ಅಧಿಕಾರಸ್ಥರು ಪ್ರತಿಭಟನಾಕಾರರ ಶಾಂತಿಯುತ ಸಭೆ ಮತ್ತು ಅಭಿವ್ಯಕ್ತಿಯ ಹಕ್ಕುಗಳನ್ನು ಆಫ್ಲೈನ್ ಮತ್ತು ಆನ್ಲೈನ್ನಲ್ಲಿ ರಕ್ಷಿಸಬೇಕು, ಗೌರವಿಸಬೇಕು ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈ ಕಮಿಷನರ್ (ಒಎಚ್ಸಿಎಚ್ಆರ್) ಕಚೇರಿ ತಿಳಿಸಿದೆ.
ಭಾರತದಲ್ಲಿ 73ನೆ ದಿನಕ್ಕೆ ಕಾಲಿಟ್ಟಿರುವ ರೈತರ ಪ್ರತಿಭಟನೆಯು ಈಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುತ್ತಿದ್ದು, ಅಪಾರ ಬೆಂಬಲವೂ ವ್ಯಕ್ತವಾಗುತ್ತಿದೆ. ಈ ನಡುವೆ, ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್ ಅಥವಾ ಒಎಚ್ಸಿಎಚ್ಆರ್ ಕಚೇರಿ ಶುಕ್ರವಾರ ಸರ್ಕಾರ ಮತ್ತು ಪ್ರತಿಭಟನಾಕಾರರಿಗೆ ಗರಿಷ್ಠ ಸಂಯಮವನ್ನು ತೋರುವಂತೆ ಕರೆ ನೀಡಿದೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ಈ ಕುರಿತು ಟ್ವೀಟ್ ಮಾಡಿರುವ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್ ಕಚೇರಿ, #FarmersProtest ಹ್ಯಾಷ್ಟ್ಯಾಗ್ ಬಳಸಿದ್ದು ಕುತೂಹಲಕರವಾಗಿದೆ ಮತ್ತು ಇದು ನಮ್ಮ ವಿದೇಶಾಂಗ ಇಲಾಖೆಗೆ ಇನ್ನಷ್ಟು ಚಡಪಡಿಕೆ ಉಂಟು ಮಾಡುವ ಸಾಧ್ಯತೆಯಿದೆ.
“ಈಗ ನಡೆಯುತ್ತಿರುವ #FarmersProtest ನಲ್ಲಿ ಅಧಿಕಾರಸ್ಥರು ಮತ್ತು ಪ್ರತಿಭಟನಾಕಾರರು ಗರಿಷ್ಠ ಸಂಯಮವನ್ನು ಕಾಪಾಡಿಕೊಳ್ಳಲು ನಾವು ಕೇಳುತ್ತಿದ್ದೇವೆ. ಶಾಂತಿಯುತ ಪ್ರತಿಭಟನೆಯ ಮತ್ತು ಅಭಿವ್ಯಕ್ತಿಯ ಹಕ್ಕುಗಳನ್ನು ಆಫ್ಲೈನ್ ಮತ್ತು ಆನ್ಲೈನ್ನಲ್ಲಿ ರಕ್ಷಿಸಬೇಕು. ಎಲ್ಲರಿಗೂ ಒಪ್ಪಿಗೆಯಾಗುವ ಎಲ್ಲರಿಗೂ #HumanRights ಎಂಬ ನೀತಿಯಡಿ ಸಮನಾದ ಪರಿಹಾರಗಳನ್ನು ಕಂಡುಹಿಡಿಯುವುದು ಬಹಳ ಮುಖ್ಯ,” ಎಂದು ಅದು ಟ್ವೀಟ್ ಮಾಡಿದೆ.
#India: We call on the authorities and protesters to exercise maximum restraint in ongoing #FarmersProtests. The rights to peaceful assembly & expression should be protected both offline & online. It's crucial to find equitable solutions with due respect to #HumanRights for all.
— UN Human Rights (@UNHumanRights) February 5, 2021
ಪ್ರತಿಭಟನೆಗೆ ಸರ್ಕಾರ ನೀಡುತ್ತಿರುವ ಕಿರಿಕಿರಿ ವಿಷಯ ಈಗ ಜಾಗತಿಕ ಮಟ್ಟದಲ್ಲಿ ಮಾನವ ಹಕ್ಕು ವಿಷಯದ ಚರ್ಚೆಯಾಗಿ ಸಂಭವಿಸಿದೆ. ಪಾಪ್ ತಾರೆ ರಿಹಾನ್ನಾ ಮತ್ತು ಪರಿಸರ ಕಾರ್ಯಕರ್ತೆ ಗ್ರೆಟಾ ಥನ್ಬರ್ಗ್ ಸೇರಿದಂತೆ ಗಣ್ಯರು ರೈತರಿಗೆ ತಮ್ಮ ಬೆಂಬಲವನ್ನು ಘೋಷಿಸಿದ್ದಾರೆ.
ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಸಂಸತ್ತಿನಲ್ಲಿ ಶುಕ್ರವಾರ, ಕಾನೂನುಗಳಲ್ಲಿ ಲೋಪವೇ ಇಲ್ಲ, ವಿಪಕ್ಷಗಳು ರೈತರನ್ನು ದಾರಿ ತಪ್ಪಿಸುತ್ತಿವೆ ಎಮದಿರುವುದೂ ಕೂಡ ವಿವಾದಾತ್ಮಕ ಎನಿಸಿದೆ.
ಕಳೆದ ತಿಂಗಳು ನಡೆದ ಹಿಂಸಾಚಾರದ ನಂತರ, ವಿಶ್ವಸಂಸ್ಥೆಯ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರೆಸ್ ಅವರ ವಕ್ತಾರರು, ಶಾಂತಿಯುತ ಪ್ರತಿಭಟನೆ, ಸಭೆ ಸೇರುವ ಸ್ವಾತಂತ್ರ್ಯ ಮತ್ತು ಅಹಿಂಸೆಯನ್ನು ಗೌರವಿಸುವುದು ಮುಖ್ಯ ಎಂದು ಹೇಳಿದ್ದರು. ಡಿಸೆಂಬರ್ನಲ್ಲಿ ಅವರ ಕಚೇರಿ ಜನರಿಗೆ ಶಾಂತಿಯುತವಾಗಿ ಪ್ರತಿಭಟಿಸುವ ಹಕ್ಕಿದೆ ಮತ್ತು ಅಧಿಕಾರಿಸ್ಥರು ಹಾಗೆ ಮಾಡಲು ಅವಕಾಶ ನೀಡಬೇಕು ಎಂದು ಹೇಳಿತ್ತು.
ಇದನ್ನೂ ಓದಿ: ಆಂತರಿಕ ವ್ಯವಹಾರಗಳಿಗೆ ತಲೆ ಹಾಕಬೇಡಿ: ಭಾರತಕ್ಕೆ ಮೀನಾ ಹ್ಯಾರಿಸ್ ನೀಡಿದ ಪ್ರತ್ಯುತ್ತರ ಏನು ಗೊತ್ತಾ?