ನಾನು ಇಂದು ಬೆಳಿಗ್ಗೆ 4.30ಕ್ಕೆ ಗಾಢ ನಿದ್ರೆ ಮಾಡುತ್ತಿರುವಾಗ ಮನೆಯಿಂದ ನಮ್ಮ ಚಿಕ್ಕಪ್ಪನ ಮಗ ಕಾಲ್ ಮಾಡಿದ. ನಾನು ಗಾಬರಿಯಿಂದ ಫೋನ್ ತೆಗೆದೆ. ಈಗಾಗಲೇ ಲಾಕ್ಡೌನ್ನಿಂದಾಗಿ ಮನೆಗೆ ಹೋಗದೇ ಬೆಂಗಳೂರಿನಲ್ಲೇ ಇರುವುದರಿಂದ ಕೊರೊನಾ ವೈರಸ್ ಬಗ್ಗೆ ಆತಂಕದಲ್ಲಿರುವಾಗ ಇಂತಹ ಕಾಲ್ ಬೆಳ್ಳಂ ಬೆಳಿಗ್ಗೆ ಬಂದುದರಿಂದ ಭಯವಾಯಿತು. ನನ್ನ ತಮ್ಮನ ಕಾಲ್ ರಿಸಿವ್ ಮಾಡುತ್ತಲೇ ಅಣ್ಣ ಎದ್ದೇಳು ಎದ್ದೇಳು ಅಂದ. ನಾನು ಎದ್ದಿದಿನಿ ಹೇಳೋ ಏನೋ ಅಂದೆ. ಮೊದಲು ಎದ್ದು ಕುಳಿತಿಕೋ, ನಮ್ಮ ಅತ್ತೆ ಹೇಳಿದರು ಈಗ ಯಾರು ಮಲಗಬಾರದಂತೆ ಎದ್ದೇ ಇರಬೇಕೆಂತೆ ಅಂತ ಹೇಳೀದ. ನಾನು ಆಯಿತು ಅಂತ ಕಾಲ್ ಕಟ್ ಮಾಡಿ ಮಲಗಿದೆ.
ಆದರೆ ಬೆಳಿಗ್ಗೆ ಎದ್ದು ಕಾಲ್ ಮಾಡಿ ವಿಷಯ ಏನು ಎಂದು ವಿಚಾರಿಸದರೆ, ಎಲ್ಲೋ ಹಸು ಹೊಟ್ಟೆಯಲ್ಲಿ ಮಗು ಹುಟ್ಟಿದೆಯಂತೆ. ಹಾಗಾಗಿ ಇವತ್ತು ಬೆಳಿಗಿನ ಜಾವಾ ನಿದ್ದೆ ಮಾಡಿದ್ರೆ ಏನಾದರೂ ಆಗುತ್ತೆ ಅಂತ ನಮ್ಮ ಏರಿಯಾದವರನ್ನೆಲ್ಲ ಎಬ್ಬಿಸಿದ್ದಾರೆ. ಎಲ್ಲರೂ ಫೋನ್ ಮಾಡಿ ಹೇಳು ಅಂದರು, ಅದಕ್ಕಾಗಿ ನಿನಗೆ ಕಾಲ್ ಮಾಡಿದೆ ಅಂದ. ನಾನು ಇವೆಲ್ಲ ನಂಬಬೇಡ ಬರೀ ಸುಳ್ಳು ಸುದ್ಧಿಗಳು ಬುದ್ಧಿ ಇಲ್ವಾ ನಿಮಗೆ ಎಂದು ಬೈಯ್ದು ಫೋನಿಟ್ಟೆ.
ಆನಂತರ ತಿಳಿಯಿತು ಇದು ಎಲ್ಲಾ ಹಳ್ಳಿಹಳ್ಳಿಗಳಿಗೂ ಹಬ್ಬುತ್ತಿದೆ ಎಂದು. ವಾಟ್ಸಪ್ನಲ್ಲಿ ನಿರಂತರವಾಗಿ ಈ ರೀತಿಯ ಸುಳ್ಳು ಸುದ್ಧಿಗಳನ್ನು ಹರಡಿ ಗ್ರಾಮೀಣ ಜನರನ್ನು ಇಂತಹ ಮೌಢ್ಯಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡುತ್ತಿದ್ದಾರೆ. ಇದರ ಹಿಂದೆ ದೊಡ್ಡ ಹುನ್ನಾರವೆ ಇದೆ ಹಾಗಾಗಿ ಇದರ ಕುರಿತು ಫ್ಯಾಕ್ಟ್ಚೆಕ್ ಮಾಡಲು ನಿರ್ಧರಿಸಿದೆವು.
