ಪ್ರಸ್ತುತ ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಜೆಡಿಎಸ್ ಬಿಜೆಪಿಯ ‘ಬಿ ಟೀಮ್’ ಎಂದು ಟೀಕಿಸಲಾಗುತ್ತಿದೆ. ಈ ಬಗ್ಗೆ ಸ್ವತಃ ಕುಮಾರಸ್ವಾಮಿ ಸಹ ಸ್ಪಷ್ಟನೆ ನೀಡಿದ್ದರು. ಇದರ ಬೆನ್ನಿಗೆ ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ಮಾತನಾಡಿರುವ ಕೃಷಿ ಸಚಿವ ಬಿ.ಸಿ. ಪಾಟೀಲ್ “ಈಗ ಯಾವುದೇ ಚುನಾವಣೆ ಇಲ್ಲ. ಹೀಗಾಗಿ ಜೆಡಿಎಸ್ ಜೊತೆ ಹೊಂದಾಣಿಕೆ ಅವಶ್ಯಕತೆ ಇಲ್ಲ” ಎಂದು ಅಭಿಪ್ರಾಯಪಟ್ಟಿದ್ದಾರೆ.
ಬಿಜೆಪಿ-ಜೆಡಿಎಸ್ ಮೈತ್ರಿ ಎಂಬ ವದಂತಿ ಜೆಡಿಎಸ್ನವರೇ ಸೃಷ್ಟಿಸಿರುವ ಗಿಮಿಕ್ ಎಂದು ಕಿಡಿಕಾರಿರುವ ಸಚಿವ ಬಿ.ಸಿ. ಪಾಟೀಲ್, “ಬಿಜೆಪಿ ಸರ್ಕಾರ ಸುಭದ್ರವಾಗಿದೆ. ನಮಗೆ ಯಾರ ಬೆಂಬವೂ ಅಗತ್ಯವಿಲ್ಲ. ಅಲ್ಲದೆ, ಈಗ ಚುನಾವಣೆ ಇಲ್ಲವಾದ ಕಾರಣ ಜೆಡಿಎಸ್ ಮೈತ್ರಿ ನಮಗೆ ಅಗತ್ಯವೂ ಇಲ್ಲ. ಅಸಲಿಗೆ ಇದೊಂದು ಗಿಮಿಕ್ ನಡೆಯುತ್ತಿದೆ. ಜೆಡಿಎಸ್ ನವರೇ ಗಿಮಿಕ್ ಮಾಡುತ್ತಿದ್ದಾರೆ. ಆದರೆ, ಯಾವ ಕಾರಣಕ್ಕಾಗಿ ಈ ಗಿಮಿಕ್ ಮಾಡುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಅದನ್ನ ನನ್ನ ಬಾಯಿಂದ ಯಾಕೆ ಹೇಳಿಸ್ತೀರಾ?” ಎಂದು ಕಿಡಿಕಾರಿದ್ದಾರೆ.
ಅಲ್ಲದೆ, “ಯಾರಾದರೂ ಬಿಜೆಪಿ ತತ್ವ ಸಿದ್ದಾಂತ ಮೆಚ್ಚಿ ಪಕ್ಷಕ್ಕೆ ಬಂದರೆ ನಾವು ಎಲ್ಲರನ್ನೂ ಸ್ವಾಗತಿಸುತ್ತೇವೆ. ಆದರೆ, ಯಾವ ಕಾಲದಲ್ಲೂ ಜೆಡಿಎಸ್ ಜೊತೆಗೆ ಮಾತ್ರ ಮೈತ್ರಿ ಸಾಧ್ಯವಿಲ್ಲ. ಇವೆಲ್ಲಾ ಊಹಾಪೋಹ ವದಂತಿಗಳಾಗಿದ್ದು, ಜನ ಇದಕ್ಕೆ ಕಿವಿಗೊಡದೆ ಇರುವುದು ಒಳ್ಳೆಯದು” ಎಂದು ತಿಳಿಸಿದ್ಧಾರೆ.
ಇದೇ ವಿಚಾರವಾಗಿ ಇಂದು ಬೆಳಗ್ಗೆಯೇ ಕಿಡಿಕಾರಿದ್ದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, “ಜೆಡಿಎಸ್ ಸ್ವಾಭಿಮಾನಿಗಳ ಪಕ್ಷ, ನಮಗೆ ಯಾವುದೇ ಇತರೆ ಪಕ್ಷಗಳ ಜೊತೆಗೆ ವಿಲೀನವಾಗುವ ಅಥವಾ ಮೈತ್ರಿ ಸಾಧಿಸುವ ಅಗತ್ಯವಿಲ್ಲ. ಜನವರಿಯಿಂದ ಬೇರೆ ರೀತಿಯಲ್ಲಿ ಜೆಡಿಎಸ್ ಪಕ್ಷವನ್ನು ಸಂಘಟಿಸಲಾಗುವುದು. ಅಲ್ಲದೆ, ರಾಜ್ಯದಲ್ಲಿ ಸ್ವಂತ ಬಲದ ಮೇಲೆ ಜೆಡಿಎಸ್ ಶೀಘ್ರದಲ್ಲೇ ಸರ್ಕಾರ ರಚಿಸಲಿದೆ” ಎಂದಿದ್ದರು.
ಇದನ್ನೂ ಓದಿ :ಈ ದೇಶದಲ್ಲಿ ಯಾವ ಪಕ್ಷಕ್ಕೂ ಯಾವ ಸಿದ್ಧಾಂತವೂ ಇಲ್ಲ: ಎಚ್.ಡಿ ಕುಮಾರಸ್ವಾಮಿ