ರೈತರ ಗಣರಾಜ್ಯೋತ್ಸವದ ಟ್ರಾಕ್ಟರ್ ಪೆರೇಡ್ ಸಂದರ್ಭ ದೆಹಲಿಯಲ್ಲಿ ನಡೆದ ಅಹಿತಕರ ಘಟನೆ ದುರದೃಷ್ಟರವಾಗಿದೆ. ಆದರೆ, ಕರಾಳ ಕೃಷಿ ಕಾನೂನುಗಳ ವಿರುದ್ದದ ಪ್ರತಿಭಟನೆಯು ಈ ಘಟನೆಯಿಂದ ಕೊನೆಗೊಳ್ಳುವುದಿಲ್ಲ, ಶಾಂತಿಯುತವಾಗಿ ಪ್ರತಿಭಟನೆಗೆ ಬೆಂಬಲ ನೀಡುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಒತ್ತಾಯಿಸಿದ್ದಾರೆ.
“ಜನವರಿ 26 ರಂದು ನಡೆದದ್ದು ದುರದೃಷ್ಟಕರ. ನಿಜವಾದ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಆದರೆ ಆ ಘಟನೆಯಿಂದ ಪ್ರತಿಭಟನೆ ಕೊನೆಗೊಳ್ಳುವುದಿಲ್ಲ. ಆತಂಕಗಳು ಇನ್ನೂ ಅಸ್ತಿತ್ವದಲ್ಲಿವೆ, ಆದ್ದರಿಂದ ನಾವೆಲ್ಲರೂ ರೈತರನ್ನು ಶಾಂತಿಯುತವಾಗಿ ಬೆಂಬಲಿಸಬೇಕು” ಎಂದು ದೆಹಲಿಯಲ್ಲಿ ನಡೆದ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಮಂಡಳಿ ಸಭೆಯಲ್ಲಿ ಕೇಜ್ರಿವಾಲ್ ಹೇಳಿದ್ದಾರೆ.
ಇದನ್ನೂ ಓದಿ: ‘ನನಗೆ ಕುರ್ಚಿ ಬೇಡ, ನನ್ನ ದೇಶದ ರೈತನಿಗೆ ಸಂತೋಷ ಬೇಕು’ – ಮತ್ತೋರ್ವ ಶಾಸಕ ರಾಜೀನಾಮೆ
ದೆಹಲಿ ರೈತರ ಟ್ರ್ಯಾಕ್ಟರ್ ರ್ಯಾಲಿಯಲ್ಲಿನ ಅಹಿತಕರ ಘಟನೆಗೆ ಸಂಬಂಧಿಸಿದಂತೆ ಯೋಗೇಂದ್ರ ಯಾದವ್ ಸೇರಿದಂತೆ ಸುಮಾರು 20 ರೈತ ಮುಖಂಡರಿಗೆ ದೆಹಲಿ ಪೊಲೀಸ್ ನೋಟಿಸ್ ನೀಡಿದೆ.
ಈ ಕುರಿತು ಎಎನ್ಐ ಟ್ವೀಟ್ ಮಾಡಿದ್ದು, “ಯೋಗೇಂದ್ರ ಯಾದವ್, ಬಲ್ದೇವ್ ಸಂಗ್ ಸಿರ್ಸಾ, ಬಲ್ಬೀರ್ ಎಸ್ ರಾಜೇವಾಲ್ ಸೇರಿದಂತೆ 20 ರೈತ ಮುಖಂಡರಿಗೆ ದೆಹಲಿ ಪೊಲೀಸರು ನೋಟಿಸ್ ನೀಡಿದ್ದಾರೆ. ಪೊಲೀಸರೊಂದಿಗೆ ಮಾಡಿಕೊಂಡಿದ್ದ ಒಪ್ಪಂದವನ್ನು ಉಲ್ಲಂಘಿಸಿದ್ದಕ್ಕಾಗಿ 3 ದಿನಗಳೊಳಗೆ ಪ್ರತಿಕ್ರಿಯಿಸುವಂತೆ ನೋಟಿಸ್ ನೀಡಲಾಗಿದೆ” ಎಂದು ವರದಿಯಾಗಿದೆ.
ಇದನ್ನೂ ಓದಿ: ಯೋಗೇಂದ್ರ ಯಾದವ್ ಸೇರಿ 20 ರೈತ ಮುಖಂಡರಿಗೆ ನೋಟಿಸ್ ನೀಡಿದ ದೆಹಲಿ ಪೊಲೀಸ್