ಜಾಗತಿಕ ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್ಬರ್ಗ್ ಹಂಚಿಕೊಂಡ ರೈತರ ಹೋರಾಟದ ಬಗೆಗಿನ ಟೂಲ್ಕಿಟ್ ಪ್ರಕರಣದಲ್ಲಿ ಆರೋಪಿಯಾಗಿರುವ ‘ಶಾಂತನು ಮುಲುಕ್’ ಅವರಿಗೆ ನ್ಯಾಯಾಲಯವು ಮಾರ್ಚ್ 9 ರವರೆಗೆ ಬಂಧನದಿಂದ ರಕ್ಷಣೆ ನೀಡಿದೆ.
ಮುಲುಕ್ ಅವರ ನಿರೀಕ್ಷಿತ ಜಾಮೀನು ಅರ್ಜಿಗೆ ವಿವರವಾದ ಉತ್ತರವನ್ನು ಸಲ್ಲಿಸುವ ಮೊದಲು ಹೆಚ್ಚಿನ ವಿಚಾರಣೆ ನಡೆಸಲು ಸಮಯ ಬೇಕು ಎಂದು ದೆಹಲಿ ಪೊಲೀಸರು ಹೇಳಿದ ನಂತರ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಧರ್ಮೇಂದರ್ ರಾಣಾ ಹೋರಾಟಗಾರ ಶಾಂತನು ಅವರಿಗೆ ಬಂಧನದಿಂದ ರಕ್ಷಣೆ ನೀಡಿದ್ದಾರೆ.
ಇದನ್ನೂ ಓದಿ: ದಿಶಾ ರವಿಯ ಜಾಮೀನು ಆದೇಶ: ದೇಶದ್ರೋಹದ ಬಗ್ಗೆ ನ್ಯಾಯಾಧೀಶರು ಹೇಳಿದ್ದೇನು?
ಪೊಲೀಸರು ಸಲ್ಲಿಸಿದ ಮನವಿಯನ್ನು ವಿಚಾರಣೆ ನಡೆಸಿದ ನ್ಯಾಯಾಧೀಶರು ಮಾರ್ಚ್ 9 ರವರೆಗೆ ಮುಲುಕ್ ವಿರುದ್ಧ ಯಾವುದೇ ಬಲವಂತದ ಕ್ರಮ ತೆಗೆದುಕೊಳ್ಳದಂತೆ ಪೊಲೀಸರಿಗೆ ನಿರ್ದೇಶನ ನೀಡಿದ್ದಾರೆ.
ದೆಹಲಿ ಪೊಲೀಸರು ಶಾಂತನು ಮುಲುಕ್ ಜೊತೆಗೆ ದಿಶಾ ರವಿ ಮತ್ತು ನಿಕಿತಾ ಜಾಕೋಬ್ ಅವರು ವಿವಾದಿತ ಟೂಲ್ಕಿಟ್ ರಚಿಸಿದ್ದಾರೆ ಎಂದು ಆರೋಪಿಸಿ ದೇಶದ್ರೋಹ ಮತ್ತು ಇತರ ಗಂಭೀರ ಪ್ರಕರಣಗಳನ್ನು ದಾಖಲಿಸಿದ್ದರು.
ಇದರಲ್ಲಿ ವಿಶ್ವದಾದ್ಯಂತ ಗಮನ ಸೆಳೆದ ದಿಶಾ ರವಿ ಅವರಿಗೆ ಇತ್ತೀಚೆಗಷ್ಟೇ ನ್ಯಾಯಾಲಯವು ಜಾಮೀನು ನೀಡಿತ್ತು. ಈ ವೇಳೆ ನ್ಯಾಯಾಲಯವು ಅಭಿವ್ಯಕ್ತಿ ಮತ್ತು ವ್ಯಕ್ತಿ ಸ್ವಾತಂತ್ಯ್ರವನ್ನು ಎತ್ತಿ ಹಿಡಿದಿತ್ತು.
ನ್ಯಾಯಾಲಯವು, ಜಾಮೀನು ಮನವಿಗೆ ದೆಹಲಿ ಪೊಲೀಸರ ವಿರೋಧವು ಕೇವಲ ಅಲಂಕಾರಿಕವಾಗಿದೆ ಎಂದು ತೋರುತ್ತದೆ… ದಾಖಲೆಯಲ್ಲಿ ಲಭ್ಯವಿರುವ ಅಲ್ಪ ಮತ್ತು ಹುರುಳೇ ಇಲ್ಲದ ಸೂಕ್ಷ್ಮ ಪುರಾವೆಗಳನ್ನು ಗಮನಿಸಿದರೆ, 22 ವರ್ಷದ ಯುವತಿಯ ವಿರುದ್ಧ ‘ಜಾಮೀನು’ ಎಂಬ ಸಾಮಾನ್ಯ ನಿಯಮವನ್ನು ಉಲ್ಲಂಘಿಸಲು ಯಾವುದೇ ಸ್ಪಷ್ಟವಾದ ಕಾರಣಗಳು ಕಂಡುಬಂದಿಲ್ಲ ಎಂದು ಹೇಳಿದೆ.
ಇದನ್ನೂ ಓದಿ: ದಿಶಾಗೆ ಜಾಮೀನು: ವ್ಯವಸ್ಥೆಯ ಮೇಲಿನ ನಮ್ಮ ನಂಬಿಕೆ ಬಲಗೊಂಡಿದೆ ಎಂದ ಪೋಷಕರು