Homeಮುಖಪುಟಕರಾವಳಿಯಲ್ಲಿ ಕೋಮು ಸಾಮರಸ್ಯದ ಇತಿಹಾಸ : ಈಗಲೂ ಕಾಲ ಮಿಂಚಿಲ್ಲ...

ಕರಾವಳಿಯಲ್ಲಿ ಕೋಮು ಸಾಮರಸ್ಯದ ಇತಿಹಾಸ : ಈಗಲೂ ಕಾಲ ಮಿಂಚಿಲ್ಲ…

ಕರಾವಳಿಗೆ ಕೋಮು ಸೌಹಾರ್ದದ ದೊಡ್ಡ ಇತಿಹಾಸವೇ ಇದೆ. ಹಲವು ಶತಮಾನಗಳಿಂದ ಇಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ, ಜೈನರು ಜೊತೆ ಜೊತೆಯಾಗಿ ಒಬ್ಬರಿಗೊಬ್ಬರು ಹೊಂದಿಕೊಂಡು ಬದುಕುತ್ತಿದ್ದಾರೆ. ಈಗಲೂ ಕಾಲ ಮಿಂಚಿಲ್ಲ

- Advertisement -
- Advertisement -

ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಕರ್ನಾಟಕ ರಾಜ್ಯದ ಕರಾವಳಿ ಭಾಗದಲ್ಲಿ ಕೋಮುವಾದದ ವಿಷ ನೆತ್ತಿಗೇರಿದೆ. ಮತಗಳ ಲಾಭಕ್ಕಾಗಿ ಧರ್ಮಗಳನ್ನು ವಿಭಜಿಸಿ ಪರಸ್ಪರ ಹೊಡೆದಾಡಿಸುವ ಪ್ರಯತ್ನಗಳು ನಿರಂತರ ನಡೆಯುತ್ತಿವೆ. ಕೋಮು ಆಧಾರದಲ್ಲಿ ಅವರು- ನಾವು ಎನ್ನುವ ಸ್ಥಿತಿಗೆ ಸಮಾಜ ಬಂದು ಮುಟ್ಟಿದೆ. ಆದರೆ, ಎರಡು ಮೂರು ದಶಕಗಳ ಹಿಂದೆ ಈ ಪರಿಸ್ಥಿತಿ ಇರಲಿಲ್ಲ. ಕರಾವಳಿಗೆ ಕೋಮು ಸೌಹಾರ್ದದ ದೊಡ್ಡ ಇತಿಹಾಸವೇ ಇದೆ. ಹಲವು ಶತಮಾನಗಳಿಂದ ಇಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ, ಜೈನರು ಜೊತೆ ಜೊತೆಯಾಗಿ ಒಬ್ಬರಿಗೊಬ್ಬರು ಹೊಂದಿಕೊಂಡು ಬದುಕುತ್ತಿದ್ದಾರೆ. ಈಗಲೂ ಕಾಲ ಮಿಂಚಿಲ್ಲ.

ಇತಿಹಾಸಕಾರರು ಅಂಜುಮನ್ ಶಾಸನಗಳೆಂದು ಕರೆಯುವ ದಾಖಲೆಗಳು ಕರಾವಳಿಯಲ್ಲಿದ್ದ ಕೋಮು ಸಾಮರಸ್ಯವನ್ನು ಎತ್ತಿತೋರಿಸುತ್ತವೆ. 1418ರ ಕೊಡಿಯಾಲ್ ಬೈಲ್ ಶಾಸನದ ಪ್ರಕಾರ ಇಲ್ಲಿ ವಿಜಯನಗರ ಸಾಮ್ರಾಜ್ಯದ ಸ್ಥಾನಿಕನಾಗಿದ್ದ ತಿಮ್ಮಣ್ಣ ಒಡೆಯ ನಾಲ್ಕು ಮಸೀದಿಗಳನ್ನು ಧ್ವಂಸ ಮಾಡಿದ್ದ. ಅಂಜುಮನ್ ದೂರು ನೀಡಿದಾಗ, ವಿಜಯನಗರ ದೊರೆ ಅವರಿಗೆ ದತ್ತಿ ನೀಡಿದ್ದಲ್ಲದೇ, ಯಾವುದೇ ಹಿಂದೂ ಆ ಜಾಗದಲ್ಲಿ ತೊಂದರೆ ಉಂಟು ಮಾಡಿದರೆ, ತನಗೆ ಮತ್ತು ದೇವರಿಗೆ ಉತ್ತರದಾಯಿ ಎಂದು ತಾಕೀತು ಮಾಡಿದ್ದ.

