ರಮೇಶ್ ಜಾರಕಿಹೊಳಿಯವರ ಲೈಂಗಿಕ ಸಿಡಿ ಪ್ರಕರಣದಲ್ಲಿ ಮಹಾನಾಯಕ ಪದ ಬಳಸಬಾರದು ಎಂದು ಪ್ರಜ್ಞಾವಂತರು ಕಿಡಿಕಾರಿದ್ದಾರೆ. ಸಿಡಿ ಬಿಡುಗಡೆ ಆರಂಭದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಈ ಷಡ್ಯಂತ್ರದ ಹಿಂದೆ ಯಾವ ಮಹಾನ್ನಾಯಕ ಇದ್ದಾನೆ ಎಂಬುದು ಗೊತ್ತು ಎಂದು ಹೇಳಿಕೆ ನೀಡಿದ್ದರು. ಅಂದಿನಿಂದ ಮಾಧ್ಯಮಗಳು ಯಾರು ಮಹಾನಾಯಕ ಎಂದು ಪದೇ ಪದೇ ಆ ಪದ ಬಳಸಿದ್ದವು.
ಇನ್ನು ನಿನ್ನೆ ಆ ಮಹಾನಾಯಕ ಡಿ.ಕೆ ಶಿವಕುಮಾರ್ ಎಂದು ರಮೇಶ್ ಜಾರಕಿಹೊಳಿ ಹೇಳಿದ ಬೆನ್ನಲ್ಲೆ ಬಹುತೇಕ ಮಾಧ್ಯಮಗಳು ಮತ್ತು ಹಲವು ಸಾಮಾಜಿಕ ಜಾಲತಾಣ ಬಳಕೆದಾರರು ಮಹಾನಾಯಕ ಡಿ.ಕೆ ಶಿವಕುಮಾರ್ ಎಂದು ಪ್ರಸಾರ ಮಾಡಿದ್ದವು. ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ಝೀ ಕನ್ನಡ ವಾಹಿನಿಯಲ್ಲಿ ಡಾ.ಬಿ.ಆರ್ ಅಂಬೇಡ್ಕರ್ರವರ ಜೀವನ ಮತ್ತು ಹೋರಾಟದ ಕುರಿತು ‘ಮಹಾನಾಯಕ’ ಧಾರವಾಹಿ ಪ್ರಸಾರವಾಗುತ್ತಿದ್ದು ಅತ್ಯುತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಜಾತಿ ಬೇಧವಿಲ್ಲದೆ ಬಹಳಷ್ಟು ಜನರು ಆ ಧಾರವಾಹಿ ನೋಡುವ ಮೂಲಕ ಇತ್ತೀಚಿನ ದಿನಗಳಲ್ಲಿ ಅತಿಹೆಚ್ಚು ವೀಕ್ಷಣೆ ಪಡೆದ ಧಾರವಾಹಿ ಎನಿಸಿದೆ. ಅಲ್ಲದೇ ರಾಜ್ಯದ ಬಹುಪಾಲು ಊರುಗಳಲ್ಲಿ ಮಹಾನಾಯಕ ಧಾರವಾಹಿಯ ಫ್ಲೆಕ್ಸ್ಗಳು, ಬ್ಯಾನರ್ಗಳು ರಾರಾಜಿಸುತ್ತಿವೆ. ಇಂತಹ ಸಮಯದಲ್ಲಿ ಈ ರಾಜಕಾರಣಗಳ ಹೊಲಸು ರಾಜಕೀಯಕ್ಕೆ ಮಹಾನಾಯಕ ಹೆಸರನ್ನು ಏಕೆ ತರುತ್ತೀರಿ ಎಂಬುದು ಪ್ರಜ್ಞಾವಂತರ ಪ್ರಶ್ನೆಯಾಗಿದೆ.
ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಉದಾತ್ತ ನಾಯಕ ಬಾಬಾಸಾಹೇಬ್ ಅಂಬೇಡ್ಕರ್ರವರನ್ನು ನಾವು ಮಹಾನಾಯಕ ಎಂದು ಕರೆದು ಗೌರವ ಸಲ್ಲಿಸುತ್ತಿದ್ದೇವೆ. ಹಾಗಾಗಿ ನಿಮ್ಮ ರಾಜಕೀಯಕ್ಕೆ ಈ ಹೆಸರು ಬಳಸಿ ಅಂಬೇಡ್ಕರ್ರವರಿಗೆ ಅವಮಾನ ಮಾಡಬೇಡಿ ಎಂದು ಆಗ್ರಹಿಸಿದ್ದಾರೆ.
“ಮಹಾನಾಯಕ” ಎನ್ನುವ ಶಬ್ದಕ್ಕೆ ದೇಶಾದ್ಯಂತ ಅಪಾರ ಗೌರವವಿದೆ. ಒಂದು ಥರ್ಡಕ್ಲಾಸ್ ವಿಷಯದಲ್ಲಿ ನಿರಂತರವಾಗಿ ಈ ಗೌರವಯುತ ಪದದ ದುರ್ಬಳಕೆಯಾಗುತ್ತಿರುವುದು ನಿಜಕ್ಕೂ ಖಂಡನೀಯ ಎಂದು ವಿಕಾಸ್ ಹೊಸಮನಿ ಎಂಬುವವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಮಹಾನಾಯಕ’ ಎನ್ನುವ ಪದವನ್ನ ಸಿಡಿ ಪ್ರಕರಣದಲ್ಲಿ ಮಾಧ್ಯಮಗಳು ಬಳಸುತ್ತಿರುವುದು ಖಂಡನೀಯ. ಮಹಾನಾಯಕ ಎಂಬ ಬಿರುದು ಇರುವುದು ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರಿಗೆ ಎಂದು ತಿಳಿದಿರುವ ಸಂಗತಿಯೇ. ಮಾಧ್ಯಮಗಳು ಪದೇ ಪದೇ ಸಿಡಿ ಪ್ರಕರಣ ವಿಷಯದಲ್ಲಿ ಈ ಪದ ಬಳಕೆ ಮಾಡಿ ಅಂಬೇಡ್ಕರ್ ರವರ ಅನುಯಾಯಿಗಳ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ನೀಚ ಕೃತ್ಯ ಮಾಡುತ್ತಿದ್ದಾರೆ ಎಂದು ಬಾಲಾಜಿ ಎಂ ಕಾಂಬಳೆ ಕಿಡಿಕಾರಿದ್ದಾರೆ.
ಸಿಡಿ ವಿಚಾರದಲ್ಲಿ ಮಹಾನಾಯಕ ಪದ ಬಳಕೆ ಸರಿಯಲ್ಲ, ಕೋಟ್ಯಾಂತರ ಜನ ಮಹಾನಾಯಕ ಧಾರಾವಾಹಿ ನೊಡ್ತಿದಾರೆ. ಕನಿಷ್ಟ ಪ್ರಜ್ಙೆ ಇಟ್ಟುಕೊಳ್ಳಿ. ಹಾಗೆಯೇ ಮೀಡಿಯಾ ಬಳಗದವ್ರು ಅನ್ನ ತಿನ್ನೊ ಕೆಲ್ಸ ಮಾಡಿ. ಯಾವಾನೊ ಒಬ್ಬ ಮಹಾನಾಯಕ ಅಂದಿದ್ ತಕ್ಷಣ ಗೊತ್ತಿಲ್ಲದೆ ನೀವೂ ಬಳಸೋದಲ್ಲ. ಸ್ವಲ್ಪ ಕಾಮನ್ ಸೆನ್ಸ್ ಇರಲಿ ಎಂದು ಮುರಳಿ ಮಾಲೂರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಸಂವಿಧಾನಿಕ ದೇಶದಲ್ಲಿ ಯಾರು ಯಾರಿಗೂ ಸಾಹುಕಾರರಲ್ಲ, ಯಾರೂ ಕೂಡಾ ಬಾಬಾ ಸಾಹೇಬರಂತೆ ನಿಜದ ಅರ್ಥದಲ್ಲಿ ಮಹಾ ನಾಯಕರಾಗುವ ಯೋಗ್ಯತೆಯನ್ನೂ ಹೊಂದಿಲ್ಲ.
ಹೀಗಾಗಿ ಪದಗಳು ಸಿಕ್ಕಿವೆ ಎಂಬ ಮಾತ್ರಕ್ಕೆ ಅವುಗಳನ್ನು ಹೇಗೆ ಬೇಕೋ ಹಾಗೆ ಬಳಸುತ್ತಾ ಬಾಬಾ ಸಾಹೇಬರಂತಹ ಮಹಾನ್ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಕೆಲಸವನ್ನು ಈ ಸಂವಿಧಾನಿಕ ನೆಲದಲ್ಲಿ ಹುಟ್ಟಿದ ಯಾರೂ ಸಹ ಮಾಡಬಾರದು. ದಯಮಾಡಿ ಮಾಧ್ಯಮಗಳು ಇಂತಹ ಫ್ಯೂಡಲ್ ಹಾಗೂ ಹೋಲಿಕೆಗೂ ಅರ್ಹವಿಲ್ಲದ ಮಹತ್ವದ ಪದಗಳ ಬೇಕಾಬಿಟ್ಟಿ ಬಳಕೆಗೆ ಕಡಿವಾಣ ಹಾಕಲಿ ಎಂದು ಮಾಜಿ ಸಚಿವರಾದ ಎಚ್.ಸಿ ಮಹಾದೇವಪ್ಪನವರು ಆಗ್ರಹಿಸಿದ್ದಾರೆ.
ಹಾಗೆಯೇ ಚಿತ್ರನಟ ಪ್ರಥಮ್ ಕೂಡ ಆ ಪದಬಳಕೆ ವಿರೋಧಿಸಿ ಟ್ವೀಟ್ ಮಾಡಿದ್ದಾರೆ.
ದೇಶಕ್ಕೆ ಸಂವಿಧಾನ ಕೊಟ್ಟ ಅಂಬೇಡ್ಕರ್ ಗೆ ಗೌರವದಿಂದ #ಮಹಾನಾಯಕ ಅಂತಿದ್ರು!ಈಗCDಮಾಡೋರನ್ನ #ಮಹಾನಾಯಕ ಅಂತಿದ್ದಾರೆ!ಯಾವಪದ ಯಾರಿಗೆ ಬಳಸಬೇಕು ಅನ್ನೋ ಕನಿಷ್ಟಜ್ಞಾನ ಬೇಡ್ವಾ ನಿಮ್ಗೆ?ಅಂಬೇಡ್ಕರ್ ಫೋಟೋ ವಿರೂಪವಾದಾಗ ಅಗೌರವ ಆಗಲ್ಲ,ಇಂತ ಪದಗಳನ್ನ ಅಶ್ಲೀಲCDಕೇಸ್ ನವರಿಗೆ ಬಳಸಿದ್ರೆ ಅವಮಾನ ಮಾಡಿದಂತೆ!ಇನ್ನೊಮ್ಮೆ ಮಹಾನಾಯಕ ಅಂದ್ರೆ ಮುಖಕ್ಕೆಉಗೀರಿ!
— Olle Hudga Pratham (@OPratham) March 28, 2021
ಇದನ್ನೂ ಓದಿ: ಹೊಸ ಅಲೆ ಸೃಷ್ಟಿಸಿದ ‘ಮಹಾನಾಯಕ’ ಧಾರಾವಾಹಿ: ವರ್ಷದ ಅತ್ಯುನ್ನತ ಡಬ್ಬಿಂಗ್ ವಿಭಾಗದಲ್ಲಿ ಪ್ರಶಸ್ತಿ!