತೊಡಗಿದ್ದರು. ನಿಧನಿಧಾನವಾಗಿ ಅದು ವಾಗ್ವಾದಕ್ಕೆ ತಿರುಗುತ್ತಿತ್ತು. ಪ್ರತಿಭಾ ನಂದಕುಮಾರ್ ಒಬ್ಬರು ಬೇಗ ಬರೆದು ಮುಗಿಸಿ ಕವಿತೆ ಓದಿದರೆಂದು ಕಾಣುತ್ತದೆ. ಅಷ್ಟು ಹೊತ್ತಿಗೆ ಇವರ ವಾಗ್ವಾದ ಕಲಹವಾಗಿ ಲಂಕೇಶ್ ಕೋಪದಿಂದ ಸಿಡುಕುತ್ತಿದ್ದರು. ಏನು ಮಾತಾಯಿತೆಂದು ನಮಗ್ಯಾರಿಗೂ ತಿಳಿಯಲಿಲ್ಲ. ಅನಂತಮೂರ್ತಿ ಏಕಾಏಕಿ ಎದ್ದವರೆ ಹೊರಗೆ ನಡೆದುಬಿಟ್ಟರು. ಮತ್ತೆ ಅವರು ಒಂದುಗೂಡಲಿಲ್ಲ. ಮ್ಲಾನವದನರಾದ ನಾವು ಒಬ್ಬೊಬ್ಬರಾಗಿ ಹೊರನಡೆದೆವು. ಬಹುತೇಕರು ಲಂಕೇಶರನ್ನೆ ದೂರುತ್ತಿದ್ದುದು ಕೇಳಿಸುತ್ತಿತ್ತು.

ಮತ್ತೊಮ್ಮೆ ಅವರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಅನೇಕ ಬಾಧೆಗಳು ಅವರನ್ನು ಪೀಡಿಸುತ್ತಿದ್ದವು. ಒಂದು ಕಣ್ಣು ಕಾಣಿಸುತ್ತಿರಲಿಲ್ಲ. ನಾನು ಭೇಟಿಯಾಗಲೆಂದು ಹೋಗಿದ್ದೆ. ವಿಶೇಷ ವಾರ್ಡ್‍ನಲ್ಲಿ ಶುಶ್ರೂಷೆ ಪಡೆಯುತ್ತಿದ್ದರು. ಅವರ ಇಬ್ಬರು ಹೆಣ್ಣುಮಕ್ಕಳು ಜೊತೆಯಲ್ಲಿದ್ದರು. ಯಾರನ್ನೂ ಒಳಗೆ ಬಿಡುತ್ತಿರಲಿಲ್ಲ. ನನಗೆ ಪರಿಚಯವಿದ್ದ ಗೌರಿಯವರ ಮುಖ ನೋಡಿ ಸನ್ನೆ ಮಾಡಿದೆ. ಅವರು ಹೇಳಿದರೆಂದು ಕಾಣುತ್ತದೆ ‘ಒಳಗೆ ಕರಿ’ ಎಂದರಂತೆ. ನಾನು ಹೋದೆ. ಅವರ ಹೊಟ್ಟೆ ಎಷ್ಟು ಮೇಲಕ್ಕೆ ಉಬ್ಬಿತ್ತು ಎಂದರೆ ನನಗೆ ಗಾಬರಿಯಾಯಿತು. ನನ್ನನ್ನು ನೋಡಿ ಹುಸಿನಕ್ಕರು. ಬೇಗ ಹುಷಾರಾಗಿ ಎಂದು ಹೇಳಿ ಬಂದುಬಿಟ್ಟೆ. ಅದೇ ನನ್ನ ಕೊನೆಯ ಭೇಟಿಯಾಯಿತು.

(ಬೆಂಗಳೂರಿನ ಅಂಕಿತ ಪ್ರಕಾಶನ ಮೂಡ್ನಾಕೂಡು ಚಿನ್ನಸ್ವಾಮಿಯವರ ಆತ್ಮಕತೆ ‘ನೆನಪಿನ ಹಕ್ಕಿಯ ಹಾರಲು ಬಿಟ್ಟು’ ಪುಸ್ತಕವನ್ನು ಪ್ರಕಟಿಸಿದ್ದು, ಆಗಸ್ಟ್ ನಲ್ಲಿ ಬಿಡುಗಡೆಯಾಗಲಿದೆ. ಇದು ಪ್ರಕಟಪೂರ್ವ ಹಸ್ತಪ್ರತಿಯಿಂದ ಆಯ್ದ ಅಧ್ಯಾಯ)

ಇದನ್ನು ಓದಿ: ’ಲಂಕೇಶ್ ಮೋಹಕ ರೂಪಕಗಳ ನಡುವೆ’: ಪುಸ್ತಕ ಪರಿಚಯ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...