ಇಂದು ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭವಾಗಿದ್ದು ಲೋಕಸಭೆ ಮತ್ತು ರಾಜ್ಯಸಭೆ ಎರಡೂ ಅಧಿವೇಶನಗಳಲ್ಲಿ ಕೃಷಿ ಕಾನೂನುಗಳ ರದ್ಧತಿ ಮಸೂದೆ -2021 ಯನ್ನು ಅಂಗೀಕರಿಸುತ್ತಿದ್ದಂತೆ ಇತ್ತ ದೆಹಲಿ ಗಡಿಗಳಲ್ಲಿ ರೈತರ ಸಂಭ್ರಮಾಚರಣೆ ಶುರುವಾಗಿದೆ. ರೈತರು ಪರಸ್ಪರ ಹೂವಿನ ಮಳೆಗೆರೆಯುವ ಮೂಲಕ ತಮ್ಮ ಖುಷಿಯನ್ನು ವ್ಯಕ್ತಪಡಿಸಿದ್ದಾರೆ.
ಸಿಂಘು ಗಡಿಯಲ್ಲಿ ಯುವ ರೈತರು ಟ್ರಾಕ್ಟರ್ ಪರೇಡ್ ನಡೆಸುವ ಮೂಲಕ, ನೃತ್ಯ ಮಾಡುವ ಮೂಲಕ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ. ಅಲ್ಲದೆ ಇಂದು ಕೂಡ ನೂರಾರು ರೈತರು ಸಿಂಘು ಗಡಿಗೆ ಬಂದು ಹೋರಾಟದ ಸಾಗರ ಸೇರಿಕೊಂಡಿದ್ದಾರೆ.
ಕಳೆದ ಒಂದು ವರ್ಷದಿಂದ ಪ್ರತಿಭಟನಾನಿರತ ರೈತರ ಚಪ್ಪಲಿ ಹೊಲಿದುಕೊಟ್ಟು ಸೇವೆ ನೀಡಿದ ಯುವಕನಿಗೆ ರೈತರೆಲ್ಲರೂ ಹೂವಿನ ಮಳೆಗೈದು ಅಭಿನಂದನೆ ಸಲ್ಲಿಸಿದ್ದಾರೆ.
ಸಿಂಘು ಗಡಿಯಲ್ಲಿ ರೈತ ಮಹಿಳೆಯರು ನೃತ್ಯ ಮಾಡುವ ಮೂಲಕ ಸಂಭ್ರಮಾಚರಣೆಯ ಭಾಗವಾಗಿದ್ದಾರೆ. ನೂರಾರು ಮಹಿಳೆಯರು ಪರಸ್ಪರ ಹೂವಿನ ಮಳೆಗರೆದಿದ್ದಾರೆ.
ಇನ್ನೊಂದೆಡೆ ಸಿಂಘು ಗಡಿಯಲ್ಲಿ ಪಂಜಾಬ್ನ 32 ರೈತ ಸಂಘದ ಮುಖಂಡರು ಸೇರಿ ಸಭೆ ನಡೆಸಿದ್ದಾರೆ.. ಚಳವಳಿಯ ಮುಂದಿನ ಕಾರ್ಯತಂತ್ರದ ಬಗ್ಗೆ ಚರ್ಚೆ ನಡೆಸಲಾಗಿದೆ. ಸಂಯುಕ್ತ ಕಿಸಾನ್ ಮೋರ್ಚಾ ಸಂಚಾಲಕರಾದ ಡಾ.ದರ್ಶನ್ ಪಾಲ್ ಸಹ ಪಾಲ್ಗೊಂಡಿದ್ದರು.
ಟಿಕ್ರಿ ಗಡಿಯಲ್ಲಿ ಸಾವಿರಾರು ರೈತರು ಎಂಎಸ್ಪಿ ಖಾತ್ರಿ ಕಾನೂನಿಗಾಗಿ ಹೋರಾಟ ಮುಂದುವರೆಸಿದ್ದಾರೆ.
ಸರ್ಕಾರದ ರದ್ದತಿ ಕ್ರಮದ ಬಗ್ಗೆ ಮಾತನಾಡಿದ ರಾಕೇಶ್ ಟಿಕಾಯತ್, ರೈತರ ಆಂದೋಲನ ಮುಂದುವರಿಯುತ್ತದೆ. “ಕೃಷಿ ಕಾನೂನು ರದ್ದತಿ ಮಸೂದೆಯು ಆಂದೋಲನದ ಸಮಯದಲ್ಲಿ ಮಡಿದ 750 ರೈತರಿಗೆ ಶ್ರದ್ಧಾಂಜಲಿಯಾಗಿದೆ. ನಮಗಿನ್ನು MSP (ಕನಿಷ್ಠ ಬೆಂಬಲ ಬೆಲೆ) ಖಾತ್ರಿಯ ಕಾನೂನು ಜಾರಿಯಾಗಿಲ್ಲ. ಎಂಎಸ್ಪಿ ಸೇರಿದಂತೆ ಇತರೆ ಸಮಸ್ಯೆಗಳು ಬಾಕಿ ಉಳಿದಿರುವುದರಿಂದ ಪ್ರತಿಭಟನೆ ಮುಂದುವರಿಯಲಿದೆ’’ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕೃಷಿ ಕಾನೂನುಗಳ ರದ್ಧತಿ ಮಸೂದೆ -2021 ಹುತಾತ್ಮ ರೈತರಿಗೆ ಅರ್ಪಣೆ: ರಾಕೇಶ್ ಟಿಕಾಯತ್