Homeಮುಖಪುಟಕೊರೊನಾ ತಂದ ಅವಳಿ ಬಿಕ್ಕಟ್ಟು : ಆರೋಗ್ಯ ಮತ್ತು ಆರ್ಥಿಕ ಬಿಕ್ಕಟ್ಟಿನತ್ತ ಭಾರತ

ಕೊರೊನಾ ತಂದ ಅವಳಿ ಬಿಕ್ಕಟ್ಟು : ಆರೋಗ್ಯ ಮತ್ತು ಆರ್ಥಿಕ ಬಿಕ್ಕಟ್ಟಿನತ್ತ ಭಾರತ

ಬಡವರು ಮನೆಗಳಲ್ಲೇ ಉಳಿಯಬೇಕೆಂದರೆ ಅವರಿಗೆ ಹಣಕಾಸು ನೆರವು ಮತ್ತು ಅಗತ್ಯ ಸೇವೆಗಳು ಬೇಕು

- Advertisement -
- Advertisement -

ಜೀನ್ ಡ್ರೀಝ್, ಸಂದರ್ಶಕ ಪ್ರಾಧ್ಯಾಪಕರು, ಅರ್ಥಶಾಸ್ತ್ರ ವಿಭಾಗ, ರಾಂಚಿ ವಿಶ್ವವಿದ್ಯಾಲಯ

ಅನುವಾದ: ನಿಖಿಲ್ ಕೋಲ್ಪೆ

ಕೊರೊನಾ ವೈರಸ್ ಹರಡಿದಂತೆಲ್ಲಾ ಭಾರತದ ಮೇಲೆ ಅವಳಿ ಬಿಕ್ಕಟ್ಟು ಕವಿಯುತ್ತಿದೆ: ಒಂದು ಆರೋಗ್ಯ ಬಿಕ್ಕಟ್ಟು; ಇನ್ನೊಂದು ಆರ್ಥಿಕ ಬಿಕ್ಕಟ್ಟು. ಜೀವಹಾನಿಗೆ ಸಂಬಂಧಿಸಿದಂತೆ ಆರೋಗ್ಯ ಬಿಕ್ಕಟ್ಟು ಇನ್ನೂ ತೀರಾ ಸೀಮಿತವಾಗಿದೆ. (ಪ್ರತಿ ವರ್ಷ 80 ಲಕ್ಷ ಜನರು ಸಾಯುವ ದೇಶದಲ್ಲಿ ಏಳು ಸಾವುಗಳು). ಆದರೆ, ಈ ಸಂಖ್ಯೆ ತ್ವರಿತವಾಗಿ ಏರುತ್ತಿದೆ. ಅದೇ ಹೊತ್ತಿಗೆ ಆರ್ಥಿಕ ಬಿಕ್ಕಟ್ಟು  ಪ್ರತಿದಿನ ಲಕ್ಷಾಂತರ ಜನರಿಗೆ ಕೆಲಸವಿಲ್ಲದಂತೆ ಮಾಡುವುದರ ಮೂಲಕ ಪೂರ್ಣ ಶಕ್ತಿಯಿಂದ ಅಪ್ಪಳಿಸುತ್ತಿದೆ. ಆರೋಗ್ಯ ಬಿಕ್ಕಟ್ಟಿನಂತೆ ಆರ್ಥಿಕ ಬಿಕ್ಕಟ್ಟು ವರ್ಗ ಸಮಭಾವ ಹೊಂದಿಲ್ಲ. ಬದಲಾಗಿ ಅದು ಬಡವರನ್ನೇ ಬಹುವಾಗಿ ಬಾಧಿಸುತ್ತದೆ.

ನಿಧಾನ ಗತಿಗಿಳಿದ ಭಾರತ

ವಲಸೆ ಕಾರ್ಮಿಕರು, ದಿನಗೂಲಿ ನೌಕರರು, ಗುತ್ತಿಗೆ ಕಾರ್ಮಿಕರು, ಬೀದಿಬದಿ ವ್ಯಾಪಾರಿಗಳು- ಅನೌಪಚಾರಿಕ ಕ್ಷೇತ್ರದಲ್ಲಿ ಕೆಲಸ ಮಾಡುವ ಬಹುಪಾಲು ಕಾರ್ಮಿಕರಿಗೆ ಈ ಆರ್ಥಿಕ.ಸುನಾಮಿಯು ಹೊಡೆತ ನೀಡಿದೆ. ಮಹಾರಾಷ್ಟ್ರದಲ್ಲಿ ಸಾಮೂಹಿಕ ಕೆಲಸ ಕಡಿತವು ವಲಸೆ ಕಾರ್ಮಿಕರು ತಮ್ಮ ಮನೆಗಳಿಗೆ ಧಾವಿಸುವುದನ್ನು ಅನಿವಾರ್ಯವಾಗಿಸಿದೆ. ಹಲವರಿಗೆ ಸಂಬಳವನ್ನೂ ನೀಡಲಾಗಿಲ್ಲ. ರೈಲುಗಳ ರದ್ದತಿಯಿಂದಾಗಿ ಹಲವರು ಈಗ ಮಹಾರಾಷ್ಟ್ರ ಮತ್ತು ತಮ್ಮ ತವರೂರಿನ ನಡುವೆ ಸಿಕ್ಕಿಬಿದ್ದಿದ್ದಾರೆ. ಮಹಾರಾಷ್ಟ್ರದ ಆರ್ಥಿಕ ಸ್ಥಬ್ಧತೆಯು ವೇಗವಾಗಿ ಇತರ ರಾಜ್ಯಗಳಿಗೂ ಹಬ್ಬುತ್ತಿದೆ. ಬೇಗನೇ ಬಿಕ್ಕಟ್ಟು ಶಮನವಾಗುವ ಯಾವುದೇ ಆಶಾವಾದವಿಲ್ಲದೆ ಅಂಗಡಿಗಳು, ಕಾರ್ಖಾನೆಗಳು, ಕಚೇರಿಗಳು, ಕೆಲಸದ ಸ್ಥಳಗಳು ಮುಚ್ಚುತ್ತಿವೆ. ಸಾರಿಗೆ ವ್ಯವಸ್ಥೆ ಏರುಪೇರಾಗಿರುವುದರಿಂದ ಉತ್ತರ ಭಾರತದಲ್ಲಿ ಲಕ್ಷಾಂತರ ಕೂಲಿ ಕಾರ್ಮಿಕ ಕುಟುಂಬಗಳಿಗೆ ಬದುಕಿ ಉಳಿಯಲು ಆಧಾರವಾಗಿರುವ ಮುಂದಿನ ಗೋಧಿ ಕಟಾವು ಕೂಡಾ ಹೆಚ್ಚಿನ ಪರಿಹಾರ ಒದಗಿಸಲಾರದು.

ಇದು ಟ್ರೇಲರ್ ಮಾತ್ರ

ಈ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ತುರ್ತಾದ, ಭಾರೀ ಪ್ರಮಾಣದ ಪರಿಹಾರ ಕ್ರಮಗಳ ಅಗತ್ಯವಿದೆ. ಬೀಗಮುದ್ರೆ ಅಥವಾ ಕೆಲಸ ಸ್ಥಗಿತ ಈ ಸಾಂಕ್ರಾಮಿಕ ರೋಗದ ಹರಡುವಿಕೆಯನ್ನು ನಿಧಾನಗೊಳಿಸಲು ಅಗತ್ಯವಾಗಿರಬಹುದು. ಆದರೆ, ಬಡವರಿಗೆ ಸುಮ್ಮನೇ ಮನೆಯಲ್ಲಿ ಕುಳಿತಿರಲು ಸಾಧ್ಯವಿಲ್ಲ. ಮನೆಯಲ್ಲಿಯೇ ಕುಳಿತುಕೊಳ್ಳಲು ಅವರಿಗೆ ಹೇಳುವುದಾದಲ್ಲಿ ಅವರಿಗೆ ನೆರವಿನ ಅಗತ್ಯವಿದೆ. ಈ ವಿಷಯದಲ್ಲಿ ಭಾರತಕ್ಕೂ ಉತ್ತಮ ಸಾಮಾಜಿಕ ಭದ್ರತೆ ಇರುವ ಶ್ರೀಮಂತ ದೇಶಗಳಿಗೂ ನಿರ್ಣಾಯಕವಾದ ವ್ಯತ್ಯಾಸಗಳಿವೆ. ಉದಾಹರಣೆಗೆ ಕೆನಡಾ ಅಥವಾ ಇಟಲಿಯನ್ನು ತಗೆದುಕೊಂಡರೆ, ಒಂದು ಸರಾಸರಿ ಕುಟುಂಬವು (ಕನಿಷ್ಟ ಕೆಲಸಮಯದ ಮಟ್ಟಿಗಾದರೂ) ಬೀಗಮುದ್ರೆ ಅಥವಾ ವ್ಯವಹಾರ ಸ್ಥಗಿತವನ್ನು ಸಹಿಸಿಕೊಳ್ಳಬಹುದು. ಆದರೆ, ಭಾರತದ ಬಡವರ ಸಹಿಸಿಕೊಳ್ಳುವ ಶಕ್ತಿ ಬಹುತೇಕ ಸೊನ್ನೆ.

ಸಾಮಾಜಿಕ ಯೋಜನೆಗಳ ಬಳಕೆ

ಸಮಯವು ಅತ್ಯಂತ ಮುಖ್ಯವಾಗಿರುವುದರಿಂದ ಮೊದಲ ಹೆಜ್ಜೆಯೆಂದರೆ ಪಿಂಚಣಿ (ವೃದ್ಧಾಪ್ಯ, ವಿಧವಾ ವೇತನ ಇತ್ಯಾದಿ), ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್), ಮಧ್ಯಾಹ್ನದ ಬಿಸಿಯೂಟ, ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಕಾಯಿದೆ (ಎಂಜಿಎನ್‌ಅರ್‌ಇಜಿಎ) ಮತ್ತಿತರ ಈಗಿರುವ ಸಾಮಾಜಿಕ ಭದ್ರತಾ ಯೋಜನೆಗಳನ್ನು ಬಡವರಿಗೆ ನೆರವಾಗಲು ಚೆನ್ನಾಗಿ ಬಳಸಿಕೊಳ್ಳುವುದು. ಆರಂಭದ ಕ್ರಮಗಳಲ್ಲಿ ಪಿಂಚಣಿಯನ್ನು ಮುಂಗಡವಾಗಿ ನೀಡುವುದು, ಉದ್ಯೋಗ ಖಾತರಿ ಯೋಜನೆಯ ಕೂಲಿ ಬಾಕಿಯನ್ನು ತಕ್ಷಣ ಪಾವತಿ ಮಾಡುವುದು, ಶಾಲೆ ಮತ್ತು ಅಂಗನವಾಡಿಗಳಲ್ಲಿ ಪಡಿತರವನ್ನು ಮನೆಗೆ ಒಯ್ಯಲು ಅವಕಾಶ ನೀಡಿ ವಿಸ್ತರಿಸುವುದು ಇತ್ಯಾದಿ ಸೇರಬಹುದು. ಕೆಲವು ರಾಜ್ಯಗಳು ಈಗಾಗಲೇ ಕೆಲವು ಉಪಯೋಗಿ ಕ್ರಮಗಳನ್ನು ತೆಗೆದುಕೊಂಡಿವೆ. ಆದರೆ, ಈ ಕ್ರಮಗಳನ್ನು ಭಾರೀ ಪ್ರಮಾಣದಲ್ಲಿ ವಿಸ್ತರಿಸಬೇಕಾಗುತ್ತದೆ. ಆದರೆ, ಅದಕ್ಕೆ ಕೇಂದ್ರ ಸರಕಾರದಿಂದ ಭಾರೀ ಪ್ರಮಾಣ ಹಣ ಹರಿದುಬರಬೇಕು. ಸರಕಾರವು ಕಾರ್ಪೊರೇಟ್‌ಗಳನ್ನು ಉಳಿಸಲು ಭಾರೀ ಪ್ರಮಾಣದಲ್ಲಿ ಸಂಪನ್ಮೂಲಗಳನ್ನು ಪೋಲುಮಾಡುವುದನ್ನು ನಿಲ್ಲಿಸಬೇಕು. ಯಾಕೆಂದರೆ, ಬಿಕ್ಕಟ್ಟಿನ ಪರಿಣಾಮಕ್ಕೆ ಒಳಗಾದ ಕ್ಷೇತ್ರಗಳು ಸದ್ಯದಲ್ಲಿಯೇ ಪರಿಹಾರ ಪ್ಯಾಕೇಜ್‌ಗಳಿಗಾಗಿ ಲಾಬಿ ಮಾಡಬಹುದು.

ಇದೇ ಹೊತ್ತಿಗೆ ಅಗತ್ಯ ಸೇವೆಗಳನ್ನು ನಿಲ್ಲಿಸುವ ಮನೋವೃತ್ತಿಯಿಂದ ಜನರ ಸಂಕಷ್ಟಗಳು ಇನ್ನೂ ಉಲ್ಭಣಗೊಳ್ಳುವ ಅಪಾಯವಿದೆ. ಸಾರ್ವಜನಿಕ ಸಾರಿಗೆ, ಆಡಳಿತಾತ್ಮಕ ಕಚೇರಿಗಳು, ನ್ಯಾಯಾಲಯದ ವಿಚಾರಣೆ, ಉದ್ಯೋಗ ಖಾತರಿ ಯೋಜನೆ, ಅಷ್ಟೇ ಏಕೆ, ಲಸಿಕೆ ಕಾರ್ಯಕ್ರಮವನ್ನು ಕೂಡಾ ಬೇರೆಬೇರೆ ರಾಜ್ಯಗಳು ಬೇರೆಬೇರೆ ಪ್ರಮಾಣದಲ್ಲಿ ಅಮಾನತುಗೊಳಿವೆ. ಇವುಗಳಲ್ಲಿ ಕೆಲವು ಕ್ರಮಗಳನ್ನು ಖಂಡಿತವಾಗಿಯೂ ಸಮರ್ಥಿಸಬಹುದಾದರೂ, ಕೆಲವು ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಯಿದೆ. ನಾವು ಕೇವಲ ಆರೋಗ್ಯ ಬಿಕ್ಕಟ್ಟು ಮಾತ್ರವಲ್ಲ, ಆರ್ಥಿಕ ಬಿಕ್ಕಟ್ಟನ್ನೂ ಎದುರಿಸುತ್ತಿದ್ದೇವೆ ಎಂಬುದನ್ನು ಮರೆಯಲಾಗದು. ಸಾರ್ವಜನಿಕ ಸೇವೆಗಳನ್ನು ನಿಲ್ಲಿಸುವುದರಿಂದ ಆರೋಗ್ಯ ಬಿಕ್ಕಟ್ಟನ್ನು ನಿಯಂತ್ರಿಸಲು ಅನುಕೂಲವಾಗುತ್ತದೆಯಾದರೂ, ಆರ್ಥಿಕ ಪರಿಣಾಮಗಳನ್ನೂ ಪರಿಗಣಿಸಬೇಕು.

ವಿವಿಧ ಮುನ್ನೆಚ್ಚರಿಕೆ ಕ್ರಮಗಳನ್ನು ಮೌಲ್ಯಮಾಪನ ಮಾಡಲು ಇಂತಹ ಕ್ರಮಗಳ ಅವಳಿ ಉದ್ದೇಶಗಳನ್ನು ನಾವು ಗಮನದಲ್ಲಿ ಇಟ್ಟುಕೊಂಡಿರಬೇಕು. ನೀವು ಮನೆಯಲ್ಲಿಯೇ ಉಳಿಯಲು ನಿರ್ಧರಿಸಿದರೆ ನೀವು ಎರಡು ಸಾಧ್ಯ ಉದ್ದೇಶಗಳನ್ನು ಹೊಂದಿರುತ್ತೀರಿ: ಸ್ದಯಂರಕ್ಷಣೆಯ ಉದ್ದೇಶ ಮತ್ತು ಸಾರ್ವಜನಿಕ ಉದ್ದೇಶ. ಮೊದಲನೆಯದರಲ್ಲಿ ನೀವು ಸೋಂಕು ತಗಲುವ ಭಯದಿಂದ ವರ್ತಿಸುತ್ತೀರಿ. ಎರಡನೆಯದರಲ್ಲಿ ನೀವು ವೈರಸ್ ಹರಡದಂತೆ ತಡೆಯುವ ಸಾಮೂಹಿಕ ಪ್ರಯತ್ನದಲ್ಲಿ ಭಾಗಿಯಾಗಿರುತ್ತೀರಿ. ಕೆಲವರು ಮುನ್ನೆಚ್ಚರಿಕೆಯನ್ನು ಸ್ವಯಂರಕ್ಷಣೆಯ ವಿಷಯ ಎಂದು ಭಾವಿಸುತ್ತಾರೆ. ಆದರೆ, ಅವರು ತಿಳಿಯದೇ ಇರುವ ವಿಷಯವೆಂದರೆ, ವ್ಯಕ್ತಿಗತವಾಗಿ ಸೋಂಕು ತಗಲುವ ಸಾಧ್ಯತೆಗಳು ಎಷ್ಟು ಕಡಿಮೆಯೆಂದರೆ, ಯಾವುದೇ ದೊಡ್ಡ ಸ್ವಯಂ ರಕ್ಷಣೆಯ ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯವೂ ಇಲ್ಲ. (ಆರೋಗ್ಯ ಕಾರ್ಯಕರ್ತರು, ಪುಟ್ಟ ಮಕ್ಕಳು ಮತ್ತು ವೃದ್ಧರಂತಹ ವಿಶೇಷ ಗುಂಪುಗಳನ್ನು ಹೊರತುಪಡಿಸಿ). ಏಕೆಂದರೆ ಭಾರತದಲ್ಲಿ ಸೋಂಕು ರೋಗವಾದ ಕ್ಷಯರೋಗ (ಟಿ.ಬಿ.)ದಿಂದ ಪ್ರತಿವರ್ಷವೂ ನಾಲ್ಕು ಲಕ್ಷ ಜನರು ಸಾವಿಗೆ ತುತ್ತಾಗುತ್ತಾರೆ. ಆದರೂ, ನಾವು ಯಾವುದೇ ವಿಶೇಷ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿಲ್ಲ. ಹೀಗಿರುವಾಗ ಕೋವಿಡ್-19 ವೈರಸ್‌ಗೆ ಭಾರತದಲ್ಲಿ ಏಳು ಮಂದಿ ಬಲಿಯಾಗಿರುವಾಗ ನಾವು ಈ ಮುನ್ನೆಚ್ಚರಿಕೆ ಕ್ರಮಗಳನ್ನು ಏಕೆ ಕೈಗೊಳ್ಳಬೇಕು? ಈ ಪ್ರಶ್ನೆಗೆ ವಿವೇಕಯುತ ಉತ್ತರವೆಂದರೆ, ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಅಲ್ಲ; ಬದಲಾಗಿ ಈ ಸೋಂಕು ರೋಗ ಹರಡದಂತೆ ತಡೆಯುವ ಸಾಮೂಹಿಕ ಯತ್ನದಲ್ಲಿ ಭಾಗಿಯಾಗಲು ಎಂಬುದು.

ಕ್ರಿಯಾಶೀಲತೆ ತೋರಿಸಿ

ಇಂತದ್ದೇ ತರ್ಕವು ಮುನ್ನೆಚ್ಚರಿಕೆ ಕ್ರಮವಾಗಿ ಸಾರ್ವಜನಿಕ ಸೇವೆಗಳನ್ನು ಮುಚ್ಚುವುದಕ್ಕೂ ಅನ್ವಯಿಸುತ್ತದೆ. ಸದ್ಯಕ್ಕೆ ಸಾರ್ವಜನಿಕ ನೌಕರರ ಸ್ವಯಂ ರಕ್ಷಣೆ ಒಂದು ಪ್ರಮುಖ ವಿಷಯವಲ್ಲ. ಮುಖ್ಯವಾಗಿ ಪರಿಗಣಿಸಬೇಕಾಗಿರುವುದು ಸಾರ್ವಜನಿಕ ಉದ್ದೇಶ. ಮುಂದಕ್ಕೆ ಹೇಳುವುದಾದರೆ, ಸಾರ್ವಜನಿಕ ಉದ್ದೇಶವು ಮುಚ್ಚುವಿಕೆಯ ಆರ್ಥಿಕ ಪರಿಣಾಮದ ಸಾಧ್ಯತೆಯನ್ನೂ ಒಳಗೊಂಡಿರಬೇಕು. ಒಂದು ಸೇವೆಯು ಆರೋಗ್ಯಕ್ಕೆ ಗಂಭೀರವಾದ ಅಪಾಯವನ್ನು ಒಡ್ಡುತ್ತದೆ ಎಂದಾದರೆ ಅದನ್ನು ನಿಲ್ಲಿಸಬಹುದು (ಶಾಲೆ ಮತ್ತು ಕಾಲೇಜುಗಳನ್ನು ಮುಚ್ಚುವುದಕ್ಕೆ ಇದೇ ಕಾರಣ).

ಇನ್ನೊಂದು ಕಡೆಯಲ್ಲಿ ಗಂಭೀರವಾದ ಆರೋಗ್ಯ ಅಪಾಯವನ್ನು ಒಡ್ಡದ ಮತ್ತು ಬಡವರಿಗೆ ಅವರ ಅಗತ್ಯ ಕಾಲದಲ್ಲಿ ನೆರವಾಗುವ ಸೇವೆಗಳನ್ನು ಸಾಧ್ಯವಾಗುವ ತನಕ ಮುಂದುವರಿಸಬೇಕು. ಇದನ್ನು ಆರೋಗ್ಯ ಸೇವೆಗಳಿಗೆ ಮತ್ತು ಸಾರ್ವಜನಿಕ ವಿತರಣಾ ವ್ಯವಸ್ಥೆಗೆ  ಮಾತ್ರ ಅನ್ವಯಿಸುವುದಲ್ಲ. ಅದು ಸ್ಥಳೀಯ ಮತ್ತು ಜಿಲ್ಲಾ ಮಟ್ಟದಲ್ಲಿ ಆಡಳಿತಾತ್ಮಕ ಕಚೇರಿಗಳು ಮತ್ತು ಇತರ ಸಾರ್ವಜನಿಕ ಸೇವೆಗಳಿಗೂ ಅನ್ವಯವಾಗಬೇಕು. ಬಡಜನರು ಬಹಳಷ್ಟು ರೀತಿಯಲ್ಲಿ ಈ ಸೇವೆಗಳನ್ನು ಅವಲಂಬಿಸಿದ್ದಾರೆ. ಇಂತಹಾ ಸೇವೆಗಳನ್ನು ಸಾರಾಸಗಟಾಗಿ ಮುಚ್ಚುವುದರಿಂದ ಆರೋಗ್ಯ ಬಿಕ್ಕಟ್ಟನ್ನು ತಡೆಗಟ್ಟಲು ಹೆಚ್ಚೇನನ್ನೂ ಸಾಧಿಸದೆ, ಆರ್ಥಿಕ ಬಿಕ್ಕಟ್ಟು ಉಲ್ಭಣಿಸುವುದಕ್ಕೆ ಕಾರಣವಾಗುತ್ತದೆ. ಈ ಸಂದರ್ಭದಲ್ಲಿ ಸಾರ್ವಜನಿಕ ಸೇವೆಗಳನ್ನು ಮುಂದುವರಿಸಿಕೊಂಡು ಹೋಗುವುದಕ್ಕೆ ಸ್ವಲ್ಪ ಮಟ್ಟಿ ಮನಸ್ಸು ಮತ್ತು ಕ್ರಿಯಾಶೀಲತೆ ಬೇಕಾಗುತ್ತದೆ.

ಲಭ್ಯ ಸೇವೆಗಳ ವಿವರವಾದ ಪಟ್ಟಿ (ಕೆಲವು ರಾಜ್ಯಗಳಲ್ಲಿ ಈಗಾಗಲೇ ಇದೆ) ಮತ್ತು ಕೊರೊನಾ ವೈರಸ್ ಸಿದ್ಧತೆಗಳ ಮಾರ್ಗದರ್ಶಿ ಸೂತ್ರಗಳನ್ನು ಕೆಲಸದ ಸ್ಥಳಗಳಲ್ಲಿ ಪ್ರದರ್ಶಿಸುವುದು ಉತ್ತಮ ಆರಂಭವಾದೀತು. ಹಲವು ಸಾರ್ವಜನಿಕ ಸ್ಥಳಗಳು ಅಂತರ ಕಾಪಾಡುವ ವ್ಯವಸ್ಥೆ ಹೊಂದಿಲ್ಲ. ಕೆಲವು ಸೇವೆಗಳನ್ನು ಮರುಹೊಂದಾಣಿಕೆ ಮಾಡಬಹುದು. ಉದಾಹರಣೆಗೆ ಈಗ ಮಕ್ಕಳನ್ನು ದೂರ ಇಡಬೇಕಾಗಿ ಬಂದಿದ್ದರೂ, ಸಾರ್ವಜನಿಕ ಆರೋಗ್ಯ ಸೇವೆಗಳನ್ನು ಒದಗಿಸುವುದರಲ್ಲಿ ಅಂಗನವಾಡಿಗಳು ಪ್ರಮುಖ ಪಾತ್ರ ವಹಿಸಬಹುದು. ಸೂಕ್ತ ಸುರಕ್ಷಾ ಕ್ರಮಗಳ ಜೊತೆಗೆ ಅನೇಕ ಸಾರ್ವಜನಿಕ ಸ್ಥಳಗಳನ್ನು ಜನರಿಗೆ ಅಂತರ ಕಾಯ್ದುಕೊಳ್ಳುವ ಮತ್ತು ಕೈತೊಳೆಯುವ ಉತ್ತಮ ಅಭ್ಯಾಸ ಮುಂತಾದ ಮಾಹಿತಿ ಒದಗಿಸಲು ಬಳಸಬಹುದು.

ಪರಿಣಾಮಕಾರಿ ಸಾಮಾಜಿಕ ಭದ್ರತೆ ಒದಗಿಸುವ ತುರ್ತು ಅಗತ್ಯವಿರುವುದರಿಂದ ಮನೋಸ್ಥೈರ್ಯ ಕಳೆದುಕೊಳ್ಳದೇ ಇರುವುದು ಈಗ ಇನ್ನಷ್ಟು ಮುಖ್ಯವಾಗುತ್ತದೆ. ಪರಿಸ್ಥಿತಿಯು ಈಗ ಮುಂದುವರಿಯುತ್ತಿರುವ ರೀತಿಯನ್ನು ನೋಡಿದಲ್ಲಿ ಬೇಗನೇ ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ನಡೆಸುವುದಾಗಲೀ, ಕುಡಿಯುವ ನೀರು ಒದಗಿಸುವುದಾಗಲೀ ಕೆಲವು ರಾಜ್ಯ ಸರಕಾರಗಳಿಗೆ ತುಂಬಾ ಕಷ್ಟಕರವಾಗಿ ಪರಿಣಮಿಸಲಿದೆ. ಹದಗೆಡುತ್ತಿರುವ ಆರ್ಥಿಕ ಬಿಕ್ಕಟ್ಟು ಮಾತ್ರವಲ್ಲ, ಆರೋಗ್ಯ ಬಿಕ್ಕಟ್ಟು ಕೂಡಾ ಜನರನ್ನು ಮೂಲೆಗೊತ್ತಬಹುದು. ಭಾರತದ ದುರ್ಬಲ ಸುರಕ್ಷಾ ಬಲೆಯು ಕಡಿದುಹೋಗಲು ಬಿಡಬಾರದು. ಅದಕ್ಕಿದು ಕಾಲವಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶಬರಿಮಲೆ ಚಿನ್ನ ಕಳವು ಪ್ರಕರಣ: ಎರಡನೇ ಪ್ರಕರಣದಲ್ಲೂ ಜಾಮೀನು ಕೋರಿ ಅರ್ಜಿ ಸಲ್ಲಿಸಿದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ

ಕೊಲ್ಲಂ (ಕೇರಳ): ಶಬರಿಮಲೆ ಚಿನ್ನ ಕಳವು ಪ್ರಕರಣದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ, ತಮ್ಮ ವಿರುದ್ಧ ದಾಖಲಾಗಿರುವ ಎರಡನೇ ಪ್ರಕರಣದಲ್ಲಿ ಶಾಸನಬದ್ಧ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ದ್ವಾರಪಾಲಕ (ರಕ್ಷಕ ದೇವತೆ) ವಿಗ್ರಹ...

ಆಕಸ್ಮಿಕವಾಗಿ ಗಡಿ ದಾಟಿದ್ದ 7 ಭಾರತೀಯರನ್ನು ಹಸ್ತಾಂತರಿಸಿದ ಪಾಕಿಸ್ತಾನ

2023 ರ ಪ್ರವಾಹದ ಸಮಯದಲ್ಲಿ ಅಜಾಗರೂಕತೆಯಿಂದ ಗಡಿ ದಾಟಿದ ನಂತರ ಬಂಧಿಸಲ್ಪಟ್ಟ ಏಳು ಭಾರತೀಯ ನಾಗರಿಕರನ್ನು ಪಾಕಿಸ್ತಾನ ಶನಿವಾರ ಸ್ವದೇಶಕ್ಕೆ ವಾಪಸ್ ಕಳುಹಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಂಜಾಬ್‌ನ ಅಟ್ಟಾರಿ ಇಂಟಿಗ್ರೇಟೆಡ್ ಚೆಕ್ ಪೋಸ್ಟ್‌ನಲ್ಲಿ...

ಮೀರತ್| ಅಪಹರಣ ಪ್ರಕರಣ ಹಿಂಪಡೆಯುವಂತೆ ಪೊಲೀಸರ ಒತ್ತಡ; ‘ಗೃಹಬಂಧನ’ದಲ್ಲಿ ದಲಿತ ಕುಟುಂಬ

ಜನವರಿ ತಿಂಗಳ ಆರಂಭದಲ್ಲಿ ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ಕಪ್ಸಾದ್ ಗ್ರಾಮದಲ್ಲಿ ತಾಯಿಯ ಕೊಲೆಯ ನಂತರ ಅಪಹರಿಸಲ್ಪಟ್ಟ ದಲಿತ ಹುಡುಗಿಯ ಕುಟುಂಬ ಸದಸ್ಯರು ತಾವು ಗೃಹಬಂಧನದಲ್ಲಿದ್ದು, ಆರೋಪಿಗಳ ವಿರುದ್ಧ ಪ್ರಕರಣವನ್ನು ಮುಂದುವರಿಸದಂತೆ ಪೊಲೀಸರು...

ಉದ್ಯಮಿ ಸಿಜೆ ರಾಯ್ ಮರಣೋತ್ತರ ಪರೀಕ್ಷೆ; ಹೃದಯ-ಶ್ವಾಸಕೋಶದಲ್ಲಿ 6.35 ಎಂಎಂ ಗುಂಡಿನ ಗಾಯ

ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಸಿಜೆ ರಾಯ್ ಅವರ ಆತ್ಮಹತ್ಯೆಯ ಮರಣೋತ್ತರ ಪರೀಕ್ಷೆಯ ವರದಿಗಯನ್ನು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅರವಿಂದ್ ಎಂಎನ್ ವಿವರಿಸಿದ್ದಾರೆ. 6.35 ಎಂಎಂ ಗುಂಡಿನ ದಾಳಿಯು ತಕ್ಷಣದ...

ಮುಂಬೈ| ನಿರ್ದೇಶಕ ರೋಹಿತ್ ಶೆಟ್ಟಿ ಮನೆಯ ಹೊರಗೆ 4 ಸುತ್ತು ಗುಂಡು ಹಾರಿಸಿದ ಅಪರಿಚಿತರು

ಶನಿವಾರ ತಡರಾತ್ರಿ, ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿ ಅವರ ಮುಂಬೈನ ಜುಹು ನಿವಾಸದ ಹೊರಗೆ ನಾಲ್ಕು ಸುತ್ತು ಗುಂಡು ಹಾರಿಸಲಾಗಿದ್ದು, ಘಟನೆಯಲ್ಲಿ ಯಾವುದೇ ಗಾಯಗಳಾಗಿಲ್ಲ ಎಂದು ವರದಿಯಾಗಿದೆ. ಚಿತ್ರ ನಿರ್ಮಾಪಕ-ನಿರ್ದೇಶಕರ ಕಟ್ಟಡದ ಬಳಿ ಅಪರಿಚಿತ...

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಪ್ರಮಾಣ ವಚನ ಸ್ವೀಕಾರ

ಜನವರಿ 28ರಂದು ವಿಮಾನ ಅಪಘಾತದಲ್ಲಿ ನಿಧನರಾದ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಶನಿವಾರ (ಜ.31) ಪ್ರಮಾಣವಚನ ಸ್ವೀಕರಿಸಿದರು. ಮುಂಬೈನ ಲೋಕಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ...

ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್‌ನಿಂದ ಬಿಲ್ ಗೇಟ್ಸ್‌ವರೆಗೆ : ಅಂತಿಮ ಎಪ್‌ಸ್ಟೀನ್‌ ಫೈಲ್‌ಗಳಲ್ಲಿ ಹಲವು ಪ್ರಮುಖರ ಹೆಸರು

ಅಮೆರಿಕದ ಸಂಸತ್ತು ಅಂಗೀಕರಿಸಿದ ಎಪ್‌ಸ್ಟೀನ್ ಫೈಲ್ಸ್ ಟ್ರಾನ್ಸ್‌ಪೆರೆನ್ಸಿ ಆಕ್ಟ್ (Epstein Files Transparency Act) ನಿಯಮದಂತೆ ಅಮೆರಿಕದ ನ್ಯಾಯ ಇಲಾಖೆ (ಡಿಒಜಿ) ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಅಂತಿಮ...

ಲಂಚ ಪ್ರಕರಣ : ಎಸ್‌ಇಸಿ ಸಮನ್ಸ್ ಸ್ವೀಕರಿಸಲು ಅದಾನಿ ಒಪ್ಪಿಗೆ

ಲಂಚ ಪ್ರಕರಣದಲ್ಲಿ ಅಮೆರಿಕದ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ನ ಸಮನ್ಸ್‌ಗಳನ್ನು ಸ್ವೀಕರಿಸಲು ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಫೆಡರಲ್...

ಬೀದರ್‌ : ಮೊಳಕೇರಾ ಗ್ರಾಮದಲ್ಲಿ ಸ್ಫೋಟ ಪ್ರಕರಣ ; ಸಮಗ್ರ ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು, ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರು ಗಾಯಗೊಂಡಿರುವ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ...

ಜೈಲಿನಲ್ಲಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್‌ಗೆ ಅನಾರೋಗ್ಯ : ಜೋಧ್‌ಪುರದ ಏಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆ

ನ್ಯಾಯಾಂಗ ಬಂಧನದಲ್ಲಿರುವ ಲಡಾಖ್‌ನ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದೆಗೆಟ್ಟಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನ ಅನುಸಾರ ಜೋಧ್‌ಪುರದ ಏಮ್ಸ್‌ನಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ವಾಂಗ್‌ಚುಕ್ ಅವರನ್ನು ಜೋಧ್‌ಪುರ...