ಅವಿಭಜಿತ ದಕ್ಷಿಣ ಕನ್ನಡದ ಅಥ್ಲೀಟುಗಳನ್ನು ಕಂಬಳ ಓಟಗಾರರನ್ನಾಗಿ ತರಬೇತುಗೊಳಿಸಲು ಕರಾವಳಿಯ ಕಂಬಳ ಸಮಿತಿ ನಿರ್ಧರಿಸಿದೆ. ಜಿಲ್ಲಾಮಟ್ಟದ ಸ್ಪರ್ಧೆಗಳಲ್ಲಿ ವಿಜೇತರಾಗಿರುವ ಮತ್ತು ಆಸಕ್ತಿ ಇರುವ ಕ್ರೀಡಾಪಟುಗಳಿಗೆ ಕಂಬಳದ ಓಟಗಾರಿಕೆಯನ್ನು ಕಲಿಸಿಕೊಡುವುದು ಕಂಬಳ ಅಕಾಡಮಿಯ ಉದ್ದೇಶವಾಗಿದೆ.
ಈ ತರಬೇತಿ ವಾರಾಂತ್ಯದಲ್ಲಿ ನಡೆಯಲಿದ್ದು, ಮೂಡಬಿದಿರೆ, ಮಿಯಾರು, ಬೈಂದೂರು ಮತ್ತು ಪೈವಳಿಕೆಯಲ್ಲಿ ಶಿಬಿರಗಳು ನಡೆಯಲಿವೆ. ನಿವೃತ್ತ ಕಂಬಳ ಓಟಗಾರರನ್ನು ಕೋಚ್ಗಳಾಗಿ ಆರಿಸಲಾಗಿದೆ. ಕೇರಳದ ಆಸಕ್ತರಿಗೂ ತರಬೇತಿ ಕೊಡಲಾಗುತ್ತದೆ. ಅಕ್ಟೋಬರ್ನಿಂದ ನಿಯಮಿತವಾಗಿ ಶಿಬಿರಗಳು ನಡೆಯಲಿದ್ದು, ಕೋವಿಡ್ ನಿರ್ಭಂದಗಳಿರುವುದರಿಂದ ಸದ್ಯ ಮೂಡಬಿದುರೆಯಲ್ಲಿ ಮಾತ್ರ ವಾರಾಂತ್ಯದ ಶಿಬಿರ ಕೈಗೊಳ್ಳಲಾಗುತ್ತದೆಂದು ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಪಿ.ಆರ್.ಶೆಟ್ಟಿ ತಿಳಿಸಿದ್ದಾರೆ.
ಕಂಬಳ ಸಮಿತಿ ಕೆಲವು ವರ್ಷಗಳ ಹಿಂದೆಯೆ ಇಂಥದೊಂದು ತರಬೇತಿಗೆ ಯೋಜನೆ ಹಾಕಿತ್ತು. ಆದರೆ ಗಾಯದ ಹೆದರಿಕೆಯಿಂದ ಅಥ್ಲೀಟ್ಗಳು ಮನಸ್ಸು ಮಾಡಿರಲಿಲ್ಲ. ಸಿಂಥೆಟಿಕ್ ಟ್ರಾಕ್ನಲ್ಲಿ ಓಡಿದಂತಲ್ಲ ಕಂಬಳದ ಕೆಸರು ಗದ್ದೆಯಲ್ಲಿ ಓಡುವುದು. ಕೆಸರು ಗದ್ದೆಯ ಓಟ ಕಠಿಣವಾದುದು.
ಮೂಡಬಿದಿರೆಯಲ್ಲಿ ಖ್ಯಾತ ಕಂಬಳ ಓಟಗಾರ ರವಿ ಅಳದಂಗಡಿಯವರ ಮಗ ಗಿರೀಶ್ ಅಥ್ಲೀಟ್ಗಳೂ ಸೇರಿದಂತೆ 40 ಮಂದಿಗೆ ಕಂಬಳ ಗದ್ದೆಯಲ್ಲಿ ಓಡುವ ತರಬೇತಿ ನೀಡುತ್ತಿದ್ದಾರೆ. ಈಚೆಗೆ ಕಂಬಳದ ಓಟಗಾರ ಶ್ರೀನಿವಾಸ ಗೌಡ ಮಾಡಿರುವ ಸಾಧನೆ ಮತ್ತು ಅವರನ್ನು ಜಗತ್ತಿನ ಅತಿ ವೇಗದ ಓಟಗಾರ ಉಸೇನ್ ಬೋಲ್ಟ್ ರೊಂದಿಗೆ ಹೋಲಿಸುತ್ತಿರುವುದು ತರುಣರನ್ನು ಕಂಬಳ ಓಟದತ್ತ ಆಕರ್ಷಿಸುತ್ತಿದೆ. ಹೀಗಾಗಿ ಅಥ್ಲೀಟ್ಗಳು ಸೇರಿದಂತೆ ಇತರ ಯುವಕರೂ ಕಂಬಳ ಗದ್ದೆಯಲ್ಲಿ ಸಾಧನೆ ಮಾಡುವ ಆಸಕ್ತಿ ತೋರಿಸುತ್ತಿದ್ದಾರೆ.
ಸಿದ್ದಿ ಕಲಿಗಳಿಗೆ ಒಲಿಂಪಿಕ್ಸ್ ಗುರಿ!!
ರಾಜ್ಯ ಕ್ರೀಡಾ ಇಲಾಖೆಯ ಕ್ರೀಡಾ ವಿಜ್ಞಾನ ಕೇಂದ್ರ ಉತ್ತರ ಕನ್ನಡದ ಅಂಕೋಲಾ, ಯಲ್ಲಾಪುರ, ಮುಂಡಗೋಡ ಮತ್ತು ಹಳಿಯಾಳ ತಾಲೂಕಿನ ಸಿದ್ದಿ ಜನಾಂಗದ 24 ಪ್ರತಿಭಾವಂತ ಕ್ರೀಡಾಪಟುಗಳನ್ನು ಅಂತರಾಷ್ಟ್ರೀಯ ಮಟ್ಟದ ತರಬೇತಿಗೆ ಆಯ್ಕೆ ಮಾಡಿದೆ.
ಕ್ರೀಡಾ ಸಾಧನೆಗೆ ಹೇಳಿ ಮಾಡಿಸಿದಂತ ದೈಹಿಕ ಸಾಮರ್ಥ್ಯದ ಆಫ್ರಿಕಾ ಮೂಲದ ಸಿದ್ದಿ ತರುಣ, ತರುಣಿಯರನ್ನು ಹಲವು ಬಾರಿ ಆಯ್ಕೆ ಮಾಡಿ ಬೆಂಗಳೂರಿನ ಕ್ರೀಡಾ ವಸತಿ ನಿಲಯಗಳಿಗೆ ಸೆರಿಸಲಾಗಿತ್ತಾದರೂ ಹೇಳಿಕೊಳ್ಳುವಂತ ಸಾಧನೆಯೇನೂ ಆಗಿಲ್ಲ. ಸರಿಯಾಗಿ ತರಬೇತಿ ಕೊಡದ ಮತ್ತು ಕ್ರೀಡಾಳುಗಳಿಗೆ ಸೌಲಭ್ಯ ಒದಗಿಸದ ಕೀಡಾ ಇಲಾಖೆಯ ವೈಫಲ್ಯವೇ ಇದಕ್ಕೆ ಕಾರಣವೆನ್ನಲಾಗಿದೆ.
ಈಚೆಗೆ ಕ್ರೀಡಾ ಇಲಾಖೆ ಉತ್ತರ ಕನ್ನಡದ 400 ವಿದ್ಯಾರ್ಥಿಗಳನ್ನು ಕ್ರೀಡಾ ಸಾಮರ್ಥ್ಯದ ಪರೀಕ್ಷೆಗೆ ಒಳಪಡಿಸಿತ್ತು. ಇದರಲ್ಲಿ ಸಿದ್ದಿ ಜನಾಂಗದ 24 ಮಂದಿಯಲ್ಲಿ ಕ್ರೀಡಾ ಪ್ರತಿಭೆಯಿರುವುದನ್ನು ಗುರುತಿಸಿದ ಕ್ರೀಡಾ ವಿಜ್ಞಾನ ಕೇಂದ್ರದ ತಂಡ ಅವರನ್ನು ವೈಜ್ಞಾನಿಕವಾಗಿ ಆಯ್ಕೆ ಮಾಡಿದೆ. ಇವರಿಗೆ ಬೇರೆ ಯಾವ ಪರೀಕ್ಷೆಗೂ ಒಳಪಡಿಸದೆ ಬೆಂಗಳೂರಿನ ವಿದ್ಯಾನಗರ ಮತ್ತಿತರೆಡೆ ಇರುವ ಕ್ರೀಡಾ ವಸತಿ ನಿಲಯಗಳಿಗೆ ಪ್ರವೇಶ ನೀಡಲಾಗಿದೆ. ಇವರಿಗೆ ಅಂತರಾಷ್ಟ್ರೀಯ ಮಟ್ಟದ ತರಬೇತಿ ಕೊಟ್ಟು 2024ರ ಪ್ಯಾರಿಸ್ ಒಲಿಂಪಿಕ್ಸ್ಗೆ ಸಿದ್ದಪಡಿಸುವ ಗುರಿ ಕ್ರೀಡಾ ಇಲಾಖೆಯದು.
ಈ ಕ್ರೀಡಾ ಪಟುಗಳೊಂದಿಗೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಕಳೆದ ಬುಧವಾರ ಸಂವಾದ ನಡೆಸಿದ ಕ್ರೀಡಾ ಮಂತ್ರಿ ಕೆ.ಸಿ ನಾರಾಯಣ ಗೌಡ ಉನ್ನತ ತರಬೇತಿಗೆ ಚಾಲನೆ ನಿಡಿದ್ದಾರೆ.
ಇದನ್ನೂ ಓದಿ: ಅಪ್ಪಂದಿರ ಹೊಲಗಳಲ್ಲಿನ ಪರಿಶ್ರಮ, ಒಲಿಂಪಿಕ್ಸ್ನಲ್ಲಿ ಮಕ್ಕಳ ಪ್ರತಿಫಲ