1551ರ ಶಾಸನವೊಂದರ ಪ್ರಕಾರ, ಇಕ್ಬಾಲ್ ಖಾನ್ ಎಂಬಾತ ಬಾರಕೂರಿನಲ್ಲಿ ವಿಜಯನಗರ ಅರಸರ ಸ್ಥಾನಿಕ ಅಧಿಕಾರಿಯಾಗಿದ್ದಾಗ ಕೋಟೇಶ್ವರಲ್ಲಿ ದೇವಾಲಯವೊಂದನ್ನು ಕೆಲವರು ನಾಶಮಾಡಿ ಹಲವರನ್ನು ಕೊಂದಿದ್ದರು. ಆಗ ಇಕ್ಬಾಲ್ ಖಾನ್ ತಕ್ಷಣವೇ ದೇವಾಲಯವನ್ನು ಮರುನಿರ್ಮಿಸಿಕೊಟ್ಟಿದ್ದ.

1615ರ ಶಾಸನವೊಂದರ ಪ್ರಕಾರ ಹಿಂದೂ ರಾಜನೊಬ್ಬ (ಹೆಸರು ಸರಿಯಾಗಿ ಉಲ್ಲೇಖಿಸಿಲ್ಲ) ಪಶ್ಚಿಮಘಟ್ಟದ ಅಪರಿಚಿತ ಸ್ಥಳದಲ್ಲಿ ಮಸೀದಿ ಕಟ್ಟಿಸಿದ ಉಲ್ಲೇಖ ಇದೆ.

ನಂತರ ಕೆಳದಿಯ ಅರಸ ವೆಂಕಟಪ್ಪ ನಾಯಕ 1627ರಲ್ಲಿ ಭುವನಗಿರಿ ಎಂಬಲ್ಲಿ ದರ್ಗಾ ಕಟ್ಟಿಸಿದ ಉಲ್ಲೇಖ ಶಾಸನವೊಂದರಲ್ಲಿದೆ. ವೆಂಕಟಪ್ಪ ನಾಯಕನ ನೆರವಿನಿಂದ ಮುಲ್ಲಾ ಹಾಜಿ ಎಂಬಾತ 1628ರಲ್ಲಿ ಹುಲಿಕಲ್ ಘಾಟಿಯಲ್ಲಿ ದರ್ಗಾ ಒಂದನ್ನು ಕಟ್ಟಿಸಿದ್ದ. ವೆಂಕಟಪ್ಪ ನಾಯಕನ ಮಗ ತಾವರೆಕೆರೆ ಮಸೀದಿಗೆ ಎಡಹಳ್ಳಿ ಎಂಬ ಗ್ರಾಮವನ್ನು ಉಂಬಳಿಯಾಗಿ ನೀಡಿದ ಉಲ್ಲೇಖ ಇದೆ. ಕೆಳದಿಯ ರಾಣಿ ಚೆನ್ನಮ್ಮ ಮಂಗಳೂರು ಸಮೀಪದ ಗಂಜಿಮಠ ಮತ್ತು ಕಿನ್ನಿಕಂಬಳ ಗ್ರಾಮಗಳಲ್ಲಿ  ಮುಸ್ಲಿಂ ಸಂತರಿಗೆ ನೆಲದಾನ ಮಾಡಿದ ಉಲ್ಲೇಖವಿದೆ.

ಅಜಿಲ ಅರಸರು ಬಂಟ್ವಾಳ ತಾಲೂಕಿನ ಅಜಿಲಮೊಗರು ದರ್ಗಾಕ್ಕೆ ನೆಲದಾನ ಮಾಡಿದ ಉಲ್ಲೇಖವಿದೆ. ನೇತ್ರಾವತಿ ನದಿಯ ದಡದಲ್ಲಿರುವ ಈ ದರ್ಗಾಕ್ಕೆ ಉರೂಸಿನ ಸಂದರ್ಭದಲ್ಲಿ ನದಿಯಾಚೆ ಇರುವ ಕಡೇಶ್ವಾಲ್ಯ ದೇವಾಲಯದಿಂದ ಅಕ್ಕಿ ಮೆರವಣಿಗೆಯಲ್ಲಿ ಬರುತ್ತದೆ. ಅಲ್ಲಿನ ಜಾತ್ರೆಯ ಸಂದರ್ಭ ದರ್ಗಾದಿಂದ ಎಣ್ಣೆ ಮೆರವಣಿಗೆಯಲ್ಲಿ ಹೋಗುತ್ತದೆ. ಇದರ ಹಿಂದೆ ಸಾಂಕೇತಿಕತೆ ಇದೆ. ಹಿಂದೂಗಳು ಹೆಚ್ಚಾಗಿ ರೈತರು. ಹಾಗಾಗಿ ಅಕ್ಕಿ ನೀಡುತ್ತಾರೆ. ಮುಸ್ಲಿಮರು ಹೆಚ್ಚಾಗಿ ವ್ಯಾಪಾರಿಗಳು ಅದಕ್ಕಾಗಿ ಎಣ್ಣೆ ನೀಡುತ್ತಾರೆ. ಒಬ್ಬರ ಮೇಲೆ ಇನ್ನೊಬ್ಬರು ಅವಲಂಬಿಸಿದ್ದಾರೆ. ಈ ಸಹಕಾರವನ್ನೇ ಈ ಸಂಪ್ರದಾಯ ಬಿಂಬಿಸುತ್ತದೆ. ಇಂತಹ ಪರಂಪರೆ ಇರುವ ತುಳುನಾಡಿನಲ್ಲಿ  ಇಂದು ಕೋಮುದ್ವೇಷ ಹೆಚ್ಚಾಗಿದೆ.

ಕರಾವಳಿಗೆ 1342ರಷ್ಟು ಹಿಂದೆಯೇ ಭೇಟಿ ನೀಡಿದ್ದ ಪ್ರವಾಸಿ ಇಬ್ನ್ ಬತೂತ ಮಂಗಳೂರನ್ನು ಮಂಜರುನ್ ಎಂದು ಕರೆದಿದ್ದಾನೆ. ಇಲ್ಲಿ ಹಿಂದೂ- ಮುಸ್ಲಿಮರು ಅಣ್ಣತಮ್ಮಂದಿರಂತೆ ಬದುಕುತ್ತಿದ್ದಾರೆ ಎಂದು ಆತ ತನ್ನ ಪ್ರವಾಸ ಕಥನದಲ್ಲಿ ದಾಖಲಿಸಿದ್ದಾನೆ. ಇಲ್ಲಿ 4000 ಮುಸ್ಲಿಮರು ವ್ಯಾಪಾರ ಮಾಡುತ್ತಿದ್ದು, ಕೆಲವರು ಉನ್ನತ ಮಟ್ಟದ ಅಧಿಕಾರಿಗಳಾಗಿಯೂ ಇದ್ದರು ಎಂದು ಆತ ಬರೆದಿದ್ದಾನೆ.

ವಿಜಯನಗರಕ್ಕೆ ಪರ್ಷಿಯಾದ ರಾಯಭಾರಿಯಾಗಿ 1448ರಲ್ಲಿ ಬಂದಿದ್ದ ಅಬ್ದುಲ್ ರಜಾಕ್ ಮಂಗಳೂರಿಗೆ ಬಂದು ಬಂಟ್ವಾಳ ತಾಲೂಕಿನ ಪೊಳಲಿ ರಾಜರಾಜೇಶ್ವರಿ ದೇವಾಲಯದ ದರ್ಶನ ಮಾಡಿದ ದಾಖಲೆಯಿದೆ.

ಇಲ್ಲಿ ಮುಸ್ಲಿಮರಿಗೆ ಉನ್ನತ ಸ್ಥಾನಮಾನ ಇರುವುದಾಗಿ 16ನೇ ಶತಮಾನದಲ್ಲಿ ಬಂದಿದ್ದ ಪೋರ್ಚುಗೀಸ್ ಯಾತ್ರಿ ದುಆರ್ತೆ ಬರ್ಬೋಸ ಬರೆದಿದ್ದಾನೆ.

ಮೂಸ ಬ್ಯಾಯಿ (ಬ್ಯಾರಿ) ಎಂಬಾತ ಕೆಳದಿ ರಾಜ್ಯದ ಸೇನಾಪತಿಗಳಲ್ಲಿ ಒಬ್ಬನಾಗಿದ್ದ ಎಂದು 1523ರಲ್ಲಿ ಇಲ್ಲಿಗೆ ಬಂದಿದ್ದ ಪೀಟರ್ ಡೇಲ್ವಿಲ್ಲೆ ಬರೆದಿದ್ದಾನೆ. ಉಳ್ಳಾಲ ರಾಣಿ ಅಬ್ಬಕ್ಕ, ಚೌಟ ಮತ್ತು ಬಂಗ ಅರಸರ ಸೇನೆಗಳಲ್ಲಿ ದೊಡ್ಡ ಸಂಖ್ಯೆಯ ಮುಸ್ಲಿಮರು ಇರುವುದನ್ನು ಕೂಡ ಆತ ಉಲ್ಲೇಖಿಸಿದ್ದಾನೆ.

ಹೈದರಾಲಿ ಮತ್ತು ಟಿಪ್ಪು ಸುಲ್ತಾನರು ಕರಾವಳಿಯ ಹಲವಾರು ದೇಗುಲಗಳಿಗೆ ತಸ್ದೀಕ್ ಅಥವಾ ಉಂಬಳಿ ನೀಡಿದ್ದಾರೆ. ಟಿಪ್ಪು ಮಂಗಳೂರಿನ ಹೃದಯ ಭಾಗದಲ್ಲಿರುವ ಪ್ರಸಿದ್ಧ ಶರವು ಮಹಾಗಣಪತಿ ದೇವಾಲಯಕ್ಕೆ ಇಡೀ ಮೂಡುಶೆಡ್ಡೆ ಗ್ರಾಮವನ್ನು ಉಂಬಳಿ ನೀಡಿದ್ದ. ದಿನದ ಖರ್ಚಿಗೆ ಒಂದು ವರಹ (ನಾಲ್ಕು ರೂಪಾಯಿ- ಆ ಕಾಲಕ್ಕೆ ಇದು ದೊಡ್ಡ ಮೊತ್ತ) ತಸ್ದೀಕ್ ನೀಡಲಾಗುತ್ತಿತ್ತು. ಅದಲ್ಲದೇ ವರ್ಷಕ್ಕೆ ಏಳ್ನೂರ ತೊಂಭತ್ತಮೂರು ರೂಪಾಯಿ ಅರ್ವತ್ತೊಂಭತ್ತು ಪೈಸೆ ತಸ್ದೀಕ್ ನೀಡಲಾಗುತ್ತಿತ್ತು.

ಇದಕ್ಕಿಂತ ಕುತೂಹಲಕಾರಿ ವಿಷಯ ಎಂದರೆ, ಈಗಿನ ಧರ್ಮಸ್ಥಳದ ಮೂಲ ಹೆಸರು ಕುಡುಮ. ಅಲ್ಲಿನ ಆಡಳಿತಗಾರ ಮಂಜಯ್ಯ ಹೆಗ್ಗಡೆಯನ್ನು ಕೆಲವರು ಕೊಲೆ ಮಾಡಿದಾಗ, ತಕ್ಷಣ ಮಧ್ಯ ಪ್ರವೇಶಿಸಿದ ಟಿಪ್ಪು, ಆತನ ಮಗ ಕುಮಾರ ಹೆಗ್ಗಡೆಗೆ ಅಧಿಕಾರ ವರ್ಗಾಯಿಸಿದ್ದ! ಬಪ್ಪನಾಡಿನ ದೇವಾಲಯವನ್ನು ಕಟ್ಟಿಸಿದಾತ ಬಪ್ಪಬ್ಯಾರಿ ಎಂಬ  ಮುಸ್ಲಿಂ ವ್ಯಾಪಾರಿ ಎಂಬುದು ಎಲ್ಲರಿಗೂ ಗೊತ್ತು.

ತುಳುನಾಡಿನ ಭೂತಾರಾಧನೆಯಲ್ಲೂ ಮುಸ್ಲಿಮರಿಗೆ ಪ್ರಮುಖ ಪಾತ್ರವಿದೆ. ಇಲ್ಲಿ ವೀರರು ಮತ್ತು ನಿಗೂಢವಾಗಿ ಕಾಣೆಯಾದವರು, ದುರಂತ ಮರಣವನ್ನಪ್ಪಿದವರು ಭೂತಗಳಾದದ್ದು ಎಲ್ಲರಿಗೂ ಗೊತ್ತಿದೆ. ಆದುದರಿಂದಲೇ ಈ ನೆಲದಲ್ಲಿ ಮುಸ್ಲಿಂ ಭೂತಗಳು, ಚೀನೀ ಭೂತಗಳೂ ಇವೆ. ಬಿಲ್ಲವ ವೀರರಾದ ಕೋಟಿ- ಚೆನ್ನಯರ ಕೆಲವು ಗರಡಿಗಳಲ್ಲಿ ಮುಸ್ಲಿಂ ಮಕ್ಕಳು ಎಂಬ ಮರದ ಪ್ರತಿಮೆಗಳು ಇವೆ. ತುಳುವರು, ಅದರಲ್ಲೂ ಮೊಗವೀರರು ಮುಖ್ಯವಾಗಿ ಆರಾಧಿಸುವ ಬೊಬ್ಬರ್ಯ ಮೂಲದಲ್ಲಿ ಬಬ್ಬು ಬ್ಯಾರಿ ಅಥವಾ ಬಾವ ಬ್ಯಾರಿ! ಬೆಲಿಯ ಅಂದರೆ ದೊಡ್ಡ ಫಾತಿಮ ಮತ್ತು ಮುರವೆ ಬ್ಯಾರಿ ದಂಪತಿಗಳ ಮಗ.

ಅದಲ್ಲದೇ ಆಲಿ ಭೂತವೂ ಇದೆ. ಆತ ಮಂತ್ರವಾದಿಯಾಗಿದ್ದವನು. ಅತ್ತಾವರ ದೈವಂಗಳ್, ಜುಮಾದಿ, ಸಿರಿ ಮುಂತಾದ ಪಾಡ್ದನಗಳಲ್ಲಿ ಮುಸ್ಲಿಂ ಪಾತ್ರಗಳು ಬರುತ್ತವೆ.

ಭೂತಾರಾಧನೆಯಲ್ಲಿ ಮುಸ್ಲಿಮರಿಗೆ ಗೌರವದ ಮತ್ತು ಮಹತ್ವದ ಸ್ಥಾನವಿತ್ತು. ಉದ್ಯಾವರ ಮಾಡ, ಬಸರೂರು, ಬಾರಕೂರು ಮುಂತಾದ ಕಡೆಗಳಲ್ಲಿ ದೈವಾರಾಧನೆ ಆರಂಭವಾಗಬೇಕಾದರೆ, ಮುಸ್ಲಿಮರ ಹಾಜರಾತಿ ಇರಲೇಬೇಕಾಗಿತ್ತು. ಉದಾಹರಣೆಗೆ ಉದ್ಯಾವರ ಮಾಡದಲ್ಲಿ ಮುಸ್ಲಿಂ ವ್ಯಾಪಾರಿಯೊಬ್ಬರು ವೀಳ್ಯ ಕೊಡಬೇಕು. ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ಅರಸು ಮುಂಡತ್ತಾಯ ಮಾಡ ಸಹಿತ ಹಲವು ಕಡೆ ತಲೆತಲಾಂತರಗಳಿಂದ ಅಲಂಕಾರ ಮತ್ತು ಸುಡುಮದ್ದಿನ ಕೆಲಸ ಅವರಿಗೇ! (ಉಡುಪಿ ಪರ್ಯಾಯದಲ್ಲೂ ಹೀಗಿತ್ತು).

ಕುಂದಾಪುರ ಕರಾವಳಿಯಲ್ಲಿ ಮೀನುಗಾರರು ಮೀನಿನ ಬರದ ಸಮಯದಲ್ಲಿ ನಡೆಸುವ ಸೀರಣಿ ಪೂಜೆ ಅಂದರೆ, ಪುಟ್ಟ ದೋಣಿಯಲ್ಲಿ ಪಂಚಕಜ್ಜಾಯವನ್ನು ತೇಲಿ ಬಿಡುವ ವಿಧಿಗಳನ್ನು ಮುಸ್ಲಿಂ ಮೌಲವಿಗಳು ನಡೆಸುತ್ತಿದ್ದರು.
ಅಜಿಲಮೊಗರು, ಮಂಗಳೂರಿನ ಸೈದಾನಿ ಬೀಬಿ ದರ್ಗಾ, ಕಾಜೂರು ಮುಂತಾದ ದರ್ಗಾಗಳಿಗೆ ಸಾವಿರಾರು ಮುಸ್ಲಿಮೇತರರು ಹರಕೆ ಹೊರುತ್ತಾರೆ. ಕೆಲವರ್ಷಗಳ ಹಿಂದಿನ ತನಕ ಕಂದಾವರ ಬೈಲು ದರ್ಗಾದ ಆಡಳಿತ ಹಿಂದೂ ಕುಟುಂಬವೊಂದು ನೋಡಿಕೊಳ್ಳುತ್ತಿತ್ತು.

ಕಾರ್ಕಳದ ಅತ್ತೂರು ಚರ್ಚಿಗೆ ಸಾವಿರಾರು ಅನ್ಯ ಧರ್ಮೀಯರು ಹರಕೆ ಹೊರುತ್ತಾರೆ, ಜಾತ್ರೆಯಲ್ಲಿ ಭಾಗವಹಿಸುತ್ತಾರೆ. ಗೋವಾದಿಂದ ವಲಸೆ ಬಂದ ಕ್ರೈಸ್ತರಿಗೆ ಪದವುಗಳೆಂದು ಕರೆಯುವ ಬೋಳುಗುಡ್ಡಗಳಲ್ಲಿ ನೆಲೆಸುವಂತೆ ಆಶ್ರಯ ನೀಡಿದವರು ಕೆಳದಿ ನಾಯಕರು. ಈಗ ಬಹುತೇಕ ಎಲ್ಲಾ ಪದವು ಹೆಸರಿರುವ ಪ್ರದೇಶಗಳಲ್ಲಿ ಕ್ರೈಸ್ತರೇ ಹೆಚ್ಚಾಗಿರುವುದನ್ನು ಕಾಣಬಹುದು. ಅವರೀಗ ಈ ಪದವುಗಳನ್ನು ನಂದನವನಗಳನ್ನಾಗಿ ಮಾಡಿದ್ದಾರೆ. ಇಲ್ಲಿನ ಹೆಚ್ಚಿನ ಹಿಂದಿನವರು ಕ್ರೈಸ್ತ ಶಾಲೆಗಳಲ್ಲಿ ಕಲಿತವರು, ಕ್ರೈಸ್ತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದವರೇ ಆಗಿದ್ದಾರೆ. ಅವರೇನೂ ಮತಾಂತರಗೊಂಡಿಲ್ಲ!

ಹಿಂದೆ ಹಿಂದೂ, ಮುಸ್ಲಿಂ, ಕ್ರೈಸ್ತರು ಪರಸ್ಪರರ ಹಬ್ಬಗಳಲ್ಲಿ ಭಾಗವಹಿಸುತ್ತಿದ್ದರು. ಈಗ ಅವೆಲ್ಲಾ ಕಡಿಮೆಯಾಗಿರುವುದು, ನಿಂತಿರುವುದು ಕಂಡುಬರುತ್ತದೆ. ಈ ಐತಿಹಾಸಿಕ ಮತ್ತು ಸಾಮಾಜಿಕ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕೋಮುವಾದದ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳಬೇಕು. ಇಂತಹಾ ನೆಲದಲ್ಲಿ ಸ್ವಾರ್ಥಸಾಧನೆಗಾಗಿ ವಿಷ ಹರಡುತ್ತಿರುವವರು ಎಂತಹಾ ನೀತಿಗೆಟ್ಟ ಅಧಮರೆಂಬುದನ್ನು ತಿಳಿದುಕೊಳ್ಳಬೇಕಾಗಿದೆ.
(ಆಧಾರ: ವಿವಿಧ ಮೂಲಗಳು)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...