ಶೊಯೈಬ್ ಧನಿಯಾಲ್
ಅನುವಾದ: ನಿಖಿಲ್ ಕೋಲ್ಪೆ
ತನ್ನನ್ನು ತಾನು ಕೊರೋನ ವೈರಸ್ ಪಿಡುಗಿನಿಂದ ರಕ್ಷಿಸಿಕೊಳ್ಳಲು ಭಾರತವು ಮರಗಟ್ಟಿಸುವ ಲಾಕ್ಡೌನ್ ಅನುಷ್ಟಾನಗೊಳಿಸಿದೆ. ಇದು ಪ್ರಪಂಚದಲ್ಲಿಯೇ ಅತ್ಯಂತ ಕಠಿಣ ಲಾಕ್ಡೌನ್. ದೇಶವು ಸಂಚಾರ ಮತ್ತು ಉದ್ಯೋಗಗಳ ಮೇಲೆ ಹಿಂದೆಂದೂ ಕಾಣದಂತಹ ನಿಯಂತ್ರಣಗಳನ್ನು ಹೇರಿದ್ದು, ಬಡವರು ಅಪ್ಪಚ್ಚಿಯಾಗುತ್ತಿದ್ದಾರೆ. ಆದರೂ, ಭಾರತದ ಈ ಯತ್ನದಲ್ಲಿ ದೊಡ್ಡದಾದ ತೂತೊಂದಿದೆ. ಆದೆಂದರೆ, ಬಡವರ ಮೇಲೆ ಹೇರಲಾಗಿರುವ ರೀತಿಯಲ್ಲಿಯೇ ಈ ನಿಯಂತ್ರಣವನ್ನು ಮಧ್ಯಮ ವರ್ಗ ಮತ್ತು ಶ್ರೀಮಂತರ ಮೇಲೆ ಹೇರಲಾಗದ ಆದರ ಅಸಾಮರ್ಥ್ಯ.
ದಿಲ್ಲಿಯ ಡಿಫೆನ್ಸ್ ಕಾಲನಿ ವಸತಿ ಪ್ರದೇಶದ ಒಂದು ಪ್ರಕರಣವನ್ನು ತೆಗೆದುಕೊಳ್ಳೋಣ. ಈ ಐಷಾರಾಮಿ ಪ್ರದೇಶದಲ್ಲಿ ಕಳೆದ ವಾರ ಮೂರು ಮಂದಿ ಸೋಂಕಿತರು ಪರೀಕ್ಷೆಯಲ್ಲಿ ಪತ್ತೆಯಾದರು. ದಿಲ್ಲಿ ಪೊಲೀಸರು ಈ ಕುಟುಂಬದ ಭದ್ರತಾ ಕಾವಲುಗಾರನನ್ನು ಸೋಂಕು ಹರಡಿದ ಆರೋಪ ಹೊರಿಸಿ ಆತನ ವಿರುದ್ಧ ಎಫ್ಐಆರ್ ದಾಖಲಿಸಿದರು. ಆದರೆ, ಪೊಲೀಸರು ಯಾಕೆ ಆತನನ್ನು ಮಾತ್ರ ಸೋಂಕು ಹರಡಿದ್ದಕ್ಕಾಗಿ ಸಂಶಯಿಸಿದರು? ಆತನಿಗೆ ಸೋಂಕು ತಗಲಿಸಿದ್ದಾರೆ ಎಂದು ಆ ಮನೆಯವರನ್ನು ಯಾಕೆ ಶಂಕಿಸಲಿಲ್ಲ? ಇದಿನ್ನೂ ಅಸ್ಪಷ್ಟವಾಗಿದೆ.

ಹಲವಾರು ಮಂದಿ ಸೋಂಕಿಗೆ ಒಳಗಾದ ಧಾರ್ಮಿಕ ಸಭೆಯೊಂದರಲ್ಲಿ ಈ ಕಾವಲುಗಾರ ಭಾಗವಹಿಸಿದ್ದಾನೆಂಬುದು ಆರೋಪ. ಆದರೆ, ಈ ಕುಟುಂಬದವರು ಈ ಕಾವಲುಗಾರನನ್ನು ತಮ್ಮ ಮನೆಯ ಒಳಗೆ ಹೊರಗೆ ಹೋಗಲು ಬಿಡುವುದರಿಂದ ಲಾಕ್ಡೌನ್ ನಿಯಮಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಿದ್ದಾರೆ ಎಂಬುದರ ಬಗ್ಗೆ ಯಾರೂ ಕಿಂಚಿತ್ ಗಮನವನ್ನೂ ಹರಿಸಿಲ್ಲ. ಅಲ್ಲದೇ, ಇಡೀ ಡಿಫೆನ್ಸ್ ಕಾಲನಿ ವಸತಿ ಪ್ರದೇಶವನ್ನು ಅಪಾಯಕ್ಕೆ ತಳ್ಳಿದಕ್ಕಾಗಿ ಮತ್ತು ಕಾನೂನನ್ನು ಉಲ್ಲಂಘಿಸಿದ್ದಕ್ಕಾಗಿ ಈ ಕುಟುಂಬದ ವಿರುದ್ಧ ಯಾವುದೇ ಪೊಲೀಸ್ ಕಾರ್ಯಾಚರಣೆ ನಡೆದಿಲ್ಲ ಎಂಬ ಬಗ್ಗೆ ಯಾವುದೇ ವಿವರಣೆಯಿಲ್ಲ.
ಇದು ಇಂತಹಾ ಒಂದೇ ಉಲ್ಲಂಘನೆಯಲ್ಲ. ಡಿಫೆನ್ಸ್ ಕಾಲನಿಯ ಹಲವಾರು ಕುಟುಂಬಗಳು ಇನ್ನೂ ಕಾವಲುಗಾರರು, ಮನೆಗೆಲಸದವರನ್ನು ಉಪಯೋಗಿಸಿಕೊಳ್ಳುತ್ತಿವೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ. ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುವಂತೆ, ಮನೆಗೆಲಸದವರು, ಚಾಲಕರು ಮತ್ತು ಕಾವಲುಗಾರರ ಮೇಲೆ ಕಣ್ಣಿಡುವಂತೆ ಅಲ್ಲಿನ ನಿವಾಸಿಗಳಿಗೆ ಹೇಳುವ ಮೂಲಕ ದಿಲ್ಲಿ ಪೊಲೀಸರು ಇಂತಹಾ ಕೃತ್ಯಗಳಿಗೆ ಪರೋಕ್ಷ ಸಮ್ಮತಿ ನೀಡಿದ್ದಾರೆ ಎಂದು ಪತ್ರಿಕಾ ವರದಿ ಹೇಳಿದೆ.
ಶ್ರೀಮಂತ ಮತ್ತು ಮಧ್ಯಮ ವರ್ಗಗಳ ಜನರು ಲಾಕ್ಡೌನ್ ಅವಧಿಯಲ್ಲಿ ಮನೆಗೆಲಸದವರ ಸೇವೆಯನ್ನು ಮುಂದುವರಿಸಿರುವ ಪ್ರಕರಣ ಇದೊಂದೇ ಅಲ್ಲ. ಕಳೆದ ಬುಧವಾರ ರಾಷ್ಟ್ರೀಯ ರಾಜಧಾನಿ ಪ್ರದೇಶ (ಎನ್ಸಿಆರ್)ನ ಕೊಳೆಗೇರಿಯಲ್ಲಿ ವಾಸಿಸುವ ಮನೆಗೆಲಸದ ಮಹಿಳೆಯೊಬ್ಬರಿಗೆ ಸೋಂಕು ತಗಲಿದಾಗ ಇಡೀ ಕೊಳೆಗೇರಿಯನ್ನು ದಿಗ್ಬಬಂಧನದಲ್ಲಿ ಇರಿಸಲಾಯಿತು. ಆಕೆಗೆ ಆಕೆ ಕೆಲಸ ಮಾಡುವ ಮನೆ ಮಾಲಕರಿಂದ ಸೋಂಕು ತಗುಲಿದೆ ಎಂದು ಗೊತ್ತಾಗಿತ್ತು. ಈ ಮಾಲಕ ಅಗ್ನಿಸುರಕ್ಷಾ ಸಂಸ್ಥೆಯೊಂದರ ಉದ್ಯೋಗಿ. ಕಳೆದ ಬುಧವಾರದ ಒಳಗೆ ನೋಯ್ಡಾದಲ್ಲಿ ಸೋಂಕು ದೃಢಪಟ್ಟಿರುವ 58 ಮಂದಿಯಲ್ಲಿ 39 ಮಂದಿಗೆ ಇದೇ ಸಂಸ್ಥೆಯ ಉದ್ಯೋಗಿಗಳಿಂದ ಸೋಂಕು ಹರಡಿದೆ ಎಂದು ತಿಳಿದುಬಂದಿದೆ.

ಸಿರಿವಂತರಿಗೆ ಸಡಿಲಬಿಟ್ಟುದರ ಪರಿಣಾಮದ ಇನ್ನೊಂದು ನಂಬಲಸಾಧ್ಯವಾದ ಕತೆ ಬೆಳಕಿಗೆ ಬಂದಿದೆ. ಅದರಲ್ಲಿ ಮಧ್ಯಪ್ರದೇಶದ ದೊಡ್ಡ ಸಂಖ್ಯೆಯ ಆರೋಗ್ಯ ಇಲಾಖೆಯ ಅಧಿಕಾರಿಗಳು ಕೊರೋನ ವೈರಸ್ ಸೋಂಕಿತರಾಗಿದ್ದಾರೆ. ಎನ್ಡಿಟಿವಿ ವರದಿ ಮಾಡಿರುವಂತೆ, ಭೋಪಾಲ್ನಲ್ಲಿರುವ 85 ಸೋಂಕು ಪ್ರಕರಣಗಳಲ್ಲಿ ಕನಿಷ್ಟ 40 ಪ್ರರಕರಣಗಳು ಮಧ್ಯಪ್ರದೇಶ ಆರೋಗ್ಯ ಇಲಾಖೆಯೊಳಗೇ ನಡೆದಿವೆ. ಕೊರೋನ ವೈರಸ್ ನಿಯಂತ್ರಣಕ್ಕಾಗಿ ರೂಪಿಸಲಾದ ನಿಯಮಗಳನ್ನು ಬದಿಗೆ ಸರಿಸಿದ ಆರೋಪವನ್ನು ಇಲಾಖೆಯ ಉನ್ನತ ಅಧಿಕಾರಿಗಳು ಎದುರಿಸುತ್ತಿದ್ದಾರೆ.
ಇದರ ಮೂಲ ಇರುವುದು ಇಲಾಖಾ ನಿರ್ದೇಶಕರಲ್ಲಿ ಎಂದು ಆರೋಪಿಸಲಾಗಿದೆ. ಅವರು ತನಗೆ ಸೋಕು ಇದೆಯೆಂದು ಪರೀಕ್ಷೆಯಲ್ಲಿ ತಿಳಿದುಬಂದರೂ, ತನ್ನನ್ನು ಸ್ವಯಂದಿಗ್ಬಂಧನಕ್ಕೆ ಒಳಪಡಿಸದೆ, ಕೆಲಸಕ್ಕೆ ಬರುವುದನ್ನು ಮುಂದುವರಿಸಿದ್ದರು ಎಂದು ನ್ಯೂಸ್ 18 ಚಾನೆಲ್ ವರದಿ ಮಾಡಿದೆ. ಮಧ್ಯಪ್ರದೇಶ ಸರಕಾರ ಈ ಪ್ರಕರಣದ ಕುರಿತು ತನಿಖೆಗೆ ಆದೇಶಿರುವಂತೆಯೇ, ಅದರ ಪರಿಣಾಮಗಳು ಮಾತ್ರ ಆಘಾತಕಾರಿಯಾಗಿವೆ. ಈಗ ರಾಜಧಾನಿ ಭೋಪಾಲ್ನಲ್ಲಿ ಗುರುತಿಸಲಾಗಿರುವ ಪ್ರತೀ ಇಬ್ಬರು ಸೋಂಕಿತರಲ್ಲಿ ಒಬ್ಬ ಆರೋಗ್ಯ ಇಲಾಖೆಯ ನೌಕರ.

ರಜಾದ ಮಜಾ
ಇನ್ನೂ ಕೆಲವು ಪ್ರಕರಣಗಳಲ್ಲಿ ಸರಕಾರಗಳು ಉಳ್ಳವರಿಗೆ ಸಡಿಲ ತೋರುವುದಕ್ಕಿಂತಲೂ ಮುಂದುವರಿವರಿದು, ನೇರವಾಗಿ ಲಾಕ್ಡೌನ್ ನಿಯಮಗಳನ್ನು ಉಲ್ಲಂಘಿಸುವ ತನಕ ಮುಟ್ಟಿದೆ. ಕಳೆದ ಗುರುವಾರ ದಿವಾನ್ ಹೌಸಿಂಗ್ ಫೈನಾನ್ಸ್ ಕಾರ್ಪೋರೇಷನ್ನ ಪ್ರವರ್ತಕರಾಗಿರುವ ವಾಧ್ವಾನ್ ಕುಟುಂಬವು ಲಾಕ್ಡೌನ್ ಉಲ್ಲಂಘಿಸಿ ಮಹಾರಾಷ್ಟ್ರದ ಗಿರಿಧಾಮವೊಂದಕ್ಕೆ ಹೋಗಿತ್ತು. ಕುಟುಂಬದ ಬಳಿ ಹಿರಿಯ ಅಧಿಕಾರಿಯೊಬ್ಬ ನೀಡಿದ ವಿಶೇಷ ತುರ್ತು ಪಾಸು ಇದ್ದುದರಿಂದ ಅವರು ಪೊಲೀಸ್ ತಪಾಸಣಾ ಠಾಣೆಗಳನ್ನು ಹಾದುಹೋಗಲು ಸಾಧ್ಯವಾಯಿತು ಎಂದು “ಟೈಮ್ಸ್ನೌ” ವರದಿ ಹೇಳುತ್ತದೆ.
ಇಂತದ್ದೇ ಘಟನೆಯನ್ನು “ದೈನಿಕ್ ಭಾಸ್ಕರ್” ವರದಿ ಮಾಡಿದ್ದು, ಗುಜರಾತ್ ಸರಕಾರವು ರಾಜ್ಯಗಳ ಗಡಿಗಳನ್ನು ಮುಚ್ಚಬೇಕು ಎಂಬ ಕಠಿಣ ಲಾಕ್ಡೌನ್ ನಿಯಮಗಳನ್ನು ಉಲ್ಲಂಘಿಸಿ, ಉತ್ತರಖಂಡದಲ್ಲಿದ್ದ 1,800 ಗುಜರಾತಿಗಳನ್ನು ಮರಳಿತಂದಿತ್ತು. ನಗರದಿಂದ ನಗರಕ್ಕೆ ಸಂಚಾರವನ್ನೂ ನಿಷೇಧಿಸಿರುವುದರಿಂದ ಲಕ್ಷಾಂತರ ವಲಸೆ ಕಾರ್ಮಿಕರು ಇರುವಲ್ಲಿಯೂ ಬದುಕಲಾಗದೆ, ಮನೆಗೂ ಮರಳಲಾಗದೆ ಒದ್ದಾಡುತ್ತಿರುವ ಸಂದರ್ಭದಲ್ಲಿ ಇಂತವು ನಡೆದಿವೆ.
ತಾತ್ವಿಕವಾಗಿ ಭಾರತವು ಬಹಳಷ್ಟು ಕಠಿಣವಾದ ಲಾಕ್ಡೌನ್ ನಿಯಮಗಳನ್ನು ಹೇರಿದೆಯಾದರೂ, ನೆಲಮಟ್ಟದಲ್ಲಿ ಇದು ರಂಧ್ರಗಳಿಂದ ಕೂಡಿದೆ, ಬಡವರು ಮತ್ತು ಅವಗಣಿತ ವರ್ಗಗಳ ನಡುವೆ ಲಾಕ್ಡೌನ್ ಅನುಷ್ಟಾನಗೊಳಿಸುವುದರಲ್ಲಿ ಭಾರತ ಸರಕಾರ ಹೆಚ್ಚಿನ ಯಶಸ್ಸು ಕಂಡಿದೆಯಾದರೂ, ಪ್ರಭಾವಿ ಮಧ್ಯಮ ವರ್ಗ ಮತ್ತು ಶ್ರೀಮಂತರು ನಿಯಮವನ್ನು ಎಗ್ಗಿಲ್ಲದೇ ಉಲ್ಲಂಘಿಸಿ ಬಚಾವಾಗುತ್ತಿದ್ದಾರೆ. ಇದು ಒಳಗೊಳಗೇ ಅನ್ಯಾಯ ಮಾತ್ರವಲ್ಲ, ನಾಚಿಗೆಗೇಡಿನ ಮತ್ತು ಹಾನಿಕಾರಕ ವಿಷಯ. ಪ್ರತಿಯೊಬ್ಬ ನಿವಾಸಿಗೆ ಲಾಕ್ಡೌನ್ ನಿಯಮಗಳನ್ನು ಮನದಟ್ಟು ಮಾಡಲು ಭಾರತ ಸರಕಾರದ ಅಸಾಮರ್ಥ್ಯವು ಖಂಡಿತವಾಗಿಯೂ ಸಾಮಾಜಿಕ ಅಂತರ (ದೈಹಿಕ ಅಂತರ) ಕಾಯ್ದುಕೊಳ್ಳುವ ಮತ್ತು ಈ ಸಾಂಕ್ರಾಮಿಕ ಪಿಡುಗಿನ ವಿರುದ್ಧ ಹೋರಾಡುವ ಅದರ ಪ್ರಯತ್ನಗಳಿಗೆ ಹಿನ್ನಡೆ ಉಂಟುಮಾಡುತ್ತದೆ.