ವಾಟ್ಸಾಪ್ನಲ್ಲಿ ಹಸುವೊಂದು ಮಗುವಿಗೆ ಜನ್ಮಕೊಟ್ಟಿದೆ ಎಂಬ ಐದು ಚಿತ್ರಗಳು ಹರಿದಾಡುತ್ತಿವೆ. ಇವುಗಳನ್ನು ಗೂಗಲ್ ರಿವರ್ಸ್ ಸರ್ಚ್ ಮಾಡಿದಾಗ ಮಹಾರಾಷ್ಟ್ರದ ಲಾತೂರ್ ಜಿಲ್ಲೆ ಔಶಾ ತಾಲ್ಲೂಕಿನಲ್ಲಿ ವಿಕಲಾಂಗ ಮಗುವೊಂದು ಜನಿಸಿದ್ದು ಮಾತು ಬರುತ್ತಿಲ್ಲ ಎಂದು ಸುದ್ದಿ ಹರಡಿದೆ. ಹಾಗಾಗಿ ಅದು ಹುಟ್ಟಿದ ಸಮಯದಲ್ಲಿ ಉಳಿದವರೂ ಎಚ್ಚರವಿರಬೇಕು ಇಲ್ಲದಿದ್ದರೆ ಅವರ ಮಾತು ನಿಂತು ಹೋಗುತ್ತದೆ ಎಂದು ಯಾರೋ ಕಿಡಿಗೇಡಿಗಳು ಸುದ್ದಿ ಹರಡಿದ್ದಾರೆ.
ಅಲ್ಲಿಂದ ಒಬ್ಬರಿಂದ ಒಬ್ಬರಿಗೆ ನಿದ್ದೆ ಮಾಡಬೇಡಿ ಎದ್ದೇಳಿ ಎಂದು ಎಚ್ಚರಿಸುವ, ಇಡೀ ರಾತ್ರಿ ಎಚ್ಚರದಿಂದಿರುವ ಚಾಳಿ ಶುರುವಾಗಿದೆ ಮಾತ್ರವಲ್ಲ, ಆ ಮಗು ಹಸುವಿಗೆ ಹುಟ್ಟಿದ್ದು ಎಂಬ ಸುಳ್ಳು ಸಹ ಸೇರಿಕೊಂಡಿದೆ. ಅದೇ ಫೋಟೊಗಳನ್ನು ಷೇರ್ ಮಾಡಿ ಆಂಧ್ರ ಪ್ರದೇಶದ ಯಾವುದೋ ಊರು ಎಂದೆಲ್ಲಾ ಸುಳ್ಳು ಪಸರಿಸಿದೆ. ಅದೇ ಕಾಲ್ ಕೊನೆಗೆ ಬೆಂಗಳೂರನ್ನು ಸಹ ಮುಟ್ಟಿದೆ. ಇದು ಸಂಪೂರ್ಣ ಸುಳ್ಳು ಎಂದು ಸ್ಥಳೀಯ ವೆಬ್ಸೈಟ್ ಸಕಲ್.ಕಾಂ ಸ್ಪಷ್ಟಪಡಿಸಿದೆ.
ಅಲ್ಲದೇ ಸಂಬಂಧವಿಲ್ಲದ ಫೋಟೊಗಳನ್ನೆಲ್ಲಾ ಷೇರ್ ಮಾಡಲಾಗಿದೆ. ಆಂಧ್ರದ ಎದುಟ್ಲ ಗೋಪಾಲ್ಪೇಟ್ ತಾಲ್ಲೂಕು ಎಂಬಲ್ಲಿ ನಡೆದಿದೆ ಎಂಬ ಫೋಟೊಗಳನ್ನು ಸಹ ಹರಿಬಿಡಲಾಗಿದೆ. ಒಟ್ಟಾರೆ ಇದೊಂದು ಶುದ್ಧ ಮೌಢ್ಯಾಚರಣೆಯಾಗಿದೆ.
ಇಂತಹ ವದಂತಿಗಳನ್ನು ಹರಡುವ ಮೂಲಕ, ಕಾರಣವಿಲ್ಲದೆ ಜನರಲ್ಲಿ ಭಯವದ ವಾತಾವರಣ ಸೃಷ್ಟಿಸಲಾಗುತ್ತದೆ. ಯಾರೋ ಮಾನಸಿಕ ಅಸ್ವಸ್ಥರು ಈ ಸುಳ್ಳು ಸುದ್ದಿ ಹರಡಿದ್ದಾರೆ. ಇದರಿಂದ ಯಾವುದೇ ಅಪಾಯ ಯಾರಿಗೂ ಆಗುವುದಿಲ್ಲ. ಮಗು ಬೆಳೆಯುತ್ತಿದ್ದಂತೆ ಮಗುವಿನ ಮಾತುಕತೆಯ ಪ್ರಕ್ರಿಯೆಯು ಪ್ರಾರಂಭವಾಗುತ್ತದೆ. ಆದ್ದರಿಂದ ಜನರು ವದಂತಿಗಳಿಗೆ ಬಲಿಯಾಗಬಾರದು. ಎಂದು ಔಶಾ ತಾಲ್ಲೂಕಿನ ಮೂಢನಂಬಿಕೆ ನಿರ್ಮೂಲನಾ ಸಮಿತಿಯ ಅಧ್ಯಕ್ಷ ಸಚಿನ್ ಮಿಟ್ಕರಿ ತಿಳಿಸಿದ್ದಾರೆ.
ಇತ್ತಿಚಿಗೆ ಉತ್ತರಕರ್ನಾಟಕದ ಹಳ್ಳಿಗಳಲ್ಲಿ ನಿಮ್ಮ ತಾಳಿಯಲ್ಲಿರುವ ಹವಳವನ್ನು ಕುಟ್ಟಿ ಪುಡಿಮಾಡಬೇಕು ಇಲ್ಲವಾದರೆ ನಿಮ್ಮ ಗಂಡು ಸತ್ತು ಹೋಗುತ್ತಾನೆ ಎಂದು ಸುಳ್ಳು ಸುದ್ಧಿ ಹಬ್ಬಿಸಿದ್ದಾರೆ ಇದರಿಂದ ಗ್ರಾಮೀಣ ಹೆಣ್ಣು ಮಕ್ಕಳು ಹಾಗೇ ಮಾಡಿದ್ದಾರೆ.
ಇನ್ನು ಕೆಲವು ತಿಂಗಳುಗಳ ಕೆಳಗೆ ಒಬ್ಬನೇ ಮಗ ಇದ್ದರೆ ಆತನಿಗೆ ಅತ್ತೆಯಂದಿರು ಬೆಳ್ಳಿ ಕಡಗ ಹಾಕಬೇಕು ಇಲ್ಲವಾದರೆ ಆತನಿಗೆ ಕೇಡಾಗುತ್ತದೆ ಎಂದು ಹೇಳಿದ್ದರು ಇದಕ್ಕಾಗಿ ಜನ ಸಾಲ ಮಾಡಿ ಬೆಳ್ಳಿ ಅಂಗಡಿಗಳ ಬಾಗಿಲು ತಟ್ಟಿದ್ದರು. ಆದಾದ ಕೆಲವೇ ದಿನಗಳಿಗೆ ಬೆಳ್ಳಿ ಕಡಗ ಇದ್ದರೆ ತೆಗೆದು ಹಾಗಬೇಕು ಎಂದರೆ ತೆಗೆದು ಹಾಕಿದ್ಧಾರೆ. ಈ ರೀತಿ ಗ್ರಾಮೀಣ ಜನರ ಜೀವನದ ಜೊತೆ ಸುಳ್ಳು ಸುದ್ಧಿಗಳನ್ನು ಹಬ್ಬಿಸಿ ಆಟ ಆಡುತ್ತಿದ್ದಾರೆ.
ಇದನ್ನೂ ಓದಿ: ಕೊರೊನಾ ವಿರುದ್ಧ ಹೋರಾಟ: ಇಟಲಿಗೆ ಬಲಿಷ್ಟ ವೈದ್ಯರ ತಂಡ ಕಳುಹಿಸಿಕೊಟ್ಟ ʼಕ್ಯೂಬಾʼ
ಈ ಬಗ್ಗೆ ಸರ್ಕಾರಗಳು ಒಂದಷ್ಟು ಸಮರ್ಪಕ ಕ್ರಮಗಳನ್ನು ತೆಗೆದುಕೊಳ್ಳಬೇಕು. ಇತ್ತಿಚಿಗೆ ವಿದ್ಯಾವಂತರೇ ಸುಳ್ಳು ಸುದ್ಧಿಗಳನ್ನು ಹರಡುತ್ತಿರುವುದು ಹೆಚ್ಚಾಗಿದೆ. ಇದನ್ನು ಮೊದಲು ನಿಲ್ಲಿಸಬೇಕು. ಸತ್ಯ ಎಂದು ತಿಳಿಯದ ಹೊರತು ವಿಷಯಗಳನ್ನು ಶೇರ್ ಮಾಡದೆ ಇರುವುದನ್ನು ರೂಢಿಸಿಕೊಳ್ಳಬೇಕು.
ಇದನ್ನೂ ಓದಿ